ಏಕಗವಾಕ್ಷಿ ಸಮಿತಿ ಸಭೆ | 83 ಯೋಜನೆಗೆ ಅಸ್ತು, 6,252 ಕೋಟಿ ರೂ. ಹೂಡಿಕೆ : ಸಚಿವ ಎಂ.ಬಿ.ಪಾಟೀಲ್
‘30 ಸಾವಿರಕ್ಕೂ ಹೆಚ್ಚು ಉದ್ಯೋಗ, ಬಿಯಾಂಡ್ ಬೆಂಗಳೂರು ಪ್ರದೇಶದಲ್ಲಿ 69 ಯೋಜನೆಗಳು’
ಬೆಂಗಳೂರು, : ರಾಜ್ಯದ ಕೈಗಾರಿಕಾ ವಲಯಕ್ಕೆ ಬಂಡವಾಳ ಸೆಳೆಯುವ ಪ್ರಯತ್ನ ಮುಂದುವರಿಸಿದ್ದು, ಬುಧವಾರ ನಡೆದ ಏಕಗವಾಕ್ಷಿ ಸಮಿತಿಯ ಸಭೆಯಲ್ಲಿ ಒಟ್ಟು 6,252ಕೋಟಿ ರೂ. ಗಳಿಗೂ ಹೆಚ್ಚು ಹೂಡಿಕೆಯ 83 ಪ್ರಸ್ತಾವನೆಗಳಿಗೆ ಒಪ್ಪಿಗೆ ಕೊಡಲಾಗಿದೆ. ಇದರಿಂದ 30 ಸಾವಿರಕ್ಕೂ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಎಂ.ಬಿ.ಪಾಟೀಲ್, ಈ ಪೈಕಿ 24 ಯೋಜನೆಗಳು ತಲಾ 50ಕೋಟಿ ರೂ. ಗಳಿಗೂ ಹೆಚ್ಚಿನ ಬಂಡವಾಳ ಹೂಡಲಿದ್ದು, ಇವುಗಳಿಂದ 4,703ಕೋಟಿ ರೂ.ಹರಿದು ಬರಲಿದೆ. 15 ಕೋಟಿ ರೂ. ಗಳಿಂದ 50 ಕೋಟಿ ರೂ.ವರೆಗೆ ಬಂಡವಾಳ ಹಾಕುವಂತಹ 57ಯೋಜನೆಗಳಿದ್ದು ಇವುಗಳಿಂದ 1291.87 ಕೋಟಿ ರೂ.ಬರಲಿದೆ. ಹೆಚ್ಚುವರಿ ಬಂಡವಾಳ ಹೂಡಿಕೆಯ 2 ಯೋಜನೆಗಳ ಮೂಲಕ 258 ಕೋಟಿ ರೂ.ಬರಲಿದೆ. ಒಟ್ಟು 83 ಯೋಜನೆಗಳ ಪೈಕಿ 69 ಯೋಜನೆಗಳು ಬೆಂಗಳೂರು ನಗರ ಮತ್ತು ಗ್ರಾಮಾಂತರ ಬಿಟ್ಟು ಬೇರೆ ಜಿಲ್ಲೆಗಳಲ್ಲಿ ಇರಲಿವೆ ಎಂದು ಹೇಳಿದರು.
ಹೆಚ್ಚಿನ ಕಂಪೆನಿಗಳು ಏರೋಸ್ಪೇಸ್, ಮಶೀನ್ ಟೂಲ್ಸ್, ಆಹಾರ ಸಂಸ್ಕರಣೆ, ಸಕ್ಕರೆ, ಜವಳಿ, ಇಂಟಿಗ್ರೇಟೆಡ್ ಕೈಗಾರಿಕಾ ಪಾರ್ಕ್, ಜನರಲ್ ಎಂಜಿನಿಯರಿಂಗ್, ಇಎಸ್ಡಿಎಂ ಮತ್ತು ಉತ್ಪಾದನೆ ವಲಯಗಳಲ್ಲಿ ಹೂಡಿಕೆ ಮಾಡಲು ತೀರ್ಮಾನಿಸಿವೆ. ಜಸ್ವಿನ್ ವೆಂಚರ್ಸ್ ಮತ್ತು ಜಂಪನಾ ಕನ್ಸ್ಟ್ರಕ್ಷನ್ಸ್ ಕಂಪನಿಗಳು ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಇಂಟಿಗ್ರೇಟೆಡ್ ಕೈಗಾರಿಕಾ ಪಾರ್ಕ್ ಅಭಿವೃದ್ಧಿಗೆ ಕ್ರಮವಾಗಿ 475ಮತ್ತು 465 ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿವೆ ಎಂದು ಅವರು ಹೇಳಿದರು.
ಉಳಿದಂತೆ ಶ್ರೀಶೈಲ ಮಲ್ಲಿಕಾರ್ಜುನ ಡಿಸ್ಟಿಲರೀಸ್ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನಲ್ಲಿ ಸಕ್ಕರೆ ಕಾರ್ಖಾನೆ ಮತ್ತು ವಿದ್ಯುತ್ ಉತ್ಪಾದನೆಗೆ 453.10ಕೋಟಿ ರೂ., ಆಕ್ಸಿಸ್ಕೇಡ್ ಏರೋಸ್ಪೇಸ್ ಇನ್ಫ್ರಾಸ್ಟ್ರಕ್ಚರ್ ದೇವನಹಳ್ಳಿಯಲ್ಲಿ 426ಕೋಟಿ ರೂ., ಪ್ಯಾರಿ ಇಂಡಿಯಾ ಲಿ.ಬಾಗಲಕೋಟೆಯಲ್ಲಿ ಬೆಲ್ಲ ತಯಾರಿಕೆ ಘಟಕಕ್ಕೆ 397.43ಕೋಟಿ ರೂ., ಲೀಫಿನಿಟಿ ಬಯೋಎನರ್ಜಿ ಕಂಪೆನಿಯು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಮತ್ತು ನಿಪ್ಪಾಣಿ ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕುಗಳಲ್ಲಿ ಒಟ್ಟು 4ಕಂಪ್ರೆಸ್ಡ್ ಬಯೋಗ್ಯಾಸ್ ಘಟಕಗಳ ಸ್ಥಾಪನೆಗೆ 310 ಕೋಟಿ ರೂ.ಬಂಡವಾಳ ಹೂಡಲಿವೆ ಎಂದು ಅವರು ಮಾಹಿತಿ ನೀಡಿದರು.
ಬಂಟ್ವಾಳ ತಾ.ನಲ್ಲಿ ಬ್ಲೂಲೈನ್ ಕಂಪೆನಿಯು ಎರಡು ಯೋಜನೆಗಳಿಗೆ ಕ್ರಮವಾಗಿ 201.50 ಕೋಟಿ ರೂ. ಮತ್ತು 177.50 ಕೋಟಿ ರೂ., ಮಾಲೂರು ತಾ.ನಲ್ಲಿ ಸಾಂಡರ್ ಪ್ರಾಜೆಕ್ಟ್ಟ್ ಮತ್ತು ಅರೆಟ್ 22 ಲಿಮಿಟೆಡ್ ಕಂಪೆನಿಗಳು ಕ್ರಮವಾಗಿ ತಲಾ 200 ಕೋಟಿ ರೂ.ಗಳಂತೆ ಒಟ್ಟು 400ಕೋಟಿ ರೂ., ಸಾಂಡರ್ ಇನ್ಫ್ರಾ ಕಂಪೆನಿಯು 180 ಕೋಟಿ ರೂ., ಧಾರವಾಡದಲ್ಲಿ ಸನ್ ಸ್ಟಾರ್ ಪ್ರಿಸಿಷನ್ ಫೋರ್ಜ್ 193.96ಕೋಟಿ ರೂ., ದೊಡ್ಡಬಳ್ಳಾಪುರದಲ್ಲಿ ಎಲ್ಮೆಷರ್ ಇಂಡಿಯಾ 150ಕೋಟಿ ರೂ., ಆನ್ಡಾಟ್ ಕಂಪೆನಿಯು ಬೆಂಗಳೂರು ಪೂರ್ವ ತಾ.ನಲ್ಲಿ 120ಕೋಟಿ ರೂ., ಗೌರಿಬಿದನೂರಿನಲ್ಲಿ ಜಿಆರ್ಬಿ ಡೇರಿಫುಡ್ಸ್ 110 ಕೋಟಿ ರೂ.ಮತ್ತು ಕೊಪ್ಪಳದಲ್ಲಿ ಪಯತ್ರಿಕೊಂಡ ಬಾಲಸುಬ್ಬಶೆಟ್ಟಿ ಅಂಡ್ ಸನ್ಸ್ ಕಂಪೆನಿಯು ಮೆದುಕಬ್ಬಿಣ ಘಟಕದ ಸ್ಥಾಪನೆಗಾಗಿ 98 ಕೋಟಿ ರೂ.ಬಂಡವಾಳ ಹೂಡಲಿವೆ ಎಂದು ಪಾಟೀಲ್ ವಿವರಿಸಿದರು.
ಸಮಿತಿಯ ಸಭೆಯಲ್ಲಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಸ್.ಸೆಲ್ವಕುಮಾರ್, ಆಯುಕ್ತೆ ಖುಷ್ಬೂ ಗೋಯೆಲ್, ಕೆಐಎಡಿಬಿ ಸಿಇಒ ಗೋವಿಂದ ರೆಡ್ಡಿ, ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸೇರಿದಂತೆ ಹಲವರು ಉಪಸ್ಥಿತರಿದ್ದರು.