ನಾಳೆಯಿಂದ ವಿಧಾನಮಂಡಲದ ಮುಂಗಾರು ಅಧಿವೇಶನ ಪ್ರಾರಂಭ: ಸಿಎಂ ಡಿ.ಕೆ.ಶಿವಕುಮಾರ್ ಸರಕಾರಕ್ಕೆ ಮೊದಲ ಪರೀಕ್ಷೆ

Update: 2026-08-12 22:18 IST

ಬೆಂಗಳೂರು : ವಿಧಾನ ಮಂಡಲದ ಉಭಯ ಸದನಗಳ ಮುಂಗಾರು ಅಧಿವೇಶನ ಗುರುವಾರ (ಆ.13) ಪ್ರಾರಂಭವಾಗಲಿದ್ದು, ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ವಾಕ್ಸಮರ ಏರ್ಪಡುವ ಸಾಧ್ಯತೆಗಳ ಜತೆಗೆ ಇದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದ ರಾಜ್ಯ ಸರಕಾರಕ್ಕೆ ಮೊದಲ ಪರೀಕ್ಷೆಯಾಗಿದೆ.

ರಾಜ್ಯದಲ್ಲಿನ ಭೀಕರ ಬರ ಪರಿಸ್ಥಿತಿ, ಕೆಲವೆಡೆ ಉಂಟಾಗಿರುವ ಅತಿವೃಷ್ಟಿ, ಬಿಡದಿ ಉಪನಗರ ಯೋಜನೆ ವಿರೋಧಿಸಿ ರೈತರು ನಡೆಸುತ್ತಿರುವ ಹೋರಾಟ, ತಮಿಳುನಾಡಿಗೆ ಕಾವೇರಿ ನದಿ ನೀರು ಹಂಚಿಕೆ ವಿಚಾರ, ಬಿ.ನಾಗೇಂದ್ರಗೆ ಸಚಿವ ಸ್ಥಾನ, ಬಿಎಂಐಸಿ ಯೋಜನೆ, ನೈಸ್ ಸಂಸ್ಥೆಯಿಂದ ನಿಯಮ ಬಾಹಿರವಾಗಿ ಟೋಲ್ ಸಂಗ್ರಹಿಸುತ್ತಿರುವ ಆರೋಪ, ಸಂಪುಟ ವಿಸ್ತರಣೆಯ ಅಸಮಾಧಾನ, ಖಾತೆ ಹಂಚಿಕೆ ವಿಳಂಬ ಹೀಗೆ ವಿವಿಧ ವಿಷಯಗಳು ಅಧಿವೇಶನದಲ್ಲಿ ಪ್ರಮುಖವಾಗಿ ಪ್ರಸ್ತಾಪಗೊಂಡು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪ ತಾರಕಕ್ಕೇರುವ ಸಾಧ್ಯತೆ ಇದೆ.

ಇತ್ತ ರಾಜ್ಯ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಸಜ್ಜಾಗಿವೆ. ಇನ್ನೊಂದೆಡೆ, ಸರಕಾರದ ಸಮರ್ಥನೆಗೆ ಆಡಳಿತರೂಢ ಪಕ್ಷದ ಸದಸ್ಯರೂ ತಯಾರಿ ನಡೆಸಿದ್ದಾರೆ. ಪ್ರಮುಖವಾಗಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣದ ಅವ್ಯವಹಾರದ ಆರೋಪ ಎದುರಿಸುತ್ತಿರುವ ಬಿ.ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿರುವುದಕ್ಕೆ ಪ್ರತಿಪಕ್ಷ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಸಂಪುಟದಿಂದ ಕೈಬಿಡುವಂತೆ ಆಗ್ರಹಿಸುತ್ತಿದೆ. ಈ ವಿಚಾರವನ್ನು ಸದನದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸುವುದಾಗಿ ಪ್ರಕಟಿಸಿದೆ.

ಸಂತಾಪ: ನಿರೀಕ್ಷೆಯಂತೆ ಮೊದಲ ದಿನವಾದ ಗುರುವಾರ ಬೆಳಗ್ಗೆ ಉಭಯ ಸದನಗಳಲ್ಲಿ ಅಗಲಿದ ಗಣ್ಯರಿಗೆ ಶ್ರದ್ಧಾಂಜಲಿ ಸಲ್ಲಿಸಲಾಗುತ್ತದೆ. ಅನಂತರ ಸರಕಾರದ ಅಧಿಕೃತ ಕಾರ್ಯಕಲಾಪಗಳು ನಡೆಯಲಿವೆ. ಬರಪೀಡಿತ ಪ್ರದೇಶಗಳನ್ನು ಘೋಷಣೆ ಮಾಡಿ ಬರಪರಿಹಾರ ನೀಡುತ್ತಿಲ್ಲ. ರೈತರು ಬೆಳೆ ಕಳೆದುಕೊಂಡು ಕಂಗಾಲಾಗಿದ್ದಾರೆ. ಕುಡಿಯುವ ನೀರಿಗೂ ಸಮಸ್ಯೆ ಎದುರಾಗುವ ಸಾಧ್ಯತೆಗಳಿದ್ದು, ಈ ವಿಚಾರದಲ್ಲಿ ಪಕ್ಷ ಭೇದ ಮರೆತು ಚರ್ಚೆ ನಡೆಸುವ ಸಾಧ್ಯತೆಗಳಿವೆ. ಬಿಡದಿ ಉಪನಗರ ಯೋಜನೆ ವಿಚಾರದಲ್ಲಿ ರೈತರಿಗೆ ಬೆಂಬಲ ವ್ಯಕ್ತಪಡಿಸಿ ಪ್ರತಿಭಟಿಸುತ್ತಿರುವ ವಿರೋಧ ಪಕ್ಷಗಳು ಪ್ರಮುಖವಾಗಿ ಈ ವಿಷಯ ಪ್ರಸ್ತಾಪಿಸಲಿವೆ.

ಒಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾದ ಬಳಿಕ ಮೊದಲ ಅಧಿವೇಶನ ಇದಾಗಿದೆ. ಸಿದ್ದರಾಮಯ್ಯ ಅವರು ಎರಡನೆ ಬಾರಿಗೆ ಮಾಜಿ ಮುಖ್ಯಮಂತ್ರಿಯಾದ ಬಳಿಕ ನಡೆಯುತ್ತಿರುವ ಮೊದಲ ಅಧಿವೇಶನವಾಗಿದೆ. ಹಾಗೆಯೇ ಶಾಸಕರಾಗಿದ್ದ ಕೆಲವರು ಸಚಿವರಾಗಿದ್ದಾರೆ. ಸಚಿವರಾಗಿದ್ದ ಕೆಲವರು ಮಾಜಿ ಸಚಿವರಾಗಿದ್ದಾರೆ. ಹೀಗಾಗಿ ಅವರ ಸ್ಥಾನಗಳು ಬದಲಾಗಿರುವುದರಿಂದ ಅಧಿವೇಶನ ತೀವ್ರ ಕುತೂಹಲ ಮೂಡಿಸಿದೆ.

ಗುರುವಾರದಿಂದ ಆ.27ರವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, ವಿಧಾನಸಭೆ ಮತ್ತು ವಿಧಾನ ಪರಿಷತ್ತಿನ ಸಚಿವಾಲಯಗಳು ಸಕಲ ಸಿದ್ಧತೆ ಮಾಡಿಕೊಂಡಿವೆ. ಬುಧವಾರವೂ ಸಹ ವಿಧಾನಸೌಧದ ಸಿದ್ಧತಾ ಕಾರ್ಯ ದೃಶ್ಯ ಕಂಡುಬಂದಿತು.

 

ಪರಿಷತ್ತಿನಲ್ಲಿ 481 ಪ್ರಶ್ನೆಗಳು ಸ್ವೀಕೃತ: ಒಟ್ಟು 10 ದಿನಗಳ ಕಾಲ ವಿಧಾನ ಪರಿಷತ್ತಿನಲ್ಲಿ ಅಧಿಕೃತ ಕಲಾಪಗಳು ನಡೆಯಲಿವೆ. ಅಧಿವೇಶನದ ಮೊದಲದಿನ ಕಳೆದ ಅಧಿವೇಶನದ ನಂತರ ಅಗಲಿದ ಗಣ್ಯ ವ್ಯಕ್ತಿಗಳಿಗೆ ಸಂತಾಪ ಸೂಚಿಸಲಾಗುವುದು. ನಂತರದ ದಿನಗಳಲ್ಲಿ, ಕಳೆದ ಅಧಿವೇಶನದ ನಂತರ ಘನತೆವೆತ್ತ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಂದ ಅಂಗೀಕಾರಗೊಂಡ ವಿಧೇಯಕಗಳ ಪಟ್ಟಿಯನ್ನು ಕಾರ್ಯದರ್ಶಿ ಸದನದ ಮುಂದಿಡಲಿದ್ದಾರೆ. ಪ್ರಸಕ್ತ ಅಧಿವೇಶನಕ್ಕೆ ಈವರೆಗೆ ಒಟ್ಟು 481 ಪ್ರಶ್ನೆಗಳು ಸ್ವೀಕೃತವಾಗಿದ್ದು, ಅವುಗಳಲ್ಲಿ 286 ಚುಕ್ಕೆ ಗುರುತಿನ ಹಾಗೂ 195 ಚುಕ್ಕೆ ರಹಿತ ಪ್ರಶ್ನೆಗಳಾಗಿವೆ. ನಿಯಮ 72ರ ಅಡಿಯಲ್ಲಿ 31 ಸೂಚನೆಗಳು ಹಾಗೂ ನಿಯಮ 330ರ ಅಡಿಯಲ್ಲಿ 23 ಸೂಚನೆಗಳನ್ನು ಸ್ವೀಕರಿಸಲಾಗಿದೆ.

ಹೊಸ ವಿಧೇಯಕಗಳ ಮಂಡನೆ, ಪರ್ಯಾಲೋಚನೆ, ಅಂಗೀಕಾರ, ಅಧ್ಯಾದೇಶಗಳ ಬದಲೀ ವಿಧೇಯಕಗಳ ಮಂಡನೆ, ಅಧಿಕೃತ ನಿರ್ಣಯಗಳು ಹಾಗೂ ಸದಸ್ಯರ ಖಾಸಗಿ ಕಾರ್ಯಕಲಾಪಗಳು ಜರುಗಲಿವೆ.ಅಲ್ಲದೆ, ಕಾರ್ಯಕಲಾಪಗಳ ಸಲಹಾ ಸಮಿತಿಯ ತೀರ್ಮಾನದಂತೆ ಪ್ರಮುಖ ಸಾರ್ವಜನಿಕ ವಿಷಯಗಳ ಮೇಲಿನ ಚರ್ಚೆಗಳು ನಡೆಯಲಿವೆ.

-ಪುಟ್ಟಣ್ಣ ಹಂಗಾಮಿ ಸಭಾಪತಿ, ವಿಧಾನ ಪರಿಷತ್ತು

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News