ವಿಭಜಕ ರಾಜಕಾರಣ ಮುಂದೆ ‘ಅಲ್ಪಸಂಖ್ಯಾತರು ಕನ್ನಡ ಕಲಿಯುವುದು ಬಹುಮುಖ್ಯ: ಡಾ. ಪುರುಷೋತ್ತಮ ಬಿಳಿಮಲೆ
It is very important for minorities to learn Kannada: Dr. Purushottam Bilimale
ಬೆಂಗಳೂರು: ಇಂದಿನ ದಿನಮಾನಗಳಲ್ಲಿ ಅಲ್ಪಸಂಖ್ಯಾತ ಮತ್ತು ಬಹುಸಂಖ್ಯಾತ ಸಮುದಾಯಗಳ ನಡುವೆ ಸಾಮರಸ್ಯ ಕದಡುವ ವಿಭಜಕ ರಾಜಕಾರಣ ವಿಜೃಂಭಿಸುತ್ತಿದೆ. ಹೀಗಾಗಿ, ಇದರ ಎದುರಾಗಿ ಅಲ್ಪಸಂಖ್ಯಾತರು ಕನ್ನಡ ಭಾಷೆ ಕಲಿಯವುದು ಬಹುಮುಖ್ಯವಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಪಟ್ಟಿದ್ದಾರೆ.
ಮಂಗಳವಾರ ನಗರದ ಶೇಷಾದ್ರಿಪುರಂ ಮುಖ್ಯ ರಸ್ತೆಯಲ್ಲಿರುವ ಕೆಎಂಡಿಸಿ ಭವನದ ಸಭಾಂಗಣದಲ್ಲಿ ರಾಜ್ಯ ಅಲ್ಪಸಂಖ್ಯಾತರ ಆಯೋಗ ಮತ್ತು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಮ್ಮಿಕೊಂಡಿದ್ದ, ‘ಮದ್ರಸಾ ಶಿಕ್ಷಕರಿಗೆ ಕನ್ನಡ ಕಲಿಸುವ ಅಭಿಯಾನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ರಾಜ್ಯದಲ್ಲಿ ಅಲ್ಪಸಂಖ್ಯಾತ ಸಮುದಾಯ ಕನ್ನಡವನ್ನು ನಿರೀಕ್ಷಿತ ಮಟ್ಟದಲ್ಲಿ ಕಲಿಯದೆ ಇರುವುದಕ್ಕೂ ವಿಭಜಕ ರಾಜಕಾರಣವೇ ಕಾರಣವಾಗಿದೆ. ಆದರೆ, ಸಾಮರಸ್ಯದ ದೃಷ್ಟಿಯಿಂದ ರಾಜ್ಯ ಭಾಷೆಯನ್ನು ಕಲಿಯಲು ಮುಂದಾಗಬೇಕಿದೆ. ಈ ನಿಟ್ಟಿನಲ್ಲಿ ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಕನ್ನಡ ಕಲಿಸುವ ಪ್ರಯತ್ನವನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮಾಡುತ್ತಿದ್ದು, ಕಲಿಕೆ ಕುರಿತು ನೂತನ ಕಾರ್ಯಕ್ರಮಗಳನ್ನು ರೂಪಿಸಿದೆ ಎಂದು ಅವರು ಹೇಳಿದರು.
ನಾಟಕ, ಯಕ್ಷಗಾನ, ಕಲೆ ಸೇರಿದಂತೆ ಹಲವು ಕಡೆಗಳಲ್ಲಿ ಉದ್ದೇಶ ಪೂರಕವಾಗಿ ಮುಸ್ಲಿಮರಿಗೆ ಕನ್ನಡ ಭಾಷೆ ಮಾತನಾಡಲು ಬರುವುದಿಲ್ಲ ಎಂದು ಅಪಹಾಸ್ಯ ಮಾಡಲಾಗುತ್ತಿದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ. ಭಾಷೆಯ ಕಾರಣದಿಂದಾಗಿ ಯಾವುದೇ ಸಮುದಾಯಗಳು ಅವಮಾನಕ್ಕೊಳಗಾಗಬಾರದು ಎನ್ನುವುದು ನನ್ನ ನಿಲುವು ಆಗಿದೆ. ಆದರೆ, ರಾಜ್ಯ ಭಾಷೆಯನ್ನು ಕಲಿತ ಯಾವುದೇ ಸಮುದಾಯ ತಾನು ವಾಸಿಸುವ ನಾಡಿನಲ್ಲಿ ಸಾಮರಸ್ಯದಿಂದ ಜೀವಿಸುವ ತನ್ನದೇ ಆದ ಚೈತನ್ಯವನ್ನು ಪಡೆಯುತ್ತದೆ. ಹಾಗಾಗಿ ಅಲ್ಪಸಂಖ್ಯಾತರು ಕನ್ನಡವನ್ನು ಕಲಿಯುವುದು ಬಹಳ ಮುಖ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರ ವಿದ್ಯಾರ್ಥಿ ಸಮೂಹದ ಉಪಯೋಗಕ್ಕಾಗಿ ‘ಕನ್ನಡ ಭಾಷಾ ಸಾಮರಸ್ಯದ ನೆಲೆಗಳು’ ಎನ್ನುವ ಶೀರ್ಷಿಕೆಯಡಿಯಲ್ಲಿ ನೂರು ಪುಸ್ತಕಗಳನ್ನು ಹೊರ ತರುವ ಕೆಲಸವನ್ನು ಮಾಡುತ್ತಿದ್ದು, ಅತಿ ಶೀಘ್ರದಲ್ಲಿ ಇವು ಲೋಕಾರ್ಪಣೆಗೊಳ್ಳಲಿವೆ ಎಂದು ಪುರುಷೋತ್ತಮ ಬಿಳಿಮಲೆ ಮಾಹಿತಿ ನೀಡಿದರು.
ಭಾಷೆ ಮೂಲತಃ ಧಾರ್ಮಿಕವಲ್ಲ. ಅದು ಯಾವತ್ತಿಗೂ ಜಾತ್ಯತೀತವೇ ಎಂದ ಅವರು, ಮೊಘಲ್ ದೊರೆ ಅಕ್ಬರ್ ಅವರ ತಾಯಿ ರಾಮಾಯಣ ಗ್ರಂಥವನ್ನು ಪರ್ಷಿಯನ್ ಭಾಷೆಗೆ ಅನುವಾದಿಸಿದ್ದಾರೆ. ಮತ್ತೊರ್ವ ಮೊಘಲ್ ದೊರೆಯೂ ಹಲವು ಉಪನಿಷತ್ಗಳನ್ನು ಭಾಷಾಂತರ ಮಾಡಿಸಿರುವ ಇತಿಹಾಸವೇ ಇದೆ. ಆದರೆ, ಈಗ ಕೇಂದ್ರ ಸರಕಾರ ಇಂತಹ ಮೊಘಲ್ ಇತಿಹಾಸವನ್ನೆ ಪಠ್ಯ ಪುಸ್ತಕಗಳಿಂದ ತೆಗೆಯಲು ಮುಂದಾಗಿರುವುದು ಬೇಸರ ತಂದಿದೆ ಎಂದರು.
ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಯು.ನಿಸಾರ್ ಅಹ್ಮದ್ ಮಾತನಾಡಿ, ಧರ್ಮ ಮತ್ತು ಭಾಷೆಗೆ ಯಾವುದೇ ನಂಟಿಲ್ಲ. ಭಾಷೆ ಎನ್ನುವುದು ಸಂವಹನದ ಒಂದು ಸಾಧನವಾಗಿದೆ. ಹೀಗಾಗಿ, ರಾಜ್ಯದಲ್ಲಿ ಆಡಳಿತ ಭಾಷೆಯಾಗಿರುವ ಕನ್ನಡವನ್ನು ನಾವು ಕಲಿಯಬೇಕಾಗಿದೆ. ಈ ನಿಟ್ಟಿನಲ್ಲಿ ಕನ್ನಡ ಕಲಿಕೆಗೆ ಸಂಬಂಧಿಸಿದಂತೆ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ ಅವರ ನೇತೃತ್ವದಲ್ಲಿ ಪ್ರತ್ಯೇಕ ಪಠ್ಯವನ್ನು ಸಿದ್ಧಪಡಿಸಲಾಗಿದ್ದು, 36 ಗಂಟೆಗಳ ತರಗತಿ ನಡೆಸಲಾಗುತ್ತದೆ. ಸಂವಹನಕ್ಕೆ ಸಹಕಾರಿಯಾದ ಸರಳ ಕನ್ನಡದ ಪಠ್ಯ ಇದಾಗಿದೆ ಎಂದು ವಿವರಿಸಿದರು.
ಸಮಾರಂಭದಲ್ಲಿ ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕೆಎಂಡಿಸಿ ಅಧ್ಯಕ್ಷ ಅಲ್ತಾಫ್ ಖಾನ್, ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್, ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕರೂ ಆದ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯ ಅಬ್ದುಸ್ಸಲಾಮ್ ಪುತ್ತಿಗೆ, ಕಾರ್ಯದರ್ಶಿ ಡಾ.ಮಾಜುದ್ದೀನ್ ಖಾನ್, ಮೌಲಾನಾ ಸೈಯದ್ ಶಬ್ಬೀರ್ ಅಹ್ಮದ್ ನದ್ವಿ, ಮುಫ್ತಿ ಶಂಸುದ್ದೀನ್ ಬಜ್ಲಿ, ನಿವೃತ್ತ ಡಿಸಿಪಿ ಜಿ.ಎ.ಬಾವಾ ಸೇರಿದಂತೆ ಪ್ರಮುಖರಿದ್ದರು.
‘ಮುಂದಿನ ದಿನಗಳಲ್ಲಿ ರಾಜ್ಯದಲ್ಲಿರುವ ಎಲ್ಲ 2 ಸಾವಿರ ಮದ್ರಸಾಗಳಲ್ಲಿ ಕನ್ನಡ ಕಲಿಕೆಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮುಂದಾಗಿದ್ದು, ಇದಕ್ಕೆ ಸಂಪೂರ್ಣ ಸಹಕಾರವನ್ನು ರಾಜ್ಯ ಅಲ್ಪಸಂಖ್ಯಾತರ ಆಯೋಗವು ನೀಡಲಿದೆ. ಜತೆಗೆ, ಈ ಕುರಿತಾದ ಪಠ್ಯಕ್ರಮವನ್ನು ಅಲ್ಪಸಂಖ್ಯಾತರ ಆಯೋಗವು ಪ್ರಾಧಿಕಾರದ ಸಲಹೆಯಂತೆ ಮುದ್ರಿಸಲು ಕ್ರಮವಹಿಸಲಿದೆ’
-ಯು.ನಿಸಾರ್ ಅಹ್ಮದ್, ಅಧ್ಯಕ್ಷ, ರಾಜ್ಯ ಅಲ್ಪಸಂಖ್ಯಾತರ ಆಯೋಗ
ದೇಶಕ್ಕೆ ಮುಸಲ್ಮಾನರ ಕೊಡುಗೆ ದೊಡ್ಡದು:
‘ಸ್ವಾತಂತ್ರ್ಯ ಪೂರ್ವದಲ್ಲಿ ಮುಸಲ್ಮಾನರು ಕೇವಲ ಆಂಗ್ಲರನ್ನು ವಿರೋಧಿಸಲಿಲ್ಲ. ಬದಲಿಗೆ ಆಂಗ್ಲ ಭಾಷೆಯನ್ನೂ ವಿರೋಧಿಸಿ ದೇಶೀಯತೆಗೆ ಬೆನ್ನುಲುಬಾಗಿ ನಿಂತರು. 1947ರಲ್ಲಿ ಬ್ರಿಟಿಷರು ಭಾರತವನ್ನು ಬಿಟ್ಟು ಹೋದಾಗ ಆಂಗ್ಲ ಭಾಷೆಯನ್ನು ಕಲಿಯಲಿಲ್ಲವೆನ್ನುವ ಹತಾಶೆಗೆ ಯಾವುದೇ ಮುಸ್ಲಿಮರು ಒಳಗಾಗಲಿಲ್ಲ. ಬದಲಿಗೆ ಅಲಿಗಡ್ ಮುಸ್ಲಿಮ್ ವಿಶ್ವವಿದ್ಯಾಲಯದಂತಹ ಸಮರ್ಥ ಸಂಸ್ಥೆಯನ್ನು ಸ್ಥಾಪಿಸಿ ದೇಶೀಯತೆಯನ್ನು ಪೋಷಿಸಿದರು. ಆದರೆ ಹಿಂದಿಯ ಪ್ರಾಬಲ್ಯದಿಂದಾಗಿ ಉರ್ದು ಕೂಡಾ ಕಳೆಗುಂದಿತು. ಅದೇ ರೀತಿ, ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಮುಸ್ಲಿಮರು ಬಲಿದಾನ ನೀಡಿದರು. ಇಂತಹ ಕೊಡುಗೆಯನ್ನು ದೇಶ ಎಂದಿಗೂ ಮರೆಯಲು ಸಾಧ್ಯವಿಲ್ಲ’ ಎಂದು ಡಾ.ಪುರುಷೋತ್ತಮ ಉಲ್ಲೇಖಿಸಿದರು.
ರಾಜ್ಯದಲ್ಲಿ 850ಕ್ಕೂ ಮುಸ್ಲಿಮ್ ಬರಹಗಾರರು:
ಕರ್ನಾಟಕದಲ್ಲಿ ಸುಮಾರು 850ಕ್ಕೂ ಹೆಚ್ಚು ಮುಸಲ್ಮಾನ ಬರಹಗಾರರಿದ್ದಾರೆ. ಲೇಖಕಿ ಸಾರಾ ಅಬೂಬಕ್ಕರ್, ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಷ್ತಾಕ್ ಅವರ ಸಾಧನೆ ಅದ್ವಿತೀಯವಾಗಿದೆ. ಮುಂದಿನ ದಿನಗಳಲ್ಲಿ ಕನ್ನಡಕ್ಕೆ ಮುಸ್ಲಿಮರೇ ಕೊಡುಗೆ ನೀಡಲಿದ್ದಾರೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ನುಡಿದರು.