×
Ad

ಭೂ ಕಂದಾಯ (2ನೆ ತಿದ್ದುಪಡಿ) ವಿಧೇಯಕ ಅಂಗೀಕಾರ | ಅದಾಲತ್ ಮಾದರಿಯಲ್ಲಿ ಸಮಸ್ಯೆ ಬಗೆಹರಿಸುತ್ತೇವೆ : ಕೃಷ್ಣಭೈರೇಗೌಡ

Update: 2025-12-16 19:07 IST

ಬೆಳಗಾವಿ : 2025ನೆ ಸಾಲಿನ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕಕ್ಕೆ ವಿಧಾನಸಭೆಯಲ್ಲಿ ಅಂಗೀಕಾರ ದೊರೆಯಿತು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಗಳವಾರ ವಿಧಾನಸಭೆಯಲ್ಲಿನ ಶಾಸನ ರಚನೆ ಕಲಾಪದಲ್ಲಿ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು 2025ನೆ ಸಾಲಿನ ಕರ್ನಾಟಕ ಬಾಡಿಗೆ (ತಿದ್ದುಪಡಿ) ವಿಧೇಯಕ ಮಂಡಿಸಿ ಅನುಮೋದನೆ ಕೋರಿದರು.

ಈ ಬಗ್ಗೆ ವಿವರಣೆ ನೀಡಿದ ಅವರು, ಈ ವಿಧೇಯಕ ಈ ಹಿಂದೆಯೂ ಸದನದಲ್ಲಿ ಮಂಡನೆಯಾಗಿತ್ತು. ಆ ಸಂದರ್ಭದಲ್ಲಿ ಸದನದ ಸಲಹೆಯಂತೆ ಈ ವಿಧೇಯಕವನ್ನು ಪರಿಶೀಲನಾ ಸಭೆಗೆ ಸಲ್ಲಿಸಿ ಸಮಿತಿಯಲ್ಲಿ ಎಲ್ಲ ಪಕ್ಷದ ಸದಸ್ಯರೂ ಸಮಾಲೋಚಿಸಿ ನಾಲ್ಕಾರು ಸಭೆ ನಡೆಸಿ ಎಲ್ಲರ ಸಹಮತದೊಂದಿಗೆ ಈ ನೂತನ ತಿದ್ದುಪಡಿ ಮಾಡಿ ಮತ್ತೊಮ್ಮೆ ವಿಧೇಯಕವನ್ನು ಸದನದ ಅನುಮೋದನೆಗೆ ಮಂಡಿಸಲಾಗಿದೆ ಎಂದರು.

ಕೊಡಗು ಜಿಲ್ಲೆಯಲ್ಲಿ ಇದು ಪ್ರಮುಖವಾದ ವಿಚಾರ. ಈ ತಿದ್ದುಪಡಿ ವಿಧೇಯಕದ ಉದ್ದೇಶ ಭಾಗದಲ್ಲಿ ಈ ತಿದ್ದುಪಡಿ ಏಕೆ? ಎಂಬುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಸಾರ್ವಜನಿಕರ ಚರ್ಚೆ ಅಭಿಪ್ರಾಯವೂ ಮುಖ್ಯ ಎಂಬ ಕಾರಣಕ್ಕೆ ಈ ತಿದ್ದುಪಡಿಯನ್ನು ಕೊಡಗು ಜಿಲ್ಲೆಯಲ್ಲಿ ಸಾರ್ವಜನಿಕ ಪ್ರಕಟನೆ ಹೊರಡಿಸಿ, ಅಲ್ಲಿನ ಜನರ ಅಭಿಪ್ರಾಯವನ್ನು ಜಿಲ್ಲಾಧಿಕಾರಿಗಳ ಮೂಲಕ ಸಂಗ್ರಹಿಸಿ ತಿದ್ದುಪಡಿ ತರಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಮಹಾರಾಜರ ಆಡಳಿತ ಕಾಲದಲ್ಲಿ ಅವರದ್ದೇ ಆದ ಕಂದಾಯ ಕಾನೂನುಗಳಿದ್ದವು. ಕರ್ನಾಟಕ ರಾಜ್ಯದಲ್ಲಿ 1964ರಲ್ಲಿ ನಾವು ಕರ್ನಾಟಕ ಭೂ ಕಂದಾಯ ಕಾನೂನನ್ನು ಜಾರಿಗೆ ತಂದ ರಾಜ್ಯಾದ್ಯಂತ ಏಕರೂಪ ಕಾನೂನು ರೂಪಿಸಿದ್ದೆವು. ಆದರೆ, ಆ ಕಾನೂನಿಗೆ ತದ್ವಿರುದ್ಧವಾಗಿ ಕೊಡಗಿನಲ್ಲಿ ಈ ಹಿಂದೆ ಇದ್ದಂತಹ ಪದ್ಧತಿಯ ಪ್ರಕಾರವೇ ದಾಖಲೆಗಳನ್ನು ಮುಂದುವರೆಸಿಕೊಂಡು ಬಂದಿದ್ದಾರೆ. 2000ನೆ ಇಸವಿಯ ವರೆಗೂ ಇದೇ ಪದ್ಧತಿ ಮುಂದುವರೆದಿದೆ. ಆದರೆ, ಇದೇ ವರ್ಷ ಭೂಮಿ ಯೋಜನೆ ಜಾರಿಯಾಗಿ ಪಹಣಿಯನ್ನು ಕಡ್ಡಾಯವಾಗಿ ಗಣಕೀಕರಣ ಮಾಡಲು ಮುಂದಾದಾಗ ಅನಿರ್ವಾಯವಾಗಿ ಈ ಹಳೆ ಪದ್ಧತಿ ಸ್ಥಗಿತಗೊಂಡಿತು.

ಕೊಡಗಿನಲ್ಲಿ ಆವರೆಗೂ ಅನುಸರಿಸಲಾಗುತ್ತಿದ್ದ ಪದ್ಧತಿಗೂ ನಮ್ಮ ಪಹಣಿ ವ್ಯವಸ್ಥೆಗೂ ಎರಡಕ್ಕೂ ಸಾಮ್ಯತೆ ಇರಲಿಲ್ಲ. ಕೊಡಗಿನಲ್ಲಿ ಈ ಹಿಂದಿನಿಂದಲೂ ಪಹಣಿಯಲ್ಲಿ ಪಟೇದಾರ್ ಎಂಬ ಕಾಲಂ ಇತ್ತು. ಆದರೆ, ಕರ್ನಾಟಕ ಭೂ ಕಂದಾಯ ಕಾನೂನಿನಲ್ಲಿ ಪಟೇದಾರ್ಗಳ ಬಗ್ಗೆ ಉಲ್ಲೇಖವೇ ಇಲ್ಲ. ಅದಕ್ಕೆ ಅವಕಾಶವೂ ಇಲ್ಲ. 2000ರಲ್ಲಿ ಅಂದಿನ ಸರಕಾರ ಈ ಬಗೆಗೆ ಸ್ಪಷ್ಟ ನಿರ್ಧಾರ ತೆಗೆದುಕೊಂಡು ಸಮಸ್ಯೆಯನ್ನು ಬಗೆಹರಿಸಬೇಕಿತ್ತು. ಆದರೆ, ಅಂದಿನ ಜಿಲ್ಲಾಧಿಕಾರಿಗಳು ಈ ಬಗ್ಗೆ ಕಾನೂನಿನ ಅಡಿಯಲ್ಲಿ ಚರ್ಚಿಸದೆ ತಮ್ಮ ಹಂತದಲ್ಲಿ ಒಂದು ಆದೇಶ ಹೊರಡಿಸಿ ಪಟೇದಾರ್ ಗಳನ್ನು ಕಾಲಂ 9ರಲ್ಲಿ ನಮೂದಿಸಲು ಸೂಚಿಸಿದ್ದಾರೆ. ಇದರ ಪರಿಣಾಮ ನಿಜವಾದ ಮಾಲಕರಲ್ಲದವರೂ ಕೂಡ ಪಟೇದಾರ್ ಎಂಬ ಏಕೈಕ ಕಾರಣಕ್ಕೆ ಅವರ ಹೆಸರು ಕಾಲಂ 9 ರಲ್ಲಿ ನಮೂದಾಗಲು ಆರಂಭವಾಯಿತು ಎಂದು ಅವರು ಉಲ್ಲೇಖಿಸಿದರು.

ಜಮೀನು ಯಾರಿಗೋ ಸೇರಿದ್ದರೂ ಸಹ ಪಹಣಿಯಲ್ಲಿ ಪಟೇದಾರರ ಹೆಸರಿದೆ. ಇದರಿಂದ ಹಲವು ವ್ಯಾಜ್ಯಗಳು ಹುಟ್ಟಿಕೊಳ್ಳುತ್ತಿವೆ. ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಭೂ ಹಕ್ಕು ವರ್ಗಾವಣೆ ಮಾಡುವುದು ದುಸ್ಸಾಧ್ಯವಾಗುತ್ತಿದೆ. ಅಲ್ಲದೆ, ಪಟೇದಾರರ ಸಹಮತಿ ಇಲ್ಲದೆ, ರೈತರು ತಮ್ಮ ಭೂಮಿಯನ್ನು ಮಾರಾಟ ಮಾಡುವುದೂ ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆಗಳು ಅರ್ಧ ಭಾಗದಷ್ಟು ಕೊಡಗಿನಲ್ಲಿ ಇನ್ನೂ ಹಾಗೆ ಉಳಿದಿದ್ದು, ಕಳೆದ ಎರಡು ವರ್ಷದಿಂದ ಸತತವಾಗಿ ಸಮಾಲೋಚನೆ ಮಾಡಿ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂಬ ಕಾರಣದಿಂದಾಗಿ ಈ ತಿದ್ದುಪಡಿ ವಿಧೇಯಕವನ್ನು ಜಾರಿಗೆ ತರಲಾಗುತ್ತಿದೆ ಎಂದು ಅವರು ವಿವರಿಸಿದರು.

ಅದಾಲತ್ ಮಾದರಿ: ಈ ವಿಧೇಯಕದ ಆಧಾರದಲ್ಲಿ ಕೊಡಗು ಜಿಲ್ಲೆಯಲ್ಲಿ ಅದಾಲತ್ ಮಾದರಿಯಲ್ಲಿ ಕಾರ್ಯಕ್ರಮ ರೂಪಿಸಿ ರೈತರು, ಭೂ ಮಾಲಕರು ಹಾಗೂ ಪಟೇದಾರ್‍ಗಳ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರ ಕಲ್ಪಿಸಲಾಗುವುದು. 1964 ಹಾಗೂ 2000ರಲ್ಲಿ ಸರಕಾರದಿಂದ ಕೊಡಗಿನ ಜನರಿಗೆ ಆಗಿರುವ ತೊಂದರೆಗೆ ಈ ವಿಧೇಯಕದ ಮೂಲಕ ಪರಿಹಾರ ನೀಡಲಾಗುವುದು. ಈ ವಿಧೇಯಕ ಕೊಡಗಿನ ಜನರ ಬೇಡಿಕೆಯಾಗಿದ್ದು, ನ್ಯಾಯಾಲಯಗಳೂ ಸಹ ಈ ಬಗ್ಗೆ ನಿರ್ದೇಶನ ನೀಡಿವೆ. ಈ ಎಲ್ಲ ವಿಚಾರದ ಬಗ್ಗೆ ಸಮಿತಿಯಲ್ಲಿ ಕೂಲಂಕುಷವಾಗಿ ಚರ್ಚಿಸಿ ಪರಿಹಾರ ನೀಡುವ ಉದ್ದೇಶದಿಂದ ನೂತನ ತಿದ್ದುಪಡಿಯನ್ನು ತರಲಾಗುತ್ತಿದೆ ಎಂದು ಸಚಿವರು ಹೇಳಿದರು. ಆನಂತರ ಈ ವಿಧೇಯಕ ಧ್ವನಿಮತ ಮೂಲಕ ಅಂಗೀಕಾರಿಸಲಾಯಿತು.


.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News