×
Ad

ಪಾಪ! ಇಜಾರದವರ ಇಜಾಪುರ...

Update: 2025-12-31 16:03 IST

ವಿಜಯಪುರ ಇಜಾಪುರದಾಗ ಇಜಾರದವರು ಹಜಾರ ಮಂದಿ.. ಎಂಬುದು ಈಗಲೂ ಚಾಲ್ತಿಯಲ್ಲಿರುವ ಮಾತು. ಬಿಜಾಪುರ ಹೋಗಿ ವಿಜಯಪುರವಾಗಿ ಆಗಲೇ ವರ್ಷಗಳೇ ಕಳೆದು ಹೋದವು. ಈಗಲೂ ಈ ಇಜಾರದವರಿಗೆ ಅದು ಇಜಾಪುರವೇ!

ಯಾರು ಈ ಇಜಾರದವರು ಅಂತೀರಾ? ಅದು, ವಿಜಯಪುರದಲ್ಲಿರುವ ಫೈಜಾಮು ತೊಡುವ ಜನ. ಅವ್ರ ಈಗಲೂ ಪೈಜಾಮಿಗೆ ಇಜಾರು ಅಂತಾರ. ಹಾಗೇ ವಿಜಾಪುರಕ್ಕೆ ಇಜಾಪುರ ಅಂತಾರ. ಈ ಪೈಜಾಮ ತೊಡುವ ಜನ ಬಡವರು. ಪ್ಯಾಂಟು-ಸೂಟು ಖರೀದಿಸಲಿಕ್ಕೆ ಆಗದವರು. ಪ್ರಾಸ್ ಜೋಡಿಸಲು, ಇಜಾಪುರದಾಗ ಇಜಾರದವರು ಹಜಾರ ಮಂದಿ.. ಅಂದಿರಬಹುದು. ಆದರೆ ಅಲ್ಲಿ ಬರೀ ಹಜಾರ(ಸಾವಿರ) ಅಲ್ಲ, ಅದಕ್ಕೂ ಹೆಚ್ಚು ಮಂದಿ ಅದಾರ. ಎಷ್ಟು ಹಜಾರೋ ಗೊತ್ತಿಲ್ಲ. ಸರಕಾರ ಅವರ ಸಮೀಕ್ಷೆ ಮಾಡುದಿಲ್ಲ. ಅವರು ಮಾಡೋದು ಜಾತಿ ಲೆಕ್ಕಾಚಾರ.

ನಾನು ಆ ಇಜಾಪುರದ ಇಜಾರದವರ ಪೈಕಿ ಒಬ್ಬ. ಹಂಗಂತ ಹೇಳಾಕ ನನಗೆ ತುಂಬ ಹೆಮ್ಮೆ. ಯಾಕಂದ್ರ ನಮ್ಮಂಥ ಜಿಲ್ಲೆ ಎಲ್ಲೂ ಇಲ್ಲ. ಇಲ್ಲಿರುವಷ್ಟು ಪ್ರವಾಸಿ ತಾಣಗಳ ಸಂಖ್ಯೆಯೂ ಬಹು ದೊಡ್ಡದು. ಹಳೇ ವಿಜಯಪುರ ಜಿಲ್ಲೆ, ಅಂದರ ಈಗಿನ ಬಾಗಲಕೋಟೆ ಜಿಲ್ಲೆಯನ್ನು ಸೇರಿಸಿಕೊಂಡ್ರ ಅಲ್ಲಿ 5 ನದಿಗಳು ಹರಿಯುತ್ತಿದ್ದವು. ಕಾರಣ ಆ ಹಳೇ ಸಂಯುಕ್ತ ವಿಜಯಪುರ ಜಿಲ್ಲೆಗೆ, ಕರ್ನಾಟಕದ ಪಂಜಾಬ ಎಂದು ಕರೆಯುತ್ತಿದ್ದರು. ಇಷ್ಟೆಲ್ಲ ಪ್ರಾಕೃತಿಕ ಹಾಗೂ ಸಾಂಸ್ಕೃತಿಕ ಸಂಪತ್ತು ಇದ್ದರೂ ನಾವು ಇಜಾರದ ಬಡವರೇ!

ವಿಜಯಪುರ ನಗರವೊಂದರಲ್ಲೇ ನೂರಕ್ಕೂ ಹೆಚ್ಚು ಆಸಕ್ತಿಕರ ಪ್ರವಾಸಿ ತಾಣಗಳಿವೆ. ಅವುಗಳನ್ನು ವ್ಯವಸ್ಥಿತವಾಗಿ ಅಭಿವೃದ್ಧಿಪಡಿಸಿದ್ದರೆ, ವಿಜಯಪುರ ದೇಶದ ಒಂದು ಅಪರೂಪದ ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಬಹುದಿತ್ತು. ವಿಜಯಪುರ ನೋಡಲು ಬರುವವರು ಗೋಳಗುಮ್ಮಟ, ಇಬ್ರಾಹಿಂ ರೋಜಾ, ಬಾರಾಕಮಾನ್ ನೋಡಿ ಮರಳುತ್ತಾರೆ. ತುಂಬ ಕಡಿಮೆ ಸಮಯ ಇಟ್ಟುಕೊಂಡು ಬಂದವರು ಗೋಳ ಗುಮ್ಮಟ ನೋಡಿ ಹೋಗುತ್ತಾರೆ. ಭಾರತದ ಅತ್ಯುನ್ನತ ಪ್ರೇಮ ಸೌಧ ಎಂಬ ಖ್ಯಾತಿಯ ಆಗ್ರಾದ ತಾಜಮಹಲ್ಲಿಗೆ ಪ್ರೇರಣೆಯಾದದ್ದೇ ಇಬ್ರಾಹಿಂ ರೋಜಾ. ಈಗಲೂ ಇಬ್ರಾಹಿಂ ರೋಜಾದ ಕಲಾ ಕುಸುರಿಗೆ ತಾಜಮಹಲ್ ಸಮನಾಗುವುದಿಲ್ಲ. ಒಂದು ವೇಳೆ ಇಬ್ರಾಹಿಂ ರೋಜಾ ತಾಜಮಹಲ್ಲಿನಂತೆ ಬಿಳಿ ಸಂಗಮರವರಿ ಕಲ್ಲಿನಲ್ಲಿ ಕಟ್ಟಿದ್ದರೆ, ಬಹುತೇಕ ಪ್ರವಾಸಿಗರು ಆಗ್ರಾಕ್ಕೆ ಹೋಗದೆ, ಇಬ್ರಾಹಿಂ ರೋಜಾ ನೋಡಲು ವಿಜಯಪುರಕ್ಕೇ ಬರುತ್ತಿದ್ದರು ಎಂಬುದು ಬಹಳಷ್ಟು ಕಲಾರಸಿಕರ ಅಭಿಪ್ರಾಯವಾಗಿದೆ.

ಅರ್ಧಕ್ಕೆ ನಿಂತ ಇಲ್ಲಿನ ಬಾರಾಕಮಾನ್ ಪೂರ್ಣಗೊಂಡಿದ್ದರೆ, ಭಾರತದಲ್ಲಲ್ಲ, ಇಡೀ ವಿಶ್ವದಲ್ಲೇ ಅದೊಂದು ಅಪರೂಪದ ಬೃಹತ್ ಸ್ಮಾರಕವಾಗುತ್ತಿತ್ತು. ಇವಲ್ಲದೆ ಗಗನ ಮಹಲ್, ಆಸಾರ ಮಹಲ್, ಭಾರತದ ಮೊಗಲ್ ಸಾಮ್ರಾಟ ಔರಂಗಜೇಬ ಭೇಟಿ ಕೊಟ್ಟ ಜಾಮಿಯಾ ಮಸ್ಜಿದ್, ಸಾತ್ ಖಬರ್, ತಾಜ ಬಾವಡಿ, ಚಂದಾ ಬಾವಡಿ ಮೊದಲಾದ ಸುಂದರ ಜಲಮೂಲಗಳು, ಶ್ರೀ ಸಿದ್ಧೇಶ್ವರ ಗುಡಿ, ಅತ್ಯಂತ ಎತ್ತರದ ಶಿವ ಪ್ರತಿಮೆಯುಳ್ಳ ಶಿವಗಿರಿ, ಸಹಸ್ರಫಣಿ ಪಾರ್ಶ್ವನಾಥ ಬಸದಿ, ಮೋತಿ ಗುಂಬಜ, ಪಸಾರಿ ಕಮಾನ್.. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವು ಇಲ್ಲಿನ ಭೌತಿಕ ಆಕರ್ಷಣೀಯ ತಾಣಗಳು. ಅಭೌತಿಕ-ಆಧ್ಯಾತ್ಮಿಕ-ಸಾಂಸ್ಕೃತಿಕ ತಾಣಗಳಿಗೂ ಲೆಕ್ಕವಿಲ್ಲ.

ಕನ್ನಡದ ಕಣ್ವ ಎಂದೇ ಖ್ಯಾತರಾದ ಬಿ.ಎಂ.ಶ್ರೀಕಂಠಯ್ಯ ವಿಜಯಪುರಕ್ಕೆ ಬಂದಾಗ, ಅವರು ಗೋಳಗುಮ್ಮಟ ನೋಡಲು ಬಯಸಲಿಲ್ಲ. ಅವರು ಮೊದಲು ನೋಡಬಯಸಿದ್ದು, ವಚನ ಪಿತಾಮಹ ಫ.ಗು.ಹಳಕಟ್ಟಿ ಎಂಬ ವಚನ ಗುಮ್ಮಟ. ಇತ್ತೀಚೆಗೆ ನಿಧನರಾದ ಶ್ರೀ ಸಿದ್ಧೇಶ್ವರ ಸ್ವಾಮಿಗಳು ಇಲ್ಲೊಂದು ಜ್ಞಾನಗುಮ್ಮಟವನ್ನು ಅನನ್ಯ ರೀತಿಯಲ್ಲಿ ಕಟ್ಟಿದ್ದಾರೆ. ಆ ಜ್ಞಾನಗುಮ್ಮಟ ವಿಜಯಪುರದ ಜ್ಞಾನ ಯೋಗಾಶ್ರಮದಲ್ಲಿ ಹಿರಿಮೆ ಹೆಚ್ಚಿಸಿದೆ. ಅಲ್ಲಿ ಅವರು ಓದಿದ, ಕೈಯಾಡಿಸಿದ ವಿಶ್ವದ ಹಲವು ತತ್ವಜ್ಞಾನಿಗಳ ಹಾಗೂ ಪ್ರಸಿದ್ಧ ಲೇಖಕರ ಸಹಸ್ರ ಸಹಸ್ರ ಗ್ರಂಥಗಳಿವೆ. ಅವುಗಳನ್ನು ಈಗ ವಿಷಯವಾರು ವಿಂಗಡಿಸಿ, ಓದುಗರ ಕೈಗೆ, ಅವರವರ ಆಸಕ್ತಿಯ ಪುಸ್ತಕಗಳು ಕೂಡಲೇ ಸಿಗುವಂತೆ ಗ್ರಂಥ ಭಂಡಾರವನ್ನು, ನಿವೃತ್ತ ಗ್ರಂಥಪಾಲಕ ಪಿ.ಎಸ್.ಕನಮಡಿಯವರು ವಿಶೇಷ ಕಾಳಜಿವಹಿಸಿ ಸಿದ್ಧಪಡಿಸಿದ್ದಾರೆ.

60 ಕಿಲೋಮೀಟರ್ ದೂರದ ಆಲಮಟ್ಟಿಯಲ್ಲಿ, ಕರ್ನಾಟಕದ ಬಹ ದೊಡ್ಡ ನದಿ, ಕೃಷ್ಣೆಗೆ ಕಟ್ಟಿದ ಸುಂದರ ಆಣೆಕಟ್ಟಿದೆ. ಅಷ್ಟೇ ಅಲ್ಲ, ಪ್ರವಾಸಿಗರನ್ನು ಸೆಳೆಯಲು ಶಿಲಾ ಉದ್ಯಾನವನ, ಮೊಘಲ್ ಗಾರ್ಡನ್, ಸಂಗೀತ ಕಾರಂಜಿಗಳಿವೆ. ಸಮೀಪದ ಬಸವ ಜನ್ಮಸ್ಥಳ ಬಸವನ ಬಾಗೇವಾಡಿ ಇದೆ. ನಿಂಬಾಳದಲ್ಲಿ ಗುರದೇವ ರಾನಡೆ ಅವರ ಆಶ್ರಮವಿದೆ. ವಿಜಯಪುರಕ್ಕೆ ಎಲ್ಲ ಕಡೆಯಿಂದಲೂರಸ್ತೆ ಹಾಗೂ ರೇಲ್ವೆ ಮೂಲಕ ಬರಬಹುದಾಗಿದೆ.

ಕೆಲವೇ ದಿನಗಳಲ್ಲಿ ವಿಮಾನ ನಿಲ್ದಾಣವೂ ಶುರುವಾಗಲಿದೆ. ಇಷ್ಟೆಲ್ಲ ಇದ್ದರೂ, ವಿಜಯಪುರ ತನ್ನನ್ನು ಒಂದು ಆಕರ್ಷಕ ಪ್ರವಾಸಿತಾಣವಾಗಿ ರೂಪಿಸಿಕೊಳ್ಳಲು ಸಂಪೂರ್ಣ ಸೋತಿದೆ. ಬರದ ನಾಡು.. ಬಿಸಿಲ ಬೀಡು ಎಂಬ ಕುಖ್ಯಾತಿಗೆ ಒಳಗಾಗಿದೆ. ಇಲ್ಲಿನ ಜನರ ಹಾಗೂ ಸಂಬಂಧಿಸಿದ ಇಲಾಖೆಯವರ ನಿರ್ಲಕ್ಷ್ಯವೇ ಇದಕ್ಕೆ ಕಾರಣ. ಈ ದಿವ್ಯ ನಿರ್ಲಕ್ಷ್ಯ ಯಾವಾಗ ಬದಲಾಗುತ್ತದೋ ಗೊತ್ತಿಲ್ಲ. ಕೂಡಲೇ ಬದಲಾಗಬೇಕು. ಹಾಗೇನಾದರೂ ಆದರೆ, ವಿಜಯಪುರ ಕರ್ನಾಟಕದ ಅತ್ಯಂತ ಆಕರ್ಷಣೀಯ ತಾಣವಾಗಿ ರೂಪಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸುಭಾಸ ಯಾದವಾಡ

contributor

Similar News