ರಾಯಚೂರು | ಪತ್ರಕರ್ತ ಬಿ.ವೆಂಕಟಸಿಂಗ್ ಸೇರಿ ಮೂವರು ಮಾಹಿತಿ ಆಯುಕ್ತರಾಗಿ ನೇಮಕ
ರಾಯಚೂರು : ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ಆಯೋಗದ ರಾಜ್ಯ ಮಾಹಿತಿ ಆಯುಕ್ತರಾಗಿ ಮೂವರು ನೇಮಕವಾಗಿದ್ದಾರೆ.
ರಾಯಚೂರಿನ ಸುದ್ದಿಮೂಲ ಪತ್ರಿಕೆಯ ಹಿರಿಯ ಪತ್ರಕರ್ತ ಬಿ.ವೆಂಕಟಸಿಂಗ್, ನಿವೃತ್ತ ಐಎಎಸ್ ಅಧಿಕಾರಿ ವಿನ್ಸಂಟ್ ಡಿಸೋಜಾ ಮತ್ತು ವಿಧಾನ ಪರಿಷತ್ ಸಭಾಪತಿ ವಿಶೇಷ ಕರ್ತವ್ಯಾಧಿಕಾರಿ ಮಹೇಶ ವಾಳ್ವೇಕರ್ ನೇಮಕಗೊಂಡಿದ್ದಾರೆ.
ನಾಳೆ ಬೆಳಿಗ್ಗೆ 10:30ಕ್ಕೆ ರಾಜ್ಯಭವನದಲ್ಲಿ ರಾಜ್ಯಪಾಲ ಥಾವರಚಂದ ಗೆಹ್ಲೋಟ್ ಅವರು ಈ ಮೂರು ಜನ ರಾಜ್ಯ ಮಾಹಿತಿ ಆಯುಕ್ತರಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ ಎಂದು ತಿಳಿಸಲಾಗಿದೆ.
ರಾಯಚೂರಿನ ಹಿರಿಯ ಪತ್ರಕರ್ತರಾಗಿರುವ ಬಿ.ವೆಂಕಟಸಿಂಗ್ ಅವರು ಕಲ್ಯಾಣ ಕರ್ನಾಟಕ ಭಾಗದವರಾಗಿ ರಾಜ್ಯದ ಮಾಹಿತಿ ಆಯೋಗದ ಆಯುಕ್ತರಾದ ಕಿರ್ತಿ ಸಲ್ಲುತ್ತದೆ. ದೂರದರ್ಶನ, ಆಕಾಶವಾಣಿಯ ವರದಿಗಾರರಾಗಿಯೂ ಕಳೆದ 36 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ಅವರು, ಎರಡು ಬಾರಿ ಮಾಧ್ಯಮ ಅಕಾಡೆಮಿ, ಮಾಧ್ಯಮ ಮಾನ್ಯತಾ ಸಮಿತಿ ಸದಸ್ಯರಾಗಿ ಒಂದು ಬಾರಿ ಸೇವೆ ಸಲ್ಲಿಸಿದ್ದಾರೆ.
ಅವರು ಮಾಧ್ಯಮ ಆಕಾಡೆಮಿ ಪ್ರಶಸ್ತಿ ಪುರಸ್ಕೃತರಾಗಿ, ಜಿಲ್ಲಾ ಕಾರ್ಯನಿರತ ಪತ್ರಕರ್ತ ಸಂಘದ ರಾಜ್ಯ ಸಮಿತಿಯ ಎರಡು ಅವಧಿಗೆ ಕಾರ್ಯದರ್ಶಿಯಾಗಿ, ಸದಸ್ಯರಾಗಿ ಎರಡು ಬಾರಿ, ಜಿಲ್ಲಾ ಅಧ್ಯಕ್ಷರಾಗಿ ಎರಡು ಬಾರಿ, ರಿಪೋರ್ಟ್ರಸ್ಸ್ ಗಿಲ್ಡ್ ಅಧ್ಯಕ್ಷರಾಗಿ ಎರಡು ಬಾರಿ ಹಾಗೂ ಅಖಿಲ ಭಾರತ ಮಟ್ಟದ ಐಎಫ್ ಡಬ್ಲುಜೆ ಪತ್ರಕರ್ತರ ಸಂಘಕ್ಕೆ ಎರಡು ಬಾರಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಜಿಲ್ಲೆಯ ಅನೇಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ವರದಿಗಳನ್ನು ಮಾಡಿ ಸಂಬಂಧಿಸಿದ ಇಲಾಖೆ, ಸಚಿವರ ಗಮನಕ್ಕೂ ತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.