×
Ad

‘ಕೇಂದ್ರದಿಂದ ರಾಜ್ಯಕ್ಕೆ ಅನ್ಯಾಯ’ ಹಣಕಾಸು ಆಯೋಗವೇ ಒಪ್ಪಿಕೊಂಡಿದೆ : ದಿನೇಶ್ ಗುಂಡೂರಾವ್

Update: 2025-06-21 20:24 IST

 ದಿನೇಶ್ ಗುಂಡೂರಾವ್

ಬೆಂಗಳೂರು : ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ರಾಜ್ಯಕ್ಕೆ ಸಿಗಬೇಕಾದ ತೆರಿಗೆ ಪಾಲು ಹಂಚಿಕೆ, ವಿಶೇಷ ಅನುದಾನದಲ್ಲಿ ಅನ್ಯಾಯವಾಗುತ್ತಿದೆ ಎಂದು ನಾವು ಪದೇ ಪದೇ ಧ್ವನಿ ಎತ್ತಿದರೂ ಕೂಡ ರಾಜ್ಯಕ್ಕೆ ಸರಿಯಾದ ಅನುದಾನ ದೊರೆತಿಲ್ಲ. ಈಗ ಈ ಅನ್ಯಾಯದ ಬಗ್ಗೆ 16ನೇ ಹಣಕಾಸು ಆಯೋಗವೇ ಸುಳಿವು ನೀಡಿದ್ದು, ವ್ಯತ್ಯಾಸಗಳಾಗಿರುವುದನ್ನು ಒಪ್ಪಿಕೊಂಡಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಎಕ್ಸ್‌ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 12, 13, 14, 15ನೆ ಹಣಕಾಸು ಯೋಜನೆಗಳಲ್ಲಿಯೂ ಕರ್ನಾಟಕಕ್ಕೆ ಆದಾಯ ಕೊರತೆ ಅನುದಾನ ನೀಡಲಾಗಿಲ್ಲ. ತೆರಿಗೆ ಪಾಲು ನೀಡದೆ ಅನ್ಯಾಯ ಮಾಡುವ ಜೊತೆ ಜೊತೆಗೆ ವಿಶೇಷ ಅನುದಾನಗಳಿಗೂ ಬಿಜೆಪಿ ಸರಕಾರ ತಡೆಹಾಕಿ ರಾಜ್ಯದ ವಿರುದ್ಧ ದ್ವೇಷದ ರಾಜಕೀಯ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.

ಇಷ್ಟು ಅನ್ಯಾಯವಾಗುತ್ತಿದ್ದರೂ ಕೂಡ ರಾಜ್ಯದಿಂದ ಆಯ್ಕೆಯಾದ ಬಿಜೆಪಿ ಸಂಸದರು, ಕೇಂದ್ರ ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ, ವಿ.ಸೋಮಣ್ಣ, ಪ್ರಹ್ಲಾದ್ ಜೋಶಿ ಹಾಗೂ ಶೋಭಾ ಕರಂದ್ಲಾಜೆ ಕೇಂದ್ರ ಸರಕಾರದ ವಿರುದ್ಧ ತುಟಿ ಬಿಚ್ಚುವುದಿಲ್ಲ. ಇನ್ನು, ಕರ್ನಾಟಕದಿಂದಲೇ ಆಯ್ಕೆಯಾಗಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಂತೂ ರಾಜ್ಯದ ವಿರುದ್ಧ ಕತ್ತಿ ಮಸೆಯುವುದರಲ್ಲಿ ಮೊದಲಿಗರಾಗಿದ್ದಾರೆ ಎಂದು ದಿನೇಶ್ ಗುಂಡೂರಾವ್ ದೂರಿದ್ದಾರೆ.

ಈ ಬಿಜೆಪಿ ನಾಯಕರ ಜೊತೆಗೆ ರಾಜ್ಯ ಬಿಜೆಪಿಗರು ಕೂಡ ನಮ್ಮ ತೆರಿಗೆ ಪಾಲು ನೀಡಿ ಎಂದು ಪಟ್ಟು ಹಿಡಿಯದೇ ಕೇಂದ್ರದ ಕ್ರಮವನ್ನು ಸಮರ್ಥಿಸಿಕೊಳ್ಳುವ ಮಟ್ಟಕ್ಕೆ ಇಳಿಯುತ್ತಿದ್ದಾರೆ. ಕನ್ನಡಿಗರಿಗೆ ಅನ್ಯಾಯವಾದರೂ ಸರಿ ಕೇಂದ್ರ ಸರಕಾರದ ವಿರುದ್ಧ ಮಾತನಾಡುವುದಿಲ್ಲ ಎನ್ನುವ ಧೋರಣೆ ಮೂಲಕ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News