ಇಂಡಿಗೋ ವಿಮಾನದಲ್ಲಿ ಅಸೌಖ್ಯಕ್ಕೀಡಾದ ಪ್ರಯಾಣಿಕ | ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ಸೇನಾ ವೈದ್ಯ
Photo : indianexpress.com
ಚಂಡೀಗಢ: ಗೋವಾದಿಂದ ಚಂಡೀಗಢಕ್ಕೆ ತೆರಳುತ್ತಿದ್ದ ಇಂಡಿಗೋ ಏರ್ಲೈನ್ಸ್ ವಿಮಾನದಲ್ಲಿ ತೀವ್ರ ಆರೋಗ್ಯ ಸಮಸ್ಯೆ ಎದುರಿಸಿದ 27 ವರ್ಷದ ರೋಗಿಯೊಬ್ಬರಿಗೆ ಅದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸೇನೆಯ ವೈದ್ಯರೊಬ್ಬರು ತುರ್ತು ಚಿಕಿತ್ಸೆ ಒದಗಿಸಿ ಜೀವ ಉಳಿಸಿದ್ದಾರೆ. ಈ ಘಟನೆ ಜೂನ್ 16ರಂದು ನಡೆದಿದೆ.
ಚಂಡೀಗಢದ ವೆಸ್ಟರ್ನ್ ಕಮಾಂಡ್ ಚಾಂದಿಮಂದಿರ್ನಲ್ಲಿರುವ ಕಮಾಂಡ್ ಆಸ್ಪತ್ರೆಯಲ್ಲಿ ವೈದ್ಯರಾಗಿರುವ ಮೇಜರ್ ಸಿಮ್ರತ್ ರಾಜದೀಪ್ ಸಿಂಗ್ ಇಂಡಿಗೋ ವಿಮಾನದಲ್ಲಿ ಸಂಚರಿಸುತ್ತಿರುವಾಗ ಯುವಕನ ಆರೋಗ್ಯ ಬಿಗಡಾಯಿಸಿತ್ತು. ಸಿಂಗ್ ಅವರು ಆತನಿಗೆ ತಕ್ಷಣ ಚಿಕಿತ್ಸೆ ಹಾಗೂ ಎಇಡಿ ಒದಗಿಸಿದ್ದರು.
ಈ ಸಂದರ್ಭದಲ್ಲಿ ಅವರಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಇತರ ಇಬ್ಬರು ವೈದ್ಯರು ಸಹಕಾರ ನೀಡಿದ್ದರು. ನಂತರ ವಿಮಾನ ಮುಂಬೈ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದ್ದು ಅಲ್ಲಿಂದ ತಕ್ಷಣ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಸೌಖ್ಯಕ್ಕೀಡಾದ ಪ್ರಯಾಣಿಕ ಕೊನೆಯ ಹಂತದ ಕಿಡ್ನಿ ಸಮಸ್ಯೆ ಎದುರಿಸುತ್ತಿದ್ದರು ಹಾಗೂ ವಿಮಾನದಲ್ಲಿ ಪ್ರಯಾಣಿಸುವಾಗ ಅವರ ಆರೋಗ್ಯ ಸ್ಥಿತಿ ಇನ್ನಷ್ಟು ಬಿಗಡಾಯಿಸಿತ್ತು ಎಂದು ವೈದ್ಯರು ಹೇಳಿದ್ದಾರೆ.