‘ಜಾತಿ ಗಣತಿ ಮಾಡಿಸಿಯೇ ತೀರುತ್ತೇವೆ’ ಇದು ಕಾಂಗ್ರೆಸ್ ಪಕ್ಷದ ಸಂಕಲ್ಪ : ಅಶೋಕ್ ಗೆಹ್ಲೋಟ್
ಬೆಂಗಳೂರು : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಒತ್ತಡಕ್ಕೆ ಮಣಿದು ಕೇಂದ್ರ ಸರಕಾರವು ಘೋಷಿಸಿರುವ ಜಾತಿ ಗಣತಿ ಸಮೀಕ್ಷೆಯನ್ನು ಮಾಡಲೇಬೇಕು. ಇದು ನಮ್ಮ ಪಕ್ಷದ ಸಂಕಲ್ಪ, ಬದ್ಧತೆಯಾಗಿದೆ ಎಂದು ರಾಜಸ್ಥಾನದ ಮಾಜಿ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ತಿಳಿಸಿದರು.
ಮಂಗಳವಾರ ನಗರದ ಕ್ವೀನ್ಸ್ ರಸ್ತೆಯಲ್ಲಿರುವ ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಎಐಸಿಸಿ ಹಿಂದುಳಿದ ವರ್ಗಗಳ ಘಟಕದ ಸಲಹಾ ಮಂಡಳಿಯ ಮೊದಲನೆ ಸಭೆಯ ಬಳಿಕ ನಡೆದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಅವರು ಮಾತನಾಡಿದರು.
ದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ.90ರಷ್ಟು ಪಾಲು ಹೊಂದಿರುವ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗಗಳಿಗೆ ವ್ಯವಸ್ಥೆಯ ಎಲ್ಲ ಸ್ತರಗಳಲ್ಲಿಯೂ ಸಮಾನ ಅವಕಾಶಗಳು ಸಿಗಬೇಕು. ಆದುದರಿಂದಲೇ, ಯಾರ ಜನಸಂಖ್ಯೆ ಎಷ್ಟಿದೆಯೇ ಅವರಿಗೆ ಅಷ್ಟು ಪ್ರಮಾಣದಲ್ಲಿ ಅವಕಾಶಗಳು ಸಿಗಬೇಕು ಎಂದು ರಾಹುಲ್ ಗಾಂಧಿ ಒಂದು ಅಭಿಯಾನ ಆರಂಭಿಸಿದ್ದಾರೆ ಎಂದು ಅವರು ತಿಳಿಸಿದರು.
ಸರಕಾರದ ಸಚಿವಾಲಯಗಳು, ನ್ಯಾಯಾಂಗ, ಮಾಧ್ಯಮಗಳು ಸೇರಿದಂತೆ ಎಲ್ಲ ವಲಯಗಳಲ್ಲಿ ಒಬಿಸಿಗಳಿಗೆ ಎಷ್ಟು ಪ್ರಮಾಣದಲ್ಲಿ ಅವಕಾಶಗಳು ಸಿಕ್ಕಿವೆ ಎಂಬುದನ್ನು ದೇಶದ ಮುಂದೆ ಇರಿಸಬೇಕಿದೆ. ಸ್ವಾತಂತ್ರ್ಯ ಸಿಕ್ಕಿ 75 ವರ್ಷವಾದರೂ ನಮ್ಮ ಸಮಾಜದಲ್ಲಿ ಇನ್ನೂ ಅಸ್ಪೃಶ್ಯತೆ ಜೀವಂತವಾಗಿದೆ. ಮನುಷ್ಯ, ಮತ್ತೊಬ್ಬ ಮನುಷ್ಯನ್ನು ಮುಟ್ಟಲು ಹಿಂಜರಿಯುವಂತಹ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅಶೋಕ್ ಗೆಹ್ಲೋಟ್ ಹೇಳಿದರು.
ದಲಿತ ವರ್ಗದವರು, ಆದಿವಾಸಿಗಳು, ಒಬಿಸಿಗಳ ಸಮಸ್ಯೆಗಳು ಬೇರೆ ಬೇರೆ ರಾಜ್ಯಗಳಲ್ಲಿ ಬೇರೆ ಬೇರೆ ರೀತಿಯಿವೆ. ಹಿಂದುಳಿದ ವರ್ಗಗಳು ರಾಷ್ಟ್ರ ನಿರ್ಮಾಣದಲ್ಲಿ ತೊಡಗಿವೆ. ಆದರೆ, ಅವರಿಗೆ ಅಗತ್ಯವಿರುವ ಅವಕಾಶಗಳು ಸಿಗದಂತೆ ಆಗಿದೆ. ಆದುದರಿಂದ, ಈ ಜಾತಿ ಗಣತಿಯಲ್ಲಿ ಅವರ ಪರಿಸ್ಥಿತಿ ತಿಳಿಯಲಿದೆ. ಅವರ ಕಲ್ಯಾಣಕ್ಕಾಗಿ ಏನೆಲ್ಲ ಮಾಡಬಹುದು ಎಂಬುದರ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಅವರು ತಿಳಿಸಿದರು.
ಬಿಹಾರದಲ್ಲಿ ಮೊದಲು ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಲಾಯಿತು. ಈಗ ಅಲ್ಲಿ ಚುನಾವಣೆ ಬರಲಿದೆ. ಕೇಂದ್ರ ಸರಕಾರ ಒಬಿಸಿಗಳಿಗೆ ಕಣ್ಣೊರೆಸುವ ತಂತ್ರವಾಗಿ ಜಾತಿ ಗಣತಿ ಮಾಡುವ ನಿರ್ಧಾರವನ್ನು ಬಳಸಿಕೊಳ್ಳಬಾರದು. ವಾಸ್ತವವಾಗಿ ಜಾತಿ ಗಣತಿ ಆಗಲೇಬೇಕು. ಅದನ್ನು ನಾವು ಮಾಡಿಸಿಯೇ ತೀರುತ್ತೇವೆ ಎಂದು ಅಶೋಕ್ ಗೆಹ್ಲೋಟ್ ತಿಳಿಸಿದರು.
ಎಐಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಹಾಗೂ ಸಲಹಾ ಮಂಡಳಿಯ ಸಂಚಾಲಕ ಡಾ.ಅನಿಲ್ ಜೈಹಿಂದ್ ಮಾತನಾಡಿ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಎಐಸಿಸಿ ಒಬಿಸಿ ಸಲಹಾ ಮಂಡಳಿಯ ಮೊದಲನೆ ಸಭೆ ನಡೆಸಲಾಗಿದೆ. ನಮ್ಮ ಪಕ್ಷದ ಹಿರಿಯ ನಾಯಕರು ಈ ಮಂಡಳಿಯ ಸದಸ್ಯರಾಗಿದ್ದಾರೆ. ಹಲವು ವಿಚಾರಗಳ ಬಗ್ಗೆ ನಾವು ಚರ್ಚೆಗಳನ್ನು ಮಾಡಿದ್ದೇವೆ. ಬುಧವಾರ ನಡೆಯಲಿರುವ ಸಮಾರೋಪ ಸಭೆಯ ಬಳಿಕ ಎರಡು ದಿನಗಳ ಕಾಲ ನಡೆದಿರುವ ಚರ್ಚೆಗೆ ಸಂಬಂಧಿಸಿದ ನಿರ್ಣಯಗಳನ್ನು ಪ್ರಕಟಿಸಲಾಗುವುದು ಎಂದು ಹೇಳಿದರು.
ಎಐಸಿಸಿ ಒಬಿಸಿ ಸಲಹಾ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಇಂದು ನಡೆದ ಸಭೆಯು ಅಪೂರ್ಣವಾಗಿದೆ. ನಾಳೆ ಇನ್ನೂ ಹಲವಾರು ವಿಷಯಗಳ ಬಗ್ಗೆ ಚರ್ಚೆ ಮಾಡಲಿದ್ದೇವೆ. ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಏನೆಲ್ಲ ಮಾಡಬಹುದು ಎಂಬುದರ ಕುರಿತು ನಾವು ಪ್ರಸ್ತಾವ ಮಾಡಿದ್ದೇವೆ ಎಂದು ಹೇಳಿದರು.
ಬಿಜೆಪಿ ಯಾವತ್ತೂ ಕೂಡ ಮೀಸಲಾತಿ, ಸಾಮಾಜಿಕ ನ್ಯಾಯದ ಪರವಾಗಿ ಇರಲಿಲ್ಲ. ನಾವು ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿಗೆ ಆದ್ಯತೆ ನೀಡುತ್ತೇವೆ. ಕಾಂಗ್ರೆಸ್ ನವರು ಸಾಮಾಜಿಕ ನ್ಯಾಯ ಒದಗಿಸಲು ಮುಂದಾದ ಸಂದರ್ಭದಲ್ಲೆಲ್ಲ ಬಿಜೆಪಿಯವರು ವಿರೋಧಿಸಿರುವುದಕ್ಕೆ ಇತಿಹಾಸದಲ್ಲಿನ ಅನೇಕ ಘಟನೆಗಳೆ ಸಾಕ್ಷಿಯಾಗಿವೆ. ಜನಸಂಖ್ಯೆಗೆ ಅನುಗುಣವಾಗಿ ಹಿಂದುಳಿದ ವರ್ಗಗಳಿಗೆ ನ್ಯಾಯ ಕಲ್ಪಿಸಿಕೊಡುವ ಬದ್ಧತೆಯನ್ನು ಹೇಗೆ ಅನುಷ್ಠಾನ ಮಾಡಬಹುದು ಎಂಬುದರ ಕುರಿತು ಚರ್ಚೆಗಳನ್ನು ನಡೆಸುತ್ತೇವೆ ಎಂದು ಅವರು ಹೇಳಿದರು.
ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ಮಾತನಾಡಿ, ದೇಶದಲ್ಲಿ ಹಿಂದುಳಿದವರ ಅಭಿವೃದ್ಧಿ ಹಾಗೂ ಏಳಿಗೆಗಾಗಿ ಯಾವ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂಬುದರ ಬೇರೆ ಬೇರೆ ರಾಜ್ಯಗಳಲ್ಲಿ ನಾಯಕರು ವಿಷಯಗಳನ್ನು ಪ್ರಸ್ತಾವಿಸಿದ್ದಾರೆ. ಅದರ ಜೊತೆಗೆ ಜಾತಿ ಗಣತಿ ಕುರಿತು ಚರ್ಚೆಗಳನ್ನು ಮಾಡಿದ್ದೇವೆ. ರಾಜಸ್ಥಾನದ ಮುಖ್ಯಮಂತ್ರಿಯಾಗಿದ್ದ ಅಶೋಕ್ ಗೆಹ್ಲೋಟ್, ಪಾಂಡಿಚೇರಿಯ ಮುಖ್ಯಮಂತ್ರಿಯಾಗಿದ್ದ ನಾರಾಯಣಸ್ವಾಮಿ, ನಮ್ಮ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ನಾಯಕರು ಈ ಸಭೆಯಲ್ಲಿ ಮಾತನಾಡಿದ್ದಾರೆ ಎಂದು ಹೇಳಿದರು.
ಹಿಂದುಳಿದ ವರ್ಗಗಳು ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಯಾವ ಸ್ಥಿತಿಯಲ್ಲಿದ್ದಾರೆ ಎಂಬುದರ ಕುರಿತು ಚರ್ಚಿಸಿ, ಸುಮಾರು ಮೂರು ನಿರ್ಣಯಗಳನ್ನು ಅಂಗೀಕರಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ, ವಿ.ಹನುಮಂತ ರಾವ್, ಸಂಸದರಾದ ಅಡೂರು ಪ್ರಕಾಶ್, ಜ್ಯೋತಿ ಮಣಿ ಮತ್ತಿತರರು ಭಾಗವಹಿಸಿದ್ದರು.