ನ. 2 ರಂದು ಹಿಲಿಯೋಥಿಸ್ ನಾಟಕ ಪ್ರದರ್ಶನ: ವಿ.ಎನ್ ಅಕ್ಕಿ
ರಾಯಚೂರು : ಜಿಲ್ಲೆಯ ಹಿರಿಯ ಕಥೆಗಾರರಾದ ಮಹಾಂತೇಶ ನವಲಕಲ್ ಅವರ ಭಾರತ ಭಾಗ್ಯವಿಧಾತ ಕಥೆಯಾಧಾರಿತ ಹಿಲಿಯೋಥಿಸ್ ಎಂಬ ನಾಟಕ ರಂಗದ ಮೇಲೆ ಪ್ರದರ್ಶನಗೊಳ್ಳಲು ಸಿದ್ಧವಾಗಿದೆ. ಈ ನಾಟಕವನ್ನು ಜಿಲ್ಲೆಯ ಯುವ ರಂಗ ನಿರ್ದೇಶಕ ಲಕ್ಷ್ಮಣ್ ಮಂಡಲಗೇರಾ ಅವರು ನಿರ್ದೇಶಿಸಿದ್ದು, ರಾಯಚೂರಿನ ಸಮುದಾಯ ತಂಡದ ಕಲಾವಿದರು ಪ್ರಸ್ತುತ ಪಡಿಸಲಿದ್ದಾರೆ ಎಂದು ಸಮುದಾಯ ಅಧ್ಯಕ್ಷರಾದ ವಿ.ಎನ್ ಅಕ್ಕಿ ಪ್ರಕಟಣೆಯಲ್ಲಿ ತಿಳಿಸಿದರು.
ಮಹಾಂತೇಶ ನವಲಕಲ್ ಅವರ ಭಾರತ ಭಾಗ್ಯವಿಧಾತ ಕಥೆಯು ಬಹುರಾಷ್ಟ್ರೀಯ ಕ್ರಿಮಿನಾಶಕ ಕಂಪನಿಗಳು ರೈತರ ಬದುಕನ್ನು ನಾಶ ಮಾಡಹೊರಟಿರುವ ಕ್ರೌರ್ಯ, ಮೋಸದ ಪ್ರಪಂಚವನ್ನು ತೆರೆದಿಡುವ ಈ ಕಥೆಯು ಮಾರುಕಟ್ಟೆ ನಡೆಸುತ್ತಿರುವ ಮೌನ ಕೊಲೆಗಳ ವಿವರಗಳನ್ನು ಹೇಳುವ ಕಥಾ ಹಂದರವನ್ನು ಹೇಳಲು ಹೊರಟಿರುವ ಈ ನಾಟಕವು ಜಾಗತೀಕರಣವು ರೂಪಿಸುತ್ತಿರುವ ಮಾರುಕಟ್ಟೆಯ ಆಮಿಷಗಳಿಗೆ ರೈತರನ್ನು ಬಲಿ ತೆಗೆದುಕೊಳ್ಳುತ್ತಿರುವ ಅದೃಶ್ಯ ವ್ಯಾಪಾರ ಜಗತ್ತಿನ ದೃಶ್ಯಗಳನ್ನು ಹಿಲಿಯೋಥಿಸ್ ನಾಟಕದಲ್ಲಿ ಕಟ್ಟಿ ಕೊಡಲು ನಿರ್ದೇಶಕರು ಪ್ರಯತ್ನಿಸಿದ್ದಾರೆ.
ಸಮುದಾಯ 50ರ ಸಂಭ್ರಮದೊಂದಿಗೆ ರಾಯಚೂರಿನ ಸಮುದಾಯ ತಂಡ ಯುವ ಕಲಾವಿದರನ್ನು ಒಟ್ಟುಗೂಡಿಸಿಕೊಂಡು ಭಾರತ ಭಾಗ್ಯವಿಧಾತ ಕಥೆಯ ನಾಟಕವನ್ನು ಕೈಗೆತ್ತಿಕೊಂಡು ಯುವ ರಂಗ ನಿರ್ದೇಶಕ ಲಕ್ಷ್ಮಣ ಮಂಡಲಗೇರಾ ಅವರು ರಂಗಪಠ್ಯ ಸಿದ್ದಪಡಿಸಿಕೊಂಡು ನಿರ್ದೇಶಿಸಿದ್ದಾರೆ. ಈ ನಾಟಕಕ್ಕೆ ರಂಗಸಜ್ಜಿಕೆಯನ್ನು ನಾಗರಾಜ ಸಿರವಾರ ಸಿದ್ಧ ಪಡಿಸಿದ್ದು, ಸಂಗೀತವನ್ನು ಹೇಮಂತ ಮರಿಯಮ್ಮನಹಳ್ಳಿ ಹಾಗೂ ಹನುಮಯ್ಯ ನಿರ್ವಹಿಸಿದರೆ, ಪ್ರಸಾಧನವನ್ನು ವೆಂಕಟ ನರಸಿಂಹಲು ಅವರು ನಿರ್ವಹಿಸಿದ್ದಾರೆ, ಈಗ ನಾಟಕ ರಂಗದ ಮೇಲೆ ಪ್ರದರ್ಶಿಸಲು ಸಿದ್ಧವಾಗಿದೆ.
"ಹಿಲಿಯೋಥಿಸ್" ನಾಟಕ ಪ್ರದರ್ಶನವು ನವೆಂಬರ್ 2 ರಂದು ನಗರದ ಪಂಡಿತ ಸಿದ್ಧರಾಮ ಜಂಬಲದಿನ್ನಿ ರಂಗಮಂದಿರದಲ್ಲಿ ಭಾನುವಾರ ಸಂಜೆ 6 ಗಂಟೆ 30 ನಿಮಿಷಕ್ಕೆ ಪ್ರದರ್ಶನಗೊಳ್ಳಲಿದೆ. ರಾಯಚೂರಿನ ರಂಗಾಸಕ್ತರು ಈ ಉತ್ತಮ ನಾಟಕವನ್ನು ನೋಡಲು ಬರಬೇಕೆಂದು ಸಮುದಾಯ ಅಧ್ಯಕ್ಷರಾದ ವಿ ಎನ್ ಅಕ್ಕಿ ಯವರು ಪತ್ರಿಕಾ ಪ್ರಕಟಣೆ ಮೂಲಕ ಆಹ್ವಾನಿಸಿದ್ದಾರೆ.