ಆಳಂದ ಕ್ಷೇತ್ರದ ಮತಗಳವು ಪ್ರಕರಣ | ತಪ್ಪಿತಸ್ಥರನ್ನು ಜೈಲಿಗೆ ಹಾಕಲಾಗುವುದು: ಸಚಿವ ಪ್ರಿಯಾಂಕ್ ಖರ್ಗೆ
ಸಚಿವ ಪ್ರಿಯಾಂಕ್ ಖರ್ಗೆ
ಬೆಂಗಳೂರು: 2023ರ ವಿಧಾನಸಭೆ ಚುನಾವಣೆಯ ವೇಳೆ ಕಲಬುರಗಿ ಜಿಲ್ಲೆಯ ಆಳಂದ ಕ್ಷೇತ್ರದಲ್ಲಿ ಮತದಾರರ ಪಟ್ಟಿಯಿಂದ ಮತದಾರರ ಹೆಸರು ಅಳಿಸಲು ಹಣ ನೀಡಿರುವ ವಿಚಾರದಲ್ಲಿ ನಾವು ಇಷ್ಟು ದಿನ ಹೇಳುತ್ತಿದ್ದ ವಿಷಯ ವಿಶೇಷ ತನಿಖಾ ತಂಡದ (ಎಸ್ಐಟಿ) ತನಿಖೆಯಿಂದ ದೃಢಪಟ್ಟಿದೆ' ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಶುಕ್ರವಾರ ಈ ಸಂಬಂಧ ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಅವರು, ‘ಎಲ್ಲ ತನಿಖೆಗಳು ಇದೀಗ ಬಿಜೆಪಿ ನಾಯಕರು ಮತ್ತವರ ಸಹಚರರ ಅಕ್ರಮವನ್ನು ಎತ್ತಿ ತೋರಿಸುತ್ತವೆ. ಬಿಜೆಪಿಯ ಮತಗಳ್ಳತನದ ಕೊಳಕು ತಂತ್ರ ಮತ್ತು ಕಾರ್ಯವೈಖರಿಯನ್ನು ಬಹಿರಂಗಪಡಿಸುತ್ತಿವೆ. ಈ ವಿಷಯದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರನ್ನು ಹೊಣೆಗಾರರನ್ನಾಗಿ ಮಾಡಿ ಜೈಲಿಗೆ ಹಾಕಲಾಗುವುದು' ಎಂದು ಎಚ್ಚರಿಕೆ ನೀಡಿದ್ದಾರೆ.
2023ರ ವಿಧಾನಸಭೆ ಚುನಾವಣೆಗೆ ಮುನ್ನ, ಆಳಂದ ಕ್ಷೇತ್ರದಲ್ಲಿ ಪ್ರತಿಯೊಂದು ಮತವನ್ನು ಅಳಿಸಲು 80 ರೂ.ನಂತೆ ಹಣ ನೀಡುವ ಮೂಲಕ ಸುಮಾರು 6ಸಾವಿರಕ್ಕೂ ಅಧಿಕ ಮತದಾರರನ್ನು ಮತದಾರರ ಪಟ್ಟಿಯಿಂದಲೇ ತೆಗೆದು ಹಾಕಲು ಯತ್ನಿಸಲಾಗಿತ್ತು. ಆ ಮೂಲಕ ಪ್ರಜಾಪ್ರಭುತ್ವ ನಾಶಕ್ಕೆ ಯತ್ನಿಸಿದ್ದರು ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.