×
Ad

ಕುರ್ಚಿ ಕಿತ್ತಾಟ ಮುಂದುವರೆದರೆ ರಾಜ್ಯ ಅಲ್ಲೋಲ ಕಲ್ಲೋಲ: ಬಸವರಾಜ ಬೊಮ್ಮಾಯಿ

Update: 2025-11-28 19:27 IST

ಹಾವೇರಿ: ಕಾಂಗ್ರೆಸ್‍ನಲ್ಲಿ ಕುರ್ಚಿ ಕಿತ್ತಾಟ ಇದೇ ರೀತಿ ಮುಂದುವರೆದರೆ ರಾಜ್ಯದ ರಾಜಕೀಯ ಅಲ್ಲೋಲ-ಕಲ್ಲೋಲ ಆಗುವ ಸಾಧ್ಯತೆ ಇದೆ. ಕೇಂದ್ರದ ಕಾಂಗ್ರೆಸ್ ನಾಯಕರು ಇದನ್ನು ಬಗೆ ಹರಿಸಲು ಎರಡು ಮೂರು ಸೂತ್ರ ಬಿಟ್ಟರೂ, ಇಬ್ಬರೂ ನಾಯಕರೂ ಒಪ್ಪುತ್ತಿಲ್ಲ. ಇಬ್ಬರನ್ನೂ ಬಿಟ್ಟು ಬೇರೆ ಸೂತ್ರ ತಯಾರು ಮಾಡುವ ಮಾಹಿತಿ ಇದೆ. ಕಪ್ಪು ಕುದುರೆ ರೇಸ್‍ಗೆ ಬರುವ ಸಾಧ್ಯತೆ ಇದೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಶುಕ್ರವಾರ ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕುರ್ಚಿಗಾಗಿ ನಡೆಯುತ್ತಿರುವ ಹಗ್ಗ ಜಗ್ಗಾಟ ತೀವ್ರ ಸ್ವರೂಪ ಪಡೆದಿದೆ. ಕಾಂಗ್ರೆಸ್ ಹೈಕಮಾಂಡ್ ಅಸಹಾಯಕವಾಗಿದೆ. ಆಡಳಿತ ಸಂಪೂರ್ಣ ಕುಸಿತಗೊಂಡಿದೆ. ರಾಜ್ಯದಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಹೇಳಿದರು.

ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತಗೊಂಡಿವೆ. ಇಬ್ಬರೂ ನಾಯಕರು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದಾರೆ. ರಾಜ್ಯ ರಾಜಕಾರಣದಲ್ಲಿ ಏನು ಬೇಕಾದರೂ ಆಗಬಹುದು. ಈಗ ಕಾಣದಿರುವ ಕುದುರೆ ಕಾಣಬಹುದು. ಫೋಟೊದಲ್ಲಿ ಇರುವ ಕುದುರೆ ಓಡುವುದಿಲ್ಲ. ರಾಜ್ಯದಲ್ಲಿ ಏನಾದರೂ ಆಗಬಹುದು ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೆಳಗಾವಿ ಅಧಿವೇಶನದಲ್ಲಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಅವಿಶ್ವಾಸ ನಿರ್ಣಯ ಮಂಡಿಸಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಡಿಸೆಂಬರ್ 8ರ ವರೆಗೂ ಸಮಯ ಇದೆ. ಅಂತಹ ಸಂದರ್ಭ ಬಂದರೆ ಅವಿಶ್ವಾಸ ನಿರ್ಣಯ ಮಂಡಿಸುವ ಪ್ರಸಂಗ ಬರಬಹುದು ಎಂದರು.

ಕುದುರೆ ವ್ಯಾಪಾರ ಮಾಡುವುದು ಬಿಜೆಪಿಯವರ ಕೆಲಸ ಕಾಂಗ್ರೆಸ್‍ನವರ ಕೆಲಸ ಅಲ್ಲ ಎಂದು ಸಚಿವ ಸತೀಶ್ ಜಾರಕಿಹೊಳಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಬಸರಾಜ ಬೊಮ್ಮಾಯಿ, ಕಾಂಗ್ರೆಸ್‍ವರು 1969 ರಿಂದಲೆ ಕುದುರೆ ವ್ಯಾಪಾರ ಆರಂಭ ಮಾಡಿದ್ದಾರೆ. ಆಗ ಜಾರಕಿಹೊಳಿ ಇನ್ನೂ ರಾಜಕಾರಣದಲ್ಲಿಯೆ ಇರಲಿಲ್ಲ, ಕಾಂಗ್ರೆಸ್ ಇತಿಹಾಸ ತೆಗೆದು ನೋಡಿದರೆ ಗೊತ್ತಾಗಲಿದೆ ಎಂದು ತಿರುಗೇಟು ನೀಡಿದರು.

ಮಹಾರಾಷ್ಟ್ರದ ಎಲ್ಲ ಶಾಸಕರನ್ನು ಡಿ.ಕೆ.ಶಿವಕುಮಾರ್ ಕರೆದುಕೊಂಡು ಬಂದು ವಿಲಾಸ್ ರಾವ್ ದೇಶಮುಖ ಅವರನ್ನು ಕಂಟೋಲ್ ನಲ್ಲಿ ಇಟ್ಟುಕೊಂಡಿದ್ದು ಗೊತ್ತಿಲ್ಲವೇ? ಎಂದು ಬಸವರಾಜ ಬೊಮ್ಮಾಯಿ ಪ್ರಶ್ನಿಸಿದರು.

ಸರಕಾರದಲ್ಲಿ ದುಡ್ಡಿಲ್ಲ: ಮೆಕ್ಕೆಜೋಳ ಖರೀದಿ ವಿಚಾರದಲ್ಲಿ ರಾಜ್ಯ ಸರಕಾರ ಕೇಂದ್ರದ ಕಡೆಗೆ ಬೆರಳು ಮಾಡುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಮೆಕ್ಕೆಜೋಳ ವಿಚಾರದಲ್ಲಿ ಸುಮ್ಮನೆ ಕೇಂದ್ರದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ. ಮುಖ್ಯಮಂತ್ರಿ 10 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಲು ಆದೇಶ ಮಾಡಿದ್ದಾರೆ. ಯಾಕೆ ಖರೀದಿ ಮಾಡುತ್ತಿಲ್ಲ. ಯಾಕೆ ಎಜೆನ್ಸಿ ನಿಗದಿ ಮಾಡಿಲ್ಲ. ಯಾಕೆ ಹಣ ಬಿಡುಗಡೆ ಮಾಡಿಲ್ಲ ಎಂದು ಪ್ರಶ್ನಿಸಿದರು.

ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಕೇಂದಕ್ಕೆ ನಿಯೋಗ ತೆಗೆದುಕೊಂಡು ಹೋಗುವ ಕುರಿತು ಸಚಿವ ಶಿವಾನಂದ ಪಾಟೀಲರು ಹೇಳಿರುವ ಮಾತಿಗೆ ಪ್ರತಿಕ್ರಿಯಿಸಿದ ಬಸವರಾಜ ಬೊಮ್ಮಾಯಿ, ನಿಯೋಗ ತೆಗೆದುಕೊಂಡು ಹೋಗಿ ಏನು ಮಾಡುವುದು. ಅವರು ಮೊದಲು ಖರೀದಿ ಆರಂಭಿಸಿಲಿ, ನಾನು ಅವರ ಜಾಗದಲ್ಲಿ ಇದ್ದಿದ್ದರೆ ಆ ಕೆಲಸ ಮಾಡುತ್ತಿದ್ದೆ ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News