×
Ad

ಆರೆಸ್ಸೆಸ್ ತಾಲಿಬಾನ್ ಸಂಘಟನೆಗಿಂತಲೂ ಹೆಚ್ಚು ಅಪಾಯಕಾರಿ : ಬಿ.ಕೆ.ಹರಿಪ್ರಸಾದ್

"ಧರ್ಮದ ಅಫೀಮನ್ನು ಯುವಜನರಲ್ಲಿ ತುಂಬುವ, ಸಮಾಜದ ವಿಚ್ಛಿದ್ರಕಾರಿ ಸಂಘಟನೆ ಆರೆಸ್ಸೆಸ್"

Update: 2025-08-17 18:58 IST

ಬೆಂಗಳೂರು, ಆ.17: ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವಿ, ಧರ್ಮದ ಅಫೀಮನ್ನು ಯುವಜನರಲ್ಲಿ ತುಂಬುವ, ಸಮಾಜದ ವಿಚ್ಛಿದ್ರಕಾರಿ ಸಂಘಟನೆ ಆರೆಸ್ಸೆಸ್, ತಾಲಿಬಾನ್ ಸಂಘಟನೆಗಿಂತಲೂ ಹೆಚ್ಚು ಅಪಾಯಕಾರಿ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.

ರವಿವಾರ ಈ ಸಂಬಂಧ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿರುವ ಅವರು, ನನ್ನ ಸುಧೀರ್ಘ ರಾಜಕೀಯ ಜೀವನದಲ್ಲಿ ಸಂಘ ಪರಿವಾರದ ಆಳ ಅಗಲ ಅಷ್ಟೇ ಅಲ್ಲ, ಅದರ ಸುತ್ತಳತೆಯನ್ನೂ ಬಲ್ಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರನ್ನು ಉಲ್ಲೇಖಿಸಿ ತಿಳಿಸಿದ್ದಾರೆ.

ಆರೆಸ್ಸೆಸ್ ನೂರು ವರ್ಷಗಳಲ್ಲಿ ನಡೆಸಿರುವ ಸಮಾಜ ಸೇವೆಯ ಎಣಿಕೆಯ ಲೆಕ್ಕ ನಂತರ ಕೊಡುವಿರಂತೆ, ಸಂಘ ನಡೆಸಿದ ಸಮಾಜ ಘಾತುಕ ಕೃತ್ಯಗಳ ದಾಖಲೆಗಳೆ ಹೇಳುವ ಲೆಕ್ಕಾ ಗೊತ್ತಾ? ಸಮಾಜ ಸೇವೆ ಎಂಬುವುದು ಕೇವಲ ಮುಖವಷ್ಟೇ, ಅದರ ಹಿಂದಿನ ಮುಖವಾಡಗಳು ಸಂವಿಧಾನಬಾಹಿರ ಚಟುವಟಿಕೆಗಳಿಗೆ ಲೆಕ್ಕವಿಲ್ಲ. ಅಗೆದಷ್ಟು, ಬಗೆದಷ್ಟು ಕರಾಳವಾಗಿದೆ ಎಂದು ಹರಿಪ್ರಸಾದ್ ಹೇಳಿದ್ದಾರೆ.

ಆರೆಸ್ಸೆಸ್ ಶಾಖೆಯಲ್ಲಿ ಮಾತ್ರ ಪ್ರವೇಶ ಇರುವ ವಿಜಯೇಂದ್ರ ಅವರೆ ಸಂಘವನ್ನು ಸಮರ್ಥಿಸುವ ಮೊದಲು ನನ್ನ ಪ್ರಶ್ನೆಗೆ ಉತ್ತರಿಸುವ ಧೈರ್ಯ ಮಾಡಿ. ಮೂಲಭೂತವಾಗಿ ಆರೆಸ್ಸೆಸ್ ಎನ್ನುವುದು ಏನು? ಅದೊಂದು ಸಾಂಸ್ಕೃತಿಕ ಸಂಘಟನೆಯೇ? ಸಾಮಾಜಿಕ ಸೇವಾ ಸಂಸ್ಥೆಯೆ? ಸಾರ್ವಜನಿಕ ದತ್ತಿಯೆ? ಗುಪ್ತ ರಾಜಕೀಯ ಉದ್ದೇಶ ಹೊಂದಿರುವ ಕಾರ್ಯಕರ್ತರ ಕೂಟವೇ? ಇಲ್ಲವೇ, ಕೇವಲ ಹಿಂದೂ ಸಂಘಟನೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಸಮಾಜ ಸೇವೆಯ ಮುಖ ಹೊತ್ತಿರುವ ಆರೆಸ್ಸೆಸ್ ನೊಂದಣಿ ಸಂಘಟನೆಯೇ? ಜಗತ್ತಿನಲ್ಲೆ ಅತ್ಯಂತ ಶ್ರೀಮಂತ ಸಂಘಟನೆಯ ಹಣದ ಮೂಲ ಯಾವುದು? ಜನರು ನೀಡುವ ದೇಣಿಗೆಯ ಲೆಕ್ಕಪತ್ರ ಒಮ್ಮೆಯಾದರೂ ಬಹಿರಂಗಗೊಳಿಸಿದ್ದೀರಾ? ಚೆಕ್ ಮೂಲಕ ಲಂಚ ಪಡೆಯುವ ನಿಮಗೆ ಸಂಘದ ಲೆಕ್ಕಪತ್ರ ಕೇಳುವ ಧೈರ್ಯ ಎಲ್ಲಿಂದ ಬರಬೇಕು ಬಿಡಿ ಎಂದು ಹರಿಪ್ರಸಾದ್ ಟೀಕಿಸಿದ್ದಾರೆ.

ಹಿಂದೂ ನಾವೆಲ್ಲ ಒಂದು ಎನ್ನುತ್ತಲೇ ಚಾತುರ್ವರ್ಣ ವ್ಯವಸ್ಥೆಯನ್ನು ಪಾಲಿಸುವ ಸಂಘಕ್ಕೆ ಹಿಂದೂ ಎನ್ನುವುದು ಕೇವಲ ರಾಜಕೀಯದ ಲಾಭ ಪಡೆಯಲು ಬಳಸುವ ಆಯುಧ ಅಷ್ಟೇ. ನಮಗೆ ರಾಜಕೀಯ ಎದುರಾಳಿ ಬಿಜೆಪಿ ಅಲ್ಲವೇ ಅಲ್ಲ, ರಾಜಕೀಯದ ಮುಖವಾಡ ಹೊಂದಿರುವ ಆರೆಸ್ಸೆಸ್ ನಮ್ಮ ಸೈದ್ದಾಂತಿಕ ವಿರೋಧಿ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ ಎಂದು ಅವರು ಹೇಳಿದ್ದಾರೆ.

ಆರೆಸ್ಸೆಸ್ ಬಗ್ಗೆ ಮಾತನಾಡುವುದಕ್ಕೆ ಧೈರ್ಯ ಮಾತ್ರವಲ್ಲ, ಪ್ರಾಮಾಣಿಕತೆಯೂ ಇದೆ. ಅದರ ಹಿಡನ್ ಅಜೆಂಡಾಗಳನ್ನ ಸ್ಷಷ್ಟವಾಗಿ ಅರಿತಿದ್ದೇನೆ. ಸಂಘದ ಬಗ್ಗೆ ಮಾತನಾಡಲು ಪ್ರೇರೇಪಿಸಿ ನನ್ನ ಮುಂದೆ ಸೈದ್ದಾಂತಿಕವಾಗಿ ಬೆತ್ತಲಾಗಬೇಡಿ. ರಾಜಕೀಯದ ಎಳಸುಗಾರಿಕೆ ಬಿಟ್ಟು ಒಂದಿಷ್ಟು ಪ್ರಬುದ್ಧತೆಗೆ ತೆರೆದುಕೊಳ್ಳಿ ಎಂದು ವಿಜಯೇಂದ್ರಗೆ ಹರಿಪ್ರಸಾದ್ ಸಲಹೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News