‘ಕೊರಚ’ ಆಡುನುಡಿಯ ಉಳಿಸಿಕೊಡುವ ಪ್ರಯತ್ನ
ಭಾಷೆಯೊಂದು ಅಳಿಯಿತೆಂದರೆ ಪ್ರಪಂಚವನ್ನು ಗ್ರಹಿಸುವ ವಿಶಿಷ್ಟ ಕಣ್ಣೋಟವೊಂದು ಅಳಿಯಿತೆಂದೇ ಅರ್ಥ. 1961ರಿಂದ ಭಾರತ 220 ಭಾಷೆಗಳನ್ನು ಕಳೆದುಕೊಂಡಿದೆ. ಮುಂದಿನ ಐವತ್ತು-ಅರುವತ್ತು ವರ್ಷಗಳಲ್ಲಿ ಇನ್ನೂ 150 ಭಾಷೆಗಳು ಕಣ್ಮರೆಯಾಗಬಹುದು ಎನ್ನುತ್ತಾರೆ ಪ್ರಸಿದ್ಧ ಭಾಷಾತಜ್ಞ ಮತ್ತು ಸಂಸ್ಕೃತಿ ಚಿಂತಕ ಗಣೇಶ್ ದೇವಿ.
ಭಾಷೆಯೊಂದು ನಿದ್ರಿಸುವ ಸುಂದರಿಯಾಗಿ ಬಿಟ್ಟಿತು ಅಥವಾ ಅಳಿವಿನ ಅಂಚು ತಲುಪಿತು ಎಂದಿಟ್ಟುಕೊಳ್ಳಿ. ಆಗಲೂ ಅದಕ್ಕೆ ಪುನಶ್ಚೇತನ ನೀಡಬಹುದು. ಸೂಕ್ತ ದಸ್ತಾವೇಜುಗಳನ್ನಿಟ್ಟರೆ, ಸಮುದಾಯ ಇಚ್ಛಾಶಕ್ತಿಯನ್ನು ತೋರಬೇಕು ಅಷ್ಟೇ ಎನ್ನುತ್ತಾರೆ ವಿಶ್ವಪ್ರಸಿದ್ಧ ಭಾಷಾವಿಜ್ಞಾನಿ ಡಾ. ಅನ್ವಿತಾ ಅಬ್ಬಿ.
ಅವಸಾನಗೊಳ್ಳುತ್ತಿರುವ ಭಾಷೆಗಳಲ್ಲಿ ಬುಡಕಟ್ಟು ಗುಂಪುಗಳದೇ ಸಿಂಹಪಾಲು. ಹತ್ತು ಸಾವಿರಕ್ಕೂ ಕಡಿಮೆ ಜನ ಮಾತಾಡುವ 42 ಭಾಷೆಗಳು ಅಳಿವಿನ ಅಂಚನ್ನು ತಲುಪಿವೆಯೆಂಬುದನ್ನು 2018ರ ಯುನೆಸ್ಕೋ ವರದಿಯೊಂದರಲ್ಲಿ ದಾಖಲಿಸಲಾಗಿತ್ತು.
ಸೂಕ್ತ ದಸ್ತಾವೇಜು ವ್ಯವಸ್ಥೆ ಮತ್ತು ಸಂಬಂಧಪಟ್ಟ ಸಮುದಾಯದ ಇಚ್ಛಾಶಕ್ತಿಯಿಂದ ಭಾಷೆಯೊಂದನ್ನು ಉಳಿಸಿಕೊಳ್ಳಲು ಸಾಧ್ಯ. ಸರಿಯಾದ ಸಂಶೋಧನೆ, ಸಮೀಕ್ಷೆ, ಮಾಹಿತಿ ಸಂಗ್ರಹ, ಕ್ಷೇತ್ರಕಾರ್ಯ, ವಿಶ್ಲೇಷಣೆ, ಜತನ ಕಾರ್ಯ(ಆರ್ಕೈವಿಂಗ್) ಹಾಗೂ ದಸ್ತಾವೇಜೀಕರಣ ನಡೆಯಬೇಕಿದೆ ಎಂಬ ಡಾ. ಅನ್ವಿತಾ ಅಬ್ಬಿ ಅವರ ಮಾತಿನ ಮನನದ ಅಗತ್ಯ ತುರ್ತಾಗಿದೆ.
ಕರ್ನಾಟಕ ಕೂಡ ಸಮೃದ್ಧ ಭಾಷಾವೈವಿಧ್ಯಕ್ಕೆ ಹೊರತಲ್ಲ. ಆದರೆ ಎಚ್ಚರಿಕೆ ವಹಿಸದಿದ್ದರೆ ಮುಂಬರುವ 50 ವರ್ಷಗಳಲ್ಲಿ ನಮ್ಮ ಎಲ್ಲ ಬುಡಕಟ್ಟು ಮತ್ತು ಅಲೆಮಾರಿ ಜನಾಂಗಗಳ ಭಾಷೆಗಳು ಜೀವಂತ ಉಳಿಯುವುದಿಲ್ಲ ಎಂದು ಭಾಷಾಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. ಈ ಎಚ್ಚರಿಕೆಯನ್ನು ಕರ್ನಾಟಕ ಸರಕಾರ ಮತ್ತು ಭಾಷಾ ಸಂಸ್ಥೆಗಳು, ಬುಡಕಟ್ಟು-ಅಲೆಮಾರಿ ಅಭಿವೃದ್ಧಿ ನಿರತ ಸಂಘಟನೆಗಳು ಗಂಭೀರವಾಗಿ ಪರಿಗಣಿಸಬೇಕಿದೆ.
ಡಾ.ಅಬ್ಬಿ ಅವರ ಈ ನಿರ್ದೇಶನವನ್ನು ವ್ಯಕ್ತಿಗತ ಆಸಕ್ತಿ ಮತ್ತು ಕಾಳಜಿಯ ನೆಲೆಯಲ್ಲಿ ಆಂಶಿಕ ಕಾರ್ಯರೂಪಕ್ಕೆ ಇಳಿಸಿದ್ದಾರೆ ನಿವೃತ್ತ ಪ್ರಾಂಶುಪಾಲರೂ ಆದ ಸಾಮಾಜಿಕ, ಸಾಂಸ್ಕೃತಿಕ ಚಿಂತಕರೂ, ರಾಜ್ಯ ವಿಜ್ಞಾನ ಪರಿಷತ್ತಿನ ಉಪಾಧ್ಯಕ್ಷರಾಗಿ, ಜಿಲ್ಲಾಧ್ಯಕ್ಷರಾಗಿ ದೀರ್ಘ ಕಾಲ ಸೇವೆ ಸಲ್ಲಿಸಿರುವವರೂ, ಕರ್ನಾಟಕ ನಾಟಕ ಅಕಾಡಮಿಯ ಸದಸ್ಯರಾಗಿ ಕೆಲಸ ಮಾಡಿರುವವರೂ ಪರಿಸರ ಕಾಳಜಿ ಹೊಂದಿರುವವರೂ, ರಂಗಭೂಮಿ ಆಸಕ್ತರು-ಸಂಘಟಕರೂ ಆದ ಡಾ. ಎಚ್.ಆರ್. ಸ್ವಾಮಿ ಅವರು.
ತಮ್ಮ ಕುಲನುಡಿ ‘ಕೊರಚ’ ನುಡಿಗಟ್ಟು ಬಳಕೆಯಿಂದ ಹೊರಜಾರುತ್ತಿರುವ ಅಪಾಯದ ಕುರಿತು ಡಾ.ಸ್ವಾಮಿ ಅವರಿಗೆ ತೀವ್ರ ಕಳವಳವಿದೆ. ಮುಂದಿನ ತಲೆಮಾರುಗಳಿಗೆ ದಾಟಿಸುವ ಕಳಕಳಿಯಿದೆ. ಪ್ರಸಕ್ತ ತಲೆಮಾರು ‘ಕೊರಚ’ ನುಡಿಗಟ್ಟನ್ನು ಪಕ್ಕಕ್ಕೆ ಸರಿಸಿರುವ ಕುರಿತು ಹಳಹಳಿಯಿದೆ, ತಲ್ಲಣವಿದೆ.
ಕೊರಚ ಭಾಷೆಯ ಜಾಯಮಾನ ಸೊಗಡು, ಸೌರಭಗಳನ್ನು ಹಾಲಿ ಮತ್ತು ಭಾವೀ ಪೀಳಿಗೆಗಳಿಗೆ ಉಳಿಸಿಕೊಡುವ ಪುಟ್ಟ ಪ್ರಾಮಾಣಿಕ ಪ್ರಯತ್ನ ಈ ಹೊತ್ತಿಗೆ. ದಿನನಿತ್ಯದ ಪ್ರತ್ಯಕ್ಷ ವ್ಯವಹಾರಗಳಲ್ಲಿ ಬಳಸಬಹುದಾದ ಕೊರಚ ಭಾಷೆಯ ವಾಕ್ಯಗಳನ್ನೂ, ಪದಗಳನ್ನೂ, ಕನ್ನಡ ಮತ್ತು ಕುಡ್ರ್ ಭಾಷೆಯಲ್ಲಿ ನೀಡಿದ್ದಾರೆ. ಅವರ ಈ ಕಾಳಜಿಪೂರ್ವಕ ಪರಿಶ್ರಮ ಸಾರ್ಥಕವಾಗಲಿ. ರಾಜ್ಯದ ಕಡಿಮೆ ಜನಸಂಖ್ಯೆಯ ಜಾತಿಯೊಂದರ ಭಾಷೆಯ ಅವಸಾನ ಆಗದಿರಲಿ. ಡಾ.ಸ್ವಾಮಿ ಅವರ ಈ ಪ್ರಯತ್ನ ಅನುಕರಣಾರ್ಹ ಮತ್ತು ಅಭಿನಂದನಾರ್ಹ.
ಕೃತಿ: ಕೊರಚ ಮಾತುಕತೆ
ಕುಡ್ರು ವಾತಕತ
ಮುಖಬೆಲೆ: 800 ರೂ.
ಪ್ರಕಾಶಕರು: ನೇಗಿಲಯೋಗಿ ಟ್ರಸ್ಟ್ (ರಿ.)
ನೇಯೋಟ್ ನಂ.161, 2ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ, ಬೆಂಗಳೂರು-560060
ಮೊ: 7760040888