ಚುನಾವಣಾ ನೀತಿ ಸಂಹಿತೆ ವೇಳೆ ರೈತರ ಕೋವಿಗಳನ್ನು ಠಾಣೆಗಳಲ್ಲಿ ಜಮಾ ಮಾಡಲು ಠೇವಣಿ ಇಲ್ಲ: ಗೃಹ ಸಚಿವ ಪರಮೇಶ್ವರ್
ಬೆಂಗಳೂರು, ಜು.11: ಚುನಾವಣಾ ನೀತಿ ಸಂಹಿತೆ ಸಂದರ್ಭದಲ್ಲಿ ರೈತರ ಕೋವಿಗಳನ್ನು ಜಮಾ ಮಾಡಲು 200 ರೂ.ಗಳನ್ನು ಠೇವಣಿಯಾಗಿ ಇರಿಸಿಕೊಂಡಿರುವುದಿಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಮಂಗಳವಾರ ವಿಧಾನಸಭಾ ಅಧಿವೇಶನದ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್ ಶಾಸಕ ಅಶೊಕ್ ಕುಮಾರ್ ರೈ ಪ್ರಸ್ತಾಪಿಸಿ, ಠಾಣೆಗಳಲ್ಲಿ ಕೋವಿಗಳನ್ನು 200 ರೂ.ಗಳಿಗೆ ಠೇವಣಿಯಾಗಿರಿಸಿಕೊಂಡು, ಕೋವಿಗಳನ್ನು ಜಮಾ ಮಾಡಿಕೊಂಡ ಅವಧಿಯಲ್ಲಿ ರೈತರು ತಮ್ಮ ಬೆಳೆಗಳನ್ನು ಪ್ರಾಣಿಗಳಿಂದ ರಕ್ಷಿಸಲು ಸಾಧ್ಯವಾಗದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಸರ್ಕಾರದ ಗಮನಕ್ಕೆ ಬಂದಿದೆಯೇ ಎಂಬ ಪ್ರಶ್ನೆಗೆ ಅವರು ಉತ್ತಿಸಿದರು.
ಈ ಬಗ್ಗೆ ಸರಕಾರಕ್ಕೆ ಯಾವುದೇ ದೂರುಗಳು ಬಂದಿಲ್ಲ್ಲ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದ ಸಂದರ್ಭದಲ್ಲಿ ಚುನಾವಣಾ ಆಯೋಗ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳ ಆದೇಶವನ್ನು ಯಥಾವತ್ತಾಗಿ ಪಾಲಿಸಲಾಗುವುದು. ಕೋವಿಗಳನ್ನು ಠಾಣೆಗಳಲ್ಲಿ ಜಮಾ ಮಾಡುವ ಸಂದರ್ಭದಲ್ಲಿ ಠೇವಣಿ ಇರಿಸಿಕೊಳ್ಳುವುದಿಲ್ಲ ಒಂದು ವೇಳೆ ಠೇವಣಿ ಸ್ವೀಕರಿಸಿರುವ ಬಗ್ಗೆ ದೂರು ಬಂದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.