ರಾಯಚೂರು | ವಸತಿ, ಭೂ ವಂಚಿತರಿಗೆ ಹಕ್ಕು ಪತ್ರ ನೀಡಲು ಒತ್ತಾಯಿಸಿ ಜೂ.23 ರಂದು ಸಿ.ಎಂ ಗೆ ಘೇರಾವ್: ಮಾರೆಪ್ಪ ಹರವಿ
ರಾಯಚೂರು: ಭೂಮಿ ಮತ್ತು ವಸತಿ ರಹಿತರ ಬೇಡಿಕೆಗಳಿಗೆ ಕೂಡಲೇ ಸ್ಪಂದಿಸಿ ಸಾಗುವಳಿ ಚೀಟಿ, ಹಕ್ಕುಪತ್ರ ನೀಡಬೇಕೆಂದು ಆಗ್ರಹಿಸಿ ಜೂ.23 ರಂದು ಜಿಲ್ಲೆಗೆ ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಘೇರಾವ್ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದು ಭೂಮಿ ಮತ್ತು ವಸತಿ ರಹಿತರ ಹೋರಾಟ ಸಮಿತಿ ಸಂಚಾಲಕ ಮಾರೆಪ್ಪ ಹರವಿ ಹೇಳಿದರು.
ಅವರಿಂದು ಮಾಧ್ಯಮಗೋಷ್ಟಿ ಉದ್ದೇಶಿಸಿ ಮಾತನಾಡಿ, ಬಗರ್ಹುಕುಂ ಸಾಗುವಳಿದಾರರಿಗೆ ಚೀಟಿ ನೀಡುವುದಾಗಿ ಸರ್ಕಾರ ಭರವಸೆ ನೀಡಿರುವುದು ಸ್ವಾಗತಾರ್ಹ. ಆದರೆ ಕೆಳ ಹಂತದ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡದೇ ಅರ್ಜಿಗಳನ್ನು ತಿರಸ್ಕರಿಸುತ್ತಿದ್ದಾರೆ. ಹತ್ತಾರು ವರ್ಷ ಹೋರಾಟಕ್ಕೆ ಇಲ್ಲಿಯವರಗೆ ಕೇವಲ ಭರವಸೆ ಮಾತ್ರ ದೊರಕಿದೆ. ಕೂಡಲೇ ಸಾಗುವಳಿದಾರರಿಗೆ ಪಟ್ಟ ನಿಡಬೇಕೆಂದು ಆಗ್ರಹಿಸಿ ಘೇರಾವ್ ಹಾಕಲಾಗುವುದು ಎಂದು ತಿಳಿಸಿದರು.
ಈಗಾಗಲೇ ಫಾರಂ 53, 57 ಸೇರಿದಂತೆ ಅರ್ಜಿ ಸಲ್ಲಿಸಿರುವ ರೈತರಿಗೆ ಇನ್ನಷ್ಟು ದಿನ ಕಾಲಹರಣ ಮಾಡದೇ ಕೂಡಲೇ ಸಾಗುವಳಿ ಚೀಟಿ ನೀಡುವುದು, ದೇವನಹಳ್ಳಿ ಹೋರಾಟ ಬೆಂಬಲಿಸ ಭಾಗವಹಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಆಂಜಿನೇಯ್ಯ ಕುರುಬದೊಡ್ಡಿ, ಶ್ರೀನಿವಾಸ ಕೊಪ್ಪರ, ಮಾರೆಮ್ಮ ಭೀಮಣ್ಣ ನಗನೂರು, ಗಂಗಪ್ಪ ತೋರಣದಿನ್ನಿ, ಚಾಂದಪಾಷಾ ಬೆಳಿಗನೂರು, ಶಂಶಾಲಂ ಪೋತಗಲ್, ವಿರೇಶ ನಾಯಕ, ರಂಗಾರೆಡ್ಡಿ, ಶಿವರಾಜ ಸೇರಿ ಅನೇಕರಿದ್ದರು.