×
Ad

ಪೊದ್ದಾರ್ ಪ್ಲಂಬಿಂಗ್‍ನಿಂದ 758 ಕೋಟಿ ರೂ. ಹೂಡಿಕೆ: ಸಚಿವ ಎಂ.ಬಿ. ಪಾಟೀಲ್

Update: 2025-07-29 19:03 IST

ಬೆಂಗಳೂರು: ಪಿವಿಸಿ ಪೈಪುಗಳ ಉತ್ಪಾದಿಸುವ ಪೊದ್ದಾರ್ ಪ್ಲಂಬಿಂಗ್ ಸಿಸ್ಟಂ ಪ್ರೈವೇಟ್ ಲಿ. ಕೆಂಪೆನಿ ರಾಜ್ಯದಲ್ಲಿ 758 ಕೋಟಿ ರೂ. ಹೂಡಿಕೆಗೆ ತೀರ್ಮಾನಿಸಿದೆ. ಕಂಪೆನಿಗೆ ಕೋಲಾರ ಜಿಲ್ಲೆಯ ವೇಮಗಲ್‍ನಲ್ಲಿ 33 ಎಕರೆ ಜಮೀನು ನೀಡಿದ್ದು, 2026ರ ಆಗಸ್ಟ್ ಹೊತ್ತಿಗೆ ತಯಾರಿಕಾ ಚಟುವಟಿಕೆ ಆರಂಭಿಸಲಿದೆ. ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲೂ ಇದು ಘಟಕವನ್ನು ತೆರೆಯಲಿದೆ ಎಂದು ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಮಂಗಳವಾರ ಇಲ್ಲಿನ ಖನಿಜ ಭವನದಲ್ಲಿ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಪೊದ್ದಾರ್ ಮತ್ತು ನಿರ್ದೇಶಕ ವರುಣ್ ಪೊದ್ದಾರ್ ಭೇಟಿ ಬಳಿಕ ಮಾತನಾಡಿದ ಅವರು, ಕಂಪೆನಿಯು ಈ ಹಿಂದೆ 492 ಕೋಟಿ ರೂ.ಹೂಡಿಕೆ ಮಾಡುವುದಾಗಿ ಹೇಳಿತ್ತು. ಈಗ ಅದನ್ನು 758ಕೋಟಿ ರೂ.ಗೆ ಏರಿಸಲು ಅದು ಅನುಮೋದನೆ ಕೋರಿದೆ.

ಈ ಯೋಜನೆಯಿಂದ 3ಸಾವಿರ ನೇರ ಉದ್ಯೋಗ ಮತ್ತು 9 ಸಾವಿರ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ. ಮುಂದಿನ ಹತ್ತು ವರ್ಷಗಳಲ್ಲಿ ತನ್ನ ವಾರ್ಷಿಕ ವಹಿವಾಟನ್ನು 1,500ಕೋಟಿ ರೂ. ಗಳಿಗೆ ಕೊಂಡೊಯ್ಯುವುದಾಗಿ ಅದು ಹೇಳಿದೆ. ಇದರಿಂದ ಸರಕಾರಕ್ಕೆ 3ಸಾವಿರ ಕೋಟಿ ರೂ.ತೆರಿಗೆ ರೂಪದಲ್ಲಿ ಬರಲಿದೆ ಎಂದು ಅವರು ಮಾಹಿತಿ ನೀಡಿದರು.

ಸಿವಿಸಿ ಮತ್ತು ಪಿವಿಸಿ ಪೈಪುಗಳು ನಿರ್ಮಾಣ ಕಾಮಗಾರಿ, ಕೃಷಿ ಮತ್ತು ಕೈಗಾರಿಕಾ ವಲಯಗಳಲ್ಲಿ ವ್ಯಾಪಕವಾಗಿ ಬಳಕೆಯಾಗುತ್ತಿವೆ. ಕಂಪೆನಿಗೆ ವೇಮಗಲ್‍ನಲ್ಲಿ ಈಗಾಗಲೇ 28 ಎಕರೆ ಜಮೀನು ಕೊಡಲಾಗಿದೆ. ಉಳಿದ 5 ಎಕರೆಯನ್ನು ಇನ್ನು ಕೆಲವೇ ದಿನಗಳಲ್ಲಿ ಹಸ್ತಾಂತರಿಸಲಾಗುವುದು. ಈ ಕಂಪೆನಿಯು ಈಗಾಗಲೇ ಆಶೀರ್ವಾದ್ ಬ್ರ್ಯಾಂಡ್ ಹೆಸರಿನ ಪೈಪ್ ಕಂಪೆನಿಗೆ ಪ್ರವರ್ತಕ ಸ್ಥಾನದಲ್ಲಿತ್ತು.

ವಾರ್ಷಿಕ 5 ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ನಡೆಸುತ್ತಿದ್ದ ಕಂಪೆನಿಯು 7ಸಾವಿರಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿತ್ತು. ಈಗ ಅವರೇ ಪೊದ್ದಾರ್ ಹೆಸರಿನಲ್ಲಿ ಪ್ರತ್ಯೇಕ ಕಂಪೆನಿ ಮಾಡಿದ್ದಾರೆ. ಕಂಪೆನಿಯು ಭೂಸ್ವಾಧೀನ ಉದ್ದೇಶಕ್ಕೆ 93 ಕೋಟಿ ರೂ, ಕಟ್ಟಡ, ಕೈಗಾರಿಕಾ ಯಂತ್ರೋಪಕರಣಗಳಿಗೆ 578 ಕೋಟಿ ರೂ. ಮತ್ತು ಕೆಪೆಕ್ಸ್ (ಬಂಡವಾಳ ವೆಚ್ಚ) ಮೇಲಿನ ತೆರಿಗೆಯಾಗಿ 87ಕೋಟಿ ರೂ.ಗಳನ್ನು ವಿನಿಯೋಗಿಸುತ್ತಿದೆ. ಈಗಾಗಲೇ ಕಟ್ಟಡ ಕಾಮಗಾರಿ ಮತ್ತು ಯಂತ್ರೋಪಕರಣಗಳ ಜೋಡಣೆ ಕಾರ್ಯ ವೇಮಗಲ್‍ನಲ್ಲಿ ಆರಂಭವಾಗಿದೆ ಎಂದು ಪಾಟೀಲ ಹೇಳಿದ್ದಾರೆ.

ವೇಮಗಲ್ ಘಟಕದ ಕಾರ್ಯಾರಂಭದ ನಂತರ ವಿಜಯಪುರ ಜಿಲ್ಲೆಯಲ್ಲೂ ಹೂಡಿಕೆ ಮಾಡಲಾಗುವುದು. ಅದಕ್ಕೆ ಪ್ರತ್ಯೇಕ ಯೋಜನೆ ರೂಪಿಸಲಾಗುತ್ತಿದೆ ಎಂದು ಪೆÇದ್ದಾರ್ ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕ ದೀಪಕ್ ಪೊದ್ದಾರ್ ಈ ವೇಳೆ ಸಚಿವರಿಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News