ಅತ್ಯಾಚಾರ ಆರೋಪ : ಶಾಸಕ ಮುನಿರತ್ನ ವಿರುದ್ಧ ಮತ್ತೊಂದು ಎಫ್ಐಆರ್
ಮುನಿರತ್ನ
ಬೆಂಗಳೂರು : ಮಹಿಳೆಯನ್ನು ವಿವಸ್ತ್ರಗೊಳಿಸಿ ಸಹಚರರಿಂದ ಅತ್ಯಾಚಾರ ಮಾಡಿಸಿದ್ದಾರೆಂಬ ಆರೋಪದಡಿ ಬಿಜೆಪಿ ಶಾಸಕ ಮುನಿರತ್ನ ಸೇರಿ ನಾಲ್ವರ ವಿರುದ್ಧ ಇಲ್ಲಿನ ಆರ್ಎಂಸಿ ಯಾರ್ಡ್ ಠಾಣಾ ಪೊಲೀಸರು ಎಫ್ಐಆರ್ ದಾಖಲಿರುವುದಾಗಿ ತಿಳಿಸಿದ್ದಾರೆ.
ಸಂತ್ರಸ್ತೆಯು ನೀಡಿದ ದೂರು ಆಧರಿಸಿ ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ, ಆತನ ಸಹಚರರಾದ ವಸಂತ, ಚನ್ನಕೇಶವ ಹಾಗೂ ಕಮಲ್ ಎಂಬುವರ ವಿರುದ್ಧ ಅತ್ಯಾಚಾರ ಆರೋಪದಡಿ ಆರ್ಎಂಸಿ ಯಾರ್ಡ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದೂರಿನಲ್ಲೇನಿದೆ?:
‘40 ವರ್ಷ ವಯಸ್ಸಿನ ಸಂತ್ರಸ್ತೆಯಾದ ತಾನು ಪೀಣ್ಯ 2ನೇ ಹಂತದ ನಿವಾಸಿಯಾಗಿದ್ದು, ಬಿಜೆಪಿ ಕಾರ್ಯಕರ್ತೆಯಾಗಿ ಗುರುತಿಸಿಕೊಂಡಿರುವೆ. ಮೊದಲ ಪತಿ ಬಿಟ್ಟು ಹೋಗಿದ್ದರಿಂದ ಐದು ವರ್ಷಗಳ ಹಿಂದೆ 2ನೇ ಮದುವೆ ಮಾಡಿಕೊಂಡು ಸಂಸಾರ ಮಾಡಿಕೊಂಡಿರುವೆ. ಈ ಮಧ್ಯೆ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಪೀಣ್ಯ ಪೊಲೀಸ್ ಠಾಣೆಯಲ್ಲಿ ಸುಳ್ಳು ಪ್ರಕರಣ ದಾಖಲಿಸುವಂತೆ ಮಾಡಿ ತನ್ನನ್ನು ಜೈಲಿಗೆ ಕಳುಹಿಸಲಾಗಿತ್ತು.
ಅಲ್ಲದೇ, ಕೊಲೆ ಯತ್ನ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲಾಗಿತ್ತು. ಜಾಮೀನು ಪಡೆದು ಹೊರಬಂದ ಬಳಿಕ 2023 ಜೂ.11ರಂದು ವಸಂತ್ ಹಾಗೂ ಆತನ ಸಹಚರರು ಆಗಮಿಸಿ ಶಾಸಕ ಮುನಿರತ್ನ ಅವರೊಂದಿಗೆ ಮಾತನಾಡಿದರೆ ನಿನ್ನ ಮೇಲಿನ ಪ್ರಕರಣ ಹಿಂಪಡೆಯುದಾಗಿ ಹೇಳಿ ಕಾರಿನಲ್ಲಿ ಜೆ.ಪಿ.ಪಾರ್ಕ್ ಬಳಿಯಿರುವ ಕಚೇರಿಗೆ ಕರೆದುಕೊಂಡು ಹೋಗಿದ್ದರು' ಎಂದು ದೂರಿನಲ್ಲಿ ಸಂತ್ರಸ್ತೆ ವಿವರಿಸಿದ್ದಾರೆ.
‘ಕಚೇರಿಗೆ ಕರೆದೊಯ್ದ ಬಳಿಕ ತನ್ನನ್ನು ಬಲವಂತವಾಗಿ ಕಟ್ಟಿ ಹಾಕಿ ಶಾಸಕ ಮುನಿರತ್ನ ಹಾಗೂ ಆತನ ಸಹಚರರು ತನ್ನನ್ನು ವಿವಸ್ತ್ರಗೊಳಿಸಿದರು. ಬಳಿಕ ಮುನಿರತ್ನ ಸೂಚನೆಯಂತೆ ವಸಂತ್ ಹಾಗೂ ಕಮಲ್ ಮೂಲಕ ತಮ್ಮ ಮೇಲೆ ಅತ್ಯಾಚಾರ ಮಾಡಿಸಿದರು' ಎಂದು ದೂರಿನಲ್ಲಿ ಸಂತ್ರಸ್ತೆ ಆರೋಪಿಸಿದ್ದಾರೆ.
‘ಅತ್ಯಾಚಾರದ ಬಳಿಕ ಶಾಸಕ ಮುನಿರತ್ನ ತನ್ನ ಮೇಲೆ ಮೂತ್ರ ವಿರ್ಸಜನೆ ಮಾಡಿದರು. ಬಳಿಕ ಅಪರಿಚಿತ ವ್ಯಕ್ತಿಯು ತಂದಿದ್ದ ಬಿಳಿ ಬಣ್ಣದ ಬಾಕ್ಸ್ನಲ್ಲಿದ್ದ ಇಂಜೆಕ್ಷನ್ ಚುಚ್ಚಿದ್ದಾರೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ಸಾಯಿಸುವುದಾಗಿ ಬೆದರಿಸಿದ್ದರು' ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.