‘ವಿಬಿ ಜಿ ರಾಮ್ ಜಿ’ ಕುರಿತು ಜಾಗೃತಿಗೆ ನಿರ್ಧಾರ: ಬಿ.ವೈ. ವಿಜಯೇಂದ್ರ
ಜ.17ಕ್ಕೆ ಬಳ್ಳಾರಿಯಲ್ಲಿ ಹೋರಾಟಕ್ಕೆ ಕರೆ
ಬೆಂಗಳೂರು: ಬಿಜೆಪಿ, ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ (ಎಸ್ಐಆರ್) ಕಡೆ ಹೆಚ್ಚಿನ ಗಮನ ಕೊಡಲಿದೆ, ಅಲ್ಲದೇ ಮುಂದಿನ ದಿನಗಳಲ್ಲಿ ‘ವಿಬಿ ಜಿ ರಾಮ್ ಜಿ’ ಕುರಿತು ಜನಜಾಗೃತಿ ಮೂಡಿಸಲು ಮುಂದಾಗಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದ್ದಾರೆ.
ಮಂಗಳವಾರ ಬಿಜೆಪಿ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಯ ಸಂಘಟನಾತ್ಮಕ ಸಭೆಯಲ್ಲಿ ಜಿಲ್ಲಾ ರಾಜಕೀಯ ಸ್ಥಿತಿಗತಿ, ಸಂಘಟನೆಯ ಸ್ಥಿತಿ ಏನಿದೆ? ಮುಂಬರುವ ಜಿ.ಪಂ., ತಾ.ಪಂ.ಚುನಾವಣೆಯಲ್ಲಿ ಯಾವ ರೀತಿ ಪಕ್ಷವನ್ನು ಸದೃಢವಾಗಿ ಮುಂದಕ್ಕೆ ಒಯ್ಯುವ ಕುರಿತು ಚರ್ಚಿಸಲಾಗಿದೆ ಎಂದರು.
ಎಸ್ಐಆರ್ ಕುರಿತ ಚುನಾವಣಾ ಆಯೋಗದ ನಿರ್ಣಯವನ್ನು ಬಿಜೆಪಿ ಸ್ವಾಗತಿಸಿದೆ. ರಾಜ್ಯದಲ್ಲಿ ಫೆಬ್ರವರಿ ವೇಳೆಗೆ ಎಸ್ಐಆರ್ ನಡೆಯುವಾಗ ಬಿಜೆಪಿ ಇದರತ್ತ ಗಮನ ಕೊಡಲಿದೆ. ಬಿಹಾರ ಚುನಾವಣೆ ಮೇಲೆ ಯಾವ ರೀತಿ ಪರಿಣಾಮ ಬೀರಿದೆ. ಪಟ್ಟಿಯಲ್ಲಿ ಸೇರಿದ್ದ 65ಲಕ್ಷಕ್ಕೂ ಹೆಚ್ಚು ನಕಲಿ ಮತದಾರರ ಹೆಸರನ್ನು ಅಲ್ಲಿನ ಚುನಾವಣಾ ಆಯೋಗ ಕೈಬಿಟ್ಟಿರುವುದು, ಉತ್ತರ ಪ್ರದೇಶದಲ್ಲಿ 2.5ಕೋಟಿಗೂ ಹೆಚ್ಚು ನಕಲಿ ಮತದಾರರನ್ನು ಕೈಬಿಡಲಾಗಿದೆ ಎಂದು ಅವರು ವಿವರಿಸಿದರು.
ಅಪಪ್ರಚಾರ: ‘ವಿಬಿ ಜಿ ರಾಮ್ ಜಿ’ ಕುರಿತು ಕಾಂಗ್ರೆಸ್ಸಿನವರು ಅಪಪ್ರಚಾರ ನಿರತರಾಗಿದ್ದಾರೆ. ಕಾಂಗ್ರೆಸ್ ಸರಕಾರ ಹತಾಶ ಸ್ಥಿತಿಯಲ್ಲಿದೆ. ಗ್ಯಾರಂಟಿಯ ಭ್ರಮೆಯಲ್ಲಿದ್ದ ರಾಜ್ಯ ಸರಕಾರಕ್ಕೆ ಸತ್ಯದ ಅರಿವಾಗುತ್ತಿದೆ. ರಾಜ್ಯದಲ್ಲಿ ವಾತಾವರಣ ದಿನೇ ದಿನೇ ಈ ಸರಕಾರದ ವಿರುದ್ಧ ತಿರುಗುತ್ತಿದೆ. ಇದರ ಅರಿವಾದ ಬಳಿಕ ಕಾಂಗ್ರೆಸ್ ಪಕ್ಷವು ಪಂಚಾಯಿತಿ ಚುನಾವಣೆ ಮುಂದೂಡಿ, ನರೇಗಾದಲ್ಲಿ ಗಾಂಧೀಜಿ ಅವರನ್ನು ಕೇಂದ್ರದ ಎನ್ಡಿಎ ಸರಕಾರ ಎರಡನೇ ಬಾರಿಗೆ ಕಗ್ಗೊಲೆ ಮಾಡಿದೆ ಎಂದು ರಾಹುಲ್ ಗಾಂಧಿ, ಸಿದ್ದರಾಮಯ್ಯ ಅಪಪ್ರಚಾರ ಮಾಡಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
‘ವಿಬಿ ಜಿ ರಾಮ್ ಜಿ’ ಯೋಜನೆ ಕುರಿತು ಹಾಗೂ ಕಾಂಗ್ರೆಸ್ ಅಪಪ್ರಚಾರದ ವಿರುದ್ಧ ಜಿಲ್ಲಾ ಕೇಂದ್ರಗಳು-ಗ್ರಾಮೀಣ ಮಟ್ಟದಲ್ಲಿ ಜಾಗೃತಿ ಕಾರ್ಯವನ್ನು ಮಾಡಲಾಗುವುದು. ಜಿಲ್ಲಾ ಪ್ರವಾಸದ ಬದಲಾಗಿ ಶಾಸಕರು, ಮಾಜಿ ಶಾಸಕರು, ಜಿಲ್ಲಾಧ್ಯಕ್ಷರು, ಪದಾಧಿಕಾರಿಗಳು, ಮಂಡಲದ ಅಧ್ಯಕ್ಷರ ಸಭೆ ನಡೆಸಿ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಅಪೇಕ್ಷೆ ಪಟ್ಟಿದ್ದರು. ನಮ್ಮ ನಿರೀಕ್ಷೆಗೂ ಮೀರಿ ಎಲ್ಲ ಜಿಲ್ಲೆಗಳ ಸಭೆಗಳು ಯಶಸ್ವಿಯಾಗಿವೆ ಎಂದು ತಿಳಿಸಿದರು.
ಈಚೆಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಂದಿನ ದಿನಗಳಲ್ಲಿ ಜನರ ವಿಶ್ವಾಸ, ಜನಪ್ರಿಯತೆ ಕಳಕೊಂಡಿರುವ ಮತ್ತು ಚುನಾವಣಾ ಭರವಸೆ ಈಡೇರಿಸುವಲ್ಲಿ ವಿಫಲವಾದ ಕಾಂಗ್ರೆಸ್ ಸರಕಾರದ ವಿರುದ್ಧ ವಿವಿಧ ಹಂತದಲ್ಲಿ ಜನಾಂದೋಲನ ರೂಪಿಸಲು ಚರ್ಚೆ ನಡೆದಿದೆ. ರಾಜ್ಯದಲ್ಲಿ ಕಾನೂನು- ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಬಳ್ಳಾರಿಯಲ್ಲಿ ನಡೆದ ಗೂಂಡಾಗಿರಿಯೇ ಇದಕ್ಕೆ ಸ್ಪಷ್ಟ ಉದಾಹರಣೆ ಎಂದು ತಿಳಿಸಿದರು.
ಏಕೆ ಕ್ರಮ ಕೈಗೊಂಡಿಲ್ಲ: ಬಿಜೆಪಿಯ ದಲಿತ ಶಾಸಕಿ ಭಾಗೀರಥಿ ಮುರುಳ್ಯ ವಿರುದ್ಧ ಬಂಟ್ವಾಳದ ಕಾಂಗ್ರೆಸ್ ಕಾರ್ಯಕರ್ತ ಸಂದೇಶ್, ಶ್ರದ್ಧಾಂಜಲಿ ಟ್ವೀಟ್ ಮಾಡಿದ್ದಾನೆ. ಕಾರ್ಯಕರ್ತರು ದೂರು ನೀಡಿದ್ದು, ತಾಂತ್ರಿಕ ಕಾರಣ ಮುಂದಿಟ್ಟು ಎಸ್ಪಿ ಕಾನೂನಾತ್ಮಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ವಿಜಯೇಂದ್ರ ಆಕ್ಷೇಪ ವ್ಯಕ್ತಪಡಿಸಿದರು.