×
Ad

ಬೆಳ್ಳಿ ಹಬ್ಬದ ಸಡಗರದಲ್ಲಿ ಎಸ್‌ಡಿಎಂಸಿ ಸಮಿತಿಗಳು

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾಗಿ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸುವ ನೇರ ಹೊಣೆಗಾರಿಕೆ ಹೊಂದಿರುತ್ತಾರೆ. ಈ ದಿಶೆಯಲ್ಲಿ ಕಾಯ್ದೆಯ ಅಡಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ಮತ್ತು ಪ್ರಕಾರ್ಯಗಳ ಬಗ್ಗೆ ಸದಸ್ಯರಿಗೆ ಸ್ಪಷ್ಟ ಅರಿವು ಮೂಡಿಸುವ ಮೂಲಕ ಅವುಗಳನ್ನು ಬಲವರ್ಧನೆಗೊಳಿಸಬೇಕಿದೆ. ಎಸ್‌ಡಿಎಂಸಿಗಳ ಬೆಳ್ಳಿಹಬ್ಬದ ಈ ಸಂದರ್ಭದಲ್ಲಿ, ಸರಕಾರ ಈ ಸಮಿತಿಗಳ ಬಲವರ್ಧನೆಗೆ ವಿಶೇಷ ಕ್ರಿಯಾ ಯೋಜನೆ ರೂಪಿಸುವ ಅಗತ್ಯವಿದೆ.

Update: 2025-04-29 11:17 IST

ಸಮುದಾಯದ ಸಕ್ರಿಯ ಪಾಲ್ಗೊಳ್ಳುವಿಕೆಯಿಲ್ಲದೆ ಗುಣಾತ್ಮಕ ಶಾಲಾ ಶಿಕ್ಷಣದ ಸಾರ್ವತ್ರೀಕರಣ ಸಾಧ್ಯವಿಲ್ಲವೆಂಬುದು ಸಾರ್ವತ್ರಿಕ ಸತ್ಯ. ಈ ಸತ್ಯವನ್ನು ಮನಗಂಡ ಕೇಂದ್ರ ಹಾಗೂ ಹಲವು ರಾಜ್ಯ ಸರಕಾರಗಳು 1986ರ ರಾಷ್ಟ್ರೀಯ ಶಿಕ್ಷಣ ನೀತಿ ಅನ್ವಯ ಸಮುದಾಯವನ್ನು ಒಳಮಾಡಿಕೊಳ್ಳುವ ಪ್ರಕ್ರಿಯೆಗೆ ಹಲವು ಪ್ರಯತ್ನಗಳನ್ನು ಮಾಡುತ್ತಾ ಬಂದಿವೆ. ಬಹುತೇಕ ಸಂದರ್ಭದಲ್ಲಿ, ಈ ಪ್ರಯತ್ನಗಳು ಒಂದು ಬಗೆಯ ಸಾಂಕೇತಿಕ ಹಾಗೂ ಸಮುದಾಯವನ್ನು ಭಾಗಶಃ ಒಳಮಾಡಿಕೊಳ್ಳುವ ಪ್ರಯತ್ನಗಳಾಗಿದ್ದವು ಎಂದರೆ ತಪ್ಪಾಗಲಾರದು. ಕಾರಣ, ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕ-ಪೋಷಕರಿಗೆ ಗರಿಷ್ಠ ಪ್ರಾತಿನಿಧ್ಯ ನೀಡುವ ಬದಲು, ತೋರಿಕೆಗೆ ಒಂದೋ-ಎರಡೋ ಪ್ರಾತಿನಿಧ್ಯ ನೀಡಿ, ಅದನ್ನೇ ಸಮುದಾಯದ ಪಾಲ್ಗೊಳ್ಳುವಿಕೆ ಎಂದು ಬಿಂಬಿಸಲಾಗಿತ್ತು.

ಇದಕ್ಕೆ ಅಪವಾದವೆಂಬಂತೆ, ನಮ್ಮ ರಾಜ್ಯದಲ್ಲಿ ಸಮುದಾಯದ ಮಾಲಕತ್ವ ಹಾಗೂ ಪಾಲ್ಗೊಳ್ಳುವಿಕೆಗೆ ದೇಶವೇ ಅನುಕರಣೆ ಮಾಡಬಹುದಾದ ಪ್ರಯೋಗವನ್ನು ರಾಜ್ಯ ಸರಕಾರವು 2001ರಲ್ಲಿ ಶಿಕ್ಷಣ ಕಾರ್ಯಪಡೆ ಶಿಫಾರಸಿನ (2000) ಆಧಾರದ ಮೇಲೆ, ರಾಜ್ಯದ ಎಲ್ಲಾ ಸರಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲೆಗಳಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು (ಎಸ್‌ಡಿಎಂಸಿ) ರಚಿಸಲು ಅಗತ್ಯವಾದ ನೀತಿ ಮತ್ತು ಆದೇಶವನ್ನು ಕಾನೂನಾತ್ಮಕವಾಗಿ ರೂಪಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯು ವಿಸ್ತೃತ ಪ್ರಕ್ರಿಯೆಯನ್ನು ಕೈಗೊಂಡಿತ್ತು. ಅಂದಿನ ಶಿಕ್ಷಣ ಸಚಿವರಾಗಿದ್ದ ಎಚ್. ವಿಶ್ವನಾಥ್‌ರವರ ಪ್ರಾಮಾಣಿಕ ಪ್ರಯತ್ನದಿಂದ, ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ಮಕ್ಕಳ ಪಾಲಕರನ್ನು ಶಾಲಾ ನಿರ್ವಹಣೆ ಮತ್ತು ಮೇಲುಸ್ತುವಾರಿಯ ಕೆಲಸದಲ್ಲಿ ಪ್ರಜಾಸತ್ತಾತ್ಮಕವಾಗಿ ಒಳಮಾಡಿಕೊಳ್ಳುವ ಪ್ರಕ್ರಿಯೆ ದೇಶದಲ್ಲಿಯೇ ಮೊದಲ ಬಾರಿಗೆ ಸಾಂಸ್ಥಿಕ ಸ್ವರೂಪದಲ್ಲಿ ಜಾರಿಯಾಯಿತು.

ಈ ಎಲ್ಲಾ ಪ್ರಯತ್ನಗಳ ಫಲದಿಂದ, ದಿನಾಂಕ 28.04.2001ರಲ್ಲಿ ಸರಕಾರವು ಕಾರ್ಯಕಾರಿ ಆದೇಶವನ್ನು ಹೊರಡಿಸಿ ರಾಜ್ಯದ ಎಲಾ ಸರಕಾರಿ ಕಿರಿಯ, ಹಿರಿಯ ಹಾಗೂ ಪ್ರೌಢ ಶಾಲೆಗಳಲ್ಲಿ ತಮ್ಮ ಮಕ್ಕಳ ಶಿಕ್ಷಣದ ಬಗ್ಗೆ ಸದಾ ಕಾಳಜಿಯುಳ್ಳ ಪೋಷಕರು/ಪಾಲಕರು ಶಿಕ್ಷಣ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡಲು ಶಾಲಾ ಹಂತದಲ್ಲಿ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗಳನ್ನು ರಚಿಸಲು ಅವಕಾಶ ಕಲ್ಪಿಸಿತು. ಈ ಸಮಿತಿಗಳು ಈಗ ಬೆಳ್ಳಿ ಹಬ್ಬವನ್ನು ಆಚರಿಸಿಕೊಳ್ಳುತ್ತಿವೆ. ಈ ಆದೇಶದ ಅನ್ವಯ ಎಲ್ಲಾ ಶಾಲೆಗಳಲ್ಲಿ ಸಮಿತಿಗಳನ್ನು ರಚಿಸುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯ ಮಾಹಿತಿ ಮತ್ತು ತರಬೇತಿಗಳನ್ನು ನೀಡಲು ರಾಜ್ಯದ ಪ್ರತಿಷ್ಠಿತ ಸಂಸ್ಥೆಯಾದ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಮತ್ತು ಕಾನೂನು ಕೇಂದ್ರವು ಪೂರ್ಣವಾಗಿ ಶಿಕ್ಷಣ ಇಲಾಖೆಯ ಜೊತೆ ಕೈಜೋಡಿಸಿತ್ತು. ಅಂದಿನಿಂದ ಇಂದಿನವರೆಗೂ, ಈ ಎಲ್ಲಾ ಪ್ರಕ್ರಿಯೆಗಳಲ್ಲಿ ನಿರಂತರವಾಗಿ ತೊಡಗಿಸಿಕೊಳ್ಳಲು ನನಗೆ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

ನಂತರ 2006ರಲ್ಲಿ ರೂಪಿಸಲಾದ ಎಸ್‌ಡಿಎಂಸಿ ಬೈಲಾಗಳು, ಎಸ್‌ಡಿಎಂಸಿಗಳನ್ನು ಸ್ಥಳೀಯ ಸರಕಾರವಾದ ಪಂಚಾಯತ್ ರಾಜ್ ವ್ಯವಸ್ಥೆಯ ಭಾಗವಾಗಿ ಬೆಸೆಯಲು ಪಂಚಾಯತ್ ರಾಜ್ ಕಾಯ್ದೆ ಅಡಿಯಲ್ಲಿ ಕಾನೂನುದತ್ತವಾದ ಅವಕಾಶ ಕಲ್ಪಿಸಿತು. ಇದು ಒಂದು ರೀತಿಯಲ್ಲಿ, ಶಿಕ್ಷಣದ ಆಡಳಿತವನ್ನು ಗಾಂಧೀಜಿಯ ಕನಸಿನಂತೆ ಗ್ರಾಮ ಸ್ವರಾಜ್ಯ, ಅಂದರೆ, ಪ್ರತಿಯೊಂದು ಶಾಲೆಯೂ ತನ್ನದೇ ನಿರ್ವಹಣಾ ಮತ್ತು ಮೇಲುಸ್ತುವಾರಿಯ ಸಾಂಸ್ಥಿಕ ವ್ಯವಸ್ಥೆಯನ್ನು ಕಟ್ಟಿಕೊಳ್ಳುವತ್ತ ಒಂದು ಮೈಲಿಗಲ್ಲು. ಈ ಸಮಿತಿಯ ರಚನೆ, ಪಾಲಕರ ಭಾಗವಹಿಸುವಿಕೆ ಹಾಗೂ ಕಾರ್ಯ ವೈಖರಿಯನ್ನು ಮಾದರಿಯಾಗಿ ಪರಿಗಣಿಸಿದ ಕೇಂದ್ರ ಸರಕಾರ, 2009ರಲ್ಲಿ ಸಂವಿಧಾನದ ವಿಧಿ 21ಎಯನ್ನು ಸಾಕಾರಗೊಳಿಸಲು ರೂಪಿಸಿದ ಶಿಕ್ಷಣ ಹಕ್ಕು ಕಾಯ್ದೆ 2009ರ ಅಡಿಯಲ್ಲಿ, ಈ ಸಮಿತಿಗಳಿಗೆ ಸಂವಿಧಾನ ಬದ್ಧ ಸ್ಥಾನವನ್ನು ಕಲ್ಪಿಸಿತು. 2001ರಲ್ಲಿ ಕೇವಲ ಸರಕಾರದ ಒಂದು ಕಾರ್ಯಕಾರಿ ಆದೇಶದ ಮೂಲಕ ರಚನೆಯಾದ ಈ ಸಮಿತಿಗಳಿಗೆ ಅಂತಿಮವಾಗಿ ಸಂವಿಧಾನಬದ್ಧ ಸ್ಥಾನಮಾನ ಕಲ್ಪಿಸುವ ಮೂಲಕ ಎಸ್‌ಡಿಎಂಸಿಗಳು ಇಡೀ ದೇಶಕ್ಕೆ ಮಾದರಿಯಾಗಿದ್ದು ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಶಿಕ್ಷಣ ಹಕ್ಕು ಕಾಯ್ದೆ ಅನ್ವಯ ಪ್ರಕರಣ 21, 22 ಮತ್ತು 35ರ ಅನ್ವಯ, ಈ ಸಮಿತಿಗಳು ಸಂವಿಧಾನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿವೆ.

ಶಿಕ್ಷಣ ಹಕ್ಕು ಕಾಯ್ದೆ (2009) ಅನ್ವಯ ಅನುದಾನ ರಹಿತ ಶಾಲೆಗಳನ್ನು ಹೊರತು ಪಡಿಸಿ ಉಳಿದೆಲ್ಲ ಶಾಲೆಗಳು, ಶಾಲೆಯಲ್ಲಿ ಪ್ರವೇಶ ಪಡೆದ ಮಕ್ಕಳ ತಂದೆ-ತಾಯಿ ಅಥವಾ ಪೋಷಕರು, ಸ್ಥಳೀಯ ಪ್ರಾಧಿಕಾರದ ಚುನಾಯಿತ ಪ್ರತಿನಿಧಿಗಳು ಮತ್ತು ಶಿಕ್ಷಕರನ್ನು ಒಳಗೊಂಡಿರುವ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯೊಂದನ್ನು ರಚಿಸಬೇಕು. ಈ ಸಮಿತಿಯ ಸದಸ್ಯರಲ್ಲಿ ಕನಿಷ್ಠ ಮುಕ್ಕಾಲು (ಶೇ. 75) ಮಂದಿ ಸದಸ್ಯರು ತಂದೆ-ತಾಯಿ ಅಥವಾ ಪೋಷಕರಾಗಿರಬೇಕು. ಜೊತೆಗೆ, ಅವಕಾಶ ವಂಚಿತ ಗುಂಪು ಹಾಗೂ ದುರ್ಬಲ ವರ್ಗಕ್ಕೆ ಸೇರಿದ ಮಕ್ಕಳ ಪೋಷಕರು ಅಥವಾ ಪಾಲಕರಿಗೆ ಪ್ರಮಾಣಾನುಸಾರ ಪ್ರಾತಿನಿಧ್ಯವಿರಬೇಕು. ಸಮಿತಿಯ ಸದಸ್ಯರ ಶೇ. 50ರಷ್ಟು ಸದಸ್ಯರು ಮಹಿಳೆಯರಾಗಿರಬೇಕು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆಯಲ್ಲಿ ಮತ್ತಷ್ಟು ಸ್ಪಷ್ಟತೆಯನ್ನು ಕರ್ನಾಟಕ ಉಚಿತ ಮತ್ತು ಕಡ್ಡಾಯ ಶಿಕ್ಷಣಕ್ಕಾಗಿ ಮಕ್ಕಳ ಹಕ್ಕು ನಿಯಮಗಳಲ್ಲಿ ಒದಗಿಸಲಾಗಿದೆ. ನಿಯಮ 13ರ ಅನ್ವಯ, ಪ್ರತಿಯೊಂದು ಶಾಲೆಯು ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ (ಎಸ್‌ಡಿಎಂಸಿ)ಯನ್ನು ನಿಯಮಗಳು ಜಾರಿಗೆ ಬಂದ ಆರು ತಿಂಗಳೊಳಗಾಗಿ ಕಡ್ಡಾಯವಾಗಿ ರಚಿಸಬೇಕು ಮತ್ತು ಸಮಿತಿಯನ್ನು ಪ್ರತೀ 3 ವರ್ಷಗಳಿಗೊಮ್ಮೆ ಮರು ರಚಿಸಬೇಕು. ಸಮಿತಿಯು ಈ ಕೆಳಕಂಡವರನ್ನು ಒಳಗೊಂಡಿರಬೇಕು.

ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ 18 ಚುನಾಯಿತ ಸದಸ್ಯರು ಮಕ್ಕಳ ಪಾಲಕರು ಅಥವಾ ಪೋಷಕರಿಂದ ಆಯ್ಕೆಯಾಗಬೇಕು.ಮುಖ್ಯೋಪಾಧ್ಯಾಯ ಅಥವಾ ಹಿರಿಯ ಉಪಾಧ್ಯಾಯರು ಪದನಿಮಿತ್ತ ಸದಸ್ಯ ಕಾರ್ಯದರ್ಶಿಯಾಗಿರಬೇಕು. ಶಾಲೆಯು ಇರುವ ಪ್ರದೇಶ ವ್ಯಾಪ್ತಿಯ ಆರೋಗ್ಯ ಕಾರ್ಯಕರ್ತೆ ಮತ್ತು ಅಂಗನವಾಡಿ ಕಾರ್ಯಕರ್ತೆ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಪದನಿಮಿತ್ತ ಸದಸ್ಯರಾಗಿರಬೇಕು.

ಉಳಿದ ನಾಲ್ಕು ಜನ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ನಾಮನಿರ್ದೇಶಿತ ಸದಸ್ಯರಾಗಿರಬೇಕು. ಅವರುಗಳೆಂದರೆ, ಸ್ಥಳೀಯ ಪ್ರಾಧಿಕಾರದ ಚುನಾಯಿತ ಸದಸ್ಯರಲ್ಲಿ, ಒಬ್ಬರನ್ನು ಸ್ಥಳೀಯ ಪ್ರಾಧಿಕಾರ ನಾಮ ನಿರ್ದೇಶನ ಮಾಡಬೇಕು;ಮತ್ತೊಬ್ಬ ಸದಸ್ಯನನ್ನು ಶಾಲಾ ಉಪಾಧ್ಯಾಯರ ಪೈಕಿ ಬಿಇಒ ನಾಮ ನಿರ್ದೇಶನ ಮಾಡಬೇಕು ಮತ್ತು ಉಳಿದ ಇಬ್ಬರಲ್ಲಿ, ಒಬ್ಬರು ಸ್ಥಳೀಯ ಪ್ರದೇಶದ ಶಿಕ್ಷಣ ತಜ್ಞ ಹಾಗೂ ಮತ್ತೊಬ್ಬರು ಶಾಲೆಯ ಉನ್ನತ ತರಗತಿಯಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಒಬ್ಬರನ್ನು ಬಿಇಒ ನಾಮ ನಿರ್ದೇಶನ ಮಾಡಬೇಕು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಶೇ. 50ರಷ್ಟು ಸದಸ್ಯರು ಮಹಿಳೆಯರಾಗಿರಬೇಕು. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಪೋಷಕ ಅಥವಾ ಪಾಲಕರ ಚುನಾಯಿತ ಸದಸ್ಯರಲ್ಲೇ ಆಯ್ಕೆಯಾಗಬೇಕು.

ಆಯಾ ಶೈಕ್ಷಣಿಕ ತಾಲೂಕಿನ ಬಿಇಒ ತನ್ನ ಕಾರ್ಯ ವ್ಯಾಪ್ತಿಯ ಎಲ್ಲಾ ಶಾಲೆಗಳಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಕಾರ್ಯ ನಿರ್ವಹಿಸುವುದನ್ನು ಖಾತ್ರಿಗೊಳಿಸಲು ಸಮರ್ಥ ಪ್ರಾಧಿಕಾರವಾಗಿರುತ್ತಾರೆ.ಜೊತೆಗೆ ಏನಾದರೂ ಕುಂದು ಕೊರತೆಗಳಿದ್ದಲ್ಲಿ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಅಂತಹ ಸಂದರ್ಭದಲ್ಲಿ ಸ್ಥಳೀಯ ಪ್ರಾಧಿಕಾರವನ್ನು ಸಹ ಒಳಮಾಡಿಕೊಳ್ಳುತ್ತಾರೆ. ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ತಿಂಗಳಲ್ಲಿ ಕನಿಷ್ಠ ಪಕ್ಷ ಒಂದು ಬಾರಿ ಸಭೆ ಸೇರತಕ್ಕದ್ದು ಮತ್ತು ಸಭೆಯ ನಡಾವಳಿಗಳನ್ನು ವರದಿ ಮಾಡಿಕೊಳ್ಳಬೇಕು ಮತ್ತು ಸಾರ್ವಜನಿಕರಿಗೆ ದೊರಕುವಂತೆ ಮಾಡಬೇಕು.

ಈ ರೀತಿ ರಚನೆಯಾದ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಈ ಕೆಳಗಿನ ಪ್ರಕಾರ್ಯಗಳನ್ನು ನಿರ್ವಹಿಸಬೇಕು.

1. ಶಾಲೆಯ ಎಲ್ಲಾ ಕೆಲಸ ಕಾರ್ಯಗಳ ಮೇಲ್ವಿಚಾರಣೆ ಮಾಡುವುದು.

2. ಶಾಲಾ ಅಭಿವೃದ್ಧಿ ಯೋಜನೆ ಸಿದ್ಧಪಡಿಸುವುದು ಮತ್ತು ಶಿಫಾರಸು ಮಾಡುವುದು.

3. ಕೇಂದ್ರ/ರಾಜ್ಯ ಸರಕಾರ ಅಥವಾ ಸ್ಥಳೀಯ ಪ್ರಾಧಿಕಾರ ಅಥವಾ ಯಾವುದೇ ಇತರ ಮೂಲದಿಂದ ಸ್ವೀಕರಿಸಿದ ಅನುದಾನಗಳ ಬಳಕೆಯ ಮೇಲ್ವಿಚಾರಣೆ ಮಾಡುವುದು.

4. ಸರಕಾರ ಗೊತ್ತುಪಡಿಸಬಹುದಾದ ಇತರ ಪ್ರಕಾರ್ಯಗಳನ್ನು ನೆರವೇರಿಸುವುದು.

ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ಈ ಪ್ರಮುಖ ಪ್ರಕಾರ್ಯಗಳ ಜೊತೆಗೆ, ಕರ್ನಾಟಕ ಶಿಕ್ಷಣ ಹಕ್ಕು ನಿಯಮಗಳ ಅಡಿಯಲ್ಲಿ ಗೊತ್ತುಪಡಿಸಿರುವ ಪ್ರಕಾರ್ಯಗಳನ್ನು ಸಹ ಈ ಸಮಿತಿಗಳು ನಿರ್ವಹಿಸಬೇಕಿದೆ.

1. ಶಾಲೆಯ ಅಕ್ಕ-ಪಕ್ಕದ ನಿವಾಸಿಗಳಿಗೆ ಶಿಕ್ಷಣ ಹಕ್ಕು ಕಾಯ್ದೆಯಲ್ಲಿನ ಅಂಶಗಳನ್ನು ತಿಳಿಸುವುದು.

2. ಕಾಯ್ದೆಯ ಪ್ರಕರಣ 24 ಅನ್ವಯ ಶಿಕ್ಷಕರು ಶಾಲೆಗೆ ತಪ್ಪದೆ ಹಾಜರಾಗುವುದು ಮತ್ತು ಸಮಯಪಾಲನೆ ಮಾಡುವುದು; ಮಕ್ಕಳ ತಂದೆ ತಾಯಿಯರೊಡನೆ ಕ್ರಮಬದ್ಧವಾಗಿ ಸಭೆ ನಡೆಸಿ, ಅವರ ಮಕ್ಕಳು ನಿಯಮಿತವಾಗಿ ಶಾಲೆಗೆ ಹಾಜರಾಗುವ, ಕಲಿಯುವ ಸಾಮರ್ಥ್ಯ, ಕಲಿಕೆಯಲ್ಲಿನ ಪ್ರಗತಿ ಮತ್ತು ಇನ್ನಿತರ ಸೂಕ್ತವಾದ ಮಾಹಿತಿಗಳನ್ನು ಹಂಚಿಕೊಳ್ಳಬೇಕು.

3. ಕಾಯ್ದೆಯ ಪ್ರಕರಣ 27ರ ಅನ್ವಯ, ಶಿಕ್ಷಕರನ್ನು ಹತ್ತು ವರ್ಷಗಳಿಗೊಮ್ಮೆ ನಡೆಯುವ ಜನಗಣತಿ, ವಿಪತ್ತು ನಿರ್ವಹಣೆ, ಸ್ಥಳೀಯ ಸರಕಾರ, ರಾಜ್ಯ ವಿಧಾನ ಸಭೆ ಮತ್ತು ಸಂಸತ್ ಚುನಾವಣೆ ಹೊರತು ಪಡಿಸಿ, ಇತರ ಯಾವುದೇ ಶೈಕ್ಷಣಿಕವಲ್ಲದ ಕರ್ತವ್ಯಗಳಿಂದ ಹೊರೆಯಾಗದಂತೆ ಮೇಲ್ವಿಚಾರಣೆ ಮಾಡಬೇಕು.

4. ಧರ್ಮ, ಜನಾಂಗ, ಜಾತಿ, ಲಿಂಗ, ಭಾಷೆ ಮತ್ತು ಜನನ ಸ್ಥಳಗಳನ್ನು ನೋಡದೆ ಶಾಲೆಯಲ್ಲಿರುವ ಮಕ್ಕಳ ನಿರಂತರ ಹಾಜರಾತಿಯಯನ್ನು ಖಾತರಿ ಪಡಿಸಬೇಕು. ಈ ಸಂಬಂಧವಾಗಿ ಎಸ್‌ಡಿಎಂಸಿಯು ಹೆಣ್ಣು ಮಕ್ಕಳಿಗಾಗಿ ವಿಶೇಷ ಶಿಬಿರಗಳನ್ನು ಮಾಡಬಹುದು. ಬಾಲ ಕಾರ್ಮಿಕರಿಗೆ ಸೌಲಭ್ಯಗಳ ಮೇಲ್ವಿಚಾರಣೆ ಮತ್ತು ವಿಶೇಷ ಅಗತ್ಯಗಳೊಂದಿಗೆ ಶಿಕ್ಷಣಗಳನ್ನು ಕೊಡಬಹುದಾಗಿದೆ.

5. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯಲ್ಲಿ ನೀಡಲಾಗಿರುವ ಶಾಲೆಗಳಿಗೆ ನಿಗದಿಪಡಿಸಿದ ಗುಣಮಟ್ಟದ ವಿಧಿ ಮತ್ತು ಮಾನಕಗಳ ಜಾರಿಯ ಮೇಲ್ವಿಚಾರಣೆ ಮಾಡುವುದು.

6. ವಿಶೇಷ ಅಗತ್ಯವುಳ್ಳ ಮಕ್ಕಳು ಶಾಲೆಗೆ ಹೋಗಲು ಸಶಕ್ತವಾಗಲು ವಿಶೇಷ ಸೌಲಭ್ಯಗಳು ಅಂದರೆ ಶ್ರವಣ ಸಾಧನ, ಬ್ರೈಲ್ ಇತ್ಯಾದಿಗಳನ್ನು ಕೊಡುವಾಗ ತಾರತಮ್ಯವಾಗದಿರುವುದನ್ನು ಖಾತರಿಗೊಳಿಸಬೇಕು. ಅಂತಹ ಮಕ್ಕಳನ್ನು ಗುರುತಿಸುವಲ್ಲಿ, ಪಟ್ಟಿ ಮಾಡುವಲ್ಲಿ ಮತ್ತು ಕಲಿಕಾ ಸೌಲಭ್ಯಗಳನ್ನು ನೀಡುವ ಬಗ್ಗೆ ಮೇಲ್ವಿಚಾರಣೆ ಮಾಡಬೇಕು. ಅಂತಹ ಮಕ್ಕಳು ಪ್ರಾಥಮಿಕ ಶಿಕ್ಷಣದಲ್ಲಿ ಭಾಗಿಯಾಗುವುದು ಮತ್ತು ಪೂರ್ತಿಗೊಳಿಸುವುದನ್ನು ಖಾತರಿಗೊಳಿಸಬೇಕು.

7. ನಿಯತಕಾಲಿಕವಾಗಿ ಶಾಲೆಯಿಂದ ಹೊರಗುಳಿದ ಮಕ್ಕಳ(ಡ್ರಾಪ್-ಔಟ್ ದರವನ್ನು) ಮೇಲ್ವಿಚಾರಣೆ ಮಾಡುವುದು ಮತ್ತು ಹಾಜರಾತಿಯನ್ನು ಖಾತರಿಗೊಳಿಸುವುದು.

8. ನಿರಂತರ ಹಾಜರಾತಿ ಮೂಲಕ ಮಕ್ಕಳನ್ನು ಶಾಲೆಯಲ್ಲಿ ಉಳಿಸಿಕೊಳ್ಳಲು ಉಚಿತ ಪಠ್ಯಪುಸ್ತಕಗಳ ಹಂಚಿಕೆ, ಮಧ್ಯಾಹ್ನದ ಬಿಸಿ ಊಟ, ಸಮವಸ್ತ್ರ, ಶೂ ಮತ್ತು ಸಾಕ್ಸ್, ವಿದ್ಯಾರ್ಥಿ ವೇತನ ಹಾಗೂ ಸರಕಾರವು ಕಾಲದಿಂದ ಕಾಲಕ್ಕೆ ಕೊಡಬಹುದಾದ ಇತರ ಯಾವುದೇ ಉತ್ತೇಜಕ ಕಾರ್ಯಕ್ರಮಗಳ ಪರಿಣಾಮಕಾರಿ ಜಾರಿ ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡುವುದು.

9. ಪ್ರತಿಯೊಂದು ಶಾಲೆಯ ಮಾರ್ಚ್ ತಿಂಗಳ 31ನೇ ತಾರೀಕಿಗೆ ಕೊನೆಗೊಂಡ ಕಾಲಾವಧಿಯ ವರ್ಷದ ಜೂನ್ ತಿಂಗಳ ಮೊದಲು ವಾರ್ಷಿಕ ಸ್ವೀಕೃತಿ ಮತ್ತು ವೆಚ್ಚಗಳ ಲೆಕ್ಕವನ್ನು ಸಿದ್ಧಪಡಿಸುವುದು ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯಿಂದ ಅನುಮೋದನೆ ಮಾಡತಕ್ಕದ್ದು. ಈ ಲೆಕ್ಕಪತ್ರಕ್ಕೆ ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸಹಿ ಮಾಡಿರಬೇಕು ಮತ್ತು ಅದನ್ನು ಶಾಲೆಯ ನಾಮ ಫಲಕದಲ್ಲಿ ಸಾರ್ವಜನಿಕವಾಗಿ ಪ್ರಕಟಿಸಬೇಕು.

10. ಪ್ರಕರಣ 22 ಅನ್ವಯ ಶಾಲೆಯ ಅವಶ್ಯಕತೆಗಳನ್ನು ಗುರುತಿಸಿ ಶಾಲಾಭಿವೃದ್ದಿ ಯೋಜನೆಯನ್ನು ತಯಾರಿಸುವುದು ಮತ್ತು ಕಾರ್ಯಗತಗೊಳಿಸುವುದನ್ನು ಮೇಲ್ವಿಚಾರಣೆ ಮಾಡುವುದು. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯು ಶಾಲೆಯ ಅಗತ್ಯಗಳನ್ನು ಗುರುತಿಸಿದ ನಂತರ ಆರ್ಥಿಕ ವರ್ಷಕ್ಕಾಗಿ ಶಾಲಾ ಅಭಿವೃದ್ಧಿ ಯೋಜನೆಯನ್ನು ಸಿದ್ಧಪಡಿಸಬೇಕು. ಶಾಲಾ ಅಭಿವೃದ್ಧಿ ಮತ್ತು ಮೇಲ್ವಿಚಾರಣಾ ಸಮಿತಿಯು ಶಾಲೆಯ ಮೂಲಭೂತ ಸೌಕರ್ಯಗಳಾದ ಆಟದ ಮೈದಾನ, ಕಾಂಪೌಂಡ್ ಗೋಡೆಗಳು, ತರಗತಿಗಳು, ಶೌಚಾಲಯ, ಪೀಠೋಪಕರಣ, ಕುಡಿಯುವ ನೀರು ಇತ್ಯಾದಿಗಳನ್ನು ಮೇಲ್ವಿಚಾರಣೆ ಮಾಡುವುದು. ಶಾಲಾ ಅಭಿವೃದ್ಧಿ ಯೋಜನೆಯಂತೆ ಯಾವುದೇ ಕೆಲಸದ ನಿರ್ಮಾಣ ವ್ಯವಸ್ಥೆ ಮತ್ತು ನಿರ್ವಹಣೆಯನ್ನು ಮಾಡಬೇಕು. ಶಾಲಾ ಆವರಣವನ್ನು ಅತಿಕ್ರಮ ಮತ್ತು ಉಪದ್ರವಗಳಿಂದ ರಕ್ಷಿಸಬೇಕು. ಶಾಲೆಯ ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಪ್ರಕಟಿಸಿದೆ ಎಂಬುದನ್ನು ಖಾತ್ರಿಗೊಳಿಸಬೇಕು. ಶಾಲಾಸ್ವಚ್ಛತೆಯನ್ನು ನೋಡಿಕೊಳ್ಳಬೇಕು ಮತ್ತು ಶಾಲೆಯನ್ನು ನಿರ್ವಹಣೆ ಮಾಡಬೇಕು, ಅದರ ಜೊತೆಗೆ ಶಾಲೆಯ ಮಕ್ಕಳಿಗೆ ಆರೋಗ್ಯ ಕಾರ್ಯಕ್ರಮಗಳು ಮತ್ತು ನಿರಂತರ ಆರೋಗ್ಯ ಶಿಬಿರಗಳ ಸೌಲಭ್ಯಗಳನ್ನು ಮೇಲ್ವಿಚಾರಣೆ ಮಾಡುವುದು.

11. ತಿಂಗಳಿಗೊಂದು ಬಾರಿ ಪೋಷಕರ ಸಭೆಗಳನ್ನು ನಡೆಸಬೇಕು ಮತ್ತು ಯಾರು ನಿರಂತರವಾಗಿ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲವೋ ಅಂತಹವರೊಂದಿಗೆ ಮಕ್ಕಳನ್ನು ಶಾಲೆಗೆ ಕಳುಹಿಸುವಂತೆ ಪೋಷಕರೊಂದಿಗೆ ಚರ್ಚೆ ಮಾಡಬೇಕು. ಶಾಲೆಗೆ ಮಕ್ಕಳ ದಾಖಲಾತಿ ಆಂದೋಲನ, ಸೇತುಬಂಧ ತರಗತಿ, ಹೆಣ್ಣು ಮಕ್ಕಳಿಗಾಗಿ ವಿಶೇಷ ಶಿಬಿರಗಳ ವ್ಯವಸ್ಥೆಯನ್ನು ಸಹ ಮಾಡಬೇಕು. ಎಲ್ಲಾ ಪೋಷಕರು ಶಾಲೆಯ ಕಾರ್ಯ ಚಟುವಟಿಕೆಯಲ್ಲಿ ಭಾಗವಹಿಸಲು ಪೋಷಕರ ದಿನಾಚರಣೆಯನ್ನು ನಡೆಸಬೇಕು.

12. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯು ಎಲ್ಲಾ ಪೋಷಕರು ಶಾಲೆಯ ಕಾರ್ಯಚಟುವಟಿಕೆಯಲ್ಲಿ ಭಾಗವಹಿಸುವಂತೆ ಮತ್ತು ಶಾಲೆಯು ಅಭಿವೃದ್ಧಿ ಹೊಂದಲು ಸ್ಥಳೀಯ ಪ್ರಾಧಿಕಾರಕ್ಕೆ ಮತ್ತು ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಗೆ ರಚನಾತ್ಮಕ ಸಲಹೆಗಳನ್ನು ನೀಡಬೇಕು.

ಒಟ್ಟಾರೆ , 2001ರಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ರಚನೆಯಾದ ಎಸ್‌ಡಿಎಂಸಿ ಸಮಿತಿಗಳು ಇಂದು ಬೆಳ್ಳಿ ಹಬ್ಬದ ಸಡಗರದಲ್ಲಿವೆ. 25 ವರ್ಷಗಳನ್ನು ಪೂರೈಸಿದ ಸಂಭ್ರಮಾಚರಣೆಯಲ್ಲಿವೆ. ಕಳೆದ 25 ವರ್ಷಗಳಿಂದ ರಾಜ್ಯದ ಎಲ್ಲಾ ಸರಕಾರಿ ಶಾಲೆಗಳಲ್ಲಿ ಎಸ್‌ಡಿಎಂ ಸಿ ಸಮಿತಿಗಳು ಉತ್ತಮ ಕೆಲಸ ಕಾರ್ಯ ಹಾಗೂ ಕರ್ತವ್ಯಗಳನ್ನು ನಿರ್ವಹಿಸಿಕೊಂಡು ಬರುತ್ತಿವೆ. ಶಾಲೆಯಲ್ಲಿ ಮಕ್ಕಳ ದಾಖಲಾತಿ, ಹಾಜರಾತಿ, ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಪುನಃ ಶಾಲೆಗೆ ತರುವ ಕಾರ್ಯ, ಮೂಲಭೂತ ಸೌಕರ್ಯ, ಮಧ್ಯಾಹ್ನದ ಬಿಸಿಯೂಟ, ರಾಷ್ಟ್ರೀಯ ಹಬ್ಬಗಳಾದ ಗಣರಾಜ್ಯೋತ್ಸವ, ಸ್ವಾತಂತ್ರ್ಯ ದಿನಾಚರಣೆ, ಮಹನೀಯರ ಜಯಂತಿಗಳು ಹೀಗೆ ಶಾಲೆಯಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಎಸ್‌ಡಿಎಂಸಿ ಭಾಗವಹಿಸುವಿಕೆ ಶಾಲಾ ಆಡಳಿತ ನಿರ್ವಹಣೆಯನ್ನು ಪ್ರಜಾಸತ್ತಾತ್ಮಕಗೊಳಿಸಿದೆ. ಇಂದು ಪಾಲಕರು, ಶಿಕ್ಷಕರು ಮತ್ತು ಮಕ್ಕಳ ಅನ್ಯೋನ್ಯತೆಯಿಂದಾಗಿ ಸರಕಾರಿ ಶಾಲೆಗಳು ಇನ್ನೂ ಉಳಿದಿವೆಯೆಂದರೆ ಅತಿಶಯೋಕ್ತಿಯಾಗಲಾರದು.

ಕಳೆದ 25 ವರ್ಷದಲ್ಲಿ ಎಸ್‌ಡಿಎಂಸಿಗಳು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡಿವೆ. ಮಕ್ಕಳಿಗೆ ಕುಡಿಯುವ ನೀರು, ಪೀಠೋಪಕರಣ, ಪಾಠೋಪಕರಣ, ಕ್ರೀಡಾ ಸಾಮಗ್ರಿ, ಆವರಣ ಗೋಡೆ (ಕಾಂಪೌಂಡು), ಸರಕಾರದ ಉತ್ತೇಜಕಗಳ ಜೊತೆಗೆ ನೋಟ್ ಪುಸ್ತಕ, ಶಾಲಾ ಬ್ಯಾಗ್, ಸಮವಸ್ತ್ರ ಇತ್ಯಾದಿಗಳನ್ನು ಶಾಲೆಗೆ ಪಡೆಯುವಲ್ಲಿ ನಿರ್ಣಾಯಕ ಪಾತ್ರ ವಹಿಸಿವೆ. ಜೊತೆಗೆ, ಶಾಲಾ ಕಾರ್ಯಕ್ರಮಗಳಿಗೆ ಸಹಾಯಕವಾಗುವ ಕುರ್ಚಿ ವ್ಯವಸ್ಥೆ, ಧ್ವನಿವರ್ಧಕದ ವ್ಯವಸ್ಥೆ, ಟೇಬಲ್ ಇತ್ಯಾದಿಗಳನ್ನು ದಾನಿಗಳ ಸಹಾಯದಿಂದ ಶಾಲೆಗೆ ದೊರಕಿಸಿವೆ. ಶಾಲೆಯ ಸುತ್ತ ಮರ-ಗಿಡಗಳನ್ನು ಬೆಳೆಸುವ ಮೂಲಕ ಉತ್ತಮ ಸ್ವಚ್ಛತೆ ಹಾಗೂ ಉತ್ತಮ ಶಾಲಾ ಪರಿಸರ ನಿರ್ಮಿಸಿವೆ. ಪೂರ್ವ-ಪ್ರಾಥಮಿಕ ವ್ಯವಸ್ಥೆಯಿಲ್ಲದ ಹಲವೆಡೆ ಈ ಸಮಿತಿಗಳು ಬೇರೆ ಬೇರೆ ಹೆಸರಿನಲ್ಲಿ ಪೂರ್ವ-ಪ್ರಾಥಮಿಕ ತರಗತಿಗಳನ್ನು ತೆರೆದು, ತಾವೇ ಸಂಪನ್ಮೂಲ ಕ್ರೋಡೀಕರಿಸಿ ಶಿಕ್ಷಕರನ್ನು ನೇಮಕ ಮಾಡಿಕೊಂಡು ಯಶಸ್ವಿಯಾಗಿ ನಡೆಸುವ ಮೂಲಕ ಶಾಲೆಯ ಹಾಜರಾತಿಯನ್ನು ಗಣನೀಯವಾಗಿ ಹೆಚ್ಚಿಸಿವೆ. ಇದು ಇಂದು ಸರಕಾರಕ್ಕೆ ಮಾದರಿ ಕಾರ್ಯಕ್ರಮವಾಗಿದೆ. ಒಟ್ಟಾರೆ, ಸರಕಾರಿ ಶಾಲೆಯನ್ನು ಉಳಿಸಿ ಬೆಳೆಸಿ ನೆರೆಹೊರೆಯ ಸಮಾನ ಶಾಲೆಯನ್ನಾಗಿಸಲು ಎಸ್‌ಡಿಎಂಸಿಗಳು ಹಗಲಿರುಳು ಕಾರ್ಯ ನಿರ್ವಹಿಸುತ್ತವೆ. ಸರಕಾರಿ ಶಾಲೆ ಉಳಿಯಲಿ ಬೆಳೆಯಲಿ ನೆರೆಹೊರೆಯ ಸಮಾನ ಶಾಲೆಯಾಗಲಿ ಎಂಬುದು ಎಸ್‌ಡಿಎಂಸಿಗಳ ಘೋಷ ವಾಕ್ಯವಾಗಿದೆ. ಎಸ್‌ಡಿಎಂಸಿಗಳ ಈ ಅನನ್ಯ ಕಾರ್ಯಕ್ಕೆ ಪ್ರಾಥಮಿಕ ಶಿಕ್ಷಕರ ಸಂಘ, ಬಿಸಿಯೂಟ ನೌಕರರರ ಸಂಘ, ಅಂಗನವಾಡಿ ಕಾರ್ಯಕರ್ತೆಯರ ಸಂಘ, ಆಶಾ ಕಾರ್ಯಕರ್ತೆಯರ ಸಂಘ, ದಲಿತ ಸಂಘರ್ಷ ಸಮಿತಿ, ರೈತ ಸಂಘ, ಹೀಗೆ ಹತ್ತು ಹಲವು ಸಾಮೂಹಿಕ ಸಂಘಟನೆಗಳ ಸಹಕಾರ, ಬೆಂಬಲವಿದೆ. ಸರಕಾರ ಈ ಸಮಿತಿಗಳ ಕೆಲಸವನ್ನು ಶ್ಲಾಘಿಸಿ ಪ್ರಶಸ್ತಿ ನೀಡುವ ಕಾರ್ಯಕ್ಕೆ ಮುಂದಾಗಿದೆ.

ಪ್ರಸ್ತುತ ಜಾರಿಯಲ್ಲಿರುವ ಶಿಕ್ಷಣ ಹಕ್ಕು ಕಾಯ್ದೆಯು ಎಪ್ರಿಲ್ 1 , 2025 ಕ್ಕೆ 15 ವರ್ಷಗಳನ್ನು ಮುಗಿಸಿ 16ನೇ ವರ್ಷಕ್ಕೆ ಕಾಲಿಟ್ಟಿದೆ. ತಾತ್ವಿಕವಾಗಿ ನಾವೆಲ್ಲರೂ ಎಲ್ಲಾ ಮಕ್ಕಳಿಗೆ ಸಮಾನ ಗುಣಮಟ್ಟದ ಶಾಲಾ ಶಿಕ್ಷಣವನ್ನು ಸಮಾನತೆ ಮತ್ತು ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ‘ಸಮಾನ ಶಾಲಾ ಶಿಕ್ಷಣ ವ್ಯವಸ್ಥೆಯ’ ಮೂಲಕ ಕಂಡುಕೊಳ್ಳುವ ಆಶಯವನ್ನು ಹೊಂದಿದ್ದೇವೆ. ಈ ಆಶಯದ ಮೊದಲ ಹೆಜ್ಜೆಯಾಗಿ ಸರಕಾರಿ ಶಾಲೆಗಳನ್ನು ಗುಣಾತ್ಮಕ ಕೇಂದ್ರಗಳಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಶಿಕ್ಷಣ ಹಕ್ಕು ಕಾಯ್ದೆಯ ಜಾರಿಯಲ್ಲಿ ರಚನಾತ್ಮಕವಾಗಿ ಮತ್ತು ವಿಮರ್ಶಾತ್ಮಕವಾಗಿ ತೊಡಗಿಸಿಕೊಳ್ಳುವುದು ನಮ್ಮ ಈಗಿನ ಸರಕಾರದ ಮಹತ್ವದ ಕೆಲಸವಾಗಿದೆ.

ಈ ನಿಟ್ಟಿನಲ್ಲಿ ಪೋಷಕರಾಗಿ, ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ಸದಸ್ಯರಾಗಿ ಹಾಗೂ ಗ್ರಾಮ ಪಂಚಾಯತ್ ಚುನಾಯಿತ ಪ್ರತಿನಿಧಿಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಪ್ರತಿಯೊಬ್ಬರೂ ಶಿಕ್ಷಣ ಹಕ್ಕು ಕಾಯ್ದೆಯನ್ನು ಅನುಷ್ಠಾನಗೊಳಿಸುವ ನೇರ ಹೊಣೆಗಾರಿಕೆ ಹೊಂದಿರುತ್ತಾರೆ. ಈ ದಿಶೆಯಲ್ಲಿ ಕಾಯ್ದೆಯ ಅಡಿಯಲ್ಲಿ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿಯ ರಚನೆ ಮತ್ತು ಪ್ರಕಾರ್ಯಗಳ ಬಗ್ಗೆ ಸದಸ್ಯರಿಗೆ ಸ್ಪಷ್ಟ ಅರಿವು ಮೂಡಿಸುವ ಮೂಲಕ ಅವುಗಳನ್ನು ಬಲವರ್ಧನೆಗೊಳಿಸಬೇಕಿದೆ. ಎಸ್‌ಡಿಎಂಸಿಗಳ ಬೆಳ್ಳಿಹಬ್ಬದ ಈ ಸಂದರ್ಭದಲ್ಲಿ, ಸರಕಾರ ಈ ಸಮಿತಿಗಳ ಬಲವರ್ಧನೆಗೆ ವಿಶೇಷ ಕ್ರಿಯಾ ಯೋಜನೆ ರೂಪಿಸುವ ಅಗತ್ಯವಿದೆ. ಸರಕಾರ ಈ ಕೆಲಸವನ್ನು ಔಚಿತ್ಯಪೂರ್ಣವಾಗಿ ಮಾಡಿದರೆ, ಪ್ರತೀ ಶಾಲೆಯಲ್ಲಿನ ಈ ಸಮಿತಿಗಳು ಆಯಾ ಗ್ರಾಮದಲ್ಲಿ ಸಂವಿಧಾನದ ಶಿಕ್ಷಣದ ಆಶಯವನ್ನು ಸಾಕಾರಗೊಳಿಸುವ ಮೂಲಕ ಸಾಮಾಜಿಕ ಪರಿವರ್ತನೆಯ ಬಂಡಿಗಳಾಗಲಿವೆ.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನಿರಂಜನಾರಾಧ್ಯ ವಿ.ಪಿ.

contributor

Similar News