×
Ad

‘ಫೇಸ್‍ಬುಕ್’ನವರ ಸ್ವಯಂ ಅನುವಾದದಿಂದ ಎಡವಟ್ಟು| ಸುಳ್ಳು ಸುದ್ದಿಯ ಬಗ್ಗೆ ಗೊಂದಲಕ್ಕೆ ಒಳಗಾಗಬಾರದು: ಸಿಎಂ ಸಿದ್ದರಾಮಯ್ಯ

Update: 2025-07-18 18:44 IST

ಮುಖ್ಯಮಂತ್ರಿ ಸಿದ್ದರಾಮಯ್ಯ 

ಬೆಂಗಳೂರು: ಫೇಸ್‍ಬುಕ್‍ನವರ ಸ್ವಯಂ ಅನುವಾದದಿಂದ (Auto translation) ಆಗಿರುವ ತಪ್ಪನ್ನು ಕೆಲವರು ಸ್ಕ್ರೀನ್‍ಶಾಟ್ ತೆಗೆದುಕೊಂಡು ಹಂಚಿಕೊಳ್ಳುವ ಮೂಲಕ ತಪ್ಪು ಮಾಹಿತಿ ಹರಡುತ್ತಿದ್ದಾರೆ. ಇಂತಹ ಕಿಡಿಗೇಡಿತನ ಮಾಡುವವರಲ್ಲಿ ವಿಪಕ್ಷದ ಕೆಲವು ಶಾಸಕರು, ಮಾಜಿ ಸಚಿವರು ಸೇರಿರುವುದು ವಿಷಾದನೀಯ. ಹೀಗಾಗಿ ಯಾರೂ ಈ ಸುಳ್ಳು ಸುದ್ದಿಯ ಬಗ್ಗೆ ಗೊಂದಲಕ್ಕೆ ಒಳಗಾಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

ಶುಕ್ರವಾರ ಎಕ್ಸ್‍ನಲ್ಲಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಜು.15ರಂದು ಮೃತರಾದ ಬಿ. ಸರೋಜಾದೇವಿ ಅವರ ಮನೆಗೆ ತೆರಳಿ ನನ್ನ ಶ್ರದ್ಧಾಂಜಲಿ ಸಲ್ಲಿಸಿದ್ದೆ. ಈ ಸುದ್ದಿಯನ್ನು ಸಿಎಂ ಕಚೇರಿಯ ಅಧಿಕೃತ ಫೇಸ್‍ಬುಕ್ ಖಾತೆ(Chief Minister of Karnataka)ಯಿಂದ ಕನ್ನಡ ಭಾಷೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಆದರೆ ಕೆಲವು ಫೇಸ್‍ಬುಕ್ ಬಳಕೆದಾರರ ವಾಲ್‍ನಲ್ಲಿ ನನ್ನ ಕನ್ನಡದ ಪೋಸ್ಟ್‌ ನ ಇಂಗ್ಲಿಷ್ ಭಾಷಾಂತರ ಕಾಣಿಸಿಕೊಂಡಿದೆ.

ಅಪಾರ್ಥ ಕಲ್ಪಿಸುವ, ಗಂಭೀರವಾದ ದೋಷದಿಂದ ಕೂಡಿದ ಈ ಪೋಸ್ಟ್ ಓದಿದ ಅನೇಕ ಮಂದಿ ನಮ್ಮ ಕಚೇರಿಯಿಂದಲೇ ಇಂಗ್ಲಿಷ್ ಪೋಸ್ಟ್ ಹಾಕಿರಬಹುದೆಂದು ತಿಳಿದು ಟೀಕೆ-ಟಿಪ್ಪಣಿ ಮಾಡಿರುವುದನ್ನು ನಾನು ಗಮನಿಸಿದ್ದೇನೆ. ಈ ಕಾರಣಕ್ಕಾಗಿ ಸ್ಪಷ್ಟೀಕರಣವನ್ನು ನೀಡಬೇಕಾಗಿ ಬಂದಿದೆ ಎಂದು ವಿವರಣೆ ನೀಡಿದ್ದಾರೆ.

‘ಫೇಸ್‍ಬುಕ್‍ನಲ್ಲಿ ಆಟೋ ಟ್ರಾನ್ಸ್‍ಲೇಷನ್(ಸ್ವಯಂ ಅನುವಾದ)ಎಂಬ ಆಯ್ಕೆಯಿರುವುದೇ ಈ ಅವಾಂತರಕ್ಕೆ ಕಾರಣವಾಗಿದೆ. ಈ ಆಯ್ಕೆ ಮುಕ್ತವಾಗಿದ್ದು, ಇದನ್ನು ರದ್ದುಪಡಿಸುವ ಅವಕಾಶ ಪೋಸ್ಟ್ ಮಾಡುವ ಖಾತೆದಾರನಿಗೆ ಇರುವುದಿಲ್ಲ. ಇದರಿಂದಾಗಿ ಜಗತ್ತಿನ ಯಾವುದೇ ಭಾಷಿಕರು ಇದನ್ನು ತಮ್ಮ ಭಾಷೆಗೆ ಭಾಷಾಂತರಿಸಿಕೊಂಡು ಓದಬಹುದಾಗಿದೆ. ಈ ಸ್ವಯಂ ಅನುವಾದದ ಪ್ರಕ್ರಿಯೆಯೇ ದೋಷಪೂರ್ಣವಾಗಿದೆ ಎಂದು ಸಿದ್ದರಾಮಯ್ಯ ಆಕ್ಷೇಪಿಸಿದ್ದಾರೆ.

‘ನಮ್ಮ ಕಚೇರಿ ಕನ್ನಡದಲ್ಲಿ ಮಾಡಿದ್ದ ಮೂಲ ಪೋಸ್ಟ್ ಕೆಲವರ ನ್ಯೂಸ್ ಫೀಡ್‍ನಲ್ಲಿ ಇಂಗ್ಲಿಷ್‌ಗೆ ಭಾಷಾಂತರಗೊಂಡು ಕಾಣಿಸಿಕೊಂಡಿದೆ. ಈ ಭಾಷಾಂತರವೇ ದೋಷಪೂರ್ಣವಾಗಿದೆ. ಅಪಾರ್ಥ ಕಲ್ಪಿಸುವ ಇಂಗ್ಲೀಷ್ ಪೋಸ್ಟ್ ನೋಡಿದ ಕೆಲವರು ಕೂಡಲೇ ಅದರ ಕೆಳಭಾಗದಲ್ಲಿರುವ ''See Original Post'' (ಮೂಲ ಬರಹವನ್ನು ನೋಡಿ) ಎಂಬ ಆಯ್ಕೆಯ ಮೂಲಕ ಮೂಲ ಕನ್ನಡ ಪೋಸ್ಟ್ ನೋಡಿ ಸರಿಯಾದ ಸುದ್ದಿಯನ್ನು ಗ್ರಹಿಸಿ ಕೊಂಡಿದ್ದು ಮಾತ್ರವಲ್ಲ, ಫೇಸ್‍ಬುಕ್‍ನ ಸ್ವಯಂ ಭಾಷಾಂತರದಲ್ಲಿ ಕಂಡುಬಂದಿರುವ ದೋಷದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು ಎಂದು ಅವರು ಉಲ್ಲೇಖಿಸಿದ್ದಾರೆ.

ಈ ವಿಚಾರ ನಮ್ಮ ಗಮನಕ್ಕೆ ಬಂದ ಕೂಡಲೇ ನನ್ನ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಅವರು ‘ಮೆಟಾ’ದವರನ್ನು ಸಂಪರ್ಕಿಸಿ ದೋಷವನ್ನು ಸರಿಪಡಿಸುವಂತೆ ಮನವಿ ಮಾಡಿದ್ದರು. ಮೆಟಾದವರು ತಮ್ಮ ತಪ್ಪಿಗೆ ಕ್ಷಮೆ ಕೇಳಿ, ದೋಷವನ್ನು ಸರಿಪಡಿಸುವುದಾಗಿ ಇಮೇಲ್ ಮೂಲಕ ತಿಳಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಈ ಹಿಂದೆಯೂ ಮೆಟಾ/ಫೇಸ್‍ಬುಕ್ ಮೂಲ ಭಾಷೆಯನ್ನು ಸ್ವಯಂ ಅನುವಾದ ಮಾಡಿ, ಜಾಗತಿಕ ಮಟ್ಟದಲ್ಲಿ ಇಂತಹ ಎಡವಟ್ಟುಗಳನ್ನು ಮಾಡಿಕೊಂಡಿತ್ತು. ಇಂತಹ ತಪ್ಪುಗಳಿಗಾಗಿ ಇತ್ತೀಚೆಗೆ ಮಲೇಷಿಯಾ (2024) ಸೇರಿದಂತೆ ಮಯನ್ಮಾರ್(2018), ಪ್ಯಾಲೇಸ್ತೀನ್(2017) ಮತ್ತಿತರ ಕಡೆಗಳಲ್ಲೂ ಸಾರ್ವಜನಿಕವಾಗಿ ತೀವ್ರ ವಿರೋಧ ಎದುರಿಸಿತ್ತು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸುಮಾರು 2 ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಫೇಸ್‍ಬುಕ್‍ಗೆ ದೊಡ್ಡ ಪ್ರಮಾಣದ ಕನ್ನಡಿಗರು ಸೇರಿದಂತೆ ಭಾರತದಲ್ಲಿ ಅತಿಹೆಚ್ಚು ಬಳಕೆದಾರರಿದ್ದಾರೆ. ಆದರೆ, ಸ್ವಯಂ ಅನುವಾದ ನೀಡುವಾಗ ಮೂಲ ಭಾಷೆಯಲ್ಲಿ ಹೇಳಿದ್ದು ಅನರ್ಥವಾಗಿ ಭಾಷಾಂತರಗೊಳ್ಳುತ್ತಿರುವುದು ವಿಷಾದನೀಯ. ಮೆಟಾ ಸ್ವಯಂ ಅನುವಾದ ಮಾಡುವಲ್ಲಿ ಆಗುತ್ತಿರುವ ದೋಷವನ್ನು ಸರಿಪಡಿಸುವ ನಿಟ್ಟಿನಲ್ಲಿ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಏನೀ ಗೊಂದಲ:

ನಟಿ ಬಿ.ಸರೋಜಾದೇವಿ ಜು.14ರಂದು ನಿಧನರಾಗಿದ್ದು, ಜು.15ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ, ನಟಿ ಸರೋಜಾದೇವಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದು, ನಮನ ಸಲ್ಲಿಸಿದ್ದರು. ಸರೋಜಾದೇವಿ ಚಿತ್ರರಂಗಕ್ಕೆ ನೀಡಿದ ಕಲಾಸೇವೆಯನ್ನು ಸ್ಮರಿಸಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ವೊಂದನ್ನು ಹಾಕಿದ್ದರು. ಸರೋಜಾದೇವಿಯವರು ನಿಧನರಾಗಿದ್ದು, ಅವರಿಗೆ ಅಂತಿಮ ನಮನ ಸಲ್ಲಿಸಲಾಯಿತು ಎಂದು ಉಲ್ಲೇಖಿಸಿದ್ದರು. ಆದರೆ, ಅದನ್ನು ಅನುವಾದ ಮಾಡಿದಾಗ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿನ್ನೆ ನಿಧನರಾದರು. ಸರೋಜಾದೇವಿ ಅವರು ಸರೋಜಾದೇವಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದುಕೊಂಡು ನಮನ ಸಲ್ಲಿಸಿದರು’ ಎಂದು ಆಗಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಗೊಂದಲವನ್ನು ಸೃಷ್ಟಿಸಿತ್ತು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News