×
Ad

ಗ್ಯಾರಂಟಿ ಯೋಜನೆಗಳನ್ನು ಪರಿಷ್ಕರಣೆ ಮಾಡುವುದಿಲ್ಲ : ಬಸವರಾಜ ರಾಯರೆಡ್ಡಿ

Update: 2024-08-16 21:33 IST

 ಬಸವರಾಜ ರಾಯರೆಡ್ಡಿ

ಬೆಂಗಳೂರು : ರಾಜ್ಯ ಕಾಂಗ್ರೆಸ್ ಸರಕಾರದ ಪಂಚ ಗ್ಯಾರಂಟಿಗಳ ಪರಿಷ್ಕರಣೆ ಮಾಡುವ ನಿರ್ಧಾರ ಇಲ್ಲ ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟನೆ ನೀಡಿದ್ದಾರೆ.

ಶುಕ್ರವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಹಣಕಾಸಿನ ವಿಚಾರವಾಗಿ ಸ್ವಲ್ಪ ಒತ್ತಡವಿದೆ. ಆದರೆ, ಮುಂದಿನ ವರ್ಷದಿಂದ ನಮಗೆ ಸಮಸ್ಯೆ ಆಗುವುದಿಲ್ಲ ಎಂಬ ವಿಶ್ವಾಸವಿದೆ. ಮುಂದಿನ ಬಜೆಟ್ 4 ಲಕ್ಷ ಕೋಟಿ ರೂ.ಗಿಂತ ಹೆಚ್ಚಾಗುತ್ತದೆ ಎಂದು ನುಡಿದರು.

ಗ್ಯಾರಂಟಿಗಳನ್ನು ಸರಕಾರಿ ನೌಕರರು ಪಡೆಯುತ್ತಿರುವ ಬಗ್ಗೆ ಕೆಲವರು ಆಕ್ಷೇಪ ಎತ್ತಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ, ಗ್ಯಾರಂಟಿ ಬಗ್ಗೆ ನಾವು ವಾರಂಟಿ ಕೊಡುತ್ತೇವೆ ಎಂದ ಅವರು, ಶೀಘ್ರದಲ್ಲಿಯೇ ಹಣಕಾಸು ಆಯೋಗ ರಾಜ್ಯಕ್ಕೆ ಭೇಟಿ ನೀಡಿ ಏನೆಲ್ಲಾ ತೊಂದರೆ, ಅನ್ಯಾಯವಾಗಿದೆ ಎಂದು ಚರ್ಚೆ ನಡೆಸಲಿದ್ದೇವೆ. ಮುಂದೆ ನಮ್ಮ ರಾಜ್ಯಕ್ಕೆ ನಿಗದಿಪಡಿಸಿದ ಹಣ ಬರಬೇಕು ಎಂದು ಹಣಕಾಸು ಆಯೋಗಕ್ಕೆ ಮನವಿ ಮಾಡುತ್ತೇವೆ ಎಂದು ತಿಳಿಸಿದರು.

ಅದು ಅಲ್ಲದೆ, 15ನೆ ಹಣಕಾಸು ಆಯೋಗದ ಶಿಫಾರಸಿನಂತೆ ಕರ್ನಾಟಕಕ್ಕೆ 11,500 ಕೋಟಿ ಬರಬೇಕಿತ್ತು. ಆದರೆ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‍ನಲ್ಲಿ ಹಣ ಕೊಟ್ಟಿದ್ದೇವೆಂದು ಹೇಳಿದ್ದಾರೆ. ಆದರೆ, ಅವರು ವಾಸ್ತವವಾಗಿ ಕೊಟ್ಟಿಲ್ಲ ಎಂದು ಟೀಕಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News