×
Ad

ಇಸ್ಲಾಂ ಧರ್ಮಕ್ಕೆ ಮತಾಂತರ ಆರೋಪ: ಮೂವರ ವಿರುದ್ಧದ ಎಫ್‌ಐಆರ್ ರದ್ದು

Update: 2025-07-26 17:14 IST

ಬೆಂಗಳೂರು: ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಪ್ರಚೋದಿಸಿದ ಆರೋಪದಡಿ ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಮೂವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.

ಆರೋಪಿಗಳಾದ ಮುಸ್ತಾಫ ಬಿನ್‌ ಮುರ್ತಜ್‌ಸಾಬ್‌ ಮೊಮಿನ್‌, ಅಲಿಸಾಬ್ ಬಿನ್ ಶಬ್ಬೀರ್‌ ಅಳಗುಂಡಿ ಮತ್ತು ಸುಲೇಮಾನ್‌ ಬಿನ್‌ ರಿಯಾಜ್‌ ಅಹಮದ್‌ ಗಲಗಲಿ ಎಂಬವರು ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಪಡಿಸುವಂತೆ ಕೋರಿ ಹೈಕೋರ್ಟ್‌((ಧಾರವಾಡ ಪೀಠ)ಗೆ ಅರ್ಜಿ ಸಲ್ಲಿಸಿದ್ದರು.

ಈ ಅರ್ಜಿ ಪುರಸ್ಕರಿಸಿರುವ ನ್ಯಾ.ವೆಂಕಟೇಶ್‌ ಟಿ.ನಾಯ್ಕ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ, ಎಫ್‌ಐಆರ್‌ ರದ್ದುಪಡಿಸಿ ಆದೇಶಿಸಿದೆ.

ವಕೀಲರಾದ ಇಫ್ತೀಕರ್‌ ಶಹಾಪುರಿ ಮತ್ತು ಅನ್ವರ್ ಅಲಿ ಡಿ.ನದಾಫ್‌ ಅರ್ಜಿದಾರರ ಪರ ವಾದ ಮಂಡಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ರಕ್ಷಣೆ ಕಾಯ್ದೆ-2022ರ ಕಲಂ 4ರ ಅಡಿಯಲ್ಲಿ ಧಾರ್ಮಿಕ ಮತಾಂತರ ಪ್ರಕರಣದಲ್ಲಿ ಪ್ರಚೋದನೆಗೆ ಒಳಗಾಗಿ ಮತಾಂತರಗೊಂಡ ವ್ಯಕ್ತಿಯ ರಕ್ತ ಸಂಬಂಧಿಕರು ಹಾಗೂ ಪೋಷಕರು ಮಾತ್ರವೇ ದೂರು ಸಲ್ಲಿಸಲು ಅಧಿಕಾರವಿರಲಿದೆ. ಆದರೆ, ಈ ಪ್ರಕರಣದಲ್ಲಿ ದೂರು ದಾಖಲಿಸಿರುವ ವ್ಯಕ್ತಿ ಮೂರನೆ ವ್ಯಕ್ತಿಯಾಗಿದ್ದಾರೆ. ಅರ್ಜಿದಾರರ ವಿರುದ್ದ ಕಲಂ 3ರ ಅಡಿಯಲ್ಲಿ ತಿಳಿಸಿರುವಂತೆ ಮತಾಂತರಕ್ಕೆ ಪ್ರಚೋದನೆ ಮಾಡಿರುವ ಸಂಬಂಧ ಆರೋಪಗಳು ಇಲ್ಲವಾಗಿವೆ ಎಂದು ಹೇಳಿ ಮೂವರ ವಿರುದ್ಧದ ಎಫ್‌ಐಆರ್ ಮತ್ತು ಅದಕ್ಕೆ ಸಂಬಂಧಿಸಿದ ನ್ಯಾಯಿಕ ವಿಚಾರಣಾ ಪ್ರಕ್ರಿಯೆಯನ್ನು ರದ್ದುಗೊಳಿಸಿದೆ.

ಏನಿದು ಪ್ರಕರಣ :

ʼಜಮಖಂಡಿಯ ರಾಮತೀರ್ಥ ದೇವಾಲಯ ಬಳಿ ಕೆಲವರು ಇಸ್ಲಾಂ ಧರ್ಮದ ಬೋಧನೆಯನ್ನು ಉತ್ತೇಜಿಸುವ ಮತ್ತು ಅವರ ಧಾರ್ಮಿಕ ನಂಬಿಕೆಗಳನ್ನು ವಿವರಿಸುವ ಕರಪತ್ರಗಳನ್ನು ಹಂಚುತ್ತಿದ್ದರು, ಅಲ್ಲದೆ, ಉದ್ಯೋಗಾವಕಾಶ ಕಲ್ಪಿಸುತ್ತೇವೆ ಎಂದು ಜನರನ್ನು ಇಸ್ಲಾಂ ಧರ್ಮದೆಡೆ ಆಕರ್ಷಿತರನ್ನಾಗಿ ಮಾಡುತ್ತಿದ್ದಾರೆ’ ಎಂದು ಆರೋಪಿಸಿ ರಮೇಶ್‌ ಮಲ್ಲಪ್ಪ ನಾವಿ ಎಂಬವರು ದೂರು ನೀಡಿದ್ದರು. ಈ ದೂರಿನ್ವಯ ಜಮಖಂಡಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News