×
Ad

ಡಿಕೆಶಿ ಮಾತನ್ನು ವಿವಾದ ಮಾಡುತ್ತಿರುವುದು ಬೇಸರದ ಸಂಗತಿ : ಡಾ.ಎಚ್.ಸಿ.ಮಹದೇವಪ್ಪ

Update: 2025-08-28 19:01 IST

ಬೆಂಗಳೂರು, ಆ.28: ಚಾಮುಂಡಿ ಬೆಟ್ಟ ಎಂಬುದು ಧಾರ್ಮಿಕ ಭಾವನೆಯನ್ನು ಪರಸ್ಪರ ಗೌರವಿಸುವ ಎಲ್ಲರಿಗೂ ಸೇರಿದ್ದು ಎಂದು ಹೇಳಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಮಾತನ್ನು ಸರಿಯಾಗಿ ಅರ್ಥೈಸದೆ ಅದನ್ನು ವಿವಾದ ಮಾಡುತ್ತಿರುವುದು ಬೇಸರದ ಸಂಗತಿ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ಎಲ್ಲರೂ ಕೂಡಿ ಐಕ್ಯತೆಯಿಂದ ಆಚರಿಸುವ ದಸರಾ ನಾಡ ಹಬ್ಬಕ್ಕೆ ಬಹುದೊಡ್ಡ ಪರಂಪರೆ ಇದೆ. ಇಂತಹ ನಾಡಹಬ್ಬದಲ್ಲೂ ಧಾರ್ಮಿಕ ವಿಷವನ್ನು ಬಿತ್ತುವ ಕೆಲಸ ಮಾಡುತ್ತಿರುವ ಬಿಜೆಪಿಗರಿಗೆ ನಿಜಕ್ಕೂ ಈ ನೆಲದ ಬಹುತ್ವದ ವಿಷಯಗಳಾಗಲಿ, ಸಂವಿಧಾನವು ನೇರವಾಗಿ ಸಾರುತ್ತಿರುವ ಭಾವೈಕ್ಯತೆಯಾಗಲಿ ಅರ್ಥವಾಗುತ್ತಿಲ್ಲ ಎಂದು ಟೀಕಿಸಿದ್ದಾರೆ.

ಚುನಾವಣಾ ರಾಜಕೀಯದ ದೃಷ್ಟಿಯಿಂದ ಕೋಮು ರಾಜಕಾರಣ ಮಾಡುತ್ತಿರುವ ಬಿಜೆಪಿಗರಿಗೆ ಎಂದಿಗೂ ಜನರ ಬದುಕು ಮತ್ತು ಅವರ ಅನ್ನದ ವಿಷಯದಲ್ಲಿ ಕಿಂಚಿತ್ ಆಲೋಚನೆ ಇಲ್ಲ ಎಂದು ಮಹದೇವಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭಾವೈಕ್ಯತೆಗೆ ವಿರುದ್ಧವಾಗಿ ವರ್ತಿಸುವ ಮತ್ತು ಕನ್ನಡ ಸಾಹಿತ್ಯ ಮತ್ತು ಅದರ ಜೀವಪರ ಪ್ರಾಮುಖ್ಯತೆಯನ್ನು ಮರೆತು ಕನ್ನಡ ತನಕ್ಕೆ ಅವಮಾನ ಮಾಡುತ್ತಿರುವ ಕೋಮುವಾದಿ ಬಿಜೆಪಿಗರು ಮತ್ತೊಮ್ಮೆ ಜನರಿಂದ ಛೀಮಾರಿ ಹಾಕಿಸಿಕೊಳ್ಳುವ ಸಂದರ್ಭ ಬರಲಿದೆ. ಬಿಜೆಪಿಗರ ಸಂವಿಧಾನ ವಿರೋಧಿ ಪ್ರಯತ್ನಗಳನ್ನು ಎಲ್ಲರೂ ಒಗ್ಗೂಡಿ ಖಂಡಿಸೋಣ, ನಾಡಹಬ್ಬವನ್ನು ಬಾಂಧವ್ಯದ ಗೂಡಾಗಿಸೋಣ ಎಂದು ಅವರು ಕರೆ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News