ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ ಅರ್ಥವಾಗುತ್ತಿಲ್ಲ: ಸಿಎಂ ಸಿದ್ದರಾಮಯ್ಯ
Update: 2025-08-22 23:50 IST
ಬೆಂಗಳೂರು: ತಮಿಳುನಾಡಿಗೆ ನಾವು ಕೆಆರ್ ಎಸ್ ಅಣೆಕಟ್ಟೆಯಿಂದ 177.25 ಟಿಎಂಸಿ ನೀರು ಬಿಡುಗಡೆ ಮಾಡಬೇಕು. ಆದರೆ, ಈಗಾಗಲೇ, ಅದಕ್ಕಿಂತ ಹೆಚ್ಚಿನ ಪ್ರಮಾಣದ ನೀರು ಹರಿದು ಹೋಗಿದೆ. ಅದಕ್ಕಾಗಿಯೆ ಮೇಕೆದಾಟು ಯೋಜನೆ ಕೈಗೊಳ್ಳಲು ನಮ್ಮ ಸರಕಾರ ಬಯಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶುಕ್ರವಾರ ವಿಧಾನಸಭೆಯಲ್ಲಿ ನಿಯಮ 69ರ ಅಡಿಯಲ್ಲಿ ಬೆಂಗಳೂರು ಅಭಿವೃದ್ಧಿ ಕಾರ್ಯಗಳ ಸಮಸ್ಯೆಗಳು, ಅತಿವೃಷ್ಟಿಯಿಂದಾಗಿರುವ ನಷ್ಟ ಹಾಗೂ ಕೇಂದ್ರದ ಅನುದಾನಗಳ ಬಗ್ಗೆ ನಡೆದಿದ್ದ ಚರ್ಚೆಗೆ ಅವರು ಉತ್ತರಿಸಿದರು.
ಆದರೆ, ಈ ಯೋಜನೆಗೆ ತಮಿಳುನಾಡು ಯಾಕೆ ವಿರೋಧ ಮಾಡುತ್ತಿದೆ ಎಂದು ಗೊತ್ತಿಲ್ಲ. ಸುಮಾರು 67 ಟಿಎಂಸಿ ನೀರು ಮೇಕೆದಾಟು ಬಳಿ ನಿರ್ಮಿಸುವ ಜಲಾಶಯದಲ್ಲಿ ಶೇಖರಣೆ ಮಾಡಬಹುದಾಗಿದೆ. ಈ ಯೋಜನೆಯಿಂದಾಗಿ ತಮಿಳುನಾಡಿಗೆ ಯಾವುದೆ ನಷ್ಟವಾಗುವುದಿಲ್ಲ. ಎರಡು ರಾಜ್ಯಗಳಿಗೆ ಅನುಕೂಲ ಆಗುತ್ತದೆ. ಅನಾವೃಷ್ಟಿ ಸಂದರ್ಭದಲ್ಲಿ ಈ ಜಲಾಶಯದಲ್ಲಿನ ನೀರು ಬಳಸಿಕೊಳ್ಳಬಹುದು ಎಂದು ಅವರು ಹೇಳಿದರು.