ಮಹಾರಾಷ್ಟ್ರ | ರಾಜಕೀಯ ಊಹಾಪೋಹಗಳಿಗೆ ಕಾರಣವಾದ ಸಿಎಂ ಫಡ್ನವೀಸ್- ಶೀವಸೇನಾ (UBT) ನಾಯಕರ ಭೇಟಿ
Photo credit: indiatoday.in
ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಉದ್ಧವ್ ನೇತೃತ್ವದ ಶಿವಸೇನೆಯ ಮೂವರು ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ್ದು, ಮಹಾರಾಷ್ಟ್ರದಲ್ಲಿ ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ.
ಫಡ್ನವಿಸ್ ಅವರ ಅಧಿಕೃತ ನಿವಾಸ ಸಾಗರ್ ಬಂಗಲೆಯಲ್ಲಿ ಸೋಮವಾರ ಮಧ್ಯಾಹ್ನ ನಡೆದ ಸಭೆಯಲ್ಲಿಉದ್ಧವ್ ಠಾಕ್ರೆ ಅವರ ಆಪ್ತ, ವಿಧಾನ ಪರಿಷತ್ ಸದಸ್ಯ ಮಿಲಿಂದ್ ನಾರ್ವೇಕರ್, ಮಾಜಿ ಸಚಿವ ಸುಭಾಷ್ ದೇಸಾಯಿ ಮತ್ತು ವಿಧಾನ ಪರಿಷತ್ ನ ವಿರೋಧ ಪಕ್ಷದ ನಾಯಕ ಅಂಬಾದಾಸ್ ದಾನ್ವೆ ಉಪಸ್ಥಿತರಿದ್ದರು.
ಮಹಾರಾಷ್ಟ್ರ ನವನಿರ್ಮಾಣ ಸೇನೆ(ಎಂಎನ್ಎಸ್) ಮುಖ್ಯಸ್ಥ ರಾಜ್ ಠಾಕ್ರೆ ಅವರನ್ನು ಫಡ್ನವಿಸ್ ಭೇಟಿಯಾದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಬಾಳಾಸಾಹೇಬ್ ಠಾಕ್ರೆ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿ ಈ ಭೇಟಿ ನಡೆದಿದೆ ಎಂದು ಪ್ರಾಥಮಿಕ ವರದಿಗಳು ಸೂಚಿಸುತ್ತವೆ. ಮುಂಬೈ ಮೇಯರ್ ಬಂಗಲೆಯಲ್ಲಿ ರಾಜ್ ಠಾಕ್ರೆ ಅವರ ಸ್ಮಾರಕವನ್ನು ಎರಡು ಹಂತಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಉದ್ಧವ್ ನೇತೃತ್ವದ ಶಿವಸೇನೆ ನಾಯಕರು ಮತ್ತು ಸಿಎಂ ಫಡ್ನವೀಸ್ ಅವರ ಅಧಿಕೃತ ಭೇಟಿಯು ಸ್ಮಾರಕದ ಬಗ್ಗೆ ಕೇಂದ್ರೀಕೃತವಾಗಿದೆ ಎಂದು ಹೇಳಲಾಗುತ್ತಿದ್ದರೂ ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ.