ಚೀನಾದ ವಿಷಕನ್ಯೆ ಮತ್ತು ಅಮೆರಿಕದ ಬೆಳೆನಾಶ!
ಚೀನಾ ಮೂಲದ ಮಿಚಿಗನ್ ವಿ.ವಿ.ಯ ಯುವವಿಜ್ಞಾನಿ ಯನ್ಕಿಂಗ್ ಜಿಯಾನ್ ಇದೀಗ ಅಮೆರಿಕದ ಬೆಳೆನಾಶಕ್ಕೆ ರಹಸ್ಯವಾಗಿ ಸಂಚು ಹೂಡುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾಳೆ. ಈಕೆಯ ಕೈಯಲ್ಲಿದ್ದದ್ದು ಅತ್ಯಂತ ಅಪಾಯಕಾರಿಯಾದ ಫುಯಸಾರಿಯಂ ಗ್ರಾಮಿನೆರಮ್ ಎಂಬ ಶಿಲೀಂದ್ರ. ಇದು ಬಾರ್ಲಿ, ಗೋಧಿ, ಭತ್ತ, ಜೋಳ, ರಾಗಿ, ನವಣೆ ಮುಂತಾದ ಬೆಳೆಗಳಿಗೆ ಹೆಡ್ ಬ್ಲೈಟ್ ಎಂಬ ರೋಗ ಹರಡುವ ಅತ್ಯಂತ ಅಪಾಯಕಾರಿ ಜೈವಿಕ ಏಜೆಂಟ್
ತಿನ್ನುವ ಅನ್ನದ ಬಟ್ಟಲಿಗೇ ವಿಷವಿಕ್ಕುವುದು ಬೇರೆ, ಅನ್ನ ಬೆಳೆಯುವ ಹೊಲಕ್ಕೇ ವಿಷ ಹಾಕುವುದು ಬೇರೆ. ಪುರಾಣ, ಇತಿಹಾಸ, ವರ್ತಮಾನ ಎಲ್ಲಾ ಕಾಲದಲ್ಲೂ ತಿನ್ನುವ ಅನ್ನಕ್ಕೆ ವಿಷ ಹಾಕಿ ವೈರಿಗಳನ್ನು ಸಾಯಿಸಿದ ಸಂಚುಗಳನ್ನು ನಾವು ಗಮನಿಸಿದ್ದೇವೆ. ಅಪ್ಪನಿಗೆ ಮಗ, ಗಂಡನಿಗೆ ಹೆಂಡತಿ ವಿಷ ಹಾಕಿ ಸಾಯಿಸುವ ದೃಷ್ಟಾಂತಗಳು ಇವತ್ತಿಗೂ ಘಟಿಸುತ್ತವೆ. ಆದರೆ ಈ ಹೊಸ ಕೇಡು ಕೇವಲ ವ್ಯಕ್ತಿಗತವಾಗದೆ, ಇಡೀ ಊರು, ರಾಜ್ಯ, ರಾಷ್ಟ್ರವೇ ತಿನ್ನುವ ಅನ್ನದ ಬೆಳೆಗಳಿಗೆ ಗುಪ್ತವಾಗಿ ವೈರಸ್ ಬಿಡುವ ಕೃಷಿ ಭಯೋತ್ಪಾದಕತೆ ಇದೀಗ ಆರಂಭಗೊಂಡಿದೆ. ಇದನ್ನು ಆಗ್ರೋ ಟೆರರಿಸಂ ಎಂದು ಕರೆಯುತ್ತಾರೆ.
ಚೀನಾ ಮೂಲದ ಮಿಚಿಗನ್ ವಿ.ವಿ.ಯ ಯುವವಿಜ್ಞಾನಿ ಯನ್ಕಿಂಗ್ ಜಿಯಾನ್ ಇದೀಗ ಅಮೆರಿಕದ ಬೆಳೆನಾಶಕ್ಕೆ ರಹಸ್ಯವಾಗಿ ಸಂಚು ಹೂಡುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾಳೆ. ಈಕೆಯ ಕೈಯಲ್ಲಿದ್ದದ್ದು ಅತ್ಯಂತ ಅಪಾಯಕಾರಿಯಾದ ಫುಯಸಾರಿಯಂ ಗ್ರಾಮಿನೆರಮ್ ಎಂಬ ಶಿಲೀಂದ್ರ. ಇದು ಬಾರ್ಲಿ, ಗೋಧಿ, ಭತ್ತ, ಜೋಳ, ರಾಗಿ, ನವಣೆ ಮುಂತಾದ ಬೆಳೆಗಳಿಗೆ ಹೆಡ್ ಬ್ಲೈಟ್ ಎಂಬ ರೋಗ ಹರಡುವ ಅತ್ಯಂತ ಅಪಾಯಕಾರಿ ಜೈವಿಕ ಏಜೆಂಟ್.
ಈವರೆಗೆ ಪ್ರಪಂಚದಾದ್ಯಂತ ಬಲಿಷ್ಠ ರಾಷ್ಟ್ರಗಳು ಇನ್ನೊಂದು ರಾಷ್ಟ್ರಗಳನ್ನು ನಿರ್ಬಂಧಿಸುವುದಕ್ಕೆ ಕಣ್ಣಿಗೆ ಕಾಣಿಸುವ ಶಸ್ತ್ರಾಸ್ತ್ರಗಳನ್ನು ಬಳಸುತ್ತಿದ್ದವು. ಅಣು ಬಾಂಬು, ಕ್ಷಿಪಣಿ, ಯುದ್ಧವಿಮಾನ, ಸೈನಿಕಬಲ ಇವೆಲ್ಲ ಮನುಷ್ಯ ಯುದ್ಧದಲ್ಲಿ ಸಾಮಾನ್ಯ. ಆದರೆ ಈ ಹೊಸ ಹಸಿರುಯುದ್ಧ ಕಣ್ಣಿಗೆ ಕಾಣಿಸದೆ ಅಗೋಚರವಾದುದು. ಇಲ್ಲಿ ಸಿಡಿಗುಂಡುಗಳಿಲ್ಲ, ಶಬ್ದಗಳಿಲ್ಲ, ಕರ್ಕಶಧ್ವನಿಗಳಿಲ್ಲ, ಹೊಗೆ, ಬೆಂಕಿ, ಜ್ವಾಲೆಗಳಿಲ್ಲ, ಮನುಷ್ಯನ ಆಕ್ರಂದನ, ಆರ್ತನಾದ, ಕೂಗು ಕೊಲೆಗಳಿಲ್ಲ. ರಕ್ತ ಹರಿಯುವುದಿಲ್ಲ, ಖಂಡಾಂತರ ದಾಳಿಗಳಿಲ್ಲ. ದಿನಕ್ಕೊಮ್ಮೆ ಆ ದೇಶದ ಪ್ರಧಾನಿ, ಅಧ್ಯಕ್ಷ, ಸೇನಾಧಿಪತಿ, ಸೈನ್ಯದ ವಕ್ತಾರರು ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡುವುದಿಲ್ಲ. ಪತ್ರಕರ್ತರು ಯುದ್ಧ ಭೂಮಿಯ ಭಯಾನಕ ದೃಶ್ಯಗಳನ್ನು ಸೆರೆಹಿಡಿದು ಪ್ರಕಟಿಸುವುದಿಲ್ಲ. ಇದೊಂದು ರೀತಿ ನಿಧಾನ ವಿಷ. ಕಣ್ಣಿಗೆ ಕಾಣಿಸದೆ ಸಾಯಿಸುವ ನೂತನ ಸಾವಿನ ಆಟ.
ಈ ಯುದ್ಧ ಎಷ್ಟು ಸುಲಭ ನೋಡಿ, ಒಂದು ದೇಶ ಬೆಳೆಸಿದ ಆಹಾರ ಧಾನ್ಯದ ಹೊಲ ಗದ್ದೆಗಳಿಗೆ ಇಂಥ ಅಪಾಯಕಾರಿ ಕೊಲ್ಲುಪೀಡೆಯನ್ನು ನುಗ್ಗಿಸುವುದು. ಅಲ್ಲಿ ಇದು ಗೊತ್ತಾಗದ ರೀತಿಯಲ್ಲಿ ಕೆಲಸ ಮಾಡುತ್ತದೆ. ರೈತರು ಅದನ್ನು ಸಹಜ ಬೆಳೆರೋಗ ಎಂದೇ ಭಾವಿಸುತ್ತಾರೆ. ಪ್ರಭುತ್ವಕ್ಕೆ ಬಿಡಿ, ಆ ಹೊಲದ ಯಜಮಾನನಿಗೂ ಸುಲಭವಾಗಿ ಗೊತ್ತಾಗದ ರೀತಿಯಲ್ಲಿ ಆ ಕಂಟಕ ವ್ಯಾಪಿಸುತ್ತದೆ. ಕೃಷಿಪೀಡೆಗಳು ಯಾವಾಗಲೂ ಹೀಗೆಯೇ.ಮಾಯಕದ ಹಾಗೆ ಒಂದೇ ದಿನ ಇದ್ದಕ್ಕಿದ್ದ ಹಾಗೆ ಬೆಳೆಯನ್ನು ಯಾವ ಕಾಯಿಲೆಯೂ ನಾಶಪಡಿಸದು.
ನಿಧಾನವಾಗಿ ಹರಡುತ್ತದೆ. ಬೆಳೆಸಿದ ರೈತನಿಗೂ ನಷ್ಟ. ಹಾಗಂತ ಅಳಿದುಳಿದ ಧಾನ್ಯದಿಂದ ಉತ್ಪಾದಿತ ಆಹಾರ ಮೂಲವನ್ನು ಸೇವಿಸಿದ ಮನುಷ್ಯನಿಗೂ ಅನಾರೋಗ್ಯ. ಇಳುವರಿಯೂ ಕಡಿಮೆ. ಗುಣಮಟ್ಟವು ಕುಸಿತ. ಇಡೀ ಅಮೆರಿಕದ ಕೃಷಿ ಆಹಾರ ಆರೋಗ್ಯ ವ್ಯವಸ್ಥೆಯನ್ನು ಏಕಕಾಲದಲ್ಲಿ ಕೈವಶ ಮಾಡಿ ಅಡ್ಡ ದಾರಿಯಲ್ಲಿ ಇಡೀ ದೇಶವನ್ನು ಬಡಿಯುವ, ಬಗ್ಗಿಸುವ, ಮಲಗಿಸುವ ಹುನ್ನಾರವಿದು. ಅಮೆರಿಕದ ಕೃಷಿ ಇಲಾಖೆಯ ಸಮೀಕ್ಷೆಯ ಪ್ರಕಾರ ಈ ಮನುಷ್ಯಕೃತ ವಿಷ ವಾರ್ಷಿಕ ಒಂದು ಶತಕೋಟಿ ಡಾಲರಿಗಿಂತ ಹೆಚ್ಚು ಮೌಲ್ಯದ ಬೆಳೆ ನಷ್ಟವನ್ನು ಉಂಟುಮಾಡಬಲ್ಲದು!
ಈ ವಿಷ ಅಂಟಿಸಿಕೊಂಡ ಬೆಳೆ-ಆಹಾರವನ್ನು ತಿನ್ನುವುದರಿಂದ ಮನುಷ್ಯ ಮತ್ತು ಪಶುಗಳಲ್ಲಿ ವಾಂತಿಭೇದಿ, ಹೊಟ್ಟೆ ನೋವು, ಜ್ವರದಂತಹ ಕಾಯಿಲೆಗಳು ಕಾಣಿಸಿಕೊಳ್ಳಬಹುದು. ದೇಹಾರೋಗ್ಯ ಮಾತ್ರವಲ್ಲ, ಇದು ಆರ್ಥಿಕ ನಷ್ಟ, ಆಹಾರ ಭದ್ರತೆಯ ಮೇಲೂ ಅಪಾಯವನ್ನು ತಂದೊಡ್ಡಬಹುದು. ಉತ್ಪಾದನೆ, ಪೂರೈಕೆ, ಮೌಲ್ಯವರ್ಧನೆ ಎಲ್ಲದರಲ್ಲೂ ಪರಿಣಾಮ ಬೀರಬಹುದು. ಇಡೀ ದೇಶದ ಮೇಲೆ ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ಹಾನಿಯನ್ನು ಉಂಟುಮಾಡಬಹುದಾದ ಇದರ ಪರಿಣಾಮವನ್ನು ಸುಲಭದಲ್ಲಿ ಊಹಿಸುವುದು ಕಷ್ಟ ಎನ್ನುತ್ತಾರೆ ಅಲ್ಲಿಯ ತಜ್ಞರು. ಇವತ್ತು ಅಮೆರಿಕ, ನಾಳೆ ಪಕ್ಕದ ಭಾರತಕ್ಕೂ ಈ ಮನುಷ್ಯ ಪೀಡೆ ವಕ್ಕರಿಸಿದರೆ ಅಚ್ಚರಿ ಪಡಬೇಕಾಗಿಲ್ಲ.
ದೇಶವೊಂದು ಯಾವತ್ತೂ ಸೈನ್ಯ ಮತ್ತು ಆರ್ಥಿಕ ವ್ಯವಸ್ಥೆಗೆ ಹೆಚ್ಚು ಗಮನ ಕೊಡುತ್ತದೆಯೇ ಹೊರತು ಕೃಷಿ ನೆಲೆಗೆ ಪಕ್ಕದ ಇನ್ನೊಂದು ಹೊರದೇಶ ವಿಷ ಹಾಕುವ ಅಪಾಯಗಳ ಬಗ್ಗೆ ಗಮನಿಸುವುದೇ ಇಲ್ಲ. ಗಡಿ ಕಾಯುವ ರಾಡರ್ಗಳಾಗಲೀ ರಹಸ್ಯದಳಗಳಾಗಲಿ ಇಂಥ ವಿಷಯಗಳನ್ನು ಈವರೆಗೆ ಯೋಚಿಸಲೇ ಇಲ್ಲ. ಇದಕ್ಕೆ ಕಾರಣವೂ ಇದೆ. ಸೈನ್ಯವು ಯಾವತ್ತೂ ದೇಶದ ಭದ್ರತೆಯನ್ನು ಮಾತ್ರ ಖಾತರಿಪಡಿಸುತ್ತದೆ. ಒಂದು ದೇಶದ ಸಾರ್ವಭೌಮತೆ ಮತ್ತು ಗಡಿಗಳ ರಕ್ಷಣೆಗೆ ಸೈನ್ಯಕ್ಕೆ ಆದ್ಯತೆ ನೀಡುವುದು ಅನಿವಾರ್ಯವಾಗಿರುತ್ತದೆ, ಏಕೆಂದರೆ ಶಾಂತಿ ಮತ್ತು ಸ್ಥಿರತೆ ಇಲ್ಲದಿದ್ದರೆ ಯಾವುದೇ ಆರ್ಥಿಕ ಅಥವಾ ಕೃಷಿ ಚಟುವಟಿಕೆಗಳು ಸಮರ್ಥವಾಗಿ ನಡೆಯಲು ಸಾಧ್ಯವಿಲ್ಲ. ಆರ್ಥಿಕ ಬೆಳವಣಿಗೆಯು ದೇಶದ ಒಟ್ಟಾರೆ ಪ್ರಗತಿಗೆ ಮೂಲಾಧಾರವಾಗಿದೆ. ಉದ್ಯಮಗಳು, ತಂತ್ರಜ್ಞಾನ, ರಫ್ತು-ಆಮದು ಮತ್ತು ಒಟ್ಟಾರೆ ಜಿಡಿಪಿಯ ಬೆಳವಣಿಗೆಗೆ ಸರಕಾರಗಳು ಹೆಚ್ಚಿನ ಒತ್ತು ನೀಡುತ್ತವೆ. ಏಕೆಂದರೆ ಇವು ದೇಶದ ಆರ್ಥಿಕ ಸ್ಥಿರತೆ ಮತ್ತು ಜಾಗತಿಕ ಸ್ಪರ್ಧೆಗೆ ಕಾರಣವಾಗಿವೆ.
ಬೇರೆ ಬಿಡಿ, ಭಾರತದಂತಹ ದೇಶದ ಕೃಷಿರಂಗವನ್ನೇ ನೋಡಿ. ಇಲ್ಲಿ ಅನೇಕ ಸವಾಲುಗಳಿವೆ. ಉದಾಹರಣೆಗೆ ಹವಾಮಾನ ಬದಲಾವಣೆ, ಮಾರುಕಟ್ಟೆ ವ್ಯವಸ್ಥೆ, ರೈತರಿಗೆ ಸಾಲದ ಅಥವಾ ಆರ್ಥಿಕ ಸೌಲಭ್ಯದ ಲಭ್ಯತೆ, ಮತ್ತು ಆಧುನಿಕ ತಂತ್ರಜ್ಞಾನದ ಲಭ್ಯತೆ, ಕೃಷಿಯು ದೀರ್ಘಕಾಲೀನ ಹೂಡಿಕೆಯನ್ನು ಒಳಗೊಂಡಿರುವುದರಿಂದ, ಕೆಲವು ಸರಕಾರಗಳು ತಕ್ಷಣದ ಫಲಿತಾಂಶಕ್ಕಿಂತ ತ್ವರಿತವಾಗಿ ಗೋಚರವಾಗುವ ಕ್ಷೇತ್ರಗಳಿಗೆ ಆದ್ಯತೆ ನೀಡುತ್ತವೆ. ಸೈನ್ಯ ಮತ್ತು ಕೈಗಾರಿಕೆಗಳು ಸಾಮಾನ್ಯವಾಗಿ ಚೆನ್ನಾಗಿ ಸಂಘಟಿತವಾಗಿರುತ್ತವೆ ಮತ್ತು ರಾಜಕೀಯವಾಗಿ ಪ್ರಭಾವಿಯಾಗಿರುತ್ತವೆ. ಆದರೆ ರೈತ ಸಮುದಾಯವು ಸಾಮಾನ್ಯವಾಗಿ ವಿಕೇಂದ್ರೀಕೃತವಾಗಿರುವುದರಿಂದ, ಅವರ ಧ್ವನಿಯು ರಾಜಕೀಯ ವೇದಿಕೆಯಲ್ಲಿ ಸಾಕಷ್ಟು ಪ್ರಭಾವ ಬೀರದಿರಬಹುದು.
ಕೆಲವು ದೇಶಗಳು ಆಧುನಿಕತೆಯ ಸಂಕೇತವಾಗಿ ನಗರೀಕರಣ, ತಂತ್ರಜ್ಞಾನ ಮತ್ತು ಕೈಗಾರಿಕೆಗೆ ಆದ್ಯತೆ ನೀಡುತ್ತವೆ, ಇದರಿಂದ ಕೃಷಿಯು ತುಲನಾತ್ಮಕವಾಗಿ ಕಡಿಮೆ ಗಮನ ಸೆಳೆಯುತ್ತದೆ. ಪರಿಹಾರಾತ್ಮಕವಾಗಿ ಆಧುನಿಕ ತಂತ್ರಜ್ಞಾನ, ಉತ್ತಮ ಮಾರುಕಟ್ಟೆ ವ್ಯವಸ್ಥೆ ಮತ್ತು ಸಾಲದ ಸೌಲಭ್ಯವನ್ನು ಒದಗಿಸುವುದು, ರೈತರಿಗೆ ಶಿಕ್ಷಣ ಮತ್ತು ತರಬೇತಿಯನ್ನು ನೀಡುವುದು, ಪ್ರಭುತ್ವ ಕೃಷಿಯನ್ನು ರಾಷ್ಟ್ರೀಯ ಆದ್ಯತೆಯಾಗಿ ಪರಿಗಣಿಸಿ ಸಬ್ಸಿಡಿಗಳು ಮತ್ತು ಕಾರ್ಯಕ್ರಮಗಳ ಮೂಲಕ ರೈತರಿಗೆ ಬೆಂಬಲ ನೀಡುವುದು ಬಹಳ ಮುಖ್ಯ.
ಯಾವುದೇ ದೇಶದ ಕೃಷಿರಂಗ ಆಹಾರ ಭದ್ರತೆಗೆ ಮೂಲಾಧಾರವಾದ್ದರಿಂದ, ಇದಕ್ಕೆ ಹೆಚ್ಚಿನ ಗಮನ ನೀಡುವುದು ದೀರ್ಘಕಾಲೀನವಾಗಿ ದೇಶದ ಸ್ಥಿರತೆಗೆ ಪೂರಕವಾಗುತ್ತದೆ.
ಸುಮಾರು 45 ವರ್ಷಗಳ ಹಿಂದೆ ದಕ್ಷಿಣ ಭಾರತದ ಅನೇಕ ರಾಜ್ಯಗಳಿಗೆ ಬಹು ಮುಖ್ಯವಾಗಿ ಕರಾವಳಿ ಪ್ರಾಂತದ ತೆಂಗು ಬೆಳೆಗೆ ಇದ್ದಕ್ಕಿದ್ದಂತೆ ನುಸಿ ಪೀಡೆ ವಕ್ಕರಿಸಿತು. ಇವತ್ತಿಗೂ ಈ ನುಸಿಯಿಂದ ನಮ್ಮ ತೆಂಗು ಪೂರ್ತಿ ಬಚಾವಾಗಿಲ್ಲ. ತೆಂಗಿನ ವಿಕಾರಗೊಂಡ ಆಕಾರ ಸುಸ್ಥಿತಿಗೆ ಬಂದಿಲ್ಲ. ಈ ಪೀಡೆ ಎಲ್ಲಿಂದ ಬಂತು ಗೊತ್ತಿಲ್ಲ.ಕೆಲವರು ಇದನ್ನು ಬಹುರಾಷ್ಟ್ರೀಯ ಪಾನೀಯ ಕಂಪೆನಿಗಳು ಅಂಟಿಸಿದವು ಎಂದು ಗುಲ್ಲೆಬ್ಬಿಸಿದರು. ಸರಕಾರ ಮತ್ತು ರೈತಾಪಿಗಳಿಗೆ ಕೋಟಿ ಕೋಟಿ ರೂ. ನಷ್ಟ ತಂದ ಈ ಪೀಡೆ ಎಲ್ಲಿಂದಲೇ ವಕ್ಕರಿಸಲಿ ಇವತ್ತಿನವರೆಗೆ ಸುಮಾರು ಅರ್ಧ ಶತಮಾನ ಕಾಲ ಬ್ರಹ್ಮಕಪಾಲದ ಹಾಗೆ ಕಲ್ಪವೃಕ್ಷವನ್ನು ಬಗ್ಗಿಸಿದೆ ಎಂದರೆ ಅದರ ಶಕ್ತಿಯನ್ನು ನೀವೇ ಗ್ರಹಿಸಿ.
ಜಗತ್ತಿಗೆ ಕೊರೋನ ಬಂದಾಗ ಅದು ಮೊದಲು ಹುಟ್ಟಿಕೊಂಡ ಚೀನಾವನ್ನೇ ಅನುಮಾನಿಸಲಾಯಿತು. ಆ ಸಂದೇಹ ದೃಢಪಡುವ ಹಾಗೆ ಈಗ ಚೀನಾ ಸಿಕ್ಕಿಹಾಕಿಕೊಂಡಿದೆ. ಸಿಕ್ಕಿಹಾಕಿಕೊಂಡ ಯುವ ವಿಜ್ಞಾನಿ ಮತ್ತು ಆಕೆಯ ಗೆಳೆಯ ಇಬ್ಬರೂ ಚೀನಾ ದೇಶದ ಕಮ್ಯುನಿಸ್ಟ್ ಪಕ್ಷದ ನಿಷ್ಠರು. ಅಷ್ಟೇ ಅಲ್ಲ, ಅವರಿಬ್ಬರೂ ಆ ಹಸಿರು ಪೀಡೆಯನ್ನು ಅಮೆರಿಕಕ್ಕೆ ಹಬ್ಬಿಸಲು ಚೀನಾದ ಆಡಳಿತಾಂಗದಿಂದ ಕಾಸಿನ ಭಕ್ಷೀಸು ಪಡೆದಿದ್ದಾರೆ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ ಮತ್ತು ಅವರನ್ನು ಅಮೆರಿಕ ಸರಕಾರ ಈ ಕಾರಣಕ್ಕೆ ಈಗಾಗಲೇ ಬಂಧಿಸಿದೆ.
ಯುದ್ಧದ ಬದಲು ಒಂದು ದೇಶದ ಕೃಷಿಯನ್ನು ಸಾಮೂಹಿಕವಾಗಿ ಇನ್ನೊಂದು ದೇಶ ನಾಶಪಡಿಸಿದ ದೃಷ್ಟಾಂತಗಳು ಇತಿಹಾಸದಲ್ಲಿ ಬಹಳ ಕಡಿಮೆ. ಪುರಾಣದಲ್ಲಿ ಕೃಷಿ ಮತ್ತು ಮನುಷ್ಯನ ಆರೋಗ್ಯವನ್ನು ನಾಶಪಡಿಸುವ ಉದ್ದೇಶದಿಂದ ಹಸು, ರಾಸುಗಳನ್ನು ಕದಿಯುವುದು, ವಶಪಡಿಸಿಕೊಳ್ಳುವುದು ಇತ್ತು. ನೇರವಾಗಿ ಬೆಳೆಗೆ ವಿಷ ಉಣಿಸಿ ಅದು ಬೆಳೆಯುವ ಮಣ್ಣಿನ ಆರೋಗ್ಯ, ಅದನ್ನು ತಿನ್ನುವ ಮನುಷ್ಯ-ಪ್ರಾಣಿಗಳ ಆರೋಗ್ಯವನ್ನು ಕೆಡಿಸುವ ಇಂತಹ ಹುನ್ನಾರ ಭಾಗಶಃ ಹೊಸತೇ.
ಹಿಂದೆ ನಮ್ಮ ದೇಶದಲ್ಲಿ ಬ್ರಿಟಿಷ್ ಆಡಳಿತದ ಅವಧಿಯಲ್ಲಿ ಬಹು ಮುಖ್ಯವಾಗಿ ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪೆನಿಯ ಆಡಳಿತದ ಸಮಯದಲ್ಲಿ, ಭಾರತದ ಕೃಷಿ ವ್ಯವಸ್ಥೆಯನ್ನು ಉದ್ದೇಶಪೂರ್ವಕವಾಗಿ ತೀವ್ರವಾಗಿ ಕುಂಠಿತಗೊಳಿಸಲಾಯಿತು. ಬ್ರಿಟಿಷರು ತಮ್ಮ ಆರ್ಥಿಕ ಲಾಭಕ್ಕಾಗಿ ಕೃಷಿಯನ್ನು ಏಕ ಬೆಳೆ ವ್ಯವಸ್ಥೆಯ ಕಡೆಗೆ ನಿರ್ಬಂಧಿಸಿದರು, ರೈತರು ಕೃಷಿ ಸಾಧ್ಯತೆ ಮತ್ತು ಬಹುತ್ವ ಕೃಷಿ ಕಡೆಯಿಂದ ಏಕ ಬೆಳೆಯ ಕಡೆಗೆ ವಾಲುವಂತೆ ಪ್ರಚೋದಿಸಿದರು. ಇದರಿಂದ ಭಾರತ ನೆಲದ ಸಾಂಪ್ರದಾಯಿಕ ಕೃಷಿ ವೈವಿಧ್ಯ ಕಡಿಮೆಯಾಯಿತು. ಸುಲಭವಾಗಿ ರೈತರು ಸಾಲದ ಸುಳಿಗೆ ಸಿಲುಕಿದರು ಮತ್ತು ಆಹಾರ ಬೆಳೆಗಳ ಕೊರತೆಯಿಂದ ಬಂಗಾಳದಂತಹ ಪ್ರದೇಶಗಳಲ್ಲಿ ಭೀಕರ ಕ್ಷಾಮಗಳು ಬಂದವು. ಮಳೆ, ಹವೆ ಯಾವತ್ತೂ ಸಮೃದ್ಧಿಗೆ ಪೂರಕವಾಗಿದ್ದೂ ಕೃಷಿ ಕುಂಟಿತವಾಗುವುದು ಮತ್ತು ಅದಕ್ಕೆ ಆ ಕಾಲದ ಆಡಳಿತ ವ್ಯವಸ್ಥೆ ಕಾರಣವಾಗುವುದು ಗಮನೀಯ ಸಂಗತಿಯೇ.
ಯುರೋಪಿಯನ್ ವಸಾಹತುಗಾರರು ಆಫ್ರಿಕಾದ ಕೆಲವು ಭಾಗಗಳಲ್ಲಿ(ಬೆಲ್ಜಿಯಂ, ಫ್ರಾನ್ಸ್) ಸ್ಥಳೀಯ ಕೃಷಿಯನ್ನು ರಬ್ಬರ್, ಕಾಫಿ ಮತ್ತು ಕೋಕೋನ್ ಅಂತಹ ವಾಣಿಜ್ಯ ಬೆಳೆಗಳಿಗೆ ಬದಲಾಯಿಸಿದರು. ಇದರಿಂದ ಸ್ಥಳೀಯ ಆಹಾರ ಉತ್ಪಾದನೆ ಕಡಿಮೆಯಾಯಿತು ಮತ್ತು ರೈತ ಸಮುದಾಯಗಳು ಆರ್ಥಿಕವಾಗಿ ಅವಲಂಬಿತವಾದವು. ಇದು ಯುದ್ಧದಿಂದಲ್ಲದೆ ಆರ್ಥಿಕ ನೀತಿಗಳ ಮೂಲಕ ಕೃಷಿಯನ್ನು ನಾಶಪಡಿಸಿದ ಉದಾಹರಣೆಗಳು. ವಿಯೆಟ್ನಾಂನಲ್ಲಿ ಏಜೆಂಟ್ ಆರೆಂಜ್ನ ಪರಿಣಾಮ ಇನ್ನೂ ಗಂಭೀರವಾದದ್ದು. ಅಮೆರಿಕವು ವಿಯೆಟ್ನಾಂನ ಕೃಷಿಯನ್ನು ಏಜೆಂಟ್ ಆರೆಂಜ್ನಂತಹ ರಾಸಾಯನಿಕಗಳನ್ನು ಬಳಸಿ ನಾಶಪಡಿಸಿತು. ಈ ರಾಸಾಯನಿಕವು ಸಮೃದ್ಧ ಕಾಡುಗಳು, ಕೃಷಿ ಭೂಮಿಗಳು ಮತ್ತು ಜಲಮೂಲಗಳನ್ನು ವಿಷಮಯ ಗೊಳಿಸಿತು. ಇದರಿಂದ ದೀರ್ಘಕಾಲಿಕ ಕೃಷಿ ಉತ್ಪಾದನೆಗೆ ಹಾನಿಯಾಯಿತು. ಈ ಉದಾಹರಣೆಗಳು ಯುದ್ಧದ ಬದಲು ಆರ್ಥಿಕ ಒತ್ತಡ, ವಸಾಹತು ಶೋಷಣೆ ಅಥವಾ ರಾಸಾಯನಿಕ ಬಳಕೆಯ ಮೂಲಕ ಕೃಷಿಯನ್ನು ನಾಶಪಡಿಸಿದ ದೃಷ್ಟಾಂತಗಳನ್ನು ತೋರಿಸುತ್ತವೆ. ಇತಿಹಾಸದಲ್ಲಿ ಇಂತಹ ಘಟನೆಗಳು ಸಾಮಾನ್ಯವಾಗಿ ಆರ್ಥಿಕ ಅಥವಾ ರಾಜಕೀಯ ಲಾಭಕ್ಕಾಗಿ ಆಗಾಗ ನಡೆದಿವೆ. ಏಜೆಂಟ್ ಆರೆಂಜ್ನಿಂದ ವಿಯೆಟ್ನಾಂ ಕೃಷಿಯನ್ನು ನಾಶಪಡಿಸಿದ ಅಮೆರಿಕ ಇದೀಗ ಚೀನಾದಿಂದ ಪೆಟ್ಟು ತಿಂದದ್ದು ವಿಪರ್ಯಾಸವೇ ಸರಿ!