ಹರ್ಯಾಣ: ದ್ವೇಷ ಭಾಷಣ ಮಾಡಬಾರದೆಂಬ ಷರತ್ತಿನೊಂದಿಗೆ ಹಿಂದುತ್ವ ಸಂಘಟನೆಗಳ ಮಹಾಪಂಚಾಯತ್ ಗೆ ಜಿಲ್ಲಾಡಳಿತ ಅನುಮತಿ
ಹರ್ಯಾಣ ನುಹ್ ನಲ್ಲಿ ನಡೆದ ಹಿಂಸಾಚಾರದ ದೃಶ್ಯ, ಫೋಟೊ: PTI
ಹೊಸದಿಲ್ಲಿ: ಹರ್ಯಾಣದ ನುಹ್ ಜಿಲ್ಲೆಯಲ್ಲಿ ಭುಗಿಲೆದ್ದ ಹಿಂಸಾತ್ಮಕ ಘರ್ಷಣೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ವಿಶ್ವ ಹಿಂದೂ ಪರಿಷತ್ತಿನ ಬ್ರಿಜ್ ಮಂಡಲ್ ಜಲಾಭಿಷೇಕ ಯಾತ್ರೆಯನ್ನು ಪುನರಾರಂಭಿಸುವ ಸಿದ್ಧತೆಗಳ ಬಗ್ಗೆ ಚರ್ಚಿಸಲು ಪಲ್ವಾಲ್ ನಲ್ಲಿ ಮಹಾಪಂಚಾಯತ್ ನಡೆಸಲು ಹಿಂದುತ್ವ ಸಂಘಟನೆಗೆ ಪೊಲೀಸರು ಅನುಮತಿ ನೀಡಿದ್ದಾರೆ.
ಪಲ್ವಾಲ್ ಎಸ್ಪಿ, ಲೋಕೇಂದರ್ ಸಿಂಗ್, “ಹಲವಾರು ಷರತ್ತುಗಳ ಮೇಲೆ ಅನುಮತಿ ನೀಡಲಾಗಿದೆ. ದ್ವೇಷದ ಭಾಷಣವನ್ನು ನಿಷೇಧಿಸಲಾಗಿದೆ. ನಮ್ಮ ತಂಡವು ಪ್ರತಿಯೊಬ್ಬ ವ್ಯಕ್ತಿಯ ಮೇಲೆ ಕಣ್ಣಿಟ್ಟಿರುತ್ತದೆ ಹಾಗೂ ಯಾವುದೇ ಕೃತ್ಯ ಎಸಗುವ ಜನರ ವಿರುದ್ಧ ತಕ್ಷಣ ಕೇಸು ದಾಖಲಿಸಲಾಗುವುದು. ಯಾರೂ ಆಯುಧಗಳನ್ನು, ಕೋಲುಗಳನ್ನು, ಲಾಠಿಗಳನ್ನು ಅಥವಾ ಯಾವುದೇ ಸುಡುವ ವಸ್ತುವನ್ನು ತರುವಂತಿಲ್ಲ'' ಎಂದರು.
''ಕೇವಲ 500 ಜನರಿಗೆ ಮಾತ್ರ ಅವಕಾಶವಿದೆ ಹಾಗೂ ಮಹಾಪಂಚಾಯತ್ ಮಧ್ಯಾಹ್ನ 2 ಗಂಟೆಗೆ ಕೊನೆಗೊಳ್ಳಬೇಕು'' ಎಂದು ಷರತ್ತು ವಿಧಿಸಿದ ಸಿಂಗ್ ಅವರು ಸಾಕಷ್ಟು ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಹೇಳಿದರು.
ಭದ್ರತೆಯ ಕಾರಣದಿಂದ ಮಹಾಪಂಚಾಯತ್ ನ ಆರಂಭಿಕ ವಿನಂತಿಯನ್ನು ನುಹ್ ಅಧಿಕಾರಿಗಳು ನಿರಾಕರಿಸಿದ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಮಹಾಪಂಚಾಯತ್ ಗೆ ಅನುಮತಿ ನೀಡುವ ನಿರ್ಧಾರವನ್ನು ಪಲ್ವಾಲ್ ಪೊಲೀಸ್ ವರಿಷ್ಠಾಧಿಕಾರಿ ದೃಢಪಡಿಸಿದ್ದಾರೆ.
ಸರ್ವ ಹಿಂದೂ ಸಮಾಜ ಆಯೋಜಿಸಿರುವ ಮಹಾಪಂಚಾಯತ್ ನುಹ್ ಗಡಿಯಲ್ಲಿರುವ ಪಲ್ವಾಲ್ ಜಿಲ್ಲೆಯ ಪೊಂಡ್ರಿ ಗ್ರಾಮದಲ್ಲಿ ನಡೆಯಲಿದೆ. ವಿಶ್ವ ಹಿಂದೂ ಪರಿಷತ್ (VHP) ಮೆರವಣಿಗೆಯನ್ನು ಪುನರಾರಂಭಿಸುವ ಕುರಿತು ಚರ್ಚಿಸಲು ಸಭೆಯು ಉದ್ದೇಶಿಸಿದೆ