ದೇವಾಲಯದ ಬಳಿ ʼಅಲ್ಲಾಹ್ ಕೆ ಬಂದೇʼ ಹಾಡಿಗೆ ನೃತ್ಯ ಮಾಡುವಂತಿಲ್ಲ : ಯೂಟ್ಯೂಬರ್ಗೆ ನಿಂದಿಸಿದ ಬಿಜೆಪಿ ನಾಯಕ
Photo | Facebook
ಅಗರ್ತಲಾ: ತ್ರಿಪುರಾದ ಗೋಮತಿ ಜಿಲ್ಲೆಯ ಉದಯಪುರದ ದೇವಾಲಯದ ಬಳಿ ಯೂಟ್ಯೂಬರ್ ಓರ್ವರು ಕೈಲಾಶ್ ಖೇರ್ ಅವರ ʼಅಲ್ಲಾಹ್ ಕೆ ಬಂದೇʼ ಹಾಡಿಗೆ ನೃತ್ಯ ಮಾಡಿದ್ದರು. ಆದರೆ, ಈ ವೇಳೆ ಬಿಜೆಪಿ ನಾಯಕನೋರ್ವ ಮಧ್ಯಪ್ರವೇಶಿಸಿ ಯೂಟ್ಯೂಬರ್ಗೆ ನಿಂದಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಮೇ 18ರಂದು ಘಟನೆ ನಡೆದಿದೆ. ಗೋಮತಿ ಜಿಲ್ಲೆಯ ಉದಯಪುರದ ದೇವಾಲಯದ ಬಳಿ ಯೂಟ್ಯೂಬರ್ ಸಾನು ಮಲಾಕರ್ 'ಅಲ್ಲಾಹ್ ಕೆ ಬಂದೇ' ಹಾಡಿಗೆ ಹೆಜ್ಜೆ ಹಾಕಿದ್ದರು.
ದೇವಾಲಯದ ಬಳಿ ಯೂಟ್ಯೂಬರ್ ಸಾನು ಮಲಾಕರ್ 'ಅಲ್ಲಾಹ್' ಎಂಬ ಪದವಿರುವ ಹಾಡಿಗೆ ನೃತ್ಯ ಮಾಡಿದ್ದಕ್ಕೆ ಬಿಜೆಪಿ ನಾಯಕ ತುಷಾರ್ ಕಾಂತಿ ಶಿಲ್ ನಿಂದಿಸುವುದು, ಬಟ್ಟೆ ಬಿಚ್ಚುವಂತೆ ಹೇಳುತ್ತಿರುವ ವೀಡಿಯೊ ವೈರಲ್ ಆಗಿತ್ತು.
ತುಷಾರ್ ಕಾಂತಿ ಶಿಲ್ ಯೂಟ್ಯೂಬರ್ಗೆ ನಿನ್ನ ಧರ್ಮ ಯಾವುದೆಂದು ಪ್ರಶ್ನಿಸಿದ್ದಾನೆ. ಮುಸ್ಲಿಂ ಸಮುದಾಯಕ್ಕೆ ಸೇರಿದವನಾ ಎಂದು ಪರಿಶೀಲಿಸಲು ಪ್ಯಾಂಟ್ ಬಿಚ್ಚುವಂತೆʼ ಸೂಚಿಸುವುದು ಕಂಡು ಬಂದಿದೆ.
ʼಅಲ್ಲಾಹ್ ಕೆ ಬಂದೇʼ ಎಂಬ ಪದವನ್ನು ಹಿಂದೂ ದೇವಾಲಯದ ಬಳಿ ಹೇಳಬಾರದು. ಇದು ಹಿಂದೂಸ್ತಾನ, ಹಿಂದೂಗಳ ನಾಡು, ಈ ಮಣ್ಣಿನಲ್ಲಿ ಇದನ್ನು ಅನುಮತಿಸಲಾಗುವುದಿಲ್ಲ ಎಂದು ಕೋಮು ನಿಂದನೆಯೊಂದಿಗೆ ಹೇಳುತ್ತಿರುವುದು ಕಂಡು ಬಂದಿದೆ.
ಪ್ರತಿಪಕ್ಷಗಳು ಘಟನೆಯನ್ನು ಖಂಡಿಸಿ ಬಿಜೆಪಿ ನಾಯಕನ ಬಂಧನಕ್ಕೆ ಒತ್ತಾಯಿಸಿದೆ. ಆದರೆ, ಪೊಲೀಸರು ಇನ್ನೂ ಕ್ರಮವನ್ನು ಕೈಗೊಂಡಿಲ್ಲ. ಬಿಜೆಪಿ ಕೂಡ ಆತನ ವಿರುದ್ಧ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು thewire ವರದಿ ಮಾಡಿದೆ.