×
Ad

ಇಎಸ್‌ಐ ಆಸ್ಪತ್ರೆಗಳಲ್ಲಿ ಔಷಧ ‘ನೋ ಸ್ಟಾಕ್’: ರೋಗಿಗಳ ಪರದಾಟ

Update: 2025-07-28 14:36 IST

ಬೆಂಗಳೂರು, ಜು.27: ಕಾರ್ಮಿಕ ಇಲಾಖೆ ವ್ಯಾಪ್ತಿಯ ಕಾರ್ಮಿಕರ ರಾಜ್ಯ ವಿಮಾ ನಿಗಮದ (ಇಎಸ್‌ಐ) ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳಲ್ಲಿ ಕ್ಯಾನ್ಸರ್ ಸೇರಿದಂತೆ ವಿವಿಧ ಗಂಭೀರ ಕಾಯಿಲೆಗಳ ನಿವಾರಿಸುವ ಜೀವ ರಕ್ಷಕ ಔಷಧ ಕೊರತೆ ಎದುರಾಗಿದ್ದು, ನಿತ್ಯ ಸಾವಿರಾರು ರೋಗಿಗಳು ಪರದಾಡುವಂತಾಗಿದೆ.

ಬೆಂಗಳೂರು ಸೇರಿದಂತೆ ರಾಜ್ಯದ ಒಟ್ಟು 11 ಇಎಸ್‌ಐ ಆಸ್ಪತ್ರೆಗಳು, ಇದರ ವ್ಯಾಪ್ತಿಯೊಳಗೆ 200ಕ್ಕೂ ಅಧಿಕ ಡಿಸ್ಪೆನ್ಸರಿಗಳಿವೆ. ಇಲ್ಲಿ ಪ್ರತಿನಿತ್ಯ ಭೇಟಿ ನೀಡುವ ರೋಗಿಗಳು ವೈದ್ಯರಿಂದ ತಪಾಸಣೆ ಮಾಡಿಸಿಕೊಂಡು ಔಷಧ ಪಡೆಯಲು ಹೋದರೆ ಬಹುತೇಕ ಔಷಧಗಳ ಹೆಸರಿನ ಮುಂದೆ ‘ನೋ ಸ್ಟಾಕ್’ ಮುದ್ರೆ ಇರುತ್ತದೆ. ಉಚಿತವಾಗಿ ಸಿಗಬೇಕಾಗಿದ್ದ ಔಷಧಗಳನ್ನು ಹೆಚ್ಚಿನ ಹಣ ಕೊಟ್ಟು ಖಾಸಗಿ ಔಷಧ ಅಂಗಡಿಗಳಲ್ಲಿ ಖರೀದಿಸಬೇಕಾದ ಪರಿಸ್ಥಿತಿ ಉಲ್ಬಣಗೊಂಡಿದೆ.

ಇಎಸ್‌ಐ ಕಾರ್ಡ್ ಹೊಂದಿರುವವರು ಮೊದಲಿಗೆ ಡಿಸ್ಪೆನ್ಸರಿಗೆ ಹೋಗಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಮಾತ್ರ ತಮ್ಮ ವ್ಯಾಪ್ತಿಯಲ್ಲಿರುವ ಅಥವಾ ಸೂಚಿಸಿರುವ ಇಎಸ್‌ಐ ಆಸ್ಪತ್ರೆಗೆ ಶಿಫಾರಸು ಮಾಡಲಾಗುತ್ತದೆ. ಬಳಿಕ ರೋಗಿಗಳು ಇಲ್ಲಿಗೆ ಬಂದು ತಜ್ಞ ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳುತ್ತಾರೆ. ಅವರು ಬರೆದುಕೊಟ್ಟ ಔಷಧ ಚೀಟಿಯನ್ನು ಆಸ್ಪತ್ರೆಯ ಆವರಣದಲ್ಲಿರುವ ಔಷಧಾಲಯಕ್ಕೆ ಕೊಟ್ಟರೆ ಉಚಿತವಾಗಿ ಔಷಧ ನೀಡಲಾಗುತ್ತದೆ. ಆದರೆ, ಈಗ ಇಲ್ಲಿ ಔಷಧ ಚೀಟಿಗಳ ಮೇಲೆ ‘ನೋ ಸ್ಟಾಕ್’ ಮುದ್ರೆ ಹಾಕಲಾಗುತ್ತಿದೆ.

ಆ ಚೀಟಿಯನ್ನು ರೋಗಿಗಳು ತಮಗೆ ಸಂಬಂಧಪಟ್ಟ ಡಿಸ್ಪೆನ್ಸರಿಗೆ ಪುನಃ ಒಯ್ಯಬೇಕು. ಅಲ್ಲಿಯೂ ಔಷಧ ಇಲ್ಲ ಎಂದು ‘ನೋ ಸ್ಟಾಕ್’ ಮುದ್ರೆ ಹಾಕಿಸಿಕೊಂಡ ಬಳಿಕವೇ ಔಷಧಗಳನ್ನು ಖಾಸಗಿ ಅಂಗಡಿಗಳನ್ನು ಖರೀದಿಸಬೇಕು. ಆಗ ಮಾತ್ರ ಅವುಗಳ ಬಿಲ್‌ನ ಹಣವನ್ನು ಮರುಪಾವತಿಸಲಾಗುತ್ತದೆ. ಡಿಸ್ಪೆನ್ಸರಿ ಹಾಗೂ ಆಸ್ಪತ್ರೆಗೆ ಅಲೆದಾಡಲು ಆಟೋಕ್ಕೆ ಹೆಚ್ಚಿನ ಹಣ ತೆರಬೇಕಾಗುತ್ತಿದೆ. ಜೊತೆಗೆ ಸಮಯವೂ ಹಾಳಾಗುತ್ತಿದೆ ಎಂದು ರೋಗಿಗಳು ಅಳಲು ತೋಡಿಕೊಳ್ಳುತ್ತಿದ್ದಾರೆ.

ನವಜಾತ ಶಿಶುಗಳಿಗೆ ಬರುವ ಸೂಕ್ಷ್ಮಕಾಯಿಲೆಗಳಿಂದ ಹಿಡಿದು ಎಲ್ಲ ತರಹದ ಚಿಕಿತ್ಸೆಗಳು ಕಾರ್ಮಿಕರಿಗೆ ಮತ್ತು ಅವರ ಅವಲಂಬಿತರ ಕುಟುಂಬಗಳಿಗೆ ಈ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಸೌಲಭ್ಯ ನೀಡಲಾಗುತ್ತದೆ. ಆದರೆ, ಕಾರ್ಮಿಕರ ವರ್ಗಕ್ಕೆ ವರದಾನವಾಗಬೇಕಿದ್ದ ಇಎಸ್‌ಐ ಆಸ್ಪತ್ರೆಗಳಲ್ಲಿ ಕ್ಯಾನ್ಸರ್, ಮಧುಮೇಹ, ಶ್ವಾಸಕೋಶ, ಕರಳು, ರಕ್ತಹೀನತೆ, ಸರ್ಪಸುತ್ತು, ನ್ಯುಮೋನಿಯಾ, ಸಕ್ಕರೆ ಕಾಯಿಲೆ, ನಿದ್ರಾಹೀನತೆ.

ರಕ್ತದೊತ್ತಡ, ಗರ್ಭಾಶ್ರಯ ರಕ್ತಸ್ರಾವ, ಹೃದಯಾಘಾತ, ಮೂಳೆ, ಪಂಗಸ್, ಮೈಗ್ರೇನ್, ಹುಣ್ಣು, ನೋವು, ಯೋನಿ ಸೋಂಕು, ಶೀತ, ಅನೆಸ್ತೀಯಾ, ಹೃದಯ ಶಸಚಿಕಿತ್ಸೆ, ರಕ್ತ ಹೆಪ್ಪುಗಟ್ಟುವಿಕೆ, ವಾಕರಿಕೆ, ವಾಂತಿ, ಮಿದುಳು ಮತ್ತು ನರ, ಕಣ್ಣಿನ ಸೊಂಕು ನಿವಾರಿಸುವ ಔಷಧಗಳು ಇಲ್ಲ. ಹಾಗಾಗಿ, ಅಧಿಕ ಹಣ ನೀಡಿ ಖಾಸಗಿ ಮೆಡಿಕಲ್‌ನಲ್ಲಿ ಔಷಧವನ್ನು ಖರೀದಿಸಬೇಕಾಗಿದೆ ಎಂದು ರೋಗಿಗಳು ದೂರಿದರು.

ವೈದ್ಯರ ಕೊರತೆ: ಇಎಸ್‌ಐ ಆಸ್ಪತ್ರೆ ಮತ್ತು ಡಿಸ್ಪೆನ್ಸರಿಗಳು ವೈದ್ಯರು, ಸಿಬ್ಬಂದಿ ಕೊರತೆ ಸೇರಿ ವಿವಿಧ ಸೌಲಭ್ಯ ಕೊರತೆಯಿಂದ ನಲುಗಿವೆ. ಬಹುತೇಕ ಡಿಸ್ಪೆನ್ಸರಿಗಳಲ್ಲಿ ಓರ್ವ ವೈದ್ಯರಿದ್ದಾರೆ. ಶುಶ್ರೂಷಕರ ಸಂಖ್ಯೆ ಕಡಿಮೆ ಇದೆ. ಕೆಲ ಡಿಸ್ಪೆನ್ಸರಿಗಳು ನಿತ್ಯ ಬೆಳಗ್ಗೆ 9 ಗಂಟೆಗೆ ತೆರೆದು, ಸಂಜೆ 5:30 ಅಥವಾ 7 ಗಂಟೆಗೆ ಬಂದ್ ಆಗುತ್ತವೆ. ಆ ವೇಳೆಗೆ ಕಾರ್ಮಿಕರು ಕೆಲಸಕ್ಕೆ ತೆರಳಿರುತ್ತಾರೆ. ಕೆಲಸದ ದಿನಗಳಲ್ಲಿ ಆಸ್ಪತ್ರೆಗೆ ತೆರಳುವುದು ಕಷ್ಟವಾಗುತ್ತಿದೆ.

ರವಿವಾರ ತೆರಳಿದರೆ ಬಾಗಿಲು ತೆರೆಯುತ್ತಿಲ್ಲ. ಸರಿಯಾಗಿ ಸೇವೆ ಸಿಗುತ್ತಿಲ್ಲ. ರೋಗಿಗಳ ತಪಾಸಣೆ ನಡೆಸಿ ಅಲ್ಲಿಯೇ ಔಷಧ ನೀಡಬೇಕು. ಆದರೆ, ಔಷಧ ಸ್ಟಾಕ್ ಇಲ್ಲವೆಂದು ಸಿಬ್ಬಂದಿ ಹೇಳುತ್ತಾರೆ. ಶೀತ, ಕೆಮ್ಮು, ಜ್ವರ ಮುಂತಾದ ಸಣ್ಣಪುಟ್ಟ ಅನಾರೋಗ್ಯಗಳಿಗೆ ಇಎಸ್‌ಐ ಆಸ್ಪತ್ರೆಗಳಿಗೆ ಬರುವಂತಿಲ್ಲ. ಡಿಸ್ಪೆನ್ಸರಿಗಳಿಗೇ ತೆರಳಬೇಕು. ಅಲ್ಲಿ ಪರೀಕ್ಷೆ, ಆಸ್ಪತ್ರೆಗೆ ಶಿಫಾರಸು ಮಾಡಿದರಷ್ಟೆ ದೊಡ್ಡ ಆಸ್ಪತ್ರೆಗಳಿಗೆ ಹೋಗಬೇಕಿದೆ ಎಂದು ರೋಗಿಯೊಬ್ಬರು ಅಲ್ಲಿನ ಸಮಸ್ಯೆಯನ್ನು ಬಿಚ್ಚಿಟ್ಟರು.

ಕ್ಯಾನ್ಸರ್ ಔಷಧ ಸಿಗುತ್ತಿಲ್ಲ

ರಾಜಾಜಿನಗರ ಮಾದರಿ ಆಸ್ಪತ್ರೆ, ಪೀಣ್ಯ ಮಾದರಿ ಆಸ್ಪತ್ರೆಗಳು ಬಹಳ ಚೆನ್ನಾಗಿವೆ. 3 ತಿಂಗಳಿಂದ ಆಸ್ಪತ್ರೆಗೆ ಬರುತ್ತಿದ್ದೇವೆ. ಆದರೆ, ಕ್ಯಾನ್ಸರ್ ಔಷಧ ಸಿಗುತ್ತಿಲ್ಲ. ನಾವೆಲ್ಲರೂ ಬಡವರು. ಬೇರೆ ಕಡೆ ತೆರಳಲು ನಮ್ಮ ಬಳಿ ಅಷ್ಟೊಂದು ಹಣವೂ ಇಲ್ಲ ಎಂದು ಇಎಸ್‌ಐ ಆಸ್ಪತ್ರೆಗೆ ಬಂದಿದ್ದ ಕಾರ್ಮಿಕ ನಾರಾಯಣಪ್ಪ ಹೇಳಿದರು.

10 ದಿನದೊಳಗೆ ಔಷಧ ಖರೀದಿ: ಆಯುಕ್ತ

ಕಾರ್ಮಿಕ ಇಲಾಖೆಯ ಉಸ್ತುವಾರಿ ವಹಿಸಿಕೊಂಡು ಒಂದು ತಿಂಗಳಾಗಿದೆ. ಕಳೆದ ಎಪ್ರಿಲ್ ಅಥವಾ ಮೇನಲ್ಲಿ ಔಷಧಗಳನ್ನು ಖರೀದಿಸಬೇಕಿತ್ತು. ಆದರೆ, ಕೆಲ ಕಾರಣಾಂತರಗಳಿಂದ ಸಾಧ್ಯವಾಗಿಲ್ಲ. ಈಗ 10 ಕೋಟಿ ರೂ.ಮೌಲ್ಯದ ವಿವಿಧ ಔಷಧಗಳನ್ನು ಖರೀದಿಸಲು ರಾಜ್ಯ ಸರಕಾರ ಅನುಮೋದನೆ ನೀಡಿದ್ದು, 10 ದಿನದೊಳಗೆ ಔಷಧ ಖರೀದಿಸಿ ಆಸ್ಪತ್ರೆಗಳಿಗೆ ಸರಬರಾಜು ಮಾಡುತ್ತೇವೆ.

<ಡಾ.ಎಚ್.ಎನ್.ಗೋಪಾಕೃಷ್ಣ, ಕಾರ್ಮಿಕ ಇಲಾಖೆ ಆಯುಕ್ತ

ಡಿಸ್ಪೆನ್ಸರಿಗಳು ಎಲ್ಲೆಲ್ಲಿವೆ?

ಮಾರತ್ತಹಳ್ಳಿ ಪೀಣ್ಯ 14ನೇ ಅಡ್ಡರಸ್ತೆ, ಆರ್.ಟಿ.ನಗರ, ಮಾದನಾಯಕನಹಳ್ಳಿ, ಬೈಯಪ್ಪನಹಳ್ಳಿ, ಯಲಹಂಕ, ದೊಡ್ಡನೆಕುಂದಿ, ಕ್ವೀನ್ಸ್ ರಸ್ತೆ, ಯಶವಂತಪುರ, ಹಲಸೂರು, ಜಾಲಹಳ್ಳಿ, ಲಗ್ಗೆರೆ, ದಾಸರಹಳ್ಳಿ, ಸುಭಾಸ್ ನಗರ, ಬಸವನಗುಡಿ, ಬನಶಂಕರಿ, ಹನುಮಂತನಗರ, ಬಿನ್ನಿಪೇಟೆ, ಕಾಟನ್‌ಪೇಟೆ, ಕರಿತಿಮ್ಮನಹಳ್ಳಿ, ಕೋಣನಕುಂಟೆ, ಶೇಷಾದ್ರಿಪುರ, ಕೆಂಗೇರಿ, ಅತ್ತಿಬೆಲೆ, ಬೊಮ್ಮನಹಳ್ಳಿ, ಬೊಮ್ಮಸಂದ್ರ, ಚಾಮರಾಜಪೇಟೆ, ಚಿಕ್ಕಜಾಲ, ದ್ಯಾವಸಂದ್ರ, ಜಯನಗರ, ಕೆ.ಆರ್.ಪುರ, ಮಾಗಡಿ ರಸ್ತೆ, ಅರಮನೆ ಗುಟ್ಟಹಳ್ಳಿ, ರಾಜಾಜಿನಗರ, ಆಸ್ಟಿನ್ ಟೌನ್, ಚಿಕ್ಕಬಾಣಾವರ, ಶ್ರೀರಾಂಪುರ, ಸುಬ್ರಹ್ಮಣ್ಯಪುರ, ಸಿಂಗಸಂದ್ರ, ವಿವೇಕನಗರ, ವಿಜಯನಗರ, ಕಾಮಾಕ್ಷಿಪಾಳ್ಯ, ವಿಲ್ಸನ್‌ಗಾರ್ಡನ್, ವಿಲಿಯಮ್ಸ್ ಟೌನ್.

ಅನುದಾನ ಬಳಕೆಯಾಗುತ್ತಿಲ್ಲ

ಪ್ರತಿ ವರ್ಷ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಹತ್ತಾರು ಕೋಟಿ ರೂ. ಬರುವ ಅನುದಾನದಲ್ಲಿ ಔಷಧಗಳನ್ನು ಖರೀದಿಸಿ ಆಸ್ಪತ್ರೆಗಳಿಗೆ ಸರಬರಾಜು ಮಾಡುವುದು ಕಾರ್ಮಿಕ ಇಲಾಖೆ ಜವಾಬ್ದಾರಿ. ಆದರೆ, ಔಷಧಗಳ ಇಂಡೆಂಟ್ ಸಂಗ್ರಹಿಸಿ ಖರೀದಿಸುವುದು ಅಧಿಕಾರಿಗಳು ಕರ್ತವ್ಯ ಹೌದು. ಆದರೆ, ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಔಷಧ ಖರೀದಿ ಪ್ರಕ್ರಿಯೆ ನಡೆಯುತ್ತಿಲ್ಲ. ಸಮರ್ಪಕವಾಗಿ ಅನುದಾನವೂ ಸದ್ಬಳಕೆಯಾಗುತ್ತಿಲ್ಲ ಎನ್ನುವ ಆರೋಪ ಕೇಳಿಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಸಮೀರ್, ದಳಸನೂರು

contributor

Similar News