×
Ad

ಎಸಿ ಕೋರ್ಟ್‍ಗಳಲ್ಲಿ ಬಾಕಿ ಇರುವ ಪ್ರಕರಣಗಳ ತ್ವರಿತ ವಿಲೇವಾರಿಗೆ ಸಚಿವ ಕೃಷ್ಣ ಭೈರೇಗೌಡ ಸೂಚನೆ

Update: 2026-02-02 18:24 IST

ಬೆಂಗಳೂರು : ‘ಉಪ ವಿಭಾಗಾಧಿಕಾರಿಗಳ ನ್ಯಾಯಾಲಯ(ಎಸಿ ಕೋರ್ಟ್)ದಲ್ಲಿನ ಬಾಕಿ ಇರುವ ಎಲ್ಲ ಪ್ರಕರಣಗಳನ್ನೂ ಮಾರ್ಚ್ ಅಂತ್ಯದ ವೇಳೆಗೆ ವಿಲೇವಾರಿ ಮಾಡಬೇಕು’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಇಂದಿಲ್ಲಿ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಸೋಮವಾರ ವಿಕಾಸಸೌಧದಿಂದ ರಾಜ್ಯದ ಎಲ್ಲ ಉಪ ವಿಭಾಗಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಸಿಕ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘2023ಕ್ಕೂ ಮುಂಚೆ ಆಡಳಿತ ನಡೆಸಿದ ಸರಕಾರಗಳು ಎಸಿ ಕೋರ್ಟ್‍ನಲ್ಲಿ ಅವಧಿ ಮೀರಿದ 62,857 ತಕರಾರು ಪ್ರಕರಣಗಳನ್ನು ವಿಲೇವಾರಿ ಮಾಡದೆ ಬಾಕಿ ಉಳಿಸಿಹೋಗಿದ್ದವು.

ಅಲ್ಲದೆ, 11 ಸಾವಿರ ಪ್ರಕರಣಗಳನ್ನು ದಾಖಲು ಮಾಡಿರಲಿಲ್ಲ. ಹೀಗಾಗಿ ಎಸಿ ಕೋರ್ಟ್‍ಗಳಲ್ಲಿ ಒಟ್ಟಾರೆ 73ಸಾವಿರ ಪ್ರಕರಣಗಳ ಬಾಕಿ ಇದ್ದವು. ಜನಸಾಮಾನ್ಯರು ದಿನನಿತ್ಯ ಸರಕಾರಿ ಕಚೇರಿಗೆ ಅಲೆಯುವ ಸ್ಥಿತಿ ಇತ್ತು. ನಾವು ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಈ ಎಲ್ಲ ಪ್ರಕರಣಗಳಿಗೂ ತಾರ್ಕಿಕ ಅಂತ್ಯ ನೀಡಿ ಶೀಘ್ರ ವಿಲೇವಾರಿ ಮಾಡಲಾಗುವುದೆಂದು ಆಶ್ವಾಸನೆ ನೀಡಿದ್ದೆವು. ಇದೀಗ ಆ ಪ್ರಕರಣಗಳನ್ನು ಪ್ರಸ್ತುತ 10,656ಕ್ಕೆ ಇಳಿಸಲಾಗಿದೆ. ಆ ಮೂಲಕ ಜನರು ಸರಕಾರಿ ಕಚೇರಿಗೆ ಅಲೆಯುವ ಪ್ರಸಂಗಕ್ಕೆ ಅಂತ್ಯ ಹಾಡಲಾಗಿದೆ ಎಂದರು.

ಮಾರ್ಚ್ ವೇಳೆಗೆ ವಿಲೇ: ಎಸಿ ಕೋರ್ಟ್‍ಗಳಲ್ಲಿ ಎರಡೂವರೆ ವರ್ಷದಿಂದ ಉತ್ತಮ ಪ್ರಗತಿ ಸಾಧಿಸಲಾಗುತ್ತಿದೆ. ಆದರೂ, ಇನ್ನೂ 10ಸಾವಿರಕ್ಕೂ ಅಧಿಕ ಅವಧಿ ಮೀರಿದ ಪ್ರಕರಣಗಳು ಬಾಕಿ ಇದೆ. ಈ ಪೈಕಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಲ್ಲೇ ಅಧಿಕ ಸಂಖ್ಯೆಯ ಪ್ರಕರಣಗಳು ಬಾಕಿ ಇವೆ. ಈ ಎಲ್ಲ ಪ್ರಕರಣಗಳನ್ನೂ ಮಾರ್ಚ್ ಅಂತ್ಯದ ವೇಳೆಗೆ ವಿಲೇವಾರಿ ಮಾಡಬೇಕು ಎಂದು ಕೃಷ್ಣಬೈರೇಗೌಡ ತಾಕೀತು ಮಾಡಿದರು.

ಬೆಂಗಳೂರಿನಿಂದಲೇ ಆರಂಭ: ಅವಧಿ ಮೀರಿದ ಎಲ್ಲ ಬಾಕಿ ಪ್ರಕರಣಗಳನ್ನು ಇತ್ಯರ್ಥಗೊಳಿಸಬೇಕು ಎಂಬ ಉದ್ದೇಶದಿಂದ ಎರಡೂವರೆ ವರ್ಷಗಳಿಂದ ಉಪ ವಿಭಾಗಾಧಿಕಾರಿಗಳಿಗೆ ಅದನ್ನೇ ಪ್ರಮುಖ ಜವಾಬ್ದಾರಿ ಎಂದು ವಹಿಸಲಾಗಿತ್ತು. ಆದರೆ, ಇದೀಗ ಉಪ ವಿಭಾಗಾಧಿಕಾರಿಗಳು ಬೇರೆ ಪ್ರಮುಖ ಕೆಲಸಗಳ ಕಡೆಗೂ ಮುಖ ಮಾಡಬೇಕಿದೆ ಎಂದರು.

ಗ್ರಾಮ ಲೆಕ್ಕಾಧಿಕಾರಿಗಳು ರಾಜ್ಯದಲ್ಲಿರುವ ಎಲ್ಲ ಸರಕಾರಿ ಜಮೀನುಗಳ ವಿವರಗಳನ್ನೂ ಬೀಟ್ ಆಪ್‍ನಲ್ಲಿ ದಾಖಲು ಮಾಡಿದ್ದಾರೆ. ಇದರ ಆಧಾರದಲ್ಲಿ ಸರಕಾರಿ ಜಮೀನು ಒತ್ತುವರಿ ಆಗಿದ್ದರೆ, ಭೂಮಿ ಸರ್ವೇ ಮಾಡಿಸಿ ತಹಶೀಲ್ದಾರರಿಂದ ಆದೇಶ ಹೊರಡಿಸಿ ಒತ್ತುವರಿ ತೆರವು ಮಾಡಬೇಕು. ಈ ಕೆಲಸ ಬೆಂಗಳೂರಿನಿಂದಲೇ ಆರಂಭವಾಗಬೇಕು ಎಂದು ಕೃಷ್ಣ ಬೈರೇಗೌಡ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News