×
Ad

ಸುಳ್ಳು ಮೊದಲು ಹುಟ್ಟಿದ್ದೋ, ಬಿಜೆಪಿ ಮೊದಲು ಹುಟ್ಟಿದ್ದೋ: ಕಾಂಗ್ರೆಸ್ ಲೇವಡಿ

Update: 2023-12-17 18:39 IST

ಬೆಂಗಳೂರು ‘ಸುಳ್ಳು ಮೊದಲು ಹುಟ್ಟಿದ್ದೋ, ಬಿಜೆಪಿ ಮೊದಲು ಹುಟ್ಟಿದ್ದೋ ಎನ್ನುವುದನ್ನು ವಿಶ್ಲೇಷಿಸಿದರೆ ಬಿಜೆಪಿಯೇ ಮೊದಲು ಹುಟ್ಟಿದ್ದು ಎಂಬ ಸತ್ಯ ಗೋಚರಿಸುತ್ತದೆ. ಬಿಜೆಪಿಯ ಸಾಮಾಜಿಕ ಜಾಲತಾಣದಲ್ಲಿ ಯಾರೋ ತಲೆಮಾಸದ ಎಳಸುಗಳನ್ನು ಕೂರಿಸಿದಂತಿದೆ. ಸುಳ್ಳು ಸಂಗತಿಯನ್ನು ಟ್ವೀಟ್ ಮಾಡಿ ಕೆಲ ಹೊತ್ತಿನಲ್ಲೇ ಡಿಲೀಟ್ ಮಾಡಿದ ಬಿಜೆಪಿಗೆ ಸುಳ್ಳುಗಳನ್ನು ನಿರೂಪಿಸುವ ದಮ್ಮು-ತಾಕತ್ತು ಇರಲಿಲ್ಲವೇ?’ ಎಂದು ಕಾಂಗ್ರೆಸ್ ಲೇವಡಿ ಮಾಡಿದೆ.

ರವಿವಾರ ʼಎಕ್ಸ್‌ʼ ನಲ್ಲಿ ಸರಣಿ ಪೊಸ್ಟ್ ಹಾಕಿರುವ ಕಾಂಗ್ರೆಸ್, ‘ಬಿಜೆಪಿ ಹೇಳಿದಂತೆ ಘಟನೆ ನಡೆದ ವಂಟಮೂರಿ ಗ್ರಾಮ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕ್ಷೇತ್ರದಲ್ಲಿಲ್ಲ ಹಾಗೂ ಸಚಿವರು ಭೇಟಿ ನೀಡಲಿಲ್ಲ ಎನ್ನುವುದೂ ಸುಳ್ಳು. ಘಟನೆ ನಡೆದ ಸುದ್ದಿ ತಿಳಿದ ತಕ್ಷಣವೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಸಂತ್ರಸ್ತೆಗೆ ಸಾಂತ್ವಾನ ಹೇಳಿ ಅಗತ್ಯ ನೆರವು ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಸ್ಪಷ್ಟಪಡಿಸಿದೆ.

‘ಬಹುಶಃ ಬಿಜೆಪಿಗರಿಗೆ ಹೀನಾಯ ಸೋಲಿನ ಬಳಿಕ ಕುರುಡುತನ ಆವರಿಸಿರಬಹುದು ಇಲ್ಲವೇ ಮತಿಭ್ರಮಣೆಯಾಗಿರಬಹುದು. ದೌರ್ಜನ್ಯ ಪ್ರಕರಣಗಳು ನಡೆದಾಗ ಸರಕಾರ ಹೇಗೆ ನಡೆದುಕೊಳ್ಳುತ್ತದೆ ಎನ್ನುವುದರ ಮೇಲೆ ಆ ಸರಕಾರದ ಬದ್ಧತೆ ನಿರೂಪಿತವಾಗುತ್ತದೆ. ಸಂತ್ರಸ್ತೆಯನ್ನು ಉಸ್ತುವಾರಿ ಸಚಿವರು ಭೇಟಿಯಾಗಿದ್ದಾರೆ, ಮಹಿಳಾ-ಮಕ್ಕಳ ಕಲ್ಯಾಣ ಸಚಿವರು ಭೇಟಿಯಾಗಿದ್ದಾರೆ, ಸರಕಾರ 5ಲಕ್ಷ ರೂ. ಪರಿಹಾರ ಒದಗಿಸಿದೆ, 2ಎಕರೆ ಜಮೀನು ಮಂಜೂರು ಮಾಡಿದೆ’ ಎಂದು ಕಾಂಗ್ರೆಸ್ ವಿವರ ನೀಡಿದೆ.

‘ಬಿಜೆಪಿ ಅವಧಿಯಲ್ಲಿ ರಾಜ್ಯದಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು ಮಿತಿ ಮೀರಿತ್ತು, ಸ್ವತಃ ಅವರದೇ ಪಕ್ಷದ ಶಾಸಕರು, ಸಚಿವರು ದೌರ್ಜನ್ಯ ಎಸಗಿದ್ದರು. ಎಷ್ಟು ಪ್ರಕರಣಗಳಲ್ಲಿ ಬಿಜೆಪಿ ಸಚಿವರು ಸಂತ್ರಸ್ತರಿಗೆ ಸಾಂತ್ವಾನ ಹೇಳಿದ್ದರು ಎಂಬುದನ್ನು ಸಾಕ್ಷಿ ಸಮೇತ ಚರ್ಚೆಗೆ ಬರುವ ಎದೆಗಾರಿಕೆ ಬಿಜೆಪಿಗಿದೆಯೇ?. ಮಣಿಪುರ, ರಾಜಸ್ತಾನ, ಮಧ್ಯಪ್ರದೇಶಗಳಲ್ಲಿ ನಡೆದ ಮಹಿಳಾ ದೌರ್ಜನ್ಯಗಳ ಬಗ್ಗೆ ತುಟಿ ಬಿಚ್ಚುವ ಧೈರ್ಯ ಬಿಜೆಪಿಗಿದೆಯೇ?, ಕೊನೆಯ ಮಾತು-ಬಿಜೆಪಿ ಸುಳ್ಳು ಹೇಳುವುದನ್ನು ಬಿಡದಿದ್ದರೆ 66 ಇರುವುದು ಮುಂದೆ 33 ಆಗಲಿದೆ!’ ಎಂದು ಕಾಂಗ್ರೆಸ್ ಟೀಕಿಸಿದೆ.

‘ಬೆಳಗಾವಿಯಲ್ಲಿ ಕೌಟುಂಬಿಕ ಕಲಹದ ಕಾರಣಕ್ಕೆ ಮಹಿಳೆಯನ್ನು ಬೆತ್ತಲೆಗೊಳಿಸಿದ ಪ್ರಕರಣದಲ್ಲಿ ನಮ್ಮ ಸರಕಾರದ ಕ್ರಮಗಳು. ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸಂತ್ರಸ್ತ ಮಹಿಳೆಯನ್ನು ಭೇಟಿಯಾಗಿ ಸಾಂತ್ವಾನ ಹೇಳಿ ಧೈರ್ಯ ತುಂಬಿದ್ದಾರೆ. ಮಹಿಳೆಗೆ ಸರಕಾರ 5ಲಕ್ಷ ರೂ.ಪರಿಹಾರ ಧನ ನೀಡಿದೆ. ಸಂತ್ರಸ್ತ ಮಹಿಳೆಗೆ 2 ಎಕರೆ ಜಮೀನು ಮಂಜೂರು ಮಾಡಿದೆ. ಇದು ಜನಪರ ಕಾಂಗ್ರೆಸ್‍ನ ಬದ್ಧತೆ. ತಮ್ಮ ಆಡಳಿತಾವಧಿಯಲ್ಲಿ ಬಿಜೆಪಿ ಶಾಸಕ ಸಿದ್ದು ಸವದಿಯವರಿಂದ ಹಲ್ಲೆಗೊಳಗಾಗಿದ್ದ ಮಹಿಳೆಗೆ ಬಿಜೆಪಿ ಮಾಡಿದ್ದೇನು?, ಹೇಳುವ ಧೈರ್ಯ ಇದೆಯೇ?’ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

‘ನಕಲಿ ಹಾಗೂ ಸುಳ್ಳು ಸುದ್ದಿಗಳನ್ನು ಜಾಲತಾಣಗಳಲ್ಲಿ ಹಾಕಿ ಡಿಲೀಟ್ ಮಾಡುತ್ತಿರುವ ಹತಾಶ ಬಿಜೆಪಿಯ ಮಿಥ್ಯೆ ಪ್ರಲಾಪಗಳು ಒಂದೆರಡಲ್ಲ!. ಬಿಜೆಪಿಗರು ಇಂದು ಬೆಳಗ್ಗೆಯಿಂದ ಮೂರ್ನಾಲ್ಕು ಸುಳ್ಳುಗಳನ್ನು ಸಾಮಾಜಿಕ ಜಾಲತಾಣಗಳ ಅಧಿಕೃತ ಖಾತೆಗಳಲ್ಲಿ ಹಂಚಿ ಡಿಲೀಟ್ ಮಾಡಿದ್ದಾರೆ. ಇನ್ನು ಅನಧಿಕೃತ ಖಾತೆಗಳಲ್ಲಿ ಸುಳ್ಳಿನ ಹೊಳೆಯನ್ನೇ ಹರಿಸುತ್ತಿದೆ.

ಡಾ.ಅಶ್ವತ್ಥ ನಾರಾಯಣರೇ, ಸಿದ್ದರಾಮಯ್ಯ ಅವರ ಸದನದಲ್ಲಿನ ಭಾಷಣವನ್ನು ಎಡಿಟ್ ಮಾಡಿ ಅಪಾರ್ಥ ಬರುವಂತೆ ಪೋಸ್ಟ್ ಮಾಡಿ ನಂತರ ಡಿಲೀಟ್ ಮಾಡಿದ್ದೀರಿ, ನಿಮಗೆ ಕೊಂಚವೂ ನೈತಿಕ ರಾಜಕಾರಣದ ಪ್ರಜ್ಞೆ ಇಲ್ಲದಿರುವುದು ಇದರಿಂದ ಸ್ಪಷ್ಟವಾಗುತ್ತದೆ. ಸತ್ಯದ ಮೂಲಕ ಸೋಲಿಸಲಾಗದ ರಣಹೇಡಿ ಬಿಜೆಪಿ ಸುಳ್ಳುಗಳ ಮೂಲಕ ರಾಜಕಾರಣಕ್ಕೆ ಮುಂದಾಗಿದೆ, ಬಿಜೆಪಿಯ ಈ ಎಲ್ಲ ಸುಳ್ಳುಗಳಿಗೂ ನಮ್ಮ ಸರಕಾರ ಕಾನೂನಾತ್ಮಕವಾಗಿ ಪರಿಹಾರ ಕಂಡುಕೊಳ್ಳಲಿದೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News