2026ನೆ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಗೆ ಸಂಪುಟ ಅನುಮೋದನೆ
ಬೆಂಗಳೂರು : ರಾಜ್ಯ ಸರಕಾರವು 2026ನೆ ಸಾಲಿಗೆ ಮಂಜೂರು ಮಾಡಿರುವ ಸಾರ್ವತ್ರಿಕ ರಜಾದಿನಗಳ ಪಟ್ಟಿಗೆ ಗುರುವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಜ.15-ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ, ಜ.26-ಗಣರಾಜ್ಯೋತ್ಸವ, ಮಾ.19-ಯುಗಾದಿ ಹಬ್ಬ, ಮಾ.21-ರಮಝಾನ್, ಮಾ.31-ಮಹಾವೀರ ಜಯಂತಿ, ಎ.3-ಗುಡ್ಫ್ರೈಡೆ, ಎ.14-ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ, ಎ.20-ಬಸವ ಜಯಂತಿ, ಅಕ್ಷಯ ತೃತೀಯ, ಮೇ 1-ಕಾರ್ಮಿಕ ದಿನಾಚರಣೆ.
ಮೇ 28-ಬಕ್ರೀದ್, ಜೂ.26-ಮೊಹರಂ ಕಡೆ ದಿನ, ಆ.15-ಸ್ವಾತಂತ್ರ್ಯ ದಿನಾಚರಣೆ, ಆ.26-ಮೀಲಾದ್ದುನ್ನಬಿ, ಸೆ.14-ವರಸಿದ್ದಿ ವಿನಾಯಕ ವ್ರತ, ಅ.2-ಗಾಂಧಿ ಜಯಂತಿ, ಅ.20-ಮಹಾನವಮಿ, ಆಯುದ್ಧ ಪೂಜೆ, ಅ.21-ವಿಜಯದಶಮಿ, ನ.10-ಬಲಿಪಾಡ್ಯಮಿ, ದೀಪಾವಳಿ, ನ.27-ಕನಕದಾಸ ಜಯಂತಿ ಹಾಗೂ ಡಿ.25-ಕ್ರಿಸ್ಮಸ್.
ರವಿವಾರಗಳಂದು ಬರುವ ಮಹಾಶಿವರಾತ್ರಿ(ಫೆ.15), ಮಹರ್ಷಿ ವಾಲ್ಮೀಕಿ ಜಯಂತಿ(ಅ.25), ಕನ್ನಡ ರಾಜ್ಯೋತ್ಸವ(ನ.1) ಹಾಗೂ ನರಕ ಚತುದರ್ಶಿ(ನ.8) ಮತ್ತು ಎರಡನೆ ಶನಿವಾರದಂದು ಬರುವ ಮಹಾಲಯ ಅಮಾವಾಸ್ಯೆ(ಅ.10) ಅನ್ನು ಈ ರಜಾಪಟ್ಟಿಯಲ್ಲಿ ನಮೂದಿಸಿಲ್ಲ.
ಈ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲ್ಮಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕಗಳಂದು ಬೀಳದಿದ್ದರೆ ಸರಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿನ ರಜಾ ಮಂಜೂರು ಮಾಡಬಹುದು. ಸೆ.3ರಂದು ಕೈ ಮೂಹೂರ್ತ, ಅ.18ರಂದು ತುಲಾ ಸಂಕ್ರಮಣ ಹಾಗೂ ನ.26ರಂದು ಹುತ್ತರಿ ಹಬ್ಬವನ್ನು ಆಚರಿಸಲು ಕೊಡಗು ಜಿಲ್ಲೆಗೆ ಮಾತ್ರ ಅನ್ವಯವಾಗುವಂತೆ ಸ್ಥಳೀಯ ಸಾರ್ವತ್ರಿಕ ರಜೆಯನ್ನು ಘೋಷಿಸಲಾಗಿದೆ.
ಶಿಕ್ಷಣ ಇಲಾಖೆಗೆ ಸಂಬಂಧಿಸಿದ ರಜೆಗಳಿಗೆ ಅನ್ವಯಿಸುವಂತೆ ಪ್ರತ್ಯೇಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಪ್ರಕಟಿಸಲಿದ್ದಾರೆ.