ರೈತರ ಬದುಕಿಗೆ ಸೂರ್ಯಕಾಂತಿ ಬೆಳೆ ಆಸರೆ
ಉತ್ತಮ ಇಳುವರಿ ಜೊತೆಗೆ ಲಾಭದ ನಿರೀಕ್ಷೆಯಲ್ಲಿ ಅನ್ನದಾತರು
ಕಂಪ್ಲಿ : ರೈತರ ಜೀವನಾಡಿ ತುಂಗಭದ್ರ ಜಲಾಶಯದ ಹೊಸ ಕ್ರಸ್ಟ್ ಗೇಟ್ ಅಳವಡಿಕೆ ಹಿನ್ನಲೆ ಎರಡನೇ ಬೆಳೆಗೆ ನೀರು ಕಡಿತಗೊಳಿಸಲಾಗಿತ್ತು. ಇದರಿಂದ ರೈತರ ಬದುಕು ಅತಂತ್ರ ಎನ್ನುವ ಸಂದರ್ಭದಲ್ಲಿ ರೈತರು ಸೂರ್ಯಕಾಂತಿ ಮೊರೆ ಹೋಗಿದ್ದು, ಅದು ಇಂದಿನ ದಿನಮಾನದಲ್ಲಿ ರೈತರ ಬದುಕಿಗೆ ಆಸರೆಯಾಗಿರುವ ಜೊತೆಗೆ ಉತ್ತಮ ಇಳುವರಿಯೊಂದಿಗೆ ಆರ್ಥಿಕತೆ ವೃದ್ಧಿಗೆ ಕಾರಣವಾಗಿದೆ.
ತಾಲೂಕಿನ ನೆಲ್ಲುಡಿ, ಶಾಂತಿನಗರ, ಎಮ್ಮಿಗನೂರು ಭಾಗದಲ್ಲಿ ಎಣ್ಣೆ ಕಾಳು ಬೆಳೆಯಾದ ಸೂರ್ಯಕಾಂತಿ ಫಸಲು ನಳ ನಳಿಸುತ್ತಿದ್ದು, ಅನ್ನದಾತರ ಮುಖದಲ್ಲಿ ಸಂತಸ ಮೂಡಿದೆ. ಎರಡನೇ ಬೆಳೆಗೆ ನೀರಿಲ್ಲದ್ದರಿಂದ ಕೊಳವೆ ಬಾವಿ ನೀರು, ತುಂಗಭದ್ರಾ ಬಲದಂಡೆ ಕೆಳಮಟ್ಟದ ಬಿಟ್ಟ ನೀರಿನಿಂದ ರೈತರು ಸೂರ್ಯಕಾಂತಿ ಬೆಳೆದಿದ್ದು, ಇನ್ನು ಕೆಲವೇ ದಿನಗಳಲ್ಲಿ ಕಟಾವಿಗೆ ಬರಲಿದೆ.
ಈ ಭಾಗದಲ್ಲಿ ಸುಮಾರು 1,250 ಎಕರೆಗೂ ಅಧಿಕ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಮುಂಗಾರು ಹಂಗಾಮಿನಲ್ಲಿ ರೈತರು ಭತ್ತವನ್ನು ಬೆಳೆದಿದ್ದರು. ಜೀವನಾಡಿ ತುಂಗಭದ್ರಾ ಜಲಾಶಯದ ಕ್ರೆಸ್ಟ್ ಗೇಟ್ ಕಟ್ಟಾಗಿ, ಎಲ್ಲಾ ಕ್ರೆಸ್ಟ್ ಗೇಟಗಳನ್ನು ಅಳವಡಿಕೆ ಹಿನ್ನೆಲೆಯಲ್ಲಿ ಎರಡನೇ ಬೆಳೆಗೆ ಕಾಲುವೆಗಳಿಗೆ ನೀರನ್ನು ಹರಿಸದ ಕಾರಣ ಡಿಸೆಂಬರಿನಲ್ಲಿ ಕಡಲೆ ಬಿತ್ತನೆ ಮಾಡಿದ್ದರು. ಇತ್ತೀಚೆಗೆ ಕೆಳಮಟ್ಟದ ಕಾಲುವೆಗೆ ನೀರು ಬಿಟ್ಟಾಗ ರೈತರು ಸೂರ್ಯಕಾಂತಿ ಬೆಳೆದಿದ್ದಾರೆ.
ಸೂರ್ಯಕಾಂತಿ ಕಟಾವಿನ ಬಳಿಕ ರೈತರು ಮಾಗಿ ಉಳುಮೆ ಮಾಡುತ್ತಾರೆ. ಯಾಕೆಂದರೆ ಸೂರ್ಯಕಾಂತಿ ಬೆಳೆಯ ಎಲೆಗಳು ಮಣ್ಣಿನಲ್ಲಿ ಸೇರುವುದರಿಂದ ಮಣ್ಣಿನ ಫಲವತ್ತತೆ ಅಧಿಕವಾಗಿ, ಮುಂಗಾರು ಹಂಗಾಮಿನ ಭತ್ತದ ಬೆಳೆಗೆ ಅನುಕೂಲವಾಗಲಿದೆ.
ಎಕರೆಗೆ 5 ರಿಂದ 10 ಕ್ವಿಂಟಾಲ್ ಇಳುವರಿ ಬರುವ ಸಾಧ್ಯತೆ ಇದೆ. ಕನಿಷ್ಠ 8 ಕ್ವಿಂಟಾಲ್ ಇಳುವರಿ ಬಂದಲ್ಲಿ ಸೂರ್ಯಕಾಂತಿ ಬೆಳೆ ರೈತರಿಗೆ ಲಾಭವನ್ನು ತಂದುಕೊಡಲಿದೆ. ಸೂರ್ಯಕಾಂತಿ ಬೀಜಕ್ಕೆ ನಾಲ್ಕು ಸಾವಿರ ರೂ., ಬಿತ್ತನೆ ಹಾಗೂ ಉಳುಮೆ, ಭೂಮಿಯಲ್ಲಿ ಸ್ವಚ್ಚತೆ ಮಾಡಲು ಮತ್ತು ಸೂರ್ಯಕಾಂತಿ ಬೆಳೆಯ ಕಟಾವು ಸೇರಿದಂತೆ ಒಟ್ಟು 20 ಸಾವಿರ ಖರ್ಚು ಮಾಡಿದ್ದಾರೆ.
ಮಣ್ಣಿನ ಫಲವತ್ತತೆ ಹೆಚ್ಚಾಗಲು ಸೂರ್ಯಕಾಂತಿ ಬೆಳೆಯಿಂದ ಅನುಕೂಲವಾಗಲಿದೆ. ಜೊತೆಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯ ಸಿಗಲಿದೆ. ರೈತ ಸಂಪರ್ಕ ಕೇಂದ್ರದಲ್ಲಿ ರಿಯಾಯಿತಿ ದರದಲ್ಲಿ ಸೂರ್ಯಕಾಂತಿ ಬಿತ್ತನೆ ಬೀಜಗಳು ಲಭ್ಯ ಇವೆ.
-ಟಿ.ಜ್ಯೋತಿ
ಪ್ರಭಾರ ಕೃಷಿ ಅಧಿಕಾರಿ, ಕಂಪ್ಲಿ
ಎರಡನೇ ಬೆಳೆ ಇಲ್ಲದ ರೈತರು ಕೈಕಟ್ಟಿ ಕುಳಿತುಕೊಂಡಿದ್ದರು. ಆದರೆ, ಅಲ್ಪಸ್ವಲ್ಪ ಕಾಲುವೆ ನೀರು ಮತ್ತು ಮಳೆರಾಯನ ಕೃಪೆಗೆ ಸೂರ್ಯಕಾಂತಿ ಬೆಳೆ ಬೆಳೆದು, ಈಗ ಕಟಾವಿನ ಹಂತಕ್ಕೆ ಬಂದಿರುವುದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ. ಈಗಾಗಲೇ ಸೂರ್ಯಕಾಂತಿ ಉತ್ತಮ ಇಳುವರಿ ಬಿಡುವ ನಿರೀಕ್ಷೆಯೊಂದಿಗೆ ರೈತರ ಅದಾಯ ದ್ವಿಗುಣವಾಗುವ ಸಾಧ್ಯತೆ ಇದೆ. ಇದರಿಂದ ಎರಡನೇ ಬೆಳೆಯಿಂದ ದೂರವಿದ್ದ ಈ ಭಾಗದ ರೈತರ ಬದುಕು ಕೈಹಿಡಿದಂತಾಗಿದೆ.
-ಬಸವರಾಜ, ರೈತ, ನೆಲ್ಲುಡಿ