‘ಗೃಹಲಕ್ಷ್ಮಿ’ ಹಣದಲ್ಲಿ ಊರಿಗೆ ಹೋಳಿಗೆ ಊಟ ಹಾಕಿಸಿದ ಮಹಿಳೆ: ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು ಹೀಗೆ...
ಬೆಂಗಳೂರು: ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣದಲ್ಲಿ ಇಡೀ ಊರಿಗೆ ಹೋಳಿಗೆ ಊಟ ಹಾಕುವುದು ಒಳ್ಳೆಯ ಗುಣವೇ ಸರಿ. ಆದರೆ, ಗೃಹಲಕ್ಷ್ಮಿ ಯೋಜನೆಯ ಹಣದ ಮೇಲಿನ ಮೊದಲ ಹಕ್ಕು ಅವರ ಕುಟುಂಬದ್ದಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಸೋಮವಾರ ಈ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಸುಟ್ಟಟ್ಟಿ ಗ್ರಾಮದ ‘ಅಕ್ಕಾತಾಯಿ ಲಂಗೂಟಿ’ ಎಂಬ ಮಹಿಳೆ ತನಗೆ ಬಂದ ಗೃಹಲಕ್ಷ್ಮಿ ಹಣದಲ್ಲಿ ಊರಿನ ಜನರಿಗೆ ಹೋಳಿಗೆ ಊಟ ಹಾಕಿ, ಮುತ್ತೈದೆಯರಿಗೆ ಮಡಿಲು ತುಂಬಿರುವ ವೀಡಿಯೋವನ್ನು ನೋಡಿದೆ. ನನಗೆ ಒಳಿತಾಗಲೆಂದು ಇದನ್ನು ಮಾಡುತ್ತಿದ್ದೇನೆಂದು ಹೇಳಿದ್ದು ಕೇಳಿ ಮನಸ್ಸು ತುಂಬಿಬಂತು. ಇಂತಹ ಲಕ್ಷಾಂತರ ತಾಯಂದಿರ, ಅಕ್ಕ-ತಂಗಿಯರ ಆಶೀರ್ವಾದ, ಹಾರೈಕೆ ನನ್ನ ಜೊತೆಗಿದೆ. ಈ ಪ್ರೀತಿ, ಅಕ್ಕರೆಗಳೇ ನನ್ನ ಬಲ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಅಕ್ಕಾತಾಯಿಯಂತಹ ಒಳ್ಳೆಯ ಮನಸ್ಸಿನ ಸೋದರಿಯರು ಈ ಹಣವನ್ನು ಮೊದಲು ತಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯಕರವಾದ ಊಟ-ತಿಂಡಿ ಮತ್ತು ಮಕ್ಕಳ ಶಿಕ್ಷಣಕ್ಕಾಗಿ ಬಳಸುವುದು ಯೋಜನೆಯ ಉದ್ದೇಶ. ಬೆಲೆಯೇರಿಕೆಯ ಬಿಸಿ ತಟ್ಟದಿರಲಿ ಎಂಬ ಸದುದ್ದೇಶದಿಂದ ನಾವು ಜಾರಿಗೊಳಿಸಿರುವ ಗೃಹಲಕ್ಷ್ಮಿ ಯೋಜನೆ ಬಹಳಷ್ಟು ಕುಟುಂಬಗಳ ಪಾಲಿಗೆ ಅಕ್ಷರಶಃ ವರದಾನವಾಗಿದೆ. ಗೃಹಲಕ್ಷ್ಮಿ ಹಣ ಮಕ್ಕಳ ವಿದ್ಯಾಭ್ಯಾಸ, ಮನೆಗೆ ದಿನಸಿ, ಹಬ್ಬಕ್ಕೆ ಹೊಸಬಟ್ಟೆ, ಆಸ್ಪತ್ರೆ ಖರ್ಚು ವೆಚ್ಚ ಭರಿಸಲು ಬಳಕೆಯಾದ ಸುದ್ದಿಗಳನ್ನು ಮಾಧ್ಯಮಗಳಲ್ಲಿ ಕಂಡಿದ್ದೇನೆ. ಅವೆಲ್ಲವೂ ಯೋಜನೆಯ ಯಶಸ್ಸಿಗೆ ಹಿಡಿದ ಕನ್ನಡಿ ಎಂದು ಹೇಳಿದ್ದಾರೆ.
‘ಗೃಹಲಕ್ಷ್ಮಿ ಯೋಜನೆ ನಿಲ್ಲಬಾರದು, ಇದು ಇನ್ನಷ್ಟು ಬಡವರ ಹೊಟ್ಟೆತುಂಬಿಸಲಿ ಎಂದು ಅಕ್ಕಾತಾಯಿ ಲಂಗೂಟಿ ಮನವಿ ಮಾಡಿದ್ದಾರೆ. ಯಾವುದೇ ಕಾರಣಕ್ಕೂ ಯೋಜನೆ ಸ್ಥಗಿತ ಮಾಡುವುದಿಲ್ಲ. ನಮ್ಮ ಸರಕಾರ ಇರುವವರೆಗೆ ಗೃಹಲಕ್ಷ್ಮಿ ಹಣ ಬಡವರ ಮನೆ ಸೇರುತ್ತದೆ ಎಂಬುದನ್ನು ಖಾತ್ರಿಪಡಿಸುತ್ತಿದ್ದೇನೆ. ತನಗೆ ಸಿಕ್ಕಿದ್ದನ್ನು ಹಂಚಿ ತಿನ್ನುವ ಔದಾರ್ಯ, ಇನ್ನೊಬ್ಬರ ಒಳಿತು ಬಯಸುವ ನಿಸ್ವಾರ್ಥ ಭಾವ ನಮ್ಮ ಮಣ್ಣಿನ ಗುಣದಲ್ಲಿದೆ. ನಾಡಿನ ಜನತೆಯ ಸೇವೆ ಮಾಡುವ ಅವಕಾಶ ಸಿಕ್ಕಿರುವುದು ನನ್ನ ಭಾಗ್ಯವೇ ಸರಿ’
-ಸಿದ್ಧರಾಮಯ್ಯ, ಮುಖ್ಯಮಂತ್ರಿ