ಪಹಲ್ಗಾಮ್ ದಾಳಿ ನೇತೃತ್ವ ವಹಿಸಿದ್ದ ಉಗ್ರ ಗುಂಡಿನ ಕಾಳಗದಲ್ಲಿ ಹತ: ವರದಿ
PC: x.com/businessline
ಹೊಸದಿಲ್ಲಿ: ಪಾಕಿಸ್ತಾನಿ ಉಗ್ರ ಪಹಲ್ಗಾಮ್ ನಲ್ಲಿ 26 ಮಂದಿಯನ್ನು ಹತ್ಯೆ ಮಾಡಿ ಮೂರು ತಿಂಗಳ ಬಳಿಕ ನಡೆದ ಕಾರ್ಯಾಚರಣೆಯಲ್ಲಿ, ಪಹಲ್ಗಾಮ್ ದಾಳಿಯ ನೇತೃತ್ವ ವಹಿಸಿದ್ದ ಎನ್ನಲಾದ ಸುಲೈಮಾನ್ ಎಂಬ ಉಗ್ರನನ್ನು ಸೇನೆಯ ಪ್ಯಾರಾ ಕಮಾಂಡೊಗಳು ಶ್ರೀನಗರದ ಹೊರವಲಯದ ದಾಚಿಗಾಮ್ ಅರಣ್ಯ ಪ್ರದೇಶದಲ್ಲಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ.
ಸೇನೆ, ಸಿಆರ್ಪಿಎಫ್ ಮತ್ತು ಜಮ್ಮು ಹಾಗೂ ಕಾಶ್ಮೀರ ಪೊಲೀಸ್ ಪಡೆಯ ಯೋಧರು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಇತರ ಇಬ್ಬರು ಉಗ್ರರೂ ಹತ್ಯೆಯಾಗಿದ್ದಾರೆ. ಆದರೆ ಈ ಇಬ್ಬರು ಪಹಲ್ಗಾಮ್ ಹತ್ಯಾಕಾಂಡದಲ್ಲಿ ಶಾಮೀಲಾಗಿದ್ದರೇ ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದು ಬಂದಿಲ್ಲ.
ಆದರೆ ಮೂಲಗಳ ಪ್ರಕಾರ, ಸೋಮವಾರ ನಡೆದ 'ಆಪರೇಷನ್ ಮಹಾದೇವ್' ಕಾರ್ಯಾಚರಣೆಯಲ್ಲಿ ಮೃತಪಟ್ಟ ಮೂವರು ಉಗ್ರರು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಲಷ್ಕರ್ ಇ ತೊಯ್ಬಾ ಮತ್ತು ರೆಸಿಸ್ಟನ್ಸ್ ಫ್ರಂಟ್ ನ ಉಗ್ರರು. ಸುಲೈಮಾನ್ ಜತೆಗೆ ಹತ್ಯೆಗೀಡಾದವರು ಅಬು ಹಮಾಝ್ ಮತ್ತು ಯಾಸಿರ್ ಎಂದು ಅಂದಾಜಿಸಲಾಗಿದೆ.
ಆಪರೇಷನ್ ಮಹಾದೇವ್ ಬಗ್ಗೆ ಇನ್ನೂ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ. ಆದಾಗ್ಯೂ ಪಾಕಿಸ್ತಾನದ ವಿಶೇಷ ಪಡೆಗಳ ಕಮಾಂಡೊ ಆಗಿ ಸೇವೆ ಸಲ್ಲಿಸಿದ್ದ ಸುಲೈಮಾನ್ ಹತ್ಯೆಗೀಡಾಗಿದ್ದಾನೆ ಎಂದು ಮೂಲಗಳು ಹೇಳಿವೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಎಲ್ಇಟಿ ಮುರಿಡ್ಕೆ ಕೇಂದ್ರದಲ್ಲಿ ತರಬೇತಿ ಪಡೆದಿದ್ದ ಈತ 2022ರಲ್ಲಿ ಎಲ್ಓಸಿ ದಾಟಿ ಎಂ-4 ಬಂದೂಕಿನೊಂದಿಗೆ ಜಮ್ಮು ಪ್ರದೇಶವನ್ನು ಪ್ರವೇಶಿಸಿದ್ದ ಎಂದು ತಿಳಿದು ಬಂದಿದೆ.