ಕನಕಗಿರಿ ತಾಲೂಕಿನ ಗ್ರಾಮೀಣ ಜನರಿಗೆ ತಪ್ಪದ ಸಂಚಾರ ಸಮಸ್ಯೆ
►ಮೂಲ ಸೌಕರ್ಯವಿಲ್ಲದ ಬಸ್ ನಿಲ್ದಾಣ ►ಸಮರ್ಪಕ ಬಸ್ ವ್ಯವಸ್ಥೆಗೆ ವಿದ್ಯಾರ್ಥಿಗಳ ಆಗ್ರಹ
ಕೊಪ್ಪಳ/ಕನಕಗಿರಿ, ನ.17: ವ್ಯಾಪಾರ-ವಹಿವಾಟು, ಆಸ್ಪತ್ರೆಗೆ ಜನರು, ಶಾಲಾ-ಕಾಲೇಜುಗಳಿಗೆ ವಿದ್ಯಾರ್ಥಿಗಳು ಸಹಿತ ವಿವಿಧ ಕೆಲಸಗಳಿಗೆ ದಿನ ಪ್ರತಿ ಸಾವಿರಾರು ಜನ ಕನಕಗಿರಿ ಪಟ್ಟಣಕ್ಕೆ ಆಗಮಿಸುತ್ತಿದ್ದಾರೆ. ಆದರೆ, ಸಮರ್ಪಕ ಬಸ್ ವ್ಯವಸ್ಥೆ ಇಲ್ಲದ್ದರಿಂದ ಜನರು ಜಾತಕ ಪಕ್ಷಿಯಂತೆ ಕಾದು ಕೂರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕನಕಗಿರಿ ಬಸ್ ನಿಲ್ದಾಣದಿಂದ ಪ್ರತಿದಿನ ಸುಮಾರು 800ಕ್ಕೂ ಅಧಿಕ ಬಸ್ಗಳು ಸಂಚಾರ ನಡೆಸುತ್ತವೆ. ಹಲವು ಜಿಲ್ಲೆಗಳಿಂದ ಬಸ್ಗಳು ನಗರಕ್ಕೆ ಆಗಮಿಸುತ್ತವೆ. ಆದರೆ, ಮಹಿಳೆಯರ ಉಚಿತ ಪ್ರಯಾಣದಿಂದಾಗಿ ಎಲ್ಲ ಬಸ್ಗಳು ತುಂಬಿ ತುಳುಕುತ್ತಿವೆ. ಗ್ರಾಮೀಣ ಭಾಗಕ್ಕೆ ಬಸ್ಗಳ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಜನರಿಗೆ ಸಮಸ್ಯೆ ತಂದೊಡ್ಡಿದೆ.
ವಿದ್ಯಾರ್ಥಿಗಳ ಗೋಳು ಹೇಳತೀರದು: ತಾಲೂಕು ಸೇರಿ ಇತರ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಶಾಲೆ, ಕಾಲೇಜಗಳಿಗೆ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಆದರೆ, ಶಕ್ತಿ ಯೋಜನೆಯ ಪರಿಣಾಮ ವಿದ್ಯಾರ್ಥಿಗಳಿಗೆ ಬಸ್ನಲ್ಲಿ ಆಸನ ಸಿಗುವುದೇ ದುರ್ಲಭವಾಗಿದೆ. ಹಾಗಾಗಿ, ನಿಂತು ಪ್ರಯಾಣಿಸದೇ ವಿಧಿ ಇಲ್ಲದಂತಾಗಿದೆ. ಇನ್ನೂ ಯುವಕರು ಬಸ್ ಬಾಗಿಲ ಬಳಿ ಅಪಾಯಕಾರಿ ಸ್ಥಿತಿಯಲ್ಲಿ ನಿಂತು ಪ್ರಯಾಣಿಸುವುದು ಸಾಮಾನ್ಯ ಎಂಬಂತಾಗಿದೆ.
ಗಬ್ಬುನಾರುವ ಶೌಚಾಲಯ: ಬಸ್ ನಿಲ್ದಾಣವನ್ನು ಕೇವಲ 12 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಶೌಚಾಲಯಗಳ ನಿರ್ವಹಣೆಗೆ ಟೆಂಡರ್ ಕರೆದು ಗುತ್ತಿಗೆ ನೀಡಲಾಗಿದೆ. ಆದರೆ, ಶೌಚಾಲಯ ನಿರ್ವಹಣೆ ಸರಿಯಾಗಿ ಮಾಡದೇ ಇರುವುದರಿಂದ ಗಬ್ಬು ವಾಸನೆ ಬೀರುತ್ತಿವೆ. ಶೌಚಾಲಯ ಬಳಸಲು ನಿಗದಿ ಪಡಿಸಿದ ಹಣಕ್ಕಿಂತಲೂ ಹೆಚ್ಚಿನ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪವೂ ಕೇಳಿ ಬರುತ್ತಿದೆ.
ಕುಡಿಯುವ ನೀರಿನ ಸಮಸ್ಯೆ: ನಿಲ್ದಾಣ ನಿರ್ಮಿಸಿದ ಸಂದರ್ಭದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಗಿತ್ತು. ಸದ್ಯ ನಿಲ್ದಾಣದಲ್ಲಿ ಕುಡಿಯುವ ನೀರು ಸರಿಯಾದ ಸಮಯಕ್ಕೆ ಪೂರೈಕೆ ಇಲ್ಲ, ಕುಡಿಯುವ ನೀರಿನ ವ್ಯವಸ್ಥೆ ಮಾಡುವಂತೆ ಸಾರ್ವಜನಿಕರು ಕೋರಿದರೂ ಸಾರಿಗೆ ಇಲಾಖೆಯಿಂದ ಸ್ಪಂದನ ಇಲ್ಲದಂತಾಗಿದೆ. ಸಮರ್ಪಕ ಆಸನಗಳ ವ್ಯವಸ್ಥೆ ಇಲ್ಲವಾದ್ದರಿಂದ ಬಸ್ಗೆ ಕಾಯುವ ಪ್ರಯಾಣಿಕರು ನೆಲದ ಮೇಲೆ ಕುಳಿತುಕೊಳ್ಳುವಂತಾಗಿದೆ.
ಈಗಾಗಲೇ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಬಸ್ ಸೌಲಭ್ಯ ಒದಗಿಸಲಾಗಿದೆ. ಇನ್ನೂ ಐದಾರು ಬಸ್ ಅಗತ್ಯವಿದ್ದು, ಮೇಲಧಿಕಾರಿಗಳು ಹೊಸ ವಾಹನಗಳನ್ನು ಒದಗಿಸುವ ಭರವಸೆ ನೀಡಿದ್ದಾರೆ. ಜನರಿಗೆ ಸಮಸ್ಯೆಯಾಗದಂತೆ ಕ್ರಮವಹಿಸಲಾಗುವುದು.
-ಶ್ರೀರಾಮ್ ನಾಯಕ, ಕೆಎಸ್ಸಾರ್ಟಿಸಿ ವ್ಯವಸ್ಥಾಪಕರು, ಕನಕಗಿರಿ
ಕನಕಗಿರಿ ತಾಲೂಕು ಆಗಿ ಏಳು ವರ್ಷ ಕಳೆದರೂ ಇನ್ನೂ ಬಸ್ ಡಿಪೋ ಆಗಿಲ್ಲ, ಅಧಿಕಾರಿಗಳ ನಿರ್ಲಕ್ಷ್ಯದಿಂದ ಶೌಚಾಲಯಗಳ ದುರ್ವಾಸನೆಯಿಂದ ಜನರಿಗೆ ತೊಂದರೆ ಆಗುತ್ತಿದ್ದು, ಸಂಬಂಧಿಸಿದ ಅಧಿಕಾರಿಗಳು ಜನರಿಗೆ ಉತ್ತಮ ಸೌಲಭ್ಯ ಒದಗಿಸಲು ಕ್ರಮ ಕೈಗೊಳ್ಳಬೇಕು, ವಿದ್ಯಾರ್ಥಿಗಳಿಗೆ ಶಾಲಾ,ಕಾಲೇಜುಗಳಿಗೆ ಹೋಗಲು ತೊಂದರೆ ಆಗಿದೆ. ಸಮರ್ಪಕ ಬಸ್ಗಳ ವ್ಯವಸ್ಥೆ ಕಲ್ಪಿಸಬೇಕು.
-ಸಣ್ಣ ಕನಕಪ್ಪ ಛಲವಾದಿ, ಬಿಜಿಪಿ ಮಂಡಲ ಅಧ್ಯಕ್ಷ, ಕನಕಗಿರಿ