ವಿಪ್ರೋ ಕ್ಯಾಂಪಸ್ನಲ್ಲಿ ಸೀಮಿತ ಸಂಚಾರಕ್ಕೆ ಅನುಮತಿಸಲು ಕೋರಿ ಸಿಎಂ ಪತ್ರ; ಮನವಿ ತಿರಸ್ಕರಿಸಿದ ಅಝೀಂ ಪ್ರೇಮ್ಜಿ
ಅಜೀಂ ಪ್ರೇಮ್ಜಿ (Photo: PTI)
ಬೆಂಗಳೂರು: ವಿಪ್ರೊ ಕಂಪನಿಯ ಸರ್ಜಾಪುರ ಕ್ಯಾಂಪಸ್ ಮೂಲಕ ಸೀಮಿತ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ವಿಪ್ರೊ ಸಂಸ್ಥಾಪಕ ಅಝೀಂ ಪ್ರೇಮ್ಜಿ ತಿರಸ್ಕರಿಸಿದ್ದಾರೆ.
ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ (ಒಆರ್ಆರ್) ಉಂಟಾಗುವ ತೀವ್ರ ಸಂಚಾರ ದಟ್ಟಣೆ ಸಮಸ್ಯೆಗೆ ಪರಿಹಾರವಾಗಿ ವಿಪ್ರೊ ಕಂಪನಿಯ ಸರ್ಜಾಪುರ ಕ್ಯಾಂಪಸ್ನ ಮೂಲಕ ವಾಹನ ಸಂಚಾರಕ್ಕೆ ಅವಕಾಶ ನೀಡುವಂತೆ ಸಿಎಂ ಮನವಿ ಮಾಡಿದ್ದರು.
ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಅಝೀಂ ಪ್ರೇಮ್ಜಿ, ಆಡಳಿತ ಮತ್ತು ಶಾಸನಬದ್ಧ ತೊಡಕುಗಳನ್ನು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಪತ್ರದಲ್ಲೇನಿದೆ?
“ಖಾಸಗಿ ಆಸ್ತಿಯಾಗಿರುವ ಸರ್ಜಾಪುರ ಕ್ಯಾಂಪಸ್, ಜಾಗತಿಕ ಗ್ರಾಹಕರಿಗೆ ಸೇವೆ ಒದಗಿಸುವ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್)ದ ಭಾಗವಾಗಿದೆ. ಒಪ್ಪಂದದ ಷರತ್ತುಗಳು ಕಟ್ಟುನಿಟ್ಟಾದ ಪ್ರವೇಶ ನಿಯಂತ್ರಣವನ್ನು ಕಡ್ಡಾಯಗೊಳಿಸುತ್ತವೆ. ಕ್ಯಾಂಪಸ್ನಲ್ಲಿ ಸಾರ್ವಜನಿಕ ವಾಹನ ಸಂಚಾರಕ್ಕೆ ಅವಕಾಶ ನೀಡುವುದು ಸುಸ್ಥಿರ ಅಥವಾ ದೀರ್ಘಕಾಲೀನ ಪರಿಹಾರವಾಗಲಾರದು. ಆದರೂ, ಬೆಂಗಳೂರಿನ ಸಂಚಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ವಿಪ್ರೊ ಕಂಪನಿಯು ರಾಜ್ಯ ಸರ್ಕಾರದೊಂದಿಗೆ ಸಹಕರಿಸಲು ಸಿದ್ಧವಿದೆ. ಈ ಸಂಕೀರ್ಣ ಸಮಸ್ಯೆಗೆ ಒಂದೇ ಪರಿಹಾರ ಸಾಧ್ಯವಿಲ್ಲ. ನಗರ ಸಾರಿಗೆ ನಿರ್ವಹಣೆ ತಜ್ಞರ ನೇತೃತ್ವದಲ್ಲಿ ಸಮಗ್ರ ವೈಜ್ಞಾನಿಕ ಅಧ್ಯಯನವೊಂದನ್ನು ಕೈಗೊಳ್ಳಬೇಕು" ಎಂದು ಅಝೀಂ ಪ್ರೇಮ್ಜಿ ಸಿಎಂಗೆ ಬರೆದ ಪತ್ರದಲ್ಲಿ ಸೂಚಿಸಿದ್ದಾರೆ.