‘ಹೇಮಾವತಿ ಯೋಜನೆಯಡಿ ಮಾಗಡಿ- ಕುಣಿಗಲ್ ತಾಲೂಕಿಗೆ ನೀರು’ | ಡಿಸಿಎಂ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಜನಪ್ರತಿನಿಧಿಗಳ ಸಭೆ
ಬೆಂಗಳೂರು : ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿಯಿಂದ ಪೈಪ್ ಲೈನ್ ಅಳವಡಿಸುವ ಮೂಲಕ ಮಾಗಡಿ ಮತ್ತು ಕುಣಿಗಲ್ ತಾಲೂಕಿಗೆ ಕುಡಿಯುವ ನೀರು ಪೂರೈಸುವ ಕುರಿತು ಜಲಸಂಪನ್ಮೂಲ ಸಚಿವರೂ ಆದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಧಾನಸೌಧದಲ್ಲಿ ತುಮಕೂರು ಜಿಲ್ಲೆಯ ಜನಪ್ರತಿನಿಧಿಗಳ ಸಭೆ ನಡೆಯಿತು.
ಮಾಗಡಿ ಮತ್ತು ಕುಣಿಗಲ್ ತಾಲೂಕಿಗೆ ಕುಡಿಯುವ ನೀರು ಪೂರೈಕೆ ಉದ್ದೇಶಕ್ಕಾಗಿ ಹೇಮಾವತಿ ಯೋಜನೆಯ ತುಮಕೂರು ಶಾಖಾ ನಾಲೆಯ ಸರಪಳಿ 70 ಕಿ.ಮೀ.ನಿಂದ ಗುರುತ್ವಾಕರ್ಷಣೆ ಪೈಪ್ ಲೈನ್ ಅಳವಡಿಸುವ ಮುಖಾಂತರ ಶ್ರೀರಂಗ ಕೆರೆಗೆ ನೀರು ತುಂಬಿಸುವ ಯೋಜನೆಯಡಿ ನೀರಿನ ಲಭ್ಯತೆಯನ್ನು ಖಾತರಿಪಡಿಸುವ ಕಾಮಗಾರಿಯ ಅನುಷ್ಠಾನ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.
ಶಾಸಕರ ನಡುವೆ ವಾಗ್ವಾದ: ನೀರು ಹರಿಯುವ ಮೂಲ ವಿನ್ಯಾಸವನ್ನು ಬದಲಾಯಿಸಬಾರದು. ಅದನ್ನು ನೈಸರ್ಗಿಕವಾಗಿ ಹರಿಯಲು ಬಿಡಬೇಕು. ಅದನ್ನು ಬಿಟ್ಟು ಮಾರ್ಗ ಬದಲಿಸಿ ನೀರು ತೆಗೆದುಕೊಂಡು ಹೋದರೆ ಹೇಗೆ ಎಂದು ಬಿಜೆಪಿ ಶಾಸಕ ಬಿ.ಸುರೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಕಾಂಗ್ರೆಸ್ ಶಾಸಕ ಟಿ.ಬಿ.ಜಯಚಂದ್ರ ದನಿಗೂಡಿಸಿದ್ದಾರೆ. ಇದರಿಂದ ಕೆರಳಿದ ಮಾಗಡಿ ಶಾಸಕ ಎಚ್.ಸಿ.ಬಾಲಕೃಷ್ಣ, ಪ್ರತಿದಿನ ನಾವು ಸೇನೆಯನ್ನು ರಕ್ಷಣೆಗೆ ಇಟ್ಟುಕೊಂಡು ನೀರು ಪಡೆಯಬೇಕಾ? ನಾವು ಕುಡಿಯೋದಕ್ಕೆ ಅಲ್ಪ ಪ್ರಮಾಣದಲ್ಲಿ ನೀರು ಕೇಳುತ್ತಿದ್ದೇವೆ. ಕುಡಿಯುವ ನೀರಿಗೂ ಅಡ್ಡಗಾಲು ಹಾಕಿದರೆ ಹೇಗೆ? ಎಂದು ಅಸಮಾಧಾನ ಹೊರ ಹಾಕಿದ್ದಾರೆ ಎಂದು ತಿಳಿದು ಬಂದಿದೆ.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಎಸ್.ಎಂ.ಕೃಷ್ಣ ಸರಕಾರದ ಅವಧಿಯಲ್ಲಿ ಶಿರಾ ತಾಲೂಕಿಗೆ ನೀರು ಹೇಗೆ ತೆಗೆದುಕೊಂಡು ಹೋಗಿದ್ದೀರಾ ಅನ್ನೋದು ಗೊತ್ತಿಲ್ಲವೇ? ಎಂದು ಜಯಚಂದ್ರರನ್ನು ಪ್ರಶ್ನಿಸಿದ್ದಾರೆ. ಅಲ್ಲದೇ, ನಾವೆಲ್ಲ ಒಂದೇ ಭಾಗದಲ್ಲಿ ಇರುವವರು. ಕುಡಿಯುವ ನೀರಿಗೂ ನೆರೆ ರಾಜ್ಯಗಳಾದ ತಮಿಳುನಾಡು, ಆಂಧ್ರಪ್ರದೇಶದ ರೀತಿ ಕಿತ್ತಾಡಬೇಕೇ? ಸಮಸ್ಯೆಯನ್ನು ಬಗೆಹರಿಸಿಕೊಂಡು ಮುಂದುವರೆಯುವ ಕುರಿತು ಆಲೋಚಿಸಿ ಎಂದು ಹೇಳಿದ್ದಾರೆ.
ಸಭೆಯಲ್ಲಿ ಕೇಂದ್ರ ಸಚಿವ ವಿ.ಸೋಮಣ್ಣ, ಸಂಸದ ಡಾ.ಸಿ.ಎನ್.ಮಂಜುನಾಥ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್, ರಾಜ್ಯ ಸರಕಾರದ ಹೊಸದಿಲ್ಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಶಾಸಕರಾದ ಬಿ.ಸುರೇಶ್ಗೌಡ, ಡಾ.ರಂಗನಾಥ್, ಬಾಲಕೃಷ್ಣ, ಎಂ.ಟಿ.ಕೃಷ್ಣಪ್ಪ, ಮುಖಂಡ ಎಚ್.ಎಂ.ರೇವಣ್ಣ, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹೇಶ್ ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ಬೆಂಗಳೂರು ದಕ್ಷಿಣ(ರಾಮನಗರ)ಜಿಲ್ಲೆಗೆ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆ ಮೂಲಕ ನೀರು ಸರಬರಾಜು ಮಾಡುವ ರಾಜ್ಯ ಸರಕಾರದ ನಿರ್ಧಾರದ ವಿರುದ್ಧ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಸಂಕಾಪುರದಲ್ಲಿ ರೈತರು ಹಾಗೂ ಬಿಜೆಪಿ ಶಾಸಕರು, ಮಠಾಧೀಶರು ಪ್ರತಿಭಟನೆಗಳನ್ನು ನಡೆಸಿದ್ದರು.
ಅಲ್ಲದೇ, ಕೇಂದ್ರ ಸಚಿವ ವಿ.ಸೋಮಣ್ಣ ಈ ಕಾಮಗಾರಿಯನ್ನು ತಕ್ಷಣ ನಿಲ್ಲಿಸುವಂತೆ ಮುಖ್ಯಮಂತ್ರಿಗೆ ಪತ್ರವನ್ನು ಬರೆದಿದ್ದರು. ಈ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಶುಕ್ರವಾರ ತುಮಕೂರು ಜಿಲ್ಲೆ ಹಾಗೂ ಬೆಂಗಳೂರು ದಕ್ಷಿಣ ಜಿಲ್ಲೆಯ ಜನಪ್ರತಿನಿಧಿಗಳ ಸಭೆ ಕರೆದು, ಯೋಜನೆ ಕುರಿತು ಅವರಿಗೆ ಇರುವ ಅನುಮಾನಗಳನ್ನು ಪರಿಹರಿಸುವ ಪ್ರಯತ್ನ ಮಾಡಿದರು.
ಹೇಮಾವತಿ ಲಿಂಕ್ ಕೆನಾಲ್ ಕುರಿತು ಸಭೆ ನಡೆಸಿದ್ದೇವೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರತಿಯೊಬ್ಬರಿಗೂ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಕೊಟ್ಟರು. ತಾಂತ್ರಿಕವಾಗಿ ಏನು ಸಮಸ್ಯೆ ಇದೆ ಅನ್ನೋದನ್ನ ಒಬ್ಬ ಸಂಸದನಾಗಿ ನಾನು ಸಭೆಯ ಮುಂದೆ ಹೇಳಿದ್ದೇನೆ. ಅಲ್ಲದೇ, ತಾಂತ್ರಿಕ ಅಧಿಕಾರಿಗಳನ್ನು ಕರೆದುಕೊಂಡು ಹೋಗಿ ಸ್ಥಳ ಪರಿಶೀಲನೆ ಮಾಡಿ. ತಾಂತ್ರಿಕ ಅಧಿಕಾರಿಗಳು ಕೊಡುವಂತಹ ವರದಿಯ ಆಧಾರದ ಮೇಲೆ ನೀವು ತೀರ್ಮಾನ ಕೈಗೊಳ್ಳಿ ಎಂದು ಹೇಳಿದ್ದೇನೆ. ಅದಕ್ಕೆ ಅವರು ಒಪ್ಪಿದ್ದಾರೆ.
-ವಿ.ಸೋಮಣ್ಣ, ಕೇಂದ್ರ ಸಚಿವ
ನಾವೂ ಕುಡಿಯೋಕೆ ನೀರು ಕೊಡಿ ಅಂತಾ ಹೇಳಿದ್ದೇವೆ. ಕುಣಿಗಲ್ ಹಾಗೂ ಮಾಗಡಿಗೂ ಸಹಾಯ ಮಾಡುವುದಾಗಿ ಸರಕಾರ ಹೇಳಿದೆ. ನಾವು ಲಿಂಕ್ ಕೆನಾಲ್ ಮೂಲಕ ನೀರು ಕೇಳುತ್ತಿರುವುದು ಸರಿಯಿದೆ. ಲಿಂಕ್ ಕೆನಾಲ್ ಇಲ್ಲದಿದ್ದರೆ ಅಲ್ಲಿನ(ತುಮಕೂರು ಜಿಲ್ಲೆ) ಶಾಸಕರೇ ಕಾಲುವೆ ಒಡೆದು ಕೆರೆಗಳನ್ನು ತುಂಬಿಸಿಕೊಳ್ಳುತ್ತಾರೆ. ಅವರು ಕೆರೆಗಳನ್ನು ತುಂಬಿಸಿಕೊಳ್ಳುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ, ನಮ್ಮ ಕೆರೆಗಳು ತುಂಬಿಸಲು ನೀರು ಕೊಡಬೇಕಲ್ಲ.
-ಎಚ್.ಸಿ.ಬಾಲಕೃಷ್ಣ, ಮಾಗಡಿ ಶಾಸಕ
ಕುಣಿಗಲ್ ತಾಲೂಕಿಗೆ ನೀರು ಕೊಡಲು ರಾಜಕೀಯ ಮಾಡುತ್ತಿದ್ದಾರೆ. ನಾವು ಹೇಮಾವತಿಯಿಂದ 190 ಕಿ.ಮೀ. ದೂರದಲ್ಲಿದ್ದೇವೆ. ಇದೂವರೆಗೂ ನಮ್ಮ ತಾಲೂಕಿಗೆ ಕುಡಿಯುವ ನೀರು ಕೊಡಲು ಆಗಲಿಲ್ಲ. ಆದುದರಿಂದ, ಪೈಪ್ಲೈನ್ ಮೂಲಕ ನೀರು ತೆಗೆದುಕೊಂಡು ಹೋಗಲು ನಿರ್ಧರಿಸಿದ್ದೇವೆ. ಉಪ ಮುಖ್ಯಮಂತ್ರಿ ಯೋಜನೆಯ ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ. ಅವರು ಬಂದು ಪರಿಶೀಲನೆ ಮಾಡಿ ನಮಗೆ ನ್ಯಾಯ ಒದಗಿಸಿಕೊಡಲಿ.
-ಡಾ.ಎಚ್.ಡಿ.ರಂಗನಾಥ್, ಕುಣಿಗಲ್ ಶಾಸಕ
ತುಮಕೂರು ಸಂಸದರಾಗಿರುವ ಕೇಂದ್ರ ಸಚಿವ ವಿ.ಸೋಮಣ್ಣ ಮನವಿಯ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಇಂದು ಸಭೆ ಮಾಡಿದ್ದಾರೆ. ಅವೈಜ್ಞಾನಿಕವಾಗಿ ನೀರು ಸರಬರಾಜು ಮಾಡಲು ಮುಂದಾಗಿರುವ ಕುರಿತು ಸಭೆಯಲ್ಲಿ ತಿಳಿಸಿದ್ದೇವೆ. ಅಲ್ಲದೇ, ಈ ಪೈಪ್ಲೈನ್ ಯೋಜನೆಯನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಳ ಪರಿಶೀಲನೆ ಮಾಡುವುದಾಗಿ ಹೇಳಿದ್ದಾರೆ.
ಅಲ್ಲದೇ, ತುಮಕೂರಿನ ನೀರಾವರಿಗೆ ಅನುದಾನ ಕೊಡುವುದಾಗಿಯೂ ಹೇಳಿದ್ದಾರೆ. ನಮಗೆ ಯಾವ ಅನುದಾನವು ಬೇಡ. ನಮಗೆ ಮೂಲ ಯೋಜನೆ ಬೇಕು. ಸರಕಾರ ರೈತರ ಪರವಾಗಿ ಇರಬೇಕು. ಇಲ್ಲವಾದರೆ ನಾವು ಹೋರಾಟ ಮುಂದುವರೆಸುತ್ತೇವೆ. ಮಾಗಡಿ ಹಾಗೂ ರಾಮನಗರ ಜಿಲ್ಲೆಗೆ ನೀರು ಕೊಡಲು ನಮಗೆ ವಿರೋಧವಿಲ್ಲ. ಆದರೆ, ವೈಜ್ಞಾನಿಕವಾಗಿ ಮೂಲ ಯೋಜನೆ ಮೂಲಕ ನೀರು ತೆಗೆದುಕೊಂಡು ಹೋಗಲಿ.
ಕುಣಿಗಲ್ ತಾಲೂಕಿಗೆ ಹೇಮಾವತಿ ನೀರು ಸಿಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಅಲ್ಲಿನ ಶಾಸಕ ಡಾ.ರಂಗನಾಥ್ ಹೇಳಿದ್ದಾರೆ. ಆದರೆ, ಅಂತಹ ಪ್ರಮೇಯ ಬರುವುದಿಲ್ಲ. ಜಲಸಂಪನ್ಮೂಲ ಸಚಿವರಾಗಿ ಅವರ ಪಕ್ಷದ ಅಧ್ಯಕ್ಷರೇ ಇದ್ದಾರೆ. ಕಾಂಗ್ರೆಸ್ ಶಾಸಕರಾಗಿ ನೀರು ಪಡೆದುಕೊಳ್ಳುವುದು ಅವರಿಗೆ ಕಷ್ಟ ಆಗೋದಿಲ್ಲ.
-ಬಿ.ಸುರೇಶ್ ಗೌಡ, ಬಿಜೆಪಿ ಶಾಸಕ
ಸಭೆಗೆ ಗೈರು: ಸಹಕಾರ ಸಚಿವ ಕೆ.ಎನ್.ರಾಜಣ್ಣ, ವಿಧಾನ ಪರಿಷತ್ ಸದಸ್ಯ ರಾಜೇಂದ್ರ ಹಾಗೂ ಗುಬ್ಬಿ ಶಾಸಕ ಶ್ರೀನಿವಾಸ್ ಸಭೆಗೆ ಗೈರು ಹಾಜರಾಗಿದ್ದರು.