ಹೊಸ ವರ್ಷಾಚರಣೆ; ಸುರಕ್ಷತಾ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಡಿಜಿ-ಐಜಿಪಿ ಆದೇಶ
ಡಾ.ಎಂ.ಎ.ಸಲೀಂ
ಬೆಂಗಳೂರು : ಹೊಸ ವರ್ಷಾಚರಣೆ ಸಂದರ್ಭದಲ್ಲಿ ರಾಜ್ಯದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ಆಗದಂತೆ ಸುರಕ್ಷತಾ ಕ್ರಮ ಕೈಗೊಳ್ಳುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಸೋಮವಾರ ಆದೇಶಿಸಿದ್ದಾರೆ.
ರಾಜ್ಯದ ಎಲ್ಲ ಜಿಲ್ಲಾ ಎಸ್ಪಿಗಳು, ವಲಯದ ಐಜಿಪಿಗಳು ಹಾಗೂ ನಗರಗಳ ಪೊಲೀಸ್ ಆಯುಕ್ತರುಗಳಿಗೆ 17 ಅಂಶಗಳುಳ್ಳ ಮಾರ್ಗಸೂಚಿಗಳನ್ನು ಹೊರಡಿರುವ ಅವರು, ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
ವಾಹನಗಳ ನಿರಂತರ ಗಸ್ತು, ಪೊಲೀಸರ ಕಾಲ್ನಡಿಗೆ ಗಸ್ತು, ಅಶ್ವಾರೋಹಿ, ದ್ವಿಚಕ್ರ ವಾಹನ ಗಸ್ತುಗಳು ಸಾರ್ವಜನಿಕರಲ್ಲಿ ಪೊಲೀಸರ ಗೋಚರತೆಯನ್ನು ಹೆಚ್ಚಿಸುತ್ತದೆ ಹಾಗೂ ತುರ್ತು ಪ್ರತಿಕ್ರಿಯೆ ಸಾಧ್ಯವಾಗಿಸುತ್ತದೆ. ಪೂರ್ವನಿಯೋಜಿತ ಸ್ಥಳಗಳಲ್ಲಿ ಟ್ರಾಫಿಕ್ ಮತ್ತು ಎಸ್ಡಬ್ಲೂಎಟಿ ತಂಡಗಳನ್ನು ಒಳಗೊಂಡಂತೆ ಎಲ್ಲ ಘಟಕಗಳನ್ನು ನಿಯೋಜಿಸಬೇಕು ಹಾಗೂ ಎಲ್ಲಾ ಚೆಕ್ಪೋಸ್ಟ್ ಗಳಲ್ಲಿ ವಿಡಿಯೋಗ್ರಾಫಿ ಮಾಡಿಸಬೇಕು ಎಂದು ಎಂ.ಎ.ಸಲೀಂ ತಿಳಿಸಿದ್ದಾರೆ.
ಸಿಸಿಟಿವಿ, ಡ್ರೋನ್ ಮತ್ತು ನೈಜ ಸಮಯದ ಕ್ರೌಡ್ ಟ್ರ್ಯಾಕಿಂಗ್ ವ್ಯವಸ್ಥೆಗಳ ಮೂಲಕ ಜನಸಾಂದ್ರತೆಯ ಮೇಲ್ವಿಚಾರಣೆ, ವರ್ತನೆಯ ಸ್ವರೂಪ ಮತ್ತು ಒತ್ತಡಗಳು ಸಂಭವಿಸುವ ಸಾಧ್ಯತೆಗಳನ್ನು ನಿರ್ಧರಿಸಿ, ಅಗತ್ಯ ಕ್ರಮ ಕೈಗೊಳ್ಳಬೇಕು. ತರಬೇತಿ ಪಡೆದ ಭದ್ರತಾ ಸಿಬ್ಬಂದಿಯನ್ನು ಚೆಕ್ಪೋಸ್ಟ್ ಗಳಲ್ಲಿ ನಿಯೋಜಿಸಿ, ಲೋಹ ಶೋಧಕಗಳು, ಬ್ಯಾಗ್ ತಪಾಸಣೆ ಮತ್ತು ಟಿಕೆಟ್ ಪರಿಶೀಲನೆಯೊಂದಿಗೆ ಪ್ರವೇಶವನ್ನು ನಿಯಂತ್ರಿಸಿ ಅಪಾಯಗಳನ್ನು ಪತ್ತೆ ಹಚ್ಚುವ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಎಂ.ಎ.ಸಲೀಂ ಹೇಳಿದ್ದಾರೆ.
ಮಹಿಳೆಯರ ಚುಡಾಯಿಸುವುದನ್ನು ತಡೆಯಲು ಮಹಿಳಾ ಪೊಲೀಸ್ ತಂಡಗಳನ್ನು ನಿಯೋಜಿಸಿ, ಆಂಬ್ಯುಲೆನ್ಸ್, ಅಗ್ನಿಶಾಮಕ ಮತ್ತು ವೈದ್ಯಕೀಯ ತಂಡಗಳನ್ನು ಸಿದ್ದ ಸ್ಥಿತಿಯಲ್ಲಿ ಇಟ್ಟು ಸ್ಪಷ್ಟ ನಿರ್ಗಮನ ಮಾರ್ಗಗಳನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಡ್ರೋನ್ ಮತ್ತು ಸಿಸಿಟಿವಿಗಳ ಮೂಲಕ ನೈಜ ಸಮಯದ ನಿಗಾವಣೆ ಮಾಡಬೇಕು ಎಂದು ಎಂ.ಎ.ಸಲೀಂ ಆದೇಶಿಸಿದ್ದಾರೆ.
ಸ್ಥಳೀಯ ಅವಶ್ಯಕತೆಗಳಿಗೆ ಅನುಗುಣವಾಗಿ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಮಾರ್ಗಸೂಚಿಗಳ ನಿರ್ದೇಶನಗಳನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು ಎಂದು ಎಂ.ಎ.ಸಲೀಂ ಆದೇಶದಲ್ಲಿ ಸೂಚಿಸಿದ್ದಾರೆ.