ಎಐಸಿಸಿ ಪರಿಶಿಷ್ಟ ವಿಭಾಗದ ರಾಷ್ಟ್ರೀಯ ಸಂಯೋಜಕರಾಗಿ ಡಾ. ಆನಂದ್ ಕುಮಾರ್, ಜಕ್ಕಪ್ಪನವರ್ ನೇಮಕ
ಡಾ. ಆನಂದ್ ಕುಮಾರ್
ಬೆಂಗಳೂರು: ಅಖಿಲ ಭಾರತ ಕಾಂಗ್ರೆಸ್ ಸಮಿತಿ(ಎಐಸಿಸಿ)ಯ ಪರಿಶಿಷ್ಟ ವಿಭಾಗವನ್ನು ವಿಸ್ತರಿಸಿದ್ದು, ಪಕ್ಷದ ವಿವಿಧ ಘಟಕಗಳು, ರಾಜ್ಯಗಳಿಗೆ ಹೊಸದಾಗಿ 45 ಮಂದಿಯನ್ನು ರಾಷ್ಟ್ರೀಯ ಸಂಯೋಜಕರನ್ನು ನೇಮಿಸಲಾಗಿದೆ.
ಕರ್ನಾಟಕದಿಂದ ವಿಧಾನ ಪರಿಷತ್ ಸದಸ್ಯ ಎಫ್.ಎಚ್.ಜಕ್ಕಪ್ಪನವರ್, ಕೆಪಿಸಿಸಿ ಕಾರ್ಯದರ್ಶಿ ಡಾ. ಆನಂದ ಕುಮಾರ್ ಅವರನ್ನು ಮಹಾರಾಷ್ಟ್ರದ ಸಂಯೋಜಕರನ್ನಾಗಿ ನೇಮಿಸಿ ಮಹಾರಾಷ್ಟ್ರದ ಉಸ್ತುವಾರಿ ನೀಡಿ ಎಐಸಿಸಿ ಪರಿಶಿಷ್ಟ ವಿಭಾಗದ ಅಧ್ಯಕ್ಷ ರಾಜೇಂದ್ರ ಪಾಲ್ ಗೌತಮ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ದಲಿತ ಚಳವಳಿಯ ಮಂಚೂಣಿ ನಾಯಕರಾಗಿ ಗುರುತಿಸಿಕೊಂಡಿರುವ ಜಕ್ಕಪ್ಪನವರ್ ಹಾಗೂ ಪರಿಶಿಷ್ಟರ ಪರ ಹೋರಾಟ ಮಾಡುತ್ತಿರುವ ಡಾ.ಆನಂದ್ ಕುಮಾರ್ ಅವರಿಗೆ ಮಹಾರಾಷ್ಟ್ರದಲ್ಲಿ ದಲಿತ ಸಮುದಾಯದ ಸಂಘಟನೆಯಲ್ಲಿ ಸಮನ್ವಯಕಾರರಾಗಿ ಕಾರ್ಯನಿರ್ವಹಿಸುವಂತೆ ಸೂಚಿಸಿ ಜವಾಬ್ದಾರಿ ವಹಿಸಲಾಗಿದೆ.
ದಲಿತ ಸಮುದಾಯಕ್ಕೆ ಸಂಬಂಧಪಟ್ಟ ವಿಷಯದಲ್ಲಿ ಸಾಮಥ್ರ್ಯದ ಮೂಲಕ ಸಂಘಟನೆ ಮಾಡಬೇಕು. ಜೊತೆಗೆ, ಶೋಷಿತರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತಿ ಪರಿಶಿಷ್ಟರನ್ನು ಪಕ್ಷದತ್ತ ಸೆಳೆಯಲು ಸೂಕ್ತ ಕಾರ್ಯತಂತ್ರ ರೂಪಿಸಬೇಕು. ತಿಂಗಳಿಗೊಮ್ಮೆ ತಮ್ಮ ಕಾರ್ಯಚಟುವಟಿಕೆ ಬಗ್ಗೆ ಎಐಸಿಸಿಗೆ ವರದಿ ನೀಡಬೇಕು ಎಂದು ರಾಜೇಂದ್ರಪಾಲ್ ಗೌತಮ್ ಸೂಚಿಸಿದ್ದಾರೆ.
ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಡಾ.ಆನಂದ್ ಕುಮಾರ್, ‘ತಮಗೆ ಪಕ್ಷ ವಹಿಸಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಹಿರಿಯ ಮುಖಂಡರಾದ ಸೋನಿಯಾಗಾಂಧಿ ಸೇರಿದಂತೆ ಪಕ್ಷದ ಮುಖಂಡರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.