‘ಚುನಾವಣಾ ವ್ಯವಸ್ಥೆ’ ಜಗತ್ತಿನ ಎದುರು ತಲೆ ತಗ್ಗಿಸುವಂತಾಗಿದೆ : ಬಿ.ಕೆ.ಹರಿಪ್ರಸಾದ್
"ಹರಿಯಾಣದ ಬಿಜೆಪಿ ಸರಕಾರಕ್ಕೆ ಅಧಿಕಾರದಲ್ಲಿ ಉಳಿಯುವ ಅರ್ಹತೆ ಇಲ್ಲ"
ಬಿ.ಕೆ.ಹರಿಪ್ರಸಾದ್
ಬೆಂಗಳೂರು : ಜಗತ್ತಿನ ಪ್ರಜಾಪ್ರಭುತ್ವ ದೇಶಗಳಲ್ಲೆ ಪಾರದರ್ಶಕತೆ, ನಿಷ್ಪಕ್ಷಪಾತ, ಮಾದರಿ ಚುನಾವಣಾ ವ್ಯವಸ್ಥೆ ಹೊಂದಿದ್ದ ಭಾರತ ಇಂದು ಇಡೀ ಜಗತ್ತಿನ ಎದುರು ತಲೆ ತಗ್ಗಿಸುವಂತಾಗಿದೆ. ಹರಿಯಾಣ ರಾಜ್ಯದಲ್ಲಿ ಚುನಾವಣಾ ಆಯೋಗ ಮತ್ತು ಕೇಂದ್ರದ ಬಿಜೆಪಿ ಸರಕಾರದ ಸಹಯೋಗದೊಂದಿಗೆ ನಡೆದಿರುವ ಚುನಾವಣಾ ಅಕ್ರಮಗಳು ಅತ್ಯಂತ ನೀಚತನದ ಪರಮಾವಧಿ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದಾರೆ.
ಬುಧವಾರ ಈ ಸಂಬಂಧ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕರ್ನಾಟಕದ ಮಹದೇವಪುರ, ಆಳಂದ ಕ್ಷೇತ್ರಗಳ ಚುನಾವಣಾ ಆಕ್ರಮಗಳನ್ನು ದಾಖಲೆ ಸಮೇತ ಬಯಲು ಮಾಡಿದ್ದ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಹರಿಯಾಣ ರಾಜ್ಯದಲ್ಲಿ ನಡೆದಿರುವ ಅಕ್ರಮಗಳನ್ನು ಬಯಲು ಮಾಡುತ್ತಾ ನೀಡಿರುವ ದಾಖಲೆಗಳನ್ನು ನೋಡಿದರೆ ದೇಶದ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇಟ್ಟಿರುವ ಪ್ರತಿಯೊಬ್ಬ ಪ್ರಜೆಗೂ ದಿಗ್ಭ್ರಮೆಯಾಗುತ್ತದೆ ಎಂದು ಹೇಳಿದ್ದಾರೆ.
ಚುನಾವಣಾ ಆಯೋಗದ ಅಕ್ರಮಗಳು ತಾಲೂಕು, ಜಿಲ್ಲೆ, ರಾಜ್ಯಕ್ಕೆ ಮಾತ್ರ ಸೀಮಿತವಾಗಿಲ್ಲ, ಬ್ರೆಝಿಲ್ ದೇಶದ ರೂಪದರ್ಶಿ, ಮಾಡೆಲ್ ವರೆಗೂ ಚಾಚಿರುವುದು ನಾಚಿಕೆಗೇಡು. ಚುನಾವಣಾ ಆಯೋಗ ‘ಮಾದರಿ ಚುನಾವಣಾ ನೀತಿ ಸಂಹಿತೆ’ಯನ್ನು ಘೋಷಿಸುವ ಬದಲು ‘ಬಿಜೆಪಿ ಪಕ್ಷದ ಗೆಲುವಿಗೆ ಚುನಾವಣಾ ಆಯೋಗದ ಸಹಕಾರದ ಸೂತ್ರಗಳನ್ನು’ ಘೋಷಿಸಿ ಬಿಡಲಿ ಎಂದು ಹರಿಪ್ರಸಾದ್ ಕಿಡಿಗಾರಿದ್ದಾರೆ.
ಹರಿಯಾಣ ರಾಜ್ಯದ ಜನರು ಬಿಜೆಪಿ ಸರಕಾರವನ್ನು ಅಧಿಕಾರದಿಂದ ಕಿತ್ತೊಗೆಯುತ್ತಾರೆ ಎಂದು ಮೊದಲೆ ಅರಿತಿದ್ದ ಬಿಜೆಪಿ ಪಕ್ಷ, ಚುನಾವಣಾ ಆಯೋಗದ ಸಹಕಾರದೊಂದಿಗೆ ಅಧಿಕಾರಕ್ಕಾಗಿ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಕತ್ತು ಹಿಸುಕಿರುವುದು ಪ್ರತಿಯೊಬ್ಬ ಮತದಾರರಿಗೂ ಮಾಡಿದ ದ್ರೋಹ. ಬಿಜೆಪಿ ಪಕ್ಷದ ವಕ್ತಾರರಂತೆ ಮಾತಾಡುವ ಚುನಾವಣಾ ಆಯೋಗದ ಮುಖ್ಯಸ್ಥ ಜ್ಞಾನೇಶ್ ಕುಮಾರ್ ಪಲಾಯನವಾದಿಯಾಗದೆ ದೇಶದ ಜನರೆದುರು ಸತ್ಯ ಒಪ್ಪಿಕೊಳ್ಳುವ ಧೈರ್ಯವನ್ನಾದರೂ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.
25 ಲಕ್ಷ ಮತಕಳ್ಳತನ ನಡೆಸಿ ಅಧಿಕಾರಕ್ಕೆ ಬಂದ ಹರಿಯಾಣದ ಬಿಜೆಪಿ ಸರಕಾರ ಒಂದು ಕ್ಷಣವೂ ಅಧಿಕಾರದಲ್ಲಿ ಮುಂದುವರೆಯಲು ಅರ್ಹತೆ ಇಲ್ಲ, ನೈತಿಕತೆಯೂ ಇಲ್ಲ. ಕೂಡಲೇ ರಾಷ್ಟ್ರಪತಿ ಹರಿಯಾಣ ರಾಜ್ಯ ಸರಕಾರವನ್ನು ವಿಸರ್ಜಿಸಿ, ಸಂವಿಧಾನದ ಮೇಲಿನ ಈ ವ್ಯವಸ್ಥಿತ ದಾಳಿಯ ರಕ್ಷಣೆಗೆ ಧಾವಿಸಬೇಕು. ದೇಶದ ಪ್ರಜಾಪ್ರಭುತ್ವದ ಉಳಿವಿಗಾಗಿ ರಾಹುಲ್ ಗಾಂಧಿ ನಡೆಸುತ್ತಿರುವ ಈ ಮತಕಳ್ಳತನದ ವಿರುದ್ಧದ ಹೋರಾಟಕ್ಕೆ ಪ್ರಜಾಪ್ರಭುತ್ವವಾದಿಗಳು ಹೆಗಲು ನೀಡುವಂತಾಗಲಿ ಎಂದು ಹರಿಪ್ರಸಾದ್ ಆಶಿಸಿದ್ದಾರೆ.