ಈಡಿ ಸಮನ್ಸ್ ಧಿಕ್ಕರಿಸಿದ ಆರೋಪ: ಜಾರ್ಖಂಡ್ ಸಿಎಂ ವಿರುದ್ಧ ಕ್ರಮಕ್ಕೆ ಸುಪ್ರೀಂ ತಡೆ
ಹೊಸದಿಲ್ಲಿ: ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೇನ್ ಮಾಲೀಕತ್ವದ, ಅವರು ಹೊಂದಿರುವ ಮತ್ತು ಸ್ವಾಧೀನಪಡಿಸಿಕೊಂಡ ಭೂಮಿಯ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಕಾನೂನು ಜಾರಿ ನಿರ್ದೇಶನಾಲಯ ಪದೇ ಪದೇ ನೀಡಿದ ಸಮನ್ಸ್ ಧಿಕ್ಕರಿಸಿದ ಪ್ರಕರಣದಲ್ಲಿ ಸಿಎಂ ವಿರುದ್ಧದ ಕ್ರಮಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ವಿಧಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿಗಳಾದ ಜೋಯ್ ಮಲ್ಯ ಬಗ್ಚಿ ಹಾಗೂ ವಿಪುಲ್ ಎಂ ಪಾಂಚೋಲಿ ಅವರಿದ್ದ ನ್ಯಾಯಪೀಠ, ಈ ಸಂಬಂಧ ಜಾರಿ ನಿರ್ದೇಶನಾಲಯಕ್ಕೆ ನೋಟಿಸ್ ನೀಡಿದ್ದು, ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚಿಸಿದೆ. ಆ ಬಳಿಕ ಮೂರು ವಾರಗಳ ಒಳಗೆ ಸ್ಪಷ್ಟನೆಯನ್ನು ನೀಡಲು ಸೊರೇನ್ ಗೆ ಅವಕಾಶ ಕಲ್ಪಿಸಿದೆ.
ಸೊರೇನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟ್ಗಿ, "ಇದು ಕಾನೂನು ಜಾರಿ ನಿರ್ದೇಶನಾಲಯ ಅಧಿಕಾರವನ್ನು ಸಾರಾಸಗಟಾಗಿ ದುರುಪಯೋಗ ಪಡಿಸಿಕೊಂಡ ಪ್ರಕರಣವಾಗಿದ್ದು, ನಿರ್ದೇಶನಾಲಯದ ಮುಂದೆ ಮೂರು ಬಾರಿ ಹಾಜರಾಗಿ ಅವರ ಪ್ರಶ್ನೆಗಳಿಗೆ ಉತ್ತರ ನೀಡಿದರೂ ಮೇಲಿಂದ ಮೇಲೆ ಸಮನ್ಸ್ ನೀಡಿದೆ" ಎಂದು ವಾದಿಸಿದರು. ಇದು ಪ್ರಚೋದಿತ ಮತ್ತು ರಾಜಕೀಯ ಬಲಿಪಶುವಾಗಿ ಮಾಡುವ ಪ್ರಯತ್ನ ಎಂದು ರೋಹಟ್ಗಿ ಹೇಳಿದರು.
ಪ್ರತಿವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಅನಿಲ್ ಕೌಶಿಕ್, ಸಿಎಂ ಉದ್ದೇಶಪೂರ್ವಕವಾಗಿ ಮತ್ತು ಇಚ್ಛಾಪೂರ್ವಕವಾಗಿ ಸಮನ್ಸ್ ಕಡೆಗಣಿಸುವ ಮೂಲಕ ತನಿಖೆಯ ಪ್ರಗತಿಗೆ ತಡೆ ಒಡ್ಡಿದ್ದಾರೆ ಎಂದು ಆಪಾದಿಸಿದರು. ಆದರೆ ಬೆದರಿಸುವ ಉದ್ದೇಶದಿಂದ ಇ.ಡಿ. ವಿಚಾರಣೆ ನಡೆಸಿದ್ದರೆ ಅದು ತನ್ನ ಉದ್ದೇಶವನ್ನು ಈಡೇರಿಸಿಕೊಂಡಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು. ದೊಡ್ಡ ಸಂಖ್ಯೆಯ ದೂರುಗಳನ್ನು ನೀವು ದಾಖಲಿಸಿರುವುದು ಪತ್ರಿಕಾ ವರದಿಗಳಿಂದ ತಿಳಿದುಬಂದಿದೆ ಎಂದು ನ್ಯಾಯಾಧೀಶರು ಸ್ಪಷ್ಟಪಡಿಸಿದರು.