ತುರ್ತು ಸಂದರ್ಭಗಳಲ್ಲಿ ನಗದುರಹಿತ ವೈದ್ಯಕೀಯ ಕಾರ್ಯವಿಧಾನ ಜಾರಿಗೊಳಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಕೇಂದ್ರಕ್ಕೆ ಹೈಕೋರ್ಟ್ ನಿರ್ದೇಶನ
Photo credit: PTI
ಬೆಂಗಳೂರು: ಕೇಂದ್ರ ಸರ್ಕಾರಿ ಆರೋಗ್ಯ ಯೋಜನೆ (ಸಿಜಿಎಚ್ಎಸ್) ಅಡಿ ತುರ್ತು ಮತ್ತು ನಿರ್ಣಾಯಕ ಆರೈಕೆ ಸಂದರ್ಭಗಳಲ್ಲಿ ನಗದುರಹಿತ ವೈದ್ಯಕೀಯ ಕಾರ್ಯವಿಧಾನ ಜಾರಿಗೊಳಿಸುವ ಸಾಧ್ಯತೆ ಬಗ್ಗೆ ಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.
ಪತಿಯ ಚಿಕಿತ್ಸೆಗಾಗಿ ವೆಚ್ಚ ಮಾಡಿದ್ದ ಹಣ ಮರುಪಾವತಿಗೆ ನಿರ್ದೇಶನ ಕೋರಿ ನಿವೃತ್ತ ಐಎಎಸ್ ಅಧಿಕಾರಿ ಐವಿ ಮಿಲ್ಲರ್ ಚಾಹಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಮಾಡಿದೆ.
ಸೇವೆಯಲ್ಲಿರುವ ಅಥವಾ ನಿವೃತ್ತರಾದ ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬ ಸದಸ್ಯರು ಗಣನೀಯ ವೈದ್ಯಕೀಯ ವೆಚ್ಚಗಳನ್ನು ಭರಿಸಬೇಕಾಗಿ ಬಂದು, ನಂತರ ಮರುಪಾವತಿ ವಿಳಂಬವನ್ನು ಎದುರಿಸಬೇಕಾದ ಸಂದರ್ಭಗಳನ್ನು ತಡೆಯಲು ನಗದುರಹಿತ ಚಿಕಿತ್ಸಾ ವಿಧಾನ ಜಾರಿಗೊಳಿಸುವುದು ಸೂಕ್ತ ಎನಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಪೀಠ, ಅರ್ಜಿದಾರರಿಗೆ 2023ರ ಅಕ್ಟೋಬರ್ ತಿಂಗಳಿನಿಂದ ಅನ್ವಯವಾಗುವಂತೆ 15.3 ಲಕ್ಷ ರೂ.ಗಳನ್ನು ಶೇ.12 ಬಡ್ಡಿಸಹಿತ 30 ದಿನಗಳಲ್ಲಿ ಪಾವತಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ.
ನಗದುರಹಿತ ವಿಧಾನ ಜಾರಿಗೆ ಸಲಹೆ:
ಜೀವನಕ್ಕೆ ಅಪಾಯಕಾರಿ ತುರ್ತು ಸಂದರ್ಭಗಳಲ್ಲಿ ರೋಗಿಗಳು ಅಥವಾ ಅವರ ಸಹಾಯಕರು ಸಿಜಿಎಚ್ಎಸ್ ಚೌಕಟ್ಟಿನ ಅಡಿಯಲ್ಲಿ ಚಿಕಿತ್ಸಾ ಪ್ರೋಟೋಕಾಲ್ಗಳನ್ನು ನಿರ್ಣಯಿಸುತ್ತಾರೆ ಅಥವಾ ಮರುಪಾವತಿ ಅರ್ಹತೆ ಮೌಲ್ಯಮಾಪನ ಮಾಡುತ್ತಾರೆಂದು ನಿರೀಕ್ಷಿಸಲಾಗುವುದಿಲ್ಲ ಎಂದು ನ್ಯಾಯಪೀಠ ಆದೇಶದಲ್ಲಿ ಅಭಿಪ್ರಾಯಪಟ್ಟಿದೆ.
ನಿವೃತ್ತ ಉದ್ಯೋಗಿಗಳ ವಿಷಯದಲ್ಲಿ ಇಂತಹ ಕ್ರಮಗಳು ವಿಶೇಷವಾಗಿ ಅಸಮಾನವಾಗಿರುತ್ತವೆ. ಅವರ ಗಳಿಕೆಯ ಸಾಮರ್ಥ್ಯ ಮತ್ತು ಆರ್ಥಿಕ ಭದ್ರತೆ ಸೀಮಿತವಾಗಿದೆ. ಈ ಪ್ರಕರಣದಲ್ಲಿ, ರೋಗಿ ಅಥವಾ ಕುಟುಂಬದ ಸದಸ್ಯರು ಅಲ್ಪಾವಧಿಯಲ್ಲಿ ಹಣವನ್ನು ಹೊಂದಿಸಿ, ನಂತರ ಮರುಪಾವತಿ ಕೋರಿದ್ದಾರೆ. ಆದರೆ, ಅಧಿಕಾರಿಗಳು ಕಾರ್ಯವಿಧಾನದ ಪರಿಶೀಲನೆ ನಡೆಸಲು ವಿಳಂಬ ಮಾಡುವುದರಿಂದ ವ್ಯಾಜ್ಯಗಳಿಗೆ ಕಾರಣವಾಗುತ್ತದೆ ಎಂದು ಹೈಕೋರ್ಟ್ ಹೇಳಿದೆ.
ವಿಶೇಷವಾಗಿ ತುರ್ತು ಮತ್ತು ಜೀವ ಉಳಿಸುವ ಕಾರ್ಯವಿಧಾನಗಳಿಗೆ ನಗದುರಹಿತ ಚಿಕಿತ್ಸಾ ಕಾರ್ಯವಿಧಾನ ಜಾರಿಯಿಂದ ಮರುಪಾವತಿಯಲ್ಲಿನ ವಿಳಂಬ ಗಮನಾರ್ಹವಾಗಿ ಕಡಿಮೆಯಾಗುತ್ತದೆ. ಅಂತಹ ವ್ಯವಸ್ಥೆಯು ಸಂವಿಧಾನದ ಪರಿಚ್ಛೇದ 21ರ ಅಯಲ್ಲಿ ಆರೋಗ್ಯದ ಹಕ್ಕಿಗೆ ಅರ್ಥಪೂರ್ಣ ಪರಿಣಾಮ ನೀಡುತ್ತದೆ. 14ನೇ ಪರಿಚ್ಛೇದದ ಅಡಿಯಲ್ಲಿ ವೈದ್ಯಕೀಯ ಆರೈಕೆ ಲಭ್ಯತೆಯನ್ನು ಖಾತ್ರಿಪಡಿಸುತ್ತದೆ ಹಾಗೂ ಕಲ್ಯಾಣ ಉದ್ಯೋಗದಾತರಾದ ಸರ್ಕಾರದ ಬಾಧ್ಯತೆಯನ್ನು ಬಲಪಡಿಸುತ್ತದೆ ಎಂದು ನ್ಯಾಯಾಲಯ ಆದೇಶದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದೆ.
ಪ್ರಕರಣವೇನು?
ಬೆಂಗಳೂರಿನಲ್ಲಿರುವ ಮಧ್ಯಪ್ರದೇಶ ಕೇಡರ್ನ ನಿವೃತ್ತ ಐಎಎಸ್ ಅಧಿಕಾರಿ ಐವಿ ಮಿಲ್ಲರ್ ಚಾಹಲ್ ಅವರ ಪತಿಯೂ ಆದ ಮಧ್ಯಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ನಿವೃತ್ತ ಕಾರ್ಯನಿರ್ವಾಹಕ ನಿರ್ದೇಶಕ ಗುರ್ಮೈಲ್ ಸಿಂಗ್ ಚಾಹಲ್ 2023ರ ಎಪ್ರಿಲ್ನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆಗೆ ಒಳಗಾಗಿದ್ದರು. ಅದೇ ವರ್ಷದ ಅಕ್ಟೋಬರ್ನಲ್ಲಿ ಸಿಆರ್ಟಿ-ಡಿ (ಡಿಫಿಬ್ರಿಲೇಟರ್ನೊಂದಿಗೆ ಕಾರ್ಡಿಯಾಕ್ ರೀಸಿಂಕ್ರೊನೈಸೇಶನ್ ಥೆರಪಿ) ಇಂಪ್ಲಾಂಟ್ ಮಾಡಿಸಿಕೊಂಡಿದ್ದರು. ಇದಕ್ಕಾಗಿ 15,30,093 ರೂ. ವೆಚ್ಚವಾಗಿತ್ತು. ಗುರ್ಮೈಲ್ ಸಿಂಗ್ ಅವರು 2024ರ ಮಾರ್ಚ್ 18 ರಂದು ನಿಧನರಾಗಿದ್ದರು. ಚಿಕಿತ್ಸೆಯ ಸಮಯದಲ್ಲಿ ಮಾಡಿದ ವೆಚ್ಚವನ್ನು ಕೇಂದ್ರ ಸರ್ಕಾರ ಮರುಪಾವತಿಸದ ಹಿನ್ನೆಲೆಯಲ್ಲಿ ಈ ನಿಟ್ಟಿನಲ್ಲಿ ಸೂಕ್ತ ನಿರ್ದೇಶನ ನೀಡುವಂತೆ ಕೋರಿ ಐವಿ ಮಿಲ್ಲರ್ ಚಾಹಲ್ ಹೈಕೋರ್ಟ್ ಮೊರೆ ಹೋಗಿದ್ದರು.