ಕನಕಗಿರಿ ತಾಲೂಕಾಗಿ ವರ್ಷಗಳೇ ಕಳೆದರೂ ಇನ್ನೂ ಸಿಕ್ಕಿಲ್ಲ ಕ್ರೀಡಾಂಗಣ ಭಾಗ್ಯ
► ಆಟಕ್ಕೆ ಕಾಲೇಜು, ಹೊಲಗಳೇ ಗತಿ! ► ವಾಕಿಂಗ್ ಮಾಡಲು ಗಂಗಾವತಿ-ಲಿಂಗಸಗೂರು ರಸ್ತೆ!
ಕನಕಗಿರಿ ತಾಲೂಕು ರಚನೆಯಾಗಿ ಏಳು ವರ್ಷಗಳಾದರೂ ತಾಲೂಕು ಕ್ರೀಡಾಂಗಣವಿಲ್ಲದೆ ಕ್ರೀಡಾಪಟುಗಳು ಖಾಸಗಿ ವ್ಯಕ್ತಿಗಳ ಬೀಳು ಬಿಟ್ಟ ಹೊಲ ಹಾಗೂ ಇಲ್ಲಿನ ಪಿಯು ಕಾಲೇಜಿನ ಮೈದಾನ ಆಡುತ್ತಿದ್ದಾರೆ.
ಆರೇಳು ವರ್ಷಗಳಿಂದಲೂ ಕ್ರೀಡಾಂಗಣ ನಿರ್ಮಾಣದ ವಿಷಯ ಚರ್ಚೆಯಾದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿ ವರ್ಗ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಪ್ರತಿ ವರ್ಷ ಕನಕಗಿರಿ ಪ್ರೀಮಿಯರ್ ಲೀಗ್ ಹಾಗೂ ಸರಕಾರಿ ನೌಕರರ ಹೆಸರಿನಲ್ಲಿ ಕ್ರಿಕೆಟ್ ಪಂದ್ಯಾವಳಿ ಪ್ರತ್ಯೇಕವಾಗಿ ಇಲ್ಲಿನ ಪಿಯು ಕಾಲೇಜಿನ ಮೈದಾನದಲ್ಲಿ ನಡೆಯುತ್ತಿದ್ದರೂ ಉದ್ಘಾಟನೆಗೆ ಬರುವ ಜನಪ್ರತಿನಿಧಿಗಳು ಕ್ರೀಡಾಂಗಣ ಕುರಿತು ಚಕಾರ ಎತ್ತದಿರುವುದು ಕ್ರೀಡಾಪಟು ಹಾಗೂ ಕ್ರೀಡಾಭಿಮಾನಿಗಳಲ್ಲಿ ಬೇಸರ ಮೂಡಿಸಿದೆ.
ಎಪಿಎಂಸಿ ಗೋದಾಮು, ಶಾಸಕರ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆ ಮೈದಾನದಲ್ಲಿ ಒಳಾಂಗಣ ಸ್ಪರ್ಧೆಗಳನ್ನು ಆಡುತ್ತಿರುವುದು ಕಂಡು ಬಂದಿದೆ. ಈ ಬಗ್ಗೆ ಈ ಹಿಂದೆ ಎರಡು ಮೂರು ಬಾರಿ ಮಾಜಿ ಶಾಸಕ ಬಸವರಾಜ ದಡೆಸುಗೂರು, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕನಕಗಿರಿ ತಾಲೂಕು ಕ್ರೀಡಾಂಗಣ ನಿರ್ಮಾಣದ ಬಗ್ಗೆ ಸರಕಾರದ ಗಮನಕ್ಕೆ ತಂದು ಶೀಘ್ರದಲ್ಲಿ ಬೇಡಿಕೆ ಈಡೇರಿಸುತ್ತೇವೆ.
<ಶಿವರಾಜ ತಂಗಡಗಿ
ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು
ತಾಲೂಕು ಮೈದಾನ ಇಲ್ಲದ ಕಾರಣ ಕ್ರೀಡೆ ಎಂಬುದು ಮರೀಚಿಕೆಯಾಗಿದೆ. ಪಟ್ಟಣದ ನಿವಾಸಿಗಳು ಗಂಗಾವತಿ-ಲಿಂಗಸೂಗೂರ ರಾಜ್ಯ ಹೆದ್ದಾರಿಯಲ್ಲಿ ವಾಕಿಂಗ್ ಮಾಡುತ್ತಾರೆ. ವಿವಿಧ ಕ್ರೀಡೆಗಳನ್ನು ಆಡಲು, ನೋಡಲು ಬೇರೆ ಊರುಗಳನ್ನು ಅವಲಂಬಿಸಿದ್ದಾರೆ.ಆದ್ದರಿಂದ ಕ್ರೀಡಾ ಸಚಿವರು ಈ ಬಗ್ಗೆ ಗಮನಹರಿಸಬೇಕು.
<ವೆಂಕಟೇಶ ಮೇಲಾಸಕ್ರಿ, ಕನಕಗಿರಿ