×
Ad

‘ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಶಿರಾದಲ್ಲಿ ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ ನಿರ್ಧಾರ’

Update: 2025-09-17 22:36 IST

ಟಿ.ಬಿ.ಜಯಚಂದ್ರ 

ಬೆಂಗಳೂರು, ಸೆ.17: ರಾಜ್ಯ ಸರಕಾರದ ದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ನೇತೃತ್ವದಲ್ಲಿ ಬುಧವಾರ ವಿಧಾನಸೌಧದಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ತುಮಕೂರು ಜಿಲ್ಲೆಯ ಶಿರಾ ವಿಧಾನಸಭಾ ಕ್ಷೇತ್ರದ ಭುವನಹಳ್ಳಿ ಸಮೀಪ ಹೆರಿಟೇಜ್ ಪಾರ್ಕ್ ನಿರ್ಮಾಣ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

ಭುವನಹಳ್ಳಿ ಸಮೀಪ ಸರಕಾರಕ್ಕೆ ಸೇರಿರುವ 811 ಎಕರೆ ಜಮೀನು ಇದೆ. ಈ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ವರ್ಗಾಯಿಸಿ ಕೊಡುವುದಾಗಿ ಟಿ.ಬಿ.ಜಯಚಂದ್ರ ಇದೇ ವೇಳೆ ತಿಳಿಸಿದರು. ತುಮಕೂರು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಿ ಈ ಜಮೀನನ್ನು ಪ್ರವಾಸೋದ್ಯಮ ಇಲಾಖೆಗೆ ತ್ವರಿತವಾಗಿ ವರ್ಗಾಯಿಸಲು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ನಿರ್ಧರಿಸಲಾಯಿತು.

ಹೆರಿಟೇಜ್ ಪಾರ್ಕ್ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಗ್ರ ಯೋಜನಾ ವರದಿಯನ್ನು ತಯಾರಿಸಲು ನಿರ್ಧರಿಸಲಾಯಿತು. ಗುಜರಾತ್ ರಾಜ್ಯದಲ್ಲಿರುವ ಏಕತಾ ನಗರ್, ರಾಜಸ್ಥಾನದ ಜೈಪುರದಲ್ಲಿರುವ ಚೌಕಿದಾನಿ, ಒಡಿಶಾದ ಕೋನಾರ್ಕ್ ದೇವಾಲಯ ಸೇರಿದಂತೆ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ ನಿರ್ಮಾಣ ಮಾಡಿರುವ ಹೆರಿಟೇಜ್ ಪಾರ್ಕ್ ಗಳಿಗೆ ಭೇಟಿ ಮಾಡಿ ಅಧ್ಯಯನ ಮಾಡಿ ಸಮಗ್ರ ಯೋಜನಾ ವರದಿ ತಯಾರಿಸಿ ಕೊಡುವುದಾಗಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ತಿಳಿಸಿದರು.

ಶಿರಾ ನಗರಕ್ಕೆ 1500 ವರ್ಷಗಳ ಇತಿಹಾಸವಿದ್ದು ನಾಲ್ಕು ರಾಷ್ಟ್ರೀಯ ಹೆದ್ದಾರಿಗಳು ಹಾದುಹೋಗಿವೆ. ರೈಲ್ವೆ ನಿಲ್ದಾಣವು ಭುವನಹಳ್ಳಿ ಸಮೀಪವೆ ನಿರ್ಮಾಣವಾಗುತ್ತಿದೆ. ರಾಜಧಾನಿ ಬೆಂಗಳೂರಿಗೆ 150 ಕಿ.ಮೀ ದೂರದಲ್ಲಿರುವ ಶಿರಾದಲ್ಲಿ ಅಂತರ್‍ರಾಷ್ಟ್ರೀಯ ಮಟ್ಟದ ಹೆರಿಟೇಜ್ ಪಾರ್ಕ್ ನಿರ್ಮಾಣ ಮಾಡಿ ಪ್ರವಾಸಿಗರನ್ನು ಆಕರ್ಷಿಸಲು ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಜಯಚಂದ್ರ ಸೂಚಿಸಿದರು.

ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಪ್ರವಾಸೋದ್ಯಮ ಕ್ಷೇತ್ರ ಅಭಿವೃದ್ಧಿ ಮಾಡಲು ಹಲವಾರು ಉದ್ಯಮಿಗಳು ಮುಂದೆ ಬಂದಿದ್ದು ಬಂಡವಾಳ ಹೂಡಲಿದ್ದಾರೆ ಎಂದು ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಇದೇ ವೇಳೆ ಜಯಚಂದ್ರ ಅವರ ಗಮನ ಸೆಳೆದರು. ಹೆರಿಟೇಜ್ ಪಾರ್ಕ್‍ನ ಸಮಗ್ರ ಯೋಜನಾ ವರದಿ ಸಿದ್ದವಾದ ಮೇಲೆ ಉದ್ಯಮಿಗಳ ಸಭೆ ಕರೆದು ಮುಂದಿನ ರೂಪರೇಷೇಗಳನ್ನು ಸಿದ್ಧಪಡಿಸಲು ಸಭೆ ನಿರ್ಧರಿಸಿತು.

ಈ ಸಭೆಯಲ್ಲಿ ಪ್ರವಾಸೋದ್ಯಮ ಇಲಾಖೆ ಆಯುಕ್ತಾ ಅಕ್ರಮ್ ಪಾಷ, ಜಂಟಿ ಆಯುಕ್ತ ಶ್ರೀನಿವಾಸ ಎಚ್.ಎಂ., ಜಂಟಿ ನಿರ್ದೇಶಕ ಅನುಪಮ, ಸಹಾಯಕ ನಿರ್ದೇಶಕರಾದ ಸಂಜೀವ್ ಕುಮಾರ್, ವಿನೋದ್ ಕುಮಾರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News