ಆರೆಸ್ಸೆಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಪತ್ರ | ಉತ್ತರಾಧಿಕಾರಿ ಎಂದು ಬಿಂಬಿಸಲು ಸಿಎಂ ಹೊಸ ನಾಟಕ : ಆರ್.ಅಶೋಕ್
ಬೆಂಗಳೂರು, ಅ.16 : ‘ಪ್ರಿಯಾಂಕ್ ಖರ್ಗೆ ಅವರನ್ನು ಉತ್ತರಾಧಿಕಾರಿ ಎಂದು ಬಿಂಬಿಸಲು ಸಿಎಂ ಸಿದ್ದರಾಮಯ್ಯ ಹೊಸ ನಾಟಕ ಆಡಿಸುತ್ತಿದ್ದಾರಾ?. ಪ್ರಿಯಾಂಕ್ ಮೇಲಿಂದ ಮೇಲೆ ಸಿಎಂಗೆ ಆರೆಸ್ಸೆಸ್ ವಿರುದ್ಧ ಪತ್ರ ಬರೆಯುತ್ತಿರುವುದು, ಪದೇ ಪದೇ ಆರೆಸ್ಸೆಸ್ ಬಗ್ಗೆ ನಿಂದನೀಯ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡುತ್ತಿದ್ದರೆ, ಕಾಂಗ್ರೆಸ್ ಕ್ರಾಂತಿಯ ರೇಸ್ನಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಓವರ್ ಟೇಕ್ ಮಾಡಿ ತಾವೇ ಸಿಎಂ ಹುದ್ದೆಗೆ ಏರುವ ಕನಸು ಕಾಣುತ್ತಿರುವಂತಿದೆ’ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಗುರುವಾರ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ಹೀಗಿದ್ದರೂ ಡಿಸಿಎಂ ಡಿ.ಕೆ.ಶಿವಕುಮಾರ್ ಸದನದಲ್ಲಿ ಸಂಘ ಗೀತೆ ಹಾಡಿ, ಇಶಾ ಫೌಂಡೇಶನ್ನ ಶಿವರಾತ್ರಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಕುಂಭಮೇಳಕ್ಕೆ ಹೋಗಿ, ಸಂಸ್ಕೃತ ಶ್ಲೋಕಗಳನ್ನು ಹೇಳುವ ಮೂಲಕ ಕಾಂಗ್ರೆಸ್ ಹೈಕಮಾಂಡ್ಗೆ ಮುಜುಗರವನ್ನುಂಟು ಮಾಡುತ್ತಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಡಿ.ಕೆ.ಶಿವಕುಮಾರ್ ಕಾಂಗ್ರೆಸ್ ಪಕ್ಷದ ಸಿದ್ಧಾಂತದ ಬಗ್ಗೆ ಬದ್ಧತೆ ಇಲ್ಲ ಎನ್ನುವ ಹಣೆಪಟ್ಟಿ ಕಟ್ಟಿ ಪ್ರಿಯಾಂಕ್ ಖರ್ಗೆಯವರೇ ಕಟ್ಟರ್ ಆರೆಸ್ಸೆಸ್ ವಿರೋಧಿ ಎಂದು ಬಿಂಬಿಸುವ ಮೂಲಕ ಅವರನ್ನು ಉತ್ತರಾಧಿಕಾರಿ ಮಾಡುವ ಚಾಣಾಕ್ಷ ತಂತ್ರಗಾರಿಕೆಯನ್ನು ಸಿಎಂ ಸಿದ್ದರಾಮಯ್ಯ ಮಾಡಿದಂತೆ ಕಾಣುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.
‘ಒಂದು ಕಡೆ ಡಿ.ಕೆ.ಶಿವಕುಮಾರ್ ಅವರು "A symbol of loyality" ಎನ್ನುವ ಪುಸ್ತಕ ಬರೆಸಿ ತಮ್ಮ ಹೈಕಮಾಂಡ್ ನಿಷ್ಠೆಯನ್ನು ನಿರೂಪಿಸಿ ಅವರ ಆಸೆ ಈಡೇರಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದು ಕಡೆ ಸಿಎಂ ಸಿದ್ದರಾಮಯ್ಯ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಬೇರೆಯದೇ ನಾಟಕ ಆಡುತ್ತಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಕ್ರಾಂತಿಯ ಅಂತಿಮಘಟ್ಟ ರಣರೋಚಕವಾಗಿರುವುದಂತೂ ಗ್ಯಾರೆಂಟಿ’ ಎಂದು ಅವರು ಟೀಕಿಸಿದ್ದಾರೆ.