ಸಾಮಾಜಿಕ ಕಾರ್ಯಕರ್ತರನ್ನು ಪಿಎಸ್ಎ ಅಡಿ ಅಕ್ರಮ ಬಂಧನ : ಜಮ್ಮುಕಾಶ್ಮೀರ ಆಡಳಿತಕ್ಕೆ ಹೈಕೋರ್ಟ್ ತರಾಟೆ
Photo | thewire
ಶ್ರೀನಗರ,ಸೆ.12: ಕಿಶ್ತವಾಡ ಮೂಲದ ಸಾಮಾಜಿಕ ಕಾರ್ಯಕರ್ತನ ಸಾಂವಿಧಾನಿಕ ಹಕ್ಕುಗಳನ್ನು ದಮನಿಸಿದ್ದಕ್ಕಾಗಿ ಜಮ್ಮುಕಾಶ್ಮೀರ ಆಡಳಿತವನ್ನು ತರಾಟೆಗೆತ್ತಿಕೊಂಡಿರುವ ಜಮ್ಮುಕಾಶ್ಮೀರ ಮತ್ತು ಲಡಾಖ್ ಉಚ್ಚ ನ್ಯಾಯಾಲಯ ಸಾರ್ವಜನಿಕ ಸುರಕ್ಷತಾ ಕಾಯ್ದೆ(ಪಿಎಸ್ಎ)ಯಡಿ ಅವರ 10 ತಿಂಗಳ ಅಕ್ರಮ ಬಂಧನವನ್ನು ರದ್ದುಗೊಳಿಸಿದೆ ಮತ್ತು ಬಿಡುಗಡೆ ಮಾಡುವಂತೆ ಆದೇಶಿಸಿದೆ.
ಬುಧವಾರದ ನ್ಯಾಯಾಲಯದ ಆದೇಶವು ಅಸಾಧಾರಣ ಆಡಳಿತಾತ್ಮಕ ಅಧಿಕಾರಗಳ ದುರುಪಯೋಗವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಈ ಅಧಿಕಾರಗಳಡಿ ಜಮ್ಮುಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳು, ವಕೀಲರು, ಸಾಮಾಜಿಕ ಕಾರ್ಯಕರ್ತರು, ಪತ್ರಕರ್ತರು ಮತ್ತು ರಾಜಕೀಯ ಧುರೀಣರಿಗೆ ‘ದೇಶವಿರೋಧಿ’ ಶಕ್ತಿಗಳು ಮತ್ತು ಸರಕಾರಕ್ಕೆ ‘ಬೆದರಿಕೆ’ ಎಂಬ ಹಣೆಪಟ್ಟಿಯಡಿ ವಿಚಾರಣೆಯಿಲ್ಲದೆ ಬಂಧನದಲ್ಲಿಡಲಾಗಿದೆ ಎಂದು ಆರೋಪಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತರು ಮತ್ತು ವಿರೋಧ ಪಕ್ಷಗಳು ಈ ಕ್ರಮಗಳನ್ನು ನಿರಂಕುಶ ಮತ್ತು ಕಾನೂನುಬಾಹಿರ ಎಂದು ಬಣ್ಣಿಸಿದ್ದು, ಇದು ಆ.5, 2019ರಂದು ಜಮ್ಮುಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳನ್ನಾಗಿ ವಿಂಗಡಿಸಿದ ಬಳಿಕ ವಾಕ್ ಸ್ವಾತಂತ್ರ್ಯದ ಮೇಲೆ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದ ವ್ಯಾಪಕ ದಾಳಿಯ ಭಾಗವಾಗಿದೆ ಎಂದು ಹೇಳಿದ್ದಾರೆ.
ಉಚ್ಚ ನ್ಯಾಯಾಲಯದ ಜಮ್ಮು ವಿಭಾಗದ ನ್ಯಾಯಾಧೀಶ ಎಂ.ಎ.ಚೌಧರಿಯವರು ನ.7, 2024ರಂದು ಕಿಶ್ತವಾಡದ ದೂಲ್ ತಾಲೂಕಿನ ನಿವಾಸಿ ಮುಹಮ್ಮದ್ ಜಾಫರ್ ಶೇಖ್ ಅವರ ಬಂಧನದ ಪ್ರಕ್ರಿಯೆ ಕುರಿತು ಆಡಳಿತವನ್ನು ತೀವ್ರವಾಗಿ ತರಾಟೆಗೆತ್ತಿಕೊಂಡಿದೆ.