‘ಗ್ರೇಟರ್ ಬೆಂಗಳೂರು’ ದುಡ್ಡು ಹೊಡೆಯೋ ಯೋಜನೆ : ನಿಖಿಲ್ ಕುಮಾರಸ್ವಾಮಿ
ನಿಖಿಲ್ ಕುಮಾರಸ್ವಾಮಿ
ಬೆಂಗಳೂರು : ‘ಗ್ರೇಟರ್ ಬೆಂಗಳೂರು ಯೋಜನೆ ಕೇವಲ ದುಡ್ಡು ಹೊಡೆಯುವ ಯೋಜನೆ ಅಷ್ಟೇ. ಇದರಿಂದ ನಗರದ ಜನರಿಗೆ ಯಾವುದೇ ರೀತಿಯಲ್ಲಿಯೂ ಅನುಕೂಲ ಆಗುವುದಿಲ್ಲ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರು ಅಭಿವೃದ್ಧಿಗೆ ನಮ್ಮ ಸಹಕಾರ ಇದೆ. ಜೆಡಿಎಸ್ಗೆ ಇದ್ದ ಕಡಿಮೆ ಸಮಯದಲ್ಲಿ ಅನೇಕ ಅಭಿವೃದ್ಧಿ ಕೆಲಸ ಬೆಂಗಳೂರಿಗೆ ಮಾಡಿದ್ದಾರೆ. ಇದೀಗ ನಗರದಲ್ಲಿ ಮೂಲಭೂತ ಸೌಕರ್ಯಗಳಿಲ್ಲ, ಸರಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ನಗರದ ರಾಜಕಾಲುವೆ ಎಲ್ಲ ಕಡೆಗಳಲ್ಲಿ ಒತ್ತುವರಿ ಆಗಿದೆ. ಒಂದು ದಿನ ತೆರಿಗೆ ಪಾವತಿ ವಿಳಂಬವಾದರೆ ಜನಸಾಮಾನ್ಯರ ಕುತ್ತಿಗೆ ಮೇಲೆ ಕೂರುವ ಸರಕಾರದ ಅಧಿಕಾರಿಗಳು, ಇದೀಗ ಮಳೆಯಿಂದ ಹಾನಿಗೀಡಾದ ಜನರಿಗೆ ಸೂಕ್ತ ಸಮಯದಲ್ಲಿ ನೆರವಾಗುವುದಿಲ್ಲ ಎಂದರೆ ಹೇಗೇ? ಎಂದು ನಿಖಿಲ್ ಪ್ರಶ್ನಿಸಿದರು.
ಅಭಿವೃದ್ಧಿ ಆಗುವುದಿಲ್ಲ: ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಎಂದು ಹೆಸರು ಬದಲಾವಣೆ ಮಾಡಿದ ಕೂಡಲೇ ಜಿಲ್ಲೆ ಅಭಿವೃದ್ಧಿ ಆಗುವುದಿಲ್ಲ. ರಾಜಕೀಯ ಲಾಭಯಕ್ಕೆ ಹೆಸರು ಬದಲಾವಣೆ ಮಾಡಲು ಹೊರಟಿದ್ದಾರೆ. ಬಿಡದಿಯಲ್ಲಿ ಟೌನ್ಶಿಫ್ ಮಾಡಲು ಹೊರಟಿದ್ದಾರೆ. ಆದರೆ, ರೈತರ ಜತೆಗೆ ಯಾವುದೇ ರೀತಿಯಲ್ಲಿಯೂ ಚರ್ಚೆ ಮಾಡಿಲ್ಲ ಎಂದು ಅವರು ದೂರಿದರು.