SIR ಪ್ರಕ್ರಿಯೆ ಅವಧಿ ವಿಸ್ತರಣೆಗೆ ಕೋರಿ ಸಲ್ಲಿಕೆಯಾಗಿದ್ದ ಪಿಐಎಲ್ ಇತ್ಯರ್ಥಪಡಿಸಿದ ಹೈಕೋರ್ಟ್

Update: 2026-07-28 17:44 IST

ಬೆಂಗಳೂರು : ರಾಜ್ಯದಲ್ಲಿ ನಡೆಯುತ್ತಿರುವ 'ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ' (ಎಸ್ಐಆರ್) ಅವಧಿಯನ್ನು ಒಂದರಿಂದ ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿರುವ ಅರ್ಜಿಯನ್ನು ಅವಧಿಪೂರ್ವವಾಗಿ ಸಲ್ಲಿಕೆ ಮಾಡಲಾಗಿರುವುದರಿಂದ ಅದನ್ನು ಪರಿಗಣಿಸಲಾಗದು ಎಂದಿರುವ ಹೈಕೋರ್ಟ್‌ ಅರ್ಜಿ ಇತ್ಯರ್ಥಪಡಿಸಿದೆ.

ಎಸ್‌ಐಆರ್ ಕಾಲಮಿತಿಯನ್ನು ಒಂದರಿಂದ ಮೂರು ತಿಂಗಳವರೆಗೆ ವಿಸ್ತರಿಸುವಂತೆ ಕೋರಿ ಸಾಹಿತಿ ದೇವನೂರು ಮಹದೇವ, ಇತಿಹಾಸ ತಜ್ಞ ರಾಮಚಂದ್ರ ಗುಹಾ ಮತ್ತಿತರರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮಂಗಳವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠ, ಈ ಹಂತದಲ್ಲಿ ಅರ್ಜಿಯನ್ನು ಅವಧಿಪೂರ್ವವಾಗಿ ಸಲ್ಲಿಕೆ ಮಾಡಿರುವುದರಿಂದ ಅದನ್ನು ವಿಚಾರಣೆಗೆ ಪರಿಗಣಿಸಲಾಗದು ಎಂದು ಆದೇಶಿಸಿತು.

ಹಾಲಿ ಅರ್ಜಿಯಲ್ಲಿ ಎತ್ತಿರುವ ಎಸ್‌ಐಆರ್‌ ಸಂಬಂಧಿತ ವಿಚಾರಗಳು ಸುಪ್ರೀಂಕೋರ್ಟ್‌ ಪರಿಗಣನೆಯಲ್ಲಿವೆ. ಆದ್ದರಿಂದ, ಈ ಹಂತದಲ್ಲಿ ಹಾಲಿ ಅರ್ಜಿಯನ್ನು ಹೈಕೋರ್ಟ್ ಪರಿಗಣಿಸುವುದು ಸೂಕ್ತವಲ್ಲ ಎಂಬ ಅಂಶಗಳನ್ನು ಉಲ್ಲೇಖಿಸಿ ನ್ಯಾಯಪೀಠ ಅರ್ಜಿ ವಿಲೇವಾರಿ ಮಾಡಿತು.

ಹೈಕೋರ್ಟ್ ಆದೇಶವೇನು?

ಎಸ್‌ಐಆರ್‌ ನಡೆಸುವುದಕ್ಕೆ ಅಳವಡಿಸಿಕೊಂಡಿರುವ ಪ್ರಕ್ರಿಯೆಯನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿದೆ. ಆಯೋಗವು ಎಸ್‌ಐಆರ್‌ ನಡೆಸಲು ವಿಶೇಷ ಸಂಸ್ಥೆಯಾಗಿದ್ದು, ಪ್ರಕ್ರಿಯೆಯಲ್ಲಿ ಎದುರಾಗುವ ಸಮಸ್ಯೆಯನ್ನು ನಿವಾರಿಸಲು ಬದ್ಧವಾಗಿಲ್ಲ ಎಂದು ಹೇಳಲು ಯಾವುದೇ ಕಾರಣವಿಲ್ಲ. ಎಸ್‌ಐಆರ್‌ ಪೂರ್ಣಗೊಳಿಸಲು ನಿಗದಿಪಡಿಸಿರುವ ಕಾಲಮಿತಿಯ ವಿಚಾರ ಆಯೋಗದ ವಿಶೇಷ ವ್ಯಾಪ್ತಿಗೆ ಒಳಪಟ್ಟಿದ್ದು, ಈ ವಿಚಾರವನ್ನು ಈ ಹಂತದಲ್ಲಿ ಈ ನ್ಯಾಯಾಲಯ ನಿರ್ಧರಿಸಲಾಗದು. ಜತೆಗೆ, ಮತದಾರರ ದೃಷ್ಟಿಯನ್ನು ಕೇಂದ್ರೀಕರಿಸಿ ರಾಜ್ಯ ಸರ್ಕಾರ ಚುನಾವಣಾ ಆಯೋಗಕ್ಕೆ ವಿವಿಧ ವಿಚಾರಗಳನ್ನು ಪ್ರಸ್ತಾಪಿಸಿ ಮನವಿ ಸಲ್ಲಿಸಿದೆ. ಇದಕ್ಕೆ ಆಯೋಗವು ಸೂಕ್ತ ಗಮನ ನೀಡುವುದಿಲ್ಲ ಎಂದು ಭಾವಿಸಲು ಯಾವುದೇ ಆಧಾರವಿಲ್ಲ ಎಂದೂ ಹೈಕೋರ್ಟ್‌ ಆದೇಶದಲ್ಲಿ ಉಲ್ಲೇಖಿಸಿದೆ.

ವಾದ-ಪ್ರತಿವಾದ:

ಇದಕ್ಕೂ ಮುನ್ನ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲ ವಿಕ್ರಮ್‌ ಹುಯಿಲಗೋಳ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಭಾಗಿಯಾಗಿರುವ ಬಿಎಲ್‌ಒಗಳಿಗೆ 10 ದಿನ ಮಾತ್ರ ತರಬೇತಿ ನೀಡಲಾಗಿದೆ. ಅಂಗನವಾಡಿ ಕಾರ್ಯಕರ್ತರು, ಶಿಕ್ಷಕರನ್ನು ಈ ಕೆಲಸಕ್ಕೆ ನಿಯೋಜಿಸಲಾಗಿದೆ. ಕರಡು ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲದವರಿಗೆ ಆಗಸ್ಟ್‌ 5ರಿಂದ ಸೆಪ್ಟೆಂಬರ್‌ 4ರವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಆನಂತರ, ಒಂದು ತಿಂಗಳಲ್ಲಿ ತೀರ್ಮಾನ ಕೈಗೊಳ್ಳಲಾಗುತ್ತದೆ. ಬಿಹಾರದಲ್ಲಿ ಇದೇ ನೀತಿ ಪಾಲಿಸಲಾಗಿತ್ತು. ಬಿಹಾರದಲ್ಲಿ ಚುನಾವಣೆ ಇತ್ತು. ಆದರೆ, ಕರ್ನಾಟಕದಲ್ಲಿ 2028ರಲ್ಲಿ ಚುನಾವಣೆ ನಡೆಯುತ್ತದೆ. ಆದ್ದರಿಂದ, ಇಲ್ಲಿ ಕಾಲಾವಕಾಶ ನೀಡಬಹುದು. ಸುಮಾರು 70 ಲಕ್ಷ ಮಂದಿ ಎಸ್‌ಐಆರ್‌ ಪ್ರಕ್ರಿಯೆಯಿಂದಾಗಿ ಮತದಾನದ ಹಕ್ಕಿನಿಂದ ವಂಚಿತವಾಗಲಿದ್ದಾರೆ ಎನ್ನಲಾಗಿದೆ. ಎಸ್‌ಐಆರ್‌ ನಗರ ಕೇಂದ್ರಿತ ಜನ ಮಾತ್ರವಲ್ಲ, ಗ್ರಾಮೀಣ, ಅನಕ್ಷರಸ್ಥರೂ ಸೇರಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಕಾಲಾವಕಾಶ ನೀಡಲು ನಿರ್ದೇಶಿಸಬೇಕು ಎಂದು ಕೋರಿದರು.

ಭಾರತೀಯ ಚುನಾವಣಾ ಆಯೋಗದ (ಇಸಿಐ) ಪರ ವಕೀಲರು ವಾದ ಮಂಡಿಸಿ, ಅರ್ಜಿದಾರರು ಕರಡು ಪಟ್ಟಿ ಪ್ರಕಟವಾಗುವುದರೊಳಗೆ ಎಲ್ಲವನ್ನೂ ಮಾಡಬೇಕು ಎನ್ನುತ್ತಿದ್ದಾರೆ. ಒಂದೊಮ್ಮೆ ಅಗತ್ಯ ಎನಿಸಿದರೆ ಆಯೋಗ ಕಾಲಮಿತಿಯನ್ನು ವಿಸ್ತರಿಸಲಿದೆ. ಕಾಲಮಿತಿ ನಿಗದಿಪಡಿಸಿರುವುದಕ್ಕೆ ಸಂಬಂಧಿಸಿದಂತೆ ಇಸಿಐ ಎಚ್ಚರಿಕೆ ವಹಿಸಿದ್ದು, ಎಸ್‌ಐಆರ್‌ ಪ್ರಕ್ರಿಯೆ ಪೂರ್ಣಗೊಳಿಸಲು ಸಮಸ್ಯೆಯಾದರೆ ಆಯೋಗ ಅಗತ್ಯ ಕ್ರಮಕೈಗೊಳ್ಳಲಿದೆ. ಕರಡು ಮತಪಟ್ಟಿ ಬಿಡುಗಡೆ ಮಾಡುವುದಕ್ಕೂ ಮುನ್ನ ಹೆಸರು ಇಲ್ಲದವರಿಗೆ ನೋಟಿಸ್‌ ಜಾರಿಗೊಳಿಸಬೇಕು ಎಂಬುದು ಸರಿಯಲ್ಲ. ಕರಡು ಪರಿಷ್ಕತ ಮತಪಟ್ಟಿ ಬಿಡುಗಡೆಯಾದ ಬಳಿಕ ನೋಟಿಸ್‌ ಜಾರಿಗೊಳಿಸಲಾಗುವುದು ಎಂದರು.

ರಾಜ್ಯ ಸರ್ಕಾರದ ಪರ ಹಾಜರಿದ್ದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು, ಸಚಿವ ಸಂಪುಟ ಕೆಲ ಸಲಹೆ, ಶಿಫಾರಸುಗಳನ್ನು ಆಯೋಗಕ್ಕೆ ಮಾಡಿದೆ. ಇದುವರೆಗೆ ಆಯೋಗ ಪ್ರತಿಕ್ರಿಯೆ ನೀಡಿಲ್ಲ. ಜನರ ಮೂಲಭೂತ ಹಕ್ಕು ರಕ್ಷಿಸಬೇಕು ಎಂದು ಕೋರಲಾಗಿದೆ. ಕಾಲಮಿತಿಯ ಅನುಗುಣವಾಗಿ ಹೋಗದೆ ಜನರ ಅನುಕೂಲಕ್ಕೆ ತಕ್ಕಂತೆ ಕ್ರಮಕೈಗೊಳ್ಳುವಂತೆ ಆಯೋಗಕ್ಕೆ ಮನವಿ ಮಾಡಲಾಗಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News